ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಶಿಸುತ್ತಿರುವ ಭಾಷೆ ಉಳಿಸಲು ಚಿಂತಿಸಿ

Last Updated 8 ಜುಲೈ 2014, 19:30 IST
ಅಕ್ಷರ ಗಾತ್ರ

ಹಿಂದಿ ಭಾಷೆ ಕುರಿತು ಅಪಾರ ಅಭಿಮಾನ ಇರಿಸಿಕೊಂಡಿರುವವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಭಾಷೆಗೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ನೀಡಿ­ರ­ಬಹುದೆನಿಸುತ್ತಿದೆ. ಏಕೆಂದರೆ ಭಾಷೆಗೆ ಸಂಬಂ­ಧಿಸಿದಂತೆ ಕೇಂದ್ರದ ಈಚೆಗಿನ ನಡೆ­ಯೊಂದು ಇಂತಹದ್ದೊಂದು ಅನುಮಾನ ಮೂಡಿ­ಸಿದೆ. ಭಾರತೀಯ ಜನತಾ ಪಕ್ಷ­ದಲ್ಲಿಯೂ ಉದಾರವಾದಿ ಚಿಂತನೆ ಹೊಂದಿರು­ವ­ವರು ಹಲವರಿದ್ದಾರೆ. ಈ ದೇಶದ ಬಗ್ಗೆ ಮಾತ­ನಾಡು­ವಾಗಲೆಲ್ಲಾ ವಿವಿಧತೆಯಲ್ಲಿ ಏಕತೆಯ ಪರಿಕಲ್ಪನೆ ಬಗ್ಗೆ ಅವರಿಗೆ ಸ್ಪಷ್ಟತೆ ಇರುವಂತಿದೆ. ಆದರೆ ಅಂತಹವರು ಮಾತನಾಡುವುದೇ ಕಡಿಮೆ ಎಂಬುದೂ ಈ ಸಂದರ್ಭದಲ್ಲಿ ಎದ್ದು ಕಾಣುತ್ತಿದೆ.

ಕೇಂದ್ರದಲ್ಲಿ  ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು ಎರಡು ವಾರಗಳಾಗಿದ್ದಾಗ ಹಿಂದಿ ಭಾಷೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾ­ರದ ಇಲಾಖೆಗಳಿಗೆ ಸುತ್ತೋಲೆಯೊಂದು ತಲುಪಿತು. ಸಂಬಂಧಪಟ್ಟ ಇಲಾಖೆಗಳೆಲ್ಲವೂ ಸಾಮಾ­ಜಿಕ ಜಾಲತಾಣಗಳಲ್ಲಿ ಹಿಂದಿಯನ್ನೇ ಹೆಚ್ಚಾಗಿ ಬಳಸಬೇಕೆಂದು ಅದರಲ್ಲಿ ಸೂಚನೆ ನೀಡ­ಲಾಗಿತ್ತು. ಇದು ಹಿಂಬಾಗಿಲಿನಿಂದ ಭಾಷೆ­ಯೊಂ­ದನ್ನು ಹೇರುವ ಪ್ರಯತ್ನವಲ್ಲದೆ ಇನ್ನೇನೂ ಅಲ್ಲ. ಹಿಂದಿಯೇತರ ಭಾಷೆಯ ರಾಜ್ಯಗಳು ಕೇಂದ್ರದ ಈ ನಡೆಯ ವಿರುದ್ಧ ತಕ್ಷಣ ಧ್ವನಿ ಎತ್ತಿದವು. ಕೇಂದ್ರದ ಆಡಳಿತಗಾರರು ಕೂಡಲೇ ಸಮ­ಜಾಯಿಷಿ ನೀಡುತ್ತಾ ‘ಆ ಸುತ್ತೋಲೆ ಹಿಂದಿ ಮಾತನಾಡುವ ರಾಜ್ಯಗಳಿಗಷ್ಟೇ ಸಂಬಂಧಿಸಿದ್ದು’ ಎಂದರು.

ಆದರೆ ಈ ಸ್ಪಷ್ಟೀಕರಣ ಯಾರಲ್ಲೂ ನಂಬಿಕೆ ಹುಟ್ಟಿಸುವಂತಿರಲಿಲ್ಲ. ನನಗನ್ನಿಸುವ ಮಟ್ಟಿಗೆ ಕೇಂದ್ರ ಸರ್ಕಾರವೇ ಭಾಷೆಗೆ ಸಂಬಂಧಿಸಿದಂತೆ ಜನರ ನಾಡಿಮಿಡಿತ ಹೇಗಿದೆ ಎಂದು ತಿಳಿದು­ಕೊ­ಳ್ಳಲು ಹೀಗೆ ಮಾಡಿರಬಹುದು. ಹಿಂದಿ ಹೇರುವ ತಮ್ಮ ನಡೆಗೆ ಪ್ರತಿಭಟನೆಯ ಸದ್ದು ದೊಡ್ಡದಿದೆ ಎಂದು ಗೊತ್ತಾದ ತಕ್ಷಣ ಸರ್ಕಾರ ಹಿಂದಡಿ ಇಟ್ಟುಬಿಟ್ಟಿದೆ. ಆದರೆ ಆ ಸುತ್ತೋಲೆಯಿಂದ ಆಘಾತ­ವಂತೂ ಆಗಿಬಿಟ್ಟಿದೆ. ಹಿಂದಿಯೇತರ ಭಾಷೆ­ಗಳೇ ಪ್ರಬಲವಾಗಿರುವ ರಾಜ್ಯಗಳ ಮಂದಿಗೆ ಅಭದ್ರತೆ ಉಂಟಾಗಿದೆ. ಮುಂದಿನ ದಿನ­ಗಳಲ್ಲಿ ಭಾಷೆಗೆ ಸಂಬಂಧಿಸಿದಂತೆ ತಮಗೆ ಪ್ರತಿಕೂಲ­ವಾದ ಯಾವುದೇ ನಿಯಮ ಬರಬಹುದು ಎಂಬ ಭಯ ಅವರಲ್ಲಿ ಮೂಡಿರುವುದಂತೂ ಸತ್ಯ.

ಐವತ್ತರ ದಶಕದ ಕೊನೆಯಲ್ಲಿ ಮತ್ತು ಅರವತ್ತರ ದಶಕದ ಆರಂಭದಲ್ಲಿ ಭಾಷೆಗೆ ಸಂಬಂಧಿಸಿದಂತೆ ದೊಡ್ಡ ಘರ್ಷಣೆ ನಡೆದಿದ್ದು, ದೇಶದ ಪಾಲಿಗೆ ಇವತ್ತಿಗೂ ಅದು ದುಃಸ್ವಪ್ನವಾಗಿ ಕಾಡುತ್ತಿದೆ. ಅಂದು ಕೂಡಾ ಗೃಹ ಸಚಿವಾಲಯವು ಇಂಗ್ಲಿಷ್‌ ಬದಲು ಹಿಂದಿ ಬಳಸಲು ಸೂಚನೆ ನೀಡಿತ್ತು ಎಂಬುದನ್ನು ನಾವು ಮರೆಯುವಂತಿಲ್ಲ. ಆ ದಿನಗಳಲ್ಲಿ ದಕ್ಷಿಣದ ಬಹುತೇಕ ರಾಜ್ಯಗಳಲ್ಲಿ ಕೇಂದ್ರದ ವಿರುದ್ಧ ವ್ಯಾಪಕ ಪ್ರತಿಭಟನೆ ಕಂಡು ಬಂದಿತ್ತು. ತಮಿಳುನಾಡಿನಲ್ಲಿ ಹಿಂದಿ ಭಾಷೆಯ ವಿರುದ್ಧವೇ ದೊಡ್ಡ ಆಂದೋಲನ ನಡೆದಿತ್ತು. ಆ ಸಂದರ್ಭದಲ್ಲಿ ಪ್ರತಿಭಟನೆಕಾರನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಂಡಿದ್ದ.

ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ  ಆ ಘಟನೆಗಳಿಂದ ಬೇಸತ್ತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ದಿನಗಳಲ್ಲಿ ಪ್ರತಿಭಟನೆಯ ಬೆಂಕಿ ವೇಗವಾಗಿ ವ್ಯಾಪಿಸುತ್ತಿರುವಾಗ ಎಚ್ಚೆತ್ತು­ಕೊಂಡ ನೆಹರೂ ‘ಬಲವಂತವಾಗಿ ಹಿಂದಿ ಹೇರುವ ಉದ್ದೇಶ ಇಲ್ಲವೇ ಇಲ್ಲ’ ಎಂದಿದ್ದರು. ಹಿಂದಿ­ಯೇತರ ಭಾಷಿಕರು ಸ್ವತಃ ಮುಂದೆ ಬಂದು ಹಿಂದಿ ಭಾಷೆಯನ್ನೇ ಬಳಸುತ್ತೇವೆ ಎಂದು ಹೇಳು­ವವರೆಗೆ ಕೇಂದ್ರದಲ್ಲಿ ಆಡಳಿತಕ್ಕೆ ಸಂಬಂ­ಧಿಸಿದಂತೆ ಹಿಂದಿಯನ್ನು ಬಳಸುವುದಿಲ್ಲ ಎಂದೂ ನೆಹರೂ ಆಶ್ವಾಸನೆ ನೀಡಿದ್ದರು. ಅಂದು ನೆಹರೂ ಅವರು ಆಡಿದ್ದ ಮಾತುಗಳಿಂದ ಹಿಂದಿ ಭಾಷಿಕರೇ ಬಹು­ಸಂಖ್ಯಾತರಾಗಿರುವ  ರಾಜ್ಯಗಳ ಜನರಿಗೆ ನಿರಾಸೆ ಉಂಟಾ­ಗಿತ್ತು, ನಿಜ. ಆದರೆ ಹಿಂದಿಯೇತರ ಭಾಷೆ­ಗಳಾಡುವ ಜನರೇ ಬಹುಸಂಖ್ಯಾತ­ರಾಗಿ­ರುವ ರಾಜ್ಯಗಳು ನಿರಾಳದ ಭಾವ ವ್ಯಕ್ತ ಪಡಿಸಿದ್ದವು.

ಪ್ರಧಾನಿ ನರೇಂದ್ರ ಮೋದಿಯವರು ಹಿಂದಿ­ಯನ್ನು ಅತ್ಯಂತ ಸುಲಲಿತವಾಗಿ ಮಾತ­ನಾಡು­ತ್ತಾರೆ. ಹಿಂದಿ ಅವರಿಗೆ ಅತ್ಯಂತ ಭದ್ರತೆಯ ಭಾವ ನೀಡುವುದಲ್ಲದೆ, ಆತ್ಮವಿಶ್ವಾಸ ತುಂಬುವಂತಹ­ದ್ದಾಗಿದೆ. ಈಚೆಗಿನ ಸಾರ್ವತ್ರಿಕ ಚುನಾವಣೆ­ಯ­ಲ್ಲಿಯೂ ಅವರು ಹಿಂದಿಯಲ್ಲಿಯೇ ಮಾತ­ನಾಡುತ್ತಾ ದೇಶದಾದ್ಯಂತ ಪ್ರವಾಸ ಮಾಡಿ­ದ್ದರು.

ಇದೀಗ ಮೋದಿಯವರು, 1963ರಲ್ಲಿ ಆಗಿನ ಪ್ರಧಾನಿ ನೆಹರೂ ಅವರು ದೇಶಕ್ಕೆ ನೀಡಿದ್ದ ವಚನ­ವನ್ನು ನೆನಪಿಸಿಕೊಳ್ಳಬೇಕು. ಇಡೀ ದೇಶ­ದಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಭಾಷೆ­ಗಳೆರಡೂ ಆಡಳಿತದಲ್ಲಿ ಸಂಪರ್ಕ ಭಾಷೆಗಳಾಗಿ  ಮುಂದು­ವರಿ­ಯುತ್ತವೆ ಎಂದು ಅಂದು ನೆಹರೂ ನುಡಿದಿ­ದ್ದರು. ‘ಇಂತಹ ದಿನದಿಂದ ಹಿಂದಿ ಭಾಷೆಯನ್ನು ದೇಶ­ದಾದ್ಯಂತ ಕಡ್ಡಾಯವಾಗಿ ಬಳಸಬೇಕು ಎಂಬುದಾಗಿ ಯಾವುದೇ ಸರ್ಕಾರ ಹಿಂದೆಂದೂ ಗಡುವು ವಿಧಿಸಿರಲಿಲ್ಲ’ ಎಂಬುದನ್ನೂ ಮೋದಿ­ಯವರು ಮನದಟ್ಟು ಮಾಡಿಕೊಳ್ಳಬೇಕು.

ಕೇಂದ್ರ ಸರ್ಕಾರದ ಮಟ್ಟಿಗೆ ಈ ದ್ವಿಭಾಷಾ ನೀತಿ ಮುಂದುವರಿಯುವ ಅಗತ್ಯವಿದೆ. ಆದರೆ ಬಿಜೆಪಿ ಬಹಳ ಅವಸರದಲ್ಲಿರುವಂತೆ ಕಾಣಿಸು­ತ್ತಿದೆ. ಇಂಗ್ಲಿಷ್‌ ಭಾಷೆಯನ್ನು ಕೆಲವೇ ಕೆಲವು ಕಡೆ ಬಳಸುವ ರೀತಿಯಲ್ಲಿ ಅದಕ್ಕೊಂದು ಕಡಿವಾಣ ಹಾಕುವ ಹುಮ್ಮಸ್ಸಿನಲ್ಲಿ ಆ ಪಕ್ಷದವರಿದ್ದಾರೆ. ಹಿಂದಿಯೇತರ ಭಾಷೆಗಳನ್ನು ಮಾತ­ನಾಡುವ ರಾಜ್ಯಗಳ ಮಂದಿ ಹಿಂದಿಯನ್ನು ಭಾರತ ಒಕ್ಕೂಟ ವ್ಯವಸ್ಥೆಯ ಭಾಷೆ ಎಂದು ಒಪ್ಪಿ­ಕೊಂಡಿದ್ದಾರೆ. ಆದರೆ ಆ ಭಾಷೆಯನ್ನು ಕಲಿ­ಯಲು ಅವರಿಗೆ ಸಮಯ ಬೇಕೇ ಬೇಕು. ಉತ್ತರ ಪ್ರದೇಶ, ಮಧ್ಯಪ್ರದೇಶ ಅಥವಾ ರಾಜಸ್ತಾನ­ಗಳ ಜನರು ಮಾತನಾಡುವಷ್ಟು ನಿರರ್ಗಳ­ವಾಗಿ ತಮಿಳು­ನಾಡಿನ ಮಂದಿ ಹಿಂದಿಯನ್ನು ಮಾತನಾಡಲು ಸಾಕಷ್ಟು ಕಾಲ ಬೇಕು ತಾನೆ?

ಈಗಾಗಲೇ ಕೇರಳ, ತಮಿಳುನಾಡು, ಆಂಧ್ರ­ಪ್ರದೇಶ, ಕರ್ನಾಟಕದ ಜನರು  ಹಿಂದಿ ಭಾಷೆಯೂ ಒಂದು ವಿಷಯವಾಗಿ ಇರುವ ಸ್ಪರ್ಧಾ­ತ್ಮಕ ಪರೀಕ್ಷೆಗಳಲ್ಲಿ ಉತ್ಕೃಷ್ಟತೆ ತೋರಿ­ದ್ದಾರೆ. ಈ ಸ್ಪರ್ಧಿಗಳ ಮಾತೃಭಾಷೆಯಂತೂ ಹಿಂದಿ ಅಲ್ಲವೇ ಅಲ್ಲ. ಭಾರತದಲ್ಲಿ ಅರ್ಧ ಶತ­ಮಾ­ನದ ಹಿಂದಿದ್ದ ಸ್ಥಿತಿ ಇವತ್ತು ಇಲ್ಲ. ದೇಶದಲ್ಲಿ ಯಾವುದೇ ಭಾಷೆಯಲ್ಲಿ ಮಾತನಾಡುವ ಮಂದಿ ತಮ್ಮ ಭಾಷೆಯೇ ಶ್ರೇಷ್ಠ ಎಂದು ಭಾವಿ­ಸುವ ಕಾಲ ಇದು. ಹಿಂದೆ ಭಾಷಾವಾರು ರಾಜ್ಯ ವಿಂಗ­ಡಣೆಯ ಸಂದರ್ಭದಲ್ಲಿ ಕಂಡು ಬಂದ ಗೊಂದಲ­ಗಳೇ ನಮಗೆ  ಎಚ್ಚರಿಕೆಯ ಗಂಟೆ­ಯಾಗ­ಬೇಕಿತ್ತು. ವಿವಿಧತೆಯಲ್ಲಿ ಏಕತೆಯೇ ನಮ್ಮ ಒಕ್ಕೂಟ ವ್ಯವಸ್ಥೆಯ ಶಕ್ತಿಯಾಗಿದೆ ಎಂಬುದೂ ನಿಜ ತಾನೆ.

ಭಾರತದ ಸಂವಿಧಾನದಲ್ಲಿ 22 ಭಾಷೆಗಳಿಗೆ ಮಾನ್ಯತೆ ನೀಡಲಾಗಿದೆ. ಈ ಪಟ್ಟಿಯಲ್ಲಿರುವ ಪ್ರತಿ ಭಾಷೆಗೂ ಅದರದೇ ಆದ ಲಿಪಿ ಇದೆ. ಇವುಗಳೆಲ್ಲವೂ ರಾಷ್ಟ್ರೀಯ ಭಾಷೆಗಳೇ. ಆದರೆ ಇವುಗಳೆಲ್ಲದರ ನಡುವೆ ಹಿಂದಿ ಮತ್ತು ಇಂಗ್ಲಿಷ್‌ ಸಂಪರ್ಕ ಭಾಷೆಯಾಗಿವೆ. ಭಾಷಾ ಆಯೋಗಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿಯೇ ಇದನ್ನು ಹೇಳಿದೆ. ಇದೇ ಸಮಿತಿಯು ಹಿಂದಿಗೆ ಪ್ರಧಾನ ಭಾಷೆ ಎಂಬ ಮಾನ್ಯತೆ ನೀಡಿದರೆ, ಇಂಗ್ಲಿಷ್‌ಗೆ ಹೆಚ್ಚುವರಿ ಭಾಷೆ ಎಂಬ ಮಾನ್ಯತೆ ನೀಡಿದೆ.

ಇಂತಹ ಗೊಂದಲಗಳ ನಡುವೆ ಈ ದೇಶದಲ್ಲಿ ಭಾಷೆಗೆ ಸಂಬಂಧಿಸಿದಂತೆ ಜನಮತ ಗಣನೆ ನಡೆಸಿ ಒಂದು ನಿರ್ಧಾರಕ್ಕೆ ಬರುವವರೆಗೆ ಯಥಾ ಸ್ಥಿತಿ­ಯನ್ನು ಕಾಪಾಡಿಕೊಂಡು ಹೋಗುವುದು ಬಹಳ ಮುಖ್ಯ. ಇದರ ಅರ್ಥ ಹಿಂದಿಯನ್ನು ಕಡೆಗಣಿಸ­ಬೇಕೆಂ­ದಲ್ಲ. ಇತರ ಭಾಷೆಗಳೂ ತಲೆ ಎತ್ತಿ ನಿಲ್ಲುವಂತಿರಬೇಕು ಮತ್ತು ಅಂತಹ ಭಾಷೆಗಳು ದ್ವೀಪಗಳಂತಾಗಬಾರದು ಅಷ್ಟೆ.

ಈ ಸಂದಿಗ್ಧ ಕಾಲಘಟ್ಟದಲ್ಲಿ ಹಿಂದಿ ಭಾಷೆಯ ಕಟ್ಟಾ ಅಭಿಮಾನಿಗಳು ತಾಳ್ಮೆಯಿಂದಿರಬೇಕು. ದೇಶದ ಎಲ್ಲಾ ಪ್ರದೇಶಗಳ ಮಂದಿ ಹಿಂದಿಯಲ್ಲಿ ಪ್ರಾವೀಣ್ಯ ಗಳಿಸುವವರೆಗೆ ಕಾಯುವ ಅಗತ್ಯ­ವಿದೆ. ದೇಶದಲ್ಲಿ ತಮಿಳುನಾಡನ್ನು ಹೊರತು­ಪಡಿಸಿ ಎಲ್ಲಾ ರಾಜ್ಯಗಳಲ್ಲಿಯೂ ಶಾಲೆಗಳಲ್ಲಿ ಹಿಂದಿ ಕಲಿಕೆಯನ್ನು ಕಡ್ಡಾಯ ಮಾಡಲಾಗಿದೆ. ಹಿಂದಿ ಸಿನಿಮಾಗಳಂತೂ ಈ ಭಾಷೆಯನ್ನು ದೇಶ­ದಾದ್ಯಂತ ಜನಪ್ರಿಯಗೊಳಿಸಿವೆ ಎಂದರೆ ಅತಿಶಯೋಕ್ತಿಯಂತೂ ಅಲ್ಲ. ಇವುಗಳನ್ನೆಲ್ಲಾ ಗಮನಿಸಿ­ದರೆ ಇನ್ನು ಕೆಲವು ವರ್ಷಗಳಲ್ಲಿ ಹಿಂದಿ­ಯೇತರ ಭಾಷೆಗಳಿರುವ ರಾಜ್ಯಗಳ ಜನರೂ ಹಿಂದಿಯಲ್ಲಿ ಉತ್ತಮವಾಗಿ ಸಂಭಾಷಣೆ ನಡೆಸುವ ಪ್ರಾವೀಣ್ಯ ಗಳಿಸಲು ಸಾಧ್ಯವಿದೆ.

ಭಾಷೆ ಒಂದು ಪರಿಣಾಮಕಾರಿ ಶಕ್ತಿ. ಉರ್ದು­ವಿನ ವಿರುದ್ಧ ಭುಗಿಲೆದ್ದ ಬಂಗಾಳಿ ಭಾಷೆಯೇ ಬಾಂಗ್ಲಾದೇಶದ ಹುಟ್ಟಿಗೆ ಕಾರಣ­ವಾಯಿತು. ಪಾಕಿಸ್ತಾನದಲ್ಲಿ ಬಲೂಚಿ ಭಾಷೆಯ ಬಗ್ಗೆ ಮಲ­ತಾಯಿ ಧೋರಣೆಯಿಂದಾ­ಗಿಯೇ ಬಲೂಚಿ­ಸ್ತಾನ ಪ್ರಾಂತ್ಯಕ್ಕೆ ಸ್ವಾಯತ್ತೆ ನೀಡ­ಬೇಕೆಂಬ ಆಂದೋಲನ ಅಲ್ಲಿ ದೊಡ್ಡದಾಗಿ ಬೆಳೆದಿದೆ.

ಪ್ರಸಕ್ತ ಕೆಲವು ಭಾಷೆಗಳು ನಶಿಸುತ್ತಿರುವ ಬಗ್ಗೆ ನಮ್ಮ ಆಡಳಿತಗಾರರು ಚಿಂತಿಸುವ ಅಗತ್ಯವಿದೆ. ಪಂಜಾ­ಬ್‌ನ ಮನೆಗಳಲ್ಲಿ ಇವತ್ತು ಪಂಜಾಬಿ ಭಾಷೆ­­ಯಲ್ಲಿ ಮಾತನಾಡುವವರ ಸಂಖ್ಯೆ ಕಡಿಮೆ­ಯಾಗು­ತ್ತಿದೆ. ಅಲ್ಲಿ ಮಾತೃಭಾಷೆಯ ಬಗ್ಗೆ ಅಭಿ­ಮಾನ ಕಡಿಮೆಯಾಗುತ್ತಿದೆ. ತಮಗೆ ಉದ್ಯೋಗ­ವಕಾಶ ಕಲ್ಪಿಸುವ ಮತ್ತು ಉತ್ತಮ ಬದುಕು ಕಟ್ಟಿ­ಕೊಳ್ಳಲು ಪೂರಕವಾದ ಇಂಗ್ಲಿಷ್‌ ಭಾಷೆಯ ಬಗ್ಗೆಯೇ ಅಲ್ಲಿನ ಯುವಜನಾಂಗ ಹೆಚ್ಚು ಆಸಕ್ತಿ ತೋರುತ್ತಿದೆ.

ಮುಂದಾಲೋಚನೆಯಿಂದ ಕೂಡಿದ ಯೋಜ­ನೆ­ಗಳಿಲ್ಲದಿದ್ದರೆ ಮುಂದೊಂದು ದಿನ ಭಾರತದ ಇಂತಹ ಅನೇಕ ಭಾಷೆಗಳು ಕಳೆದು ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ದಿಸೆಯಲ್ಲಿ ನಮ್ಮ ಆಡಳಿತಗಾರರು ಯೋಚಿಸಬೇಕಾದುದು ಇಂದಿನ ಅನಿವಾರ್ಯಯಾಗಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT