ದೇವ ಬೊಂಬೆ ಪೂಜೆ ಆಟ ಭಕ್ತಿ ಸೋಜಿಗ.
ಇದು, ಮೇಲುಕೋಟೆ ದೇವಾಲಯಕ್ಕೆ ನಿತ್ಯವೂ ಹತ್ತಿ ಬಂದು ಫಲಾಪೇಕ್ಷೆ ಇಲ್ಲದೆ ರಂಗವಲ್ಲಿ ಬಿಡುವ ಮದುಕಿಯನ್ನು ಕುರಿತು ಪುತಿನ ಅವರು ಬರೆದ ಕವನದ (ರಂಗವಲ್ಲಿ) ಸಾಲು. ದೇವರ ಅಸ್ತಿತ್ವ ಕುರಿತು ಹತ್ತು ಹಲವು ಚರ್ಚೆಗಳು ನಿರಂತರವಾಗಿ ನಡೆದೇ ಇವೆ. ಬಹುಶಃ ಅದು ಮನುಕುಲ ಇರುವವರೆಗೂ ಮುಗಿಯದ ವಾದ. ನಾಸ್ತಿಕವಾದಿ ಪಂಥಗಳು ಭಾರತದಲ್ಲಿ ಹಲವು ಬಂದು ಹೋಗಿವೆ. ಲೌಕಿಕವಾದಿಗಳಾದ ಚಾರ್ವಾಕರು ಭಾರತದಲ್ಲಿ ವೈದಿಕರಷ್ಟೇ ಪ್ರಾಚೀನರು. ವೈದಿಕವಾದಗಳನ್ನು ಖಂಡಿಸುತ್ತಾ ಪರ್ಯಾಯವಾದ ಧಾರೆಯನ್ನು ಹುಟ್ಟುಹಾಕಿದವರು. ಅದರ ಪ್ರೇರಣೆಯಿಂದ ಹಲವು ಸಿದ್ಧಾಂತಗಳು ಭಾರತದಲ್ಲಿ ಬಂದುಹೋಗಿವೆ.
ಆರನೇ ಶತಮಾನದಲ್ಲಿ ಬಂದ ಬುದ್ಧ ದೇವರನ್ನು ಕುರಿತಾಗಿ ಏನೂ ಚರ್ಚಿಸಲಿಲ್ಲ. ಆದರೆ ಬಹುಬೇಗನೆ ಭಗವಾನ್ ಬುದ್ಧನಾಗಬೇಕಾಯಿತು. ಹಾಗೆ ನೋಡಿದರೆ ನಾಸ್ತಿಕತೆಯ ನೆಲೆಯಲ್ಲಿ ಕರ್ಮಸಿದ್ಧಾಂತವನ್ನು ಬೋಧಿಸಿದ ಬುದ್ಧ ದೇವರಾದದ್ದು ಜನಸಾಮಾನ್ಯ ನೆಲೆ-ಯಲ್ಲಿ ನಿಂತು ಯೋಚಿಸಿದರೆ ಸಹಜವಾದುದೇ ಎನಿಸುತ್ತದೆ. ಬದುಕಿಗೆ ದಾರಿ ತೋರಿದಾತ ನೀನೇ ಭಗವಂತ ಎಂದು ಕೈ ಮುಗಿವ ಮನೋಭಾವವೇ ಭಕ್ತಿಯಾಗಿ ಮೆರೆಯಿತು. ಬುದ್ಧನಿಂದ ಮಾರ್ಕ್ಸ್ನವರೆಗೆ ಹಲವು ನಾಸ್ತಿಕವಾದಗಳು ಬಂದುಹೋಗಿವೆ. ಆದರೂ ದೇವರನ್ನು ಹೊತ್ತು ಸಾಗುವುದು ಮಾತ್ರ ತಪ್ಪಲಿಲ್ಲ.
ರಷ್ಯಾ ಅಥವಾ ಚೀನಾ, ಧಾರ್ಮಿಕ ಹಕ್ಕಿನ ಮೇಲೆ ಹಿಡಿತ ಸಾಧಿಸುವ ಮೂಲಕ ದೇವಮಂದಿರಗಳ ಬೆಳವಣಿಗೆಯನ್ನು ತಹಬಂದಿಗೆ ತಂದಿವೆ. ಅದನ್ನು ಹೊರತುಪಡಿಸಿ ಜಗತ್ತಿನಾದ್ಯಂತ ದೇವರುಗಳಿದ್ದರೂ ಭಾರತದಂತೆ ಹೆಜ್ಜೆಹೆಜ್ಜೆಗೂ ದೇವಾಲಯಗಳನ್ನು ಕಟ್ಟುವ ಮನಸ್ಥಿತಿ ಬೇರೆಲ್ಲೂ ಕಾಣಬರುವುದಿಲ್ಲ.
ವೈದಿಕರು ಮೂಲದಲ್ಲಿ ಪ್ರಕೃತಿ ಆರಾಧಕರು. ಯಜ್ಞಯಾಗಾದಿಗಳ ಮೂಲಕ, ವೇದಗಳನ್ನು ಪಠಿಸುತ್ತಾ ದೇವರನ್ನು ತಲುಪುವ ಕಲ್ಪನೆಯನ್ನು ಕಟ್ಟಿಕೊಂಡವರು. ಹಾಗಿದ್ದ ದೇವರ ಕಲ್ಪನೆ ದೇವಾಲಯಕ್ಕೆ ಬಂದು ನಿಲ್ಲಬೇಕಾದರೆ ಅದರ ಬೆಳವಣಿಗೆ ಸುದೀರ್ಘವಾಗಿಯೇ ಇರಬೇಕು. ಮೂರ್ತಿರೂಪದಲ್ಲಿ ದೇವರನ್ನು ಕಲ್ಪಿಸಿಕೊಂಡವರು ಜನಪದರು. ಅರ್ಥವಾಗದ ಹುಟ್ಟು ಸಾವುಗಳು, ಅರಿವಿಗೆ ನಿಲುಕದ ಪ್ರಕೃತಿಯ ಚೋದ್ಯಗಳಲ್ಲಿ ದೇವರನ್ನು ಕಾಣತೊಡಗಿದರು.
ಆಯುಧವಾಗಿ ಬಳಸಿದ ಕಲ್ಲು, ಹಸಿವನ್ನು ತಣಿಸಿದ ಗಿಡ ಮರ, ಸುತ್ತಮುತ್ತ ಬದುಕಿಗೆ ಸಂಗಾತಿಗಳಾದ ಪ್ರಾಣಿ ಪಕ್ಷ, ಜೀವಜಾಲದಲ್ಲಿ ದೇವರನ್ನು ಕಂಡುಕೊಂಡರು. ಸತ್ತವರ ನೆನಪಿಗೆ ಇಟ್ಟ ಕಲ್ಲುಗಳು, ನೆಟ್ಟ ಮರ ಒಂದು ಕಡೆ ಸಮಾಧಿಯ ಕಲ್ಪನೆಯನ್ನು ಕಟ್ಟಿಕೊಟ್ಟಿತು. ಅದು ಅಶೋಕನ ಕಾಲದ ಬುದ್ಧನ ಬೃಹತ್ ಸ್ತೂಪಗಳವರೆಗೂ ಬಂದು ನಿಂತಿತು. ಭಾರತದ ದೇವಾಲಯಗಳ ಹುಟ್ಟು, ಶಿಲ್ಪಗಳ ಬೆಳವಣಿಗೆ ಇದಕ್ಕೆಲ್ಲಾ ಒಂದು ರೀತಿಯಲ್ಲಿ ಬೌದ್ಧ ಹಾಗೂ ಜೈನ ಧರ್ಮಗಳು ಅಡಿಪಾಯನ್ನು ಹಾಕಿವೆ.
ಶಿಲ್ಪದ ವಿಚಾರಕ್ಕೆ ಬಂದರೆ ಅದರ ಚರಿತ್ರೆ 4000 ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಹುಟ್ಟನ್ನು ನೀಡಿದ ತಾಯಿ, ಇಲ್ಲವೇ ಹುಟ್ಟಿನ ಸಂಕೇತವಾದ ಲಿಂಗ, ಯೋನಿಯ ಶಿಲ್ಪಗಳನ್ನು ಆರಾಧಿಸತೊಡಗಿದ್ದು ಮುಂದೆ ಬೆಳೆದ ಶಿವ ಶಕ್ತಿಯ ಕಲ್ಪನೆಗೆ ಕಾರಣವಾಯಿತು. ಹೀಗೆ ಜನಪದೀಯವಾಗಿದ್ದ ಮೂರ್ತಿ ಪೂಜೆಗೆ ಬುದ್ಧನ ಬಗೆಗಿನ ಭಕ್ತಿಯು ಸೇರಿ ಬುದ್ಧನ ಸಂಕೇತಗಳನ್ನು ಶಿಲ್ಪವಾಗಿಸಿದರು. ಬೋಧಿ ವೃಕ್ಷ, ತೆರೆದ ಸಿಂಹಾಸನ, ಛತ್ರಿ ಇವೆಲ್ಲವೂ ಬುದ್ಧನ ಸಂಕೇತದ ಶಿಲ್ಪಗಳಾದವು. ಬೌದ್ಧ ಧರ್ಮವಾಗಿ ಭಾರತದ ಮೇರೆಯನ್ನು ಮೀರಿ ಹೋದಂತೆ ಆ ಬುದ್ಧನನ್ನು ಒಪ್ಪಿದ ಗ್ರೀಕರ ಕಲ್ಪನೆಯೂ ಸೇರಿ ಸುಂದರವಾದ ಬುದ್ಧನ ಶಿಲ್ಪ ಮೂಡಿ ಬಂದಿತು. ಅದೇ ಜನಪ್ರಿಯವಾಗಿರುವ ಗಾಂಧಾರ ಶಿಲ್ಪ. ಭಾರತೀಯ ಶಿಲ್ಪಶಾಸ್ತ್ರದ ಬೆಳವಣಿಗೆಯಲ್ಲಿ ಇದು ಮೈಲುಗಲ್ಲು.
ಇದೇ ಹೊತ್ತಿಗೆ ಜನಪದ ದೇವತೆಗಳ ಪ್ರಭಾವ ಹಾಗೂ ಇತರ ಅವೈದಿಕವಾದ ಧಾರೆಗಳನ್ನು ಸ್ವೀಕರಿಸಿದ ವೈದಿಕರು ತಮ್ಮ ನಂಬಿಕೆಗಳನ್ನೂ ಸೇರಿಸಿ ನೂರಾರು ದೈವಗಳ ಅಡಿಗೆರಗಿದರು. ಮೂಲದಲ್ಲಿ ಅವರು ಆರಾಧಿಸುತ್ತಿದ್ದ 33 ದೇವರುಗಳನ್ನು ಮೀರಿ ನೂರಾರು ದೇವರುಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಆ ಎಲ್ಲಾ ದೇವತೆಗಳು ಯಾವ ಯಾವುದೋ ರೂಪದಲ್ಲಿ ವೈದಿಕ ಸಾಹಿತ್ಯದಲ್ಲಿ ಸ್ಥಾನವನ್ನು ಪಡೆದುಕೊಂಡವು.
ಜನಪದರ ಕಲ್ಪನೆಯಲ್ಲಿದ್ದ ತಾಯಂದಿರು ಶಕ್ತಿ ದೇವತೆಗಳಾಗಿ ಅವೈದಿಕ ನೆಲೆಯ ಪಂಥಗಳೇ ಆಗಿ ಬೆಳೆದು ನಿಂತಿದ್ದವು. ಹುಟ್ಟಿನ ಸಂಕೇತಗಳಲ್ಲಿ ಶಕ್ತಿಯನ್ನು ಅವಗಾಹನೆ ಮಾಡುವ ವಿಧಿವಿಧಾನಗಳಲ್ಲಿ ತಾಂತ್ರಿಕರು ಹುಟ್ಟಿಕೊಂಡರು. ವೈದಿಕರು ಕೆಲವು ಹಂತಕ್ಕೆ ಅದನ್ನು ತಮ್ಮದಾಗಿಸಿಕೊಳ್ಳುತ್ತಾ ಪುರಾಣದ ರಚನೆಯಲ್ಲಿ ತೊಡಗಿದಾಗ ಒಂದಲ್ಲಾ ಒಂದು ರೂಪದಲ್ಲಿ ದೇವರುಗಳು ಸಮೀಕರಣಗೊಳ್ಳತೊಡಗಿದರು. ವೈದಿಕ ದೇವರುಗಳ ಪಟ್ಟಿ ಸಾವಿರಗಟ್ಟಲೆಯಾಯಿತು.
ಜನಪದ ದೇವರುಗಳಿಗೂ, ವೈದಿಕ ದೇವರುಗಳಿಗೂ ಅಂತರ ಕಡಿಮೆಯಾಯಿತು. ಜನಪದರು ಮೂಲದಲ್ಲಿದ್ದ ತಮ್ಮ ಆಚರಣೆಗಳನ್ನು ಬಿಡುತ್ತ ಬಂದರು. ಆ ಜಾಗವನ್ನು ವೈದಿಕ ಆಚರಣೆ ಕ್ರಮಗಳಿಗೆ ಬಿಟ್ಟುಕೊಟ್ಟರು. ಈ ಬೆಳವಣಿಗೆಯಲ್ಲಿ ವಿಷ್ಣು ಪುರಾಣ, ಶೈವ ಪುರಾಣಗಳ ರಚನೆಯಾಯಿತು. ನೂರಾರು ಜನಪದ ದೇವತೆಗಳನ್ನು ವಿಷ್ಣು ಹಾಗೂ ಶಿವನ ಅಂಶವೆಂದು ಪರಿಗಣಿಸಲಾಯಿತು. ಈ ಸಮೀಕರಣದಿಂದ ಜನಪದ ದೇವತೆಗಳು ತಮ್ಮತನವನ್ನು ಕಳೆದುಕೊಂಡವು. ಆದಿವಾಸಿಗಳ, ಬುಡಕಟ್ಟಿನ ಹೆಣ್ಣು ದೈವಗಳು, ಕರಿಯಮ್ಮ, ಮಾರಿ, ಮಸಣಿಯರೆಲ್ಲಾ ಪಾರ್ವತಿಯ ಅಂಶವೆನಿಸಿದರು. ರುದ್ರ, ಬೀರ, ಸೋಮ, ಭೂತ ಗಣಗಳೆಲ್ಲಾ ಶಿವನ ಅಂಶವಾದರು.
ತಮ್ಮ ದೇವರುಗಳ ಮೂಲ ಹುಟ್ಟು ಮರೆತ ಜನಪದರು ಕೆಲವುಮಟ್ಟಿಗೆ ತಮ್ಮದನ್ನು ಮನೆ ಹಂತಕ್ಕೆ ಇಲ್ಲವೆ ಗೋಪ್ಯವಾಗಿ ಉಳಿಸಿಕೊಂಡು ಪ್ರಧಾನ ಧಾರೆಯ ದೇವರುಗಳಿಗೆ ನಡೆದುಕೊಳ್ಳತೊಡಗಿದರು. ಹೀಗೆ ಹರಡಿದ ಭಾರತೀಯ ದೇವರುಗಳನ್ನು ಒಂದು ಸಂಸ್ಕೃತಿಯ ಹಿನ್ನೆಲೆಯಲ್ಲಿ ಅದರ ಚರಿತ್ರೆ ಇಷ್ಟೇ ಎಂದು ಸರಳ ರೇಖೆಯಲ್ಲಿ ಹೇಳಲು ಸಾಧ್ಯವಿಲ್ಲ. ಈ ನಾಡಿಗೆ ಬಂದ ಎಲ್ಲಾ ಪಂಥಾಚರಣೆಗಳೂ ಒಂದಲ್ಲಾ ಒಂದು ರೀತಿಯಲ್ಲಿ ಒಂದು ಮತ್ತೊಂದರಲ್ಲಿ ಬೆರೆತು ಹೋಗಿವೆ. ಇದರ ಆಚೆಗೆ ಕಾಣುವ ಉಚ್ಚ ನೀಚದ ಕಲ್ಪನೆ ಸಾಮಾಜಿಕ ಸ್ತರದಿಂದ ಬರುವಂತಹದು.
ಸುಮಾರು 1700 ವರ್ಷಗಳ ಹಿಂದೆ ಆರಂಭವಾದ ದೇಗುಲಗಳ ರಚನೆಯ ಹೊತ್ತಿಗಾಗಲೇ ಜನಪದರು ನಾಲ್ಕು ಚಪ್ಪಡಿಯನ್ನಿಟ್ಟು ಸಣ್ಣಪುಟ್ಟ ಗುಡಿಗಳನ್ನು ಕಟ್ಟಿ ಗಾಳಿಮಳೆಯಿಂದ ತಮ್ಮ ದೇವರುಗಳನ್ನು ಕಾಪಾಡಿಕೊಳ್ಳುತ್ತಿದ್ದರು. ಬುದ್ಧ ಮಹಾವೀರರ ಅನುಯಾಯಿಗಳಿಂದ ವಿಹಾರಗಳು, ಚೈತ್ಯಗಳು, ಬಸದಿಗಳು, ಸ್ತೂಪಗಳು ಹೀಗೆ ನಾಡಿನಾದ್ಯಂತ ಬೆಳೆದುಬಂದಿದ್ದವು. ಅನುಕರಣೆಯಾಗಿ ಶಿವ ವಿಷ್ಣುವಿನ ಮೂರ್ತಿಯನ್ನಿಟ್ಟು ಚಿಕ್ಕದಾದ ದೇಗುಲಗಳನ್ನು ಕಟ್ಟುವುದು ಬೆಳೆದು ಬಂತು. ಹೀಗೆ ಆರಂಭವಾದ ದೇಗುಲಗಳ ಕಲ್ಪನೆಯ ವೈದಿಕ ಧರ್ಮ ಜನಪದ ಆಚರಣೆಗಳನ್ನೂ ಮೈಗೂಡಿಸಿಕೊಂಡು ಸಾಂಸ್ಥಿಕ ರೂಪವನ್ನು ಪಡೆಯಿತು. ಈ ಹೊತ್ತಿಗೆ ಸಮಾಜದಲ್ಲಿ ಬೇರುಬಿಟ್ಟ ವರ್ಣ, ಜಾತಿಗಳು ದೇಗುಲಗಳ ರಚನೆಯಲ್ಲೂ ಪ್ರತಿಬಿಂಬಿತವಾದವು.
ಆರನೇ ಶತಮಾನದ ಹೊತ್ತಿಗೆ ಬೌದ್ಧ ಧರ್ಮವನ್ನು ಬದಿಗೊತ್ತಿ ಬೆಳೆದ ಶೈವ ಹಾಗೂ ವೈಷ್ಣವ ಪಂಥಗಳು ಇದರ ಹೊಂದಾಣಿಕೆಯಲ್ಲಿ ವಿಸ್ತರಿಸಿದ ಶಾಕ್ತ ಪಂಥಗಳು ಗುಡಿಗಳನ್ನು ಕಟ್ಟಿಕೊಳ್ಳತೊಡಗಿದವು. ದಕ್ಷಿಣದ ತಮಿಳುನಾಡಿನಲ್ಲಿ ಪಲ್ಲವರ ಕಾಲಕ್ಕೂ ಕನ್ನಡನಾಡಿನಲ್ಲಿ ಬಾದಾಮಿ ಚಾಲುಕ್ಯರ ಕಾಲಕ್ಕೂ ರಾಜಮನೆತನಗಳು ದೇವಾನುದೇವತೆಗಳಿಗೆ ಗುಡಿಗೋಪುರವನ್ನು ಕಟ್ಟಲು ಸಂಭ್ರಮಿಸಿದವು. ಬಾದಾಮಿ, ಐಹೊಳೆ, ಪಟ್ಟದಕಲ್ಲಿನಲ್ಲಿ ದೇಗುಲಗಳ ನಿರ್ಮಾಣ ಕಾರ್ಯಾಗಾರಗಳೇ ನಡೆದುಹೋಯಿತು.
ಅಗತ್ಯಕ್ಕೆ ಅನುಗುಣವಾಗಿ ಗರ್ಭಗುಡಿಯ ಜೊತೆಗೆ ಉಳಿದ ಅಂಗಗಳೂ ವಿಸ್ತರಿಸತೊಡಗಿದವು. ಸಾಮಾಜಿಕ ರಚನೆಯಾದ ಜಾತಿಗನುಗುಣವಾಗಿ ದೇಗುಲಗಳು ಆಕಾರ ಪಡೆಯತೊಡಗಿದವು. ಮಂಟಪ, ಮುಖಮಂಟಪ, ಪ್ರಾಕಾರ, ಪೌಳಿ, ಕಲ್ಯಾಣಿಗಳಾಗಿ ಚಾಚಿಕೊಂಡವು. ರಾಜಾಶ್ರಯದೊಂದಿಗೆ ಬಂದ ದೇಗುಲಗಳಂತೂ ಸಾಮಾಜಿಕ ಅಂತಸ್ತು ಅಂತರಗಳನ್ನು ಇನ್ನೂ ವ್ಯವಸ್ಥಿತವಾಗಿ ಬಲಗೊಳಿಸಿದವು. ಸಮಾಜ, ದೇಗುಲಗಳ ಸಂಬಂಧದಲ್ಲಿ ಸ್ಪಷ್ಟತೆಯನ್ನು ಅವರು ಕಂಡುಕೊಂಡಿದ್ದರು. ಗರ್ಭಗುಡಿಯ ಸಂಪೂರ್ಣ ಹಿಡಿತ ಪುರೋಹಿತರಿಗೆ ಬಿಟ್ಟುಕೊಡಲಾಯಿತು. ವೇದ ಹಾಗೂ ವೇದ ಸಂಬಂಧಿ ಆಚರಣೆಗಳಾದ ಯಜ್ಞಯಾಗಾದಿಗಳಲ್ಲದೆ ವೈದಿಕಗೊಂಡ ಯಂತ್ರ, ಮಂತ್ರ, ತಂತ್ರಗಳ ಮೇಲೂ ಹಿಡಿತವನ್ನು ಸಾಧಿಸಲು ಅವರಿಗೆ ಸಾಧ್ಯವಾಯಿತು. ಹಾಗೂ ಪ್ರಶ್ನಾತೀತವಾಯಿತು.
ರಾಜಧಾನಿಗಳಾದರೆ ರಾಜರು, ಹಳ್ಳಿಯ ಮಟ್ಟಕ್ಕೆ ಊರ ಮುಖಂಡರು ಅಂತರಾಳದಲ್ಲಿ ಕುಳಿತು ದೇವರ ದರ್ಶನಕ್ಕೆ ಪಾತ್ರರಾದರು. ಅಥವಾ ದೇವಾಲಯಗಳನ್ನೂ, ಪುರೋಹಿತರನ್ನೂ ಕಾಪಾಡುವವರನ್ನು ಗರ್ಭಗುಡಿಗೆ ಪಕ್ಕದಲ್ಲಿ ನಿಂತು ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಿಕೊಡಲಾಯಿತು. ಮಂಟಪದಲ್ಲಿ ರಾಜ ನರ್ತಕಿಯರು, ಕನ್ನಡಿ ಚಾಮರಗಳನ್ನು ಹಿಡಿಯುವ ವೇಶ್ಯೆಯರು, ವಾದ್ಯದವರು, ಶ್ರೀಮಂತರು ಜಾಗ ಪಡೆದರು. ಅದರಾಚೆಗೆ ಮುಖಮಂಟಪದಲ್ಲಿ ಮುಟ್ಟುವ ಜಾತಿಗಳಿಗೆ ಜಾಗ ಸಿಕ್ಕರೆ, ಮುಟ್ಟದ ಜಾತಿಗಳು ಡೊಳ್ಳು ಬಾರಿಸಿ ದೇವರ ಕಿವಿ ತಲುಪಬೇಕಾಯಿತು.
ಶಿವನ ಭಕ್ತಿಯನ್ನು ಮೆರೆಯಲು ಹೋದ ಚೋಳರು ಊರೂರಲ್ಲಿ ಶಿವಾಲಯಗಳನ್ನು ಕಟ್ಟಿದರು. ದೇವಾಲಯದ ಒಳ ಹೋಗಲಾರದ ಆಂಡಾಳ್ ಅಂತಹ ತಳಸಮುದಾಯದ ಭಕ್ತರು ಬೀದಿಗಳಲ್ಲಿ ಹಾಡಿ ಆ ದೇವರ ಹೆಸರನ್ನು ಮೆರೆಸಿದರು. ಬಡವನ ಮನೆಗೇ ದೇವರು ಬರುವ ಕಥೆಗಳು ಹುಟ್ಟಿಕೊಂಡವು-. ಭಕ್ತಿ ಸಾಹಿತ್ಯ ಬೆಳೆಯಿತು. ಪುರಾಣಗಳನ್ನು ಬರೆದು, ಭಕ್ತಿಯಿಂದ ಹಾಡಿ ಹೊಗಳಿ, ಕಲ್ಲು ದೇವರಿಗೆ ವಿಧ ವಿಧವಾಗಿ ಅಲಂಕರಿಸಿ, ಯಾವ ಯಾವುದೋ ರೂಪದಲ್ಲಿ ದೇವರ ಸೇವೆಯನ್ನು ಮಾಡಿದರು. ಜನ ತಮ್ಮ ದುಡಿಮೆಯ ಭಾಗವನ್ನೆಲ್ಲಾ ಕೊಟ್ಟು ದೇವರನ್ನೂ, ದೇಗುಲಗಳನ್ನೂ ಬೆಳೆಸಿದರು.
ರಾಜರು ದೇವಾಲಯಗಳಿಗೆ, ಪುರೋಹಿತರಿಗೆ ಭೂಮಿಯನ್ನು ದಾನ ಕೊಡತೊಡಗಿದರು. ಅಗ್ರಹಾರಗಳನ್ನು ಕಟ್ಟಿಕೊಟ್ಟರು. ದೇವಾಲಯಗಳ ಪೋಷಣೆ ಪುರೋಹಿತ ವರ್ಗಕ್ಕೆ ಉದರನಿಮಿತ್ತವೂ ಆಯಿತು. ಹನ್ನೆರಡನೇ ಶತಮಾನದ ಹೊತ್ತಿಗೆ ಕಲ್ಲು ದೇವರು, ಅದಕ್ಕಾಗಿ ಕಟ್ಟುವ ಕಲ್ಲು ಗುಡಿಗೋಪುರಗಳ ವೈಭವದಿಂದ ರೋಸಿ ಹೋದ ವಚನಕಾರರು ದೇಗುಲಗಳ ಪ್ರತಿಭಟನೆಯನ್ನು ಆರಂಭಿಸಿದರು. ದೇವಾಲಯಗಳು ಹಲವು ರೀತಿಯಲ್ಲಿ ಜನರ ಶೋಷಣೆಗೆ ಕಾರಣವಾಗಿವೆ ಎಂದು ಅರಿವಾಗಿತ್ತು. ನಿರಾಕಾರ ಸಿದ್ಧಾಂತ ಮೂಲಕ ಜನರನ್ನು ತಲುಪುವುದು ಸುಲಭವಲ್ಲ ಎಂಬುದನ್ನು ಅರಿತ ಬಸವಣ್ಣ, ಆತ್ಮಲಿಂಗದ ಕಲ್ಪನೆಯನ್ನು ತಂದುಕೊಡಲು ಕಾರಣವಾಗಿರಬೇಕು.
ಸ್ಥಾಪಿತ ಧಾರ್ಮಿಕ ಮೌಲ್ಯಗಳೊಂದಿಗೆ ಬಂದ ಮುಸಲ್ಮಾನರೂ ದೇಗುಲ ಸಂಸ್ಕೃತಿಯನ್ನು ಮತ್ತೊಂದು ರೀತಿಯಲ್ಲಿ ಪೋಷಿಸಿದರೆಂದೇ ಹೇಳಬೇಕು. ನಡೆದ ಆಕ್ರಮಣಗಳು ರಾಜಲಾಂಛನದ ದೇಗುಲಗಳೇ ಹೊರತು ಅವು ಜನಸಾಮಾನ್ಯರ ಗುಡಿಗಳಾಗಿರಲಿಲ್ಲ. ವಾಸ್ತುಶಿಲ್ಪದ ದೃಷ್ಟಿಯಿಂದ ಇಸ್ಲಾಂನ ಹಲವು ಅಂಶಗಳು ದೇಗುಲಗಳನ್ನು ಸೇರಿ ಹೋದವು. ಗೋಳ, ಗಾರೆ ಗುಡಿಗಳಿಗೂ ಹತ್ತಿದವು.
16ನೇ ಶತಮಾನದವರೆಗೂ ಸಾಮ್ರಾಟರು ತಮ್ಮ ಸಾಮರ್ಥ್ಯವನ್ನು ದೇಗುಲದ ಗಮ್ಮತ್ತಿನಲ್ಲಿ ವ್ಯಕ್ತಪಡಿಸಿದರು. ಇದನ್ನು ತಂಜಾವೂರು, ತಿರುವಣ್ಣಾ ಮಲೈ, ತಿರುಪತಿ, ಕಂಚಿ ಇಲ್ಲೆಲ್ಲಾ ಕಾಣಬಹುದು. ಇವೆಲ್ಲಾ ದೇಗುಲಗಳ ನಗರಗಳೇ ಆಗಿ ಬೆಳೆದವು. ರಾಜರ ದಾನ ದತ್ತಿಗಳಿಂದ ದೇವಾಲಯಗಳು ಉಬ್ಬಿಹೋದವು. ದೇಗುಲಗಳಿಗೆ ಅಂಟಿಕೊಂಡಂತೆ ಬೆಳೆದ ಮಠಗಳು ದೇವರ ಹೆಸರಿನ ಲಾಭ ಪಡೆಯುವಲ್ಲಿ ಹಿಂದೆ ಬೀಳಲಿಲ್ಲ. ಸಿಕ್ಕ ಸಿಕ್ಕ ದೇವರಿಗೆ ಕೈ ಮುಗಿದು, ಬಂದ ಬಂದವರ ಕಾಲಿಗೆ ಬಿದ್ದು ಯಾವುದನ್ನೂ ತಮ್ಮದೆನ್ನದೆ ಜನಪದರು ಎಲ್ಲ ದೇವರ ರಥಗಳನ್ನು ಎಳೆದರು. ಯಾವ ಧರ್ಮದ ಗೊಡವೆಯೂ ಇಲ್ಲದೆ ತಮಗೆ ಕಂಡಂತೆ ಬದುಕುವುದೇ ಧರ್ಮವಾಗಿ ಬಾಳು ಸವೆಸಿದ್ದಾರೆ.
ಆಧುನಿಕ ಕಾಲಕ್ಕೆ ಬಂದಾಗ ಜಾತೀಯತೆಗೆ ಕಳಶವಿಟ್ಟಂತೆ ನಿಂತ ದೇವಾಲಯಗಳ ನಿರಾಕರಣೆಯ ಪ್ರಯತ್ನ ತಮಿಳುನಾಡಿನಲ್ಲಿ ಪೆರಿಯಾರರಿಂದ ಆರಂಭವಾಯಿತು. ಭಾರತದ ಭೂಗರ್ಭದಲ್ಲಿರುವ ನಾಸ್ತಿಕವಾದ ಮತ್ತೆ ಹೊಗೆಯಾಡಿತು. ಮಾರ್ಕ್ಸ್ ವಾದದ ಹೆಸರಿನಲ್ಲಿ ಮರು ಪ್ರವೇಶ ಪಡೆದುಕೊಂಡಿತು. ಆದರೆ ಅದಕ್ಕೂ ಪ್ರಬಲವಾದ ದೇವರನ್ನೂ ದೇಗುಲವನ್ನು ಕ್ರೈಸ್ತ ಮಿಷನರಿಗಳು ಹೊತ್ತು ತಂದವು. ದಲಿತರು, ಆದಿವಾಸಿಗಳು ಆತುಕೊಳ್ಳಲು ಮತ್ತೊಂದು ದೇವರು. ಬೇಸರವೇನಿಲ್ಲ. ಜಾತಿಯ ಜೊತೆಗೆ ಶಿಲುಬೆಯನ್ನು ಹೊರಲು ಹೊಸ ಜಾಗ ದೊರಕಿತು.
ಆಧುನಿಕತೆಯ ಭ್ರಮೆಯಲ್ಲಿ 21ನೇ ಶತಮಾನ ಗಿಜಿಗುಡುವ ನಗರಗಳನ್ನು ಕಟ್ಟಿಕೊಂಡಿದೆ. ರಸ್ತೆ ಬದಿಯಿಂದ ಮಾಲ್ಗಳವರೆಗೆ ಸರಕು ಮಾರಾಟವಾಗುತ್ತದೆ. ಹಾಗೆಯೇ ಫುಟ್ಪಾತ್ನಿಂದ ಬೆಟ್ಟದ ತುದಿಯವರೆಗೆ ದೇವರುಗಳೂ ಸಿಗುತ್ತಾರೆ. ಶಾಪಿಂಗ್ ಕಾಂಪ್ಲೆಕ್ಸ್ ನಂತೆ ಕಾಣುವ ದೇವಾಲಯಗಳು ಆಧುನಿಕತೆಯನ್ನು ಮೈಗೂಡಿಸಿಕೊಂಡಿವೆ. ವಿದ್ಯುತ್ ಗಂಟೆ ನಾದ, ಕೇಶವಿನ್ಯಾಸಕ್ಕಾಗಿ ತಲೆ ಬೋಳಿಸಿದ ಕೂದಲ ಮಾರಾಟ. ಹೀಗೆ ಒಂದೇ ಎರಡೇ, ಮೈಕ್ ಹಾಕಿ ಮಂತ್ರ ಪಠಣ- ಟ್ರಾಫಿಕ್ ನ ಗಲಾಟೆಗೆ ದೇವರಿಗೂ ಕಿವುಡಾಗಿದೆ. ಪ್ರಸಾದದ ಹೆಸರಿನಲ್ಲಿ ಮತ ಯಾಚನೆ. ಸರ್ಕಾರ ಇವರ ಆದಾಯವನ್ನು ಕೇಳಬಾರದೆಂಬುದರಲ್ಲಿ ಮಾತ್ರ ಇವರೆಲ್ಲರ ಏಕಮತ. ಜಾತಿ ಮತ ಧರ್ಮ ಯಾವ ತಾರತಮ್ಯವೂ ಇಲ್ಲದೆ ಉಳ್ಳವರು ದೇವಾಲಯವ ಮಾಡುವರು!
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.