ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜವಾದ ಸಂಬಂಧಗಳು

Last Updated 17 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಹಿಮಾಲಯದ ತಪ್ಪಲಿನಲ್ಲಿ ಇದ್ದದ್ದು ಪಾಂಚಗಾವ.  ಅದೊಂದು ಪುಟ್ಟ ಹಳ್ಳಿ.  ಅಲ್ಲಿ ಗೋವರ್ಧನದಾಸ ಒಂದು ಕಿರಾಣಿ ಸಾಮಾನುಗಳ ಅಂಗಡಿ ಇಟ್ಟುಕೊಂಡು ಸಂಸಾರ ನಡೆಸುತ್ತಿದ್ದ.  ಅವನ ಸೋದರ­ಳಿಯ ಸುಂದರ ಕೆಲಸದಲ್ಲಿ ಸಹಾಯಕ­ನಾಗಿದ್ದ. ಒಂದು ದಿನ ಸಂಜೆ ಗೋವ­ರ್ಧನದಾಸ ಮನೆಗೆ ಬರುತ್ತಿದ್ದಾಗ ಮನೆಯ ಮುಂದೆ ಕಟ್ಟೆಯ ಮೇಲೆ ಏನೋ ಬಿದ್ದಂತೆ ಕಂಡಿತು.  ಹತ್ತಿರ ಹೋಗಿ ನೋಡಿದರೆ ಅದೊಂದು  ರಣಹದ್ದು. ಅದು ಹಾರಲು ಪ್ರಯತ್ನಿ­ಸುತ್ತಿದೆ. ಆದರೆ, ಹಾರಲಾಗುತ್ತಿಲ್ಲ.  ಅದರ ಕಾಲಿಗೇನೋ ಪೆಟ್ಟಾಗಿರಬೇಕು.  ಹೊರಗೆ ವಿಪರೀತ ಚಳಿ ಬೇರೆ.  ಅದು ಗಡಗಡನೆ ನಡುಗುತ್ತಿದೆ.  ರಾತ್ರಿಯೆಲ್ಲ ಹೀಗೆಯೇ ಚಳಿಯಲ್ಲಿ ಬಿದ್ದಿದ್ದರೆ ಅದು ಸತ್ತೇ ಹೋಗುತ್ತದೆ ಎನ್ನಿಸಿತು.  ಗೋವ­ರ್ಧನ­ದಾಸ ಕರುಣೆಯಿಂದ ಆ ರಣ­ಹದ್ದನ್ನು ನಿಧಾನವಾಗಿ ಎತ್ತಿಕೊಂಡು ಮನೆಯೊಳಗೆ ಕರೆದೊಯ್ದ. ಪಡ­ಸಾಲೆಯ ಮೂಲೆಯಲ್ಲಿ ಮಲಗಿಸಿದ.  ದೂರದಲ್ಲಿ ಸ್ವಲ್ಪ ಬೆಂಕಿ ಹಾಕಿ ಬೆಚ್ಚಗೆ ಮಾಡಿದ.  ಅದಕ್ಕೊಂದಿಷ್ಟು ಆಹಾರ ತಂದು ಹಾಕಿದ.  ಎರಡು ದಿನಗಳಲ್ಲಿ ರಣ­ಹದ್ದು ಸರಿಯಾಯಿತು.  ಗರಿಗೆದರಿ ಹಾರಿ ಹೋಗಿಬಿಟ್ಟಿತು.  ಗೋವರ್ಧನ­ದಾಸನಿಗೆ ಸಂತೋಷ. ರಣಹದ್ದು ಹಾರಿ ತನ್ನ ಮನೆಗೆ ಹೋಗಿ ತನ್ನ ಬಾಂಧವ­ರನ್ನೆಲ್ಲ ಕರೆದು ಸೇರಿಸಿತು.  ಅವರಿಗೆಲ್ಲ ಗೋವರ್ಧನದಾಸ ಮಾಡಿದ ಉಪಕಾರ­ವನ್ನು ತಿಳಿಸಿ ಆತನಿಗೆ ತಾವೆಲ್ಲ ಸೇರಿ ಹೇಗಾದರೂ ಮಾಡಿ ಕೃತಜ್ಞತೆ ತೀರಿಸ­ಬೇಕು ಎಂದಿತು.

ಆಗ ಮತ್ತೊಂದು ರಣಹದ್ದು ಸಲಹೆ ನೀಡಿತು. ‘ನಾವು ಅಲ್ಲಲ್ಲಿ ಹಾರಾಡು­ವಾಗ ಯಾವುದಾದರೂ ಬೆಲೆಬಾಳುವ ವಸ್ತು ಕಣ್ಣಿಗೆ ಬಿದ್ದರೆ ಅದನ್ನು ಎತ್ತಿ­ಕೊಂಡು ಹೋಗಿ ಗೋವರ್ಧನ­ದಾಸನ ಮನೆಯ ಅಂಗಳದಲ್ಲಿ ಹಾಕಿ ಬಂದು ಬಿಡೋಣ’.   ಎಲ್ಲ ರಣಹದ್ದುಗಳು ಅದನ್ನೇ ಸರಿ ಎಂದವು.  ಮರುದಿನದಿಂದ ಈ ಹದ್ದುಗಳು ಎಲ್ಲ ಕಡೆಗೆ ಹಾರಾಡುತ್ತ, ಎಲ್ಲೆಲ್ಲಿ ಆಭರಣಗಳು ಕಂಡವೋ, ಬೆಲೆಬಾಳುವ ಬಟ್ಟೆಗಳು ಕಂಡವೋ ಅವನ್ನೆಲ್ಲ ಸರಕ್ಕನೇ ಹಾರಿ ಕೆಳಗೆ ಬಂದು ಎತ್ತಿಕೊಂಡು ಗೋವರ್ಧನ ದಾಸನ ಮನೆಯ ಅಂಗಳಕ್ಕೆ ಹಾಕಿ ಹೋಗ­ತೊಡ­ಗಿದವು. ಗೋವರ್ಧನದಾಸನಿಗೆ ಆಶ್ಚರ್ಯ ಹಾಗೂ ಭಯ.  ಅವು ಯಾರ ವಸ್ತುಗಳೋ ತಿಳಿಯದು.  ಅವನು ಪ್ರಾಮಾಣಿಕನಾದ್ದರಿಂದ ಅವೆಲ್ಲ ವಸ್ತುಗಳನ್ನು ಬೇರೆಯಾಗಿಯೇ ತೆಗೆ­ದಿಟ್ಟ.  ಅವನ ಸೋದರಳಿಯ ಸುಂದರ ಮಾವ ಮನೆಯಲ್ಲಿ ಇಲ್ಲದಿದ್ದಾಗ ಬಿದ್ದ ವಸ್ತುಗಳನ್ನು ತಾನೇ ಎತ್ತಿ ಬಳಸಿಕೊ­ಳ್ಳುತ್ತಿದ್ದ. ಅನೇಕ ಜನ ನಾಗರಿಕರು ತಮ್ಮ ಬೆಲೆ ಬಾಳುವ ವಸ್ತುಗಳನ್ನು ಕಳೆದು­ಕೊಂಡವರು ಹೋಗಿ ರಾಜನಿಗೆ ದೂರು ಕೊಟ್ಟರು.  ರಾಜ ತನ್ನ ದೂತರಿಗೆ ಹೇಳಿ ರಣಹದ್ದುಗಳ ಹಾರಾಟದ ಬಗ್ಗೆ ಗಮನವಿಡುವಂತೆ ಸೂಚಿಸಿದ.  ಸುಂದರ­ನಿಗೆ ದುರಾಸೆ ಬಂದಿತು.  ತಾನೇ ಹೋಗಿ ರಾಜನಿಗೆ ತನ್ನ ಮಾವನೇ ಎಲ್ಲ ವಸ್ತುಗಳನ್ನು ಹೊಡೆದಿದ್ದಾನೆ ಎಂದು ತಿಳಿಸಿದರೆ ಅವನನ್ನು ರಾಜದೂತರು ಬಂಧಿ­ಸುತ್ತಾರೆ.  ಆಗ ಅವನು ಕೂಡಿ­ಹಾಕಿದ್ದ ವಸ್ತುಗಳೆಲ್ಲ ತನ್ನವೇ ಆಗುತ್ತವೆ ಎಂದು­ಕೊಂಡು ದೂರು ಕೊಟ್ಟ. 

ರಾಜದೂತರು ಗೋವರ್ಧನದಾಸನನ್ನು  ಬಂಧಿಸಿ ಕರೆ­ದೊ­ಯ್ದರು.  ಗೋವರ್ಧನ­ದಾಸ ರಾಜನ ಮುಂದೆ ನಡೆದದ್ದನ್ನೆಲ್ಲ ವಿವರವಾಗಿ ತಿಳಿಸಿ ತನಗೆ ದೊರೆತ ಎಲ್ಲ ವಸ್ತುಗಳನ್ನು ಒಪ್ಪಿಸಿದ.  ಕಳೆದು­ಕೊಂಡಿದ್ದ ಜನ ಬಂದು ತಮ್ಮ ತಮ್ಮ ವಸ್ತುಗಳನ್ನು ಪಡೆದು ಹೋದರು.  ಕೆಲವರ ವಸ್ತುಗಳು ಮಾತ್ರ ಸಿಗಲೇ ಇಲ್ಲ.  ಯಾಕೆಂದರೆ ಅವುಗಳನ್ನು ಸುಂದರ ಹೊಡೆದಿದ್ದ.  ಇಷ್ಟೆಲ್ಲಾ ವಸ್ತುಗ­ಳನ್ನೂ ಪ್ರಾಮಾಣಿಕವಾಗಿ ಮರಳಿಸಿದ ದಾಸ ಕೆಲವನ್ನೇ ಯಾಕೆ ಇಟ್ಟು­ಕೊಂಡಿರಬೇಕು ಎಂದು ಸಂಶಯದಿಂದ ದೂತರಿಗೆ ಸೂಚನೆ ಕೊಟ್ಟಾಗ ಅವರು ಸುಂದ­ರನಿಗೆ ತಿಳಿಯ­ದಂತೆ ಅವನನ್ನು  ಹಿಂಬಾಲಿಸಿ ಆ ವಸ್ತುಗಳನ್ನು ವಶಪಡಿಸಿ­ಕೊಂಡು ಅವ­ನನ್ನು ಬಂಧಿಸಿ­ದರು.  ಗೋವರ್ಧನ­ದಾಸನಿಗೆ ತುಂಬಾ ದುಃಖವಾ­ಯಿತು.  ರಣಹದ್ದು­ಗಳಿಗಿದ್ದ ಕೃತಜ್ಞತೆ ಮನುಷ್ಯ­ನಾದ, ಅಳಿಯನಾದ ಸುಂದರನಿಗೆ ಇಲ್ಲದೇ ಹೋಯಿ­ತಲ್ಲ ಎಂದು ಸಂಕಟ­ಪಟ್ಟ. ನಮ್ಮ ಬದುಕಿನಲ್ಲಿ ಅನೇಕ ಬಾರಿ ಹಾಗೆ ಆಗಿದ್ದು ಉಂಟ­ಲ್ಲವೇ?  ಸಂಬಂಧವೇ ಇಲ್ಲದವರು, ಸಂಬಂಧ­ದಲ್ಲಿ ಅತ್ಯಂತ ದೂರವಾ­ದವರು ಅನಿ­ರೀಕ್ಷಿ­ತವಾಗಿ, ಅನಪೇಕ್ಷಿತವಾಗಿ ಸಹಾಯ ಮಾಡುತ್ತಾರೆ.  ಆದರೆ, ಅತ್ಯಂತ ಹತ್ತಿ­ರದ ರಕ್ತ ಸಂಬಂಧಿಗಳೇ ನಮ್ಮ ಬುಡಕ್ಕೆ ಕತ್ತರಿ ಇಡುತ್ತಾರೆ.  ನಿಜವಾದ ಸಂಬಂಧ ಈ ಆತ್ಮೀಯತೆಯ ಬಂಧವೇ.  ತೋರಿ­ಕೆಯ ಸಂಬಂಧಗಳಿಗಿಂತ ನಮ್ಮ ಹೃದ­ಯದ ಭಾವನೆಗಳಿಗೆ ಸಂವಾದಿಯಾಗುವ ಪರಿಚಯವಿಲ್ಲದ ಜನ, ಪಶು ಪಕ್ಷಿಗಳು ಎಷ್ಟೋ ಪಾಲು ಮೇಲು ಎನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT