ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ರಾಜ್ಯ ಬೇಡಿಕೆ ಕೇಳುವ ಮುನ್ನ...

Last Updated 17 ಮೇ 2015, 19:30 IST
ಅಕ್ಷರ ಗಾತ್ರ

ಆತ ನಾಲ್ಕನೆ ತರಗತಿಗೆ ಶಾಲೆ ಬಿಟ್ಟಿದ್ದ. ಯುವಕನಾಗಿದ್ದ ಆತನಿಗೆ ಬದುಕು ನಿರ್ವಹಿಸಲು ಏನಾದರೂ ಮಾಡಬೇಕಿತ್ತು. ಜೆಸಿಬಿ ಚಾಲನೆ ತಿಳಿದಿದ್ದ ಅವನಿಗೆ ಲೈಸನ್ಸ್‌ ಇರಲಿಲ್ಲ. 

ಒಮ್ಮೆ ಭೇಟಿಯಾಗಿದ್ದಾಗ ಖಾಸಗಿಯಾಗಿ ಎಸ್‌ಎಸ್ಎಲ್‌ಸಿ ಪರೀಕ್ಷೆ ತೆಗೆದುಕೊಳ್ಳುವುದಾಗಿ ತಿಳಿಸಿದ್ದ. ಆತನ ನಿರ್ಧಾರ ನನಗೆ ಒಪ್ಪಿಗೆ ಆಗಿರಲಿಲ್ಲ. ಎಷ್ಟು ವರ್ಷ ಪ್ರಯತ್ನಿಸಿದರೂ ಆತ ಖಂಡಿತವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಪಾಸು ಮಾಡಲಾರ ಎಂದೆ ತೀರ್ಮಾನಿಸಿಕೊಂಡೆ. ನನ್ನ ನಂಬಿಕೆ ಸುಳ್ಳಾಯಿತು. ಮುಂದೊಂದು ದಿನ ಆತ ಪಾಸಾದ ಸರ್ಟಿಫಿಕೆಟ್‌ ಮತ್ತು ಲೈಸನ್ಸ್‌ ಪ್ರತಿಯನ್ನು ತೋರಿಸಿದ.

ನನಗೆ ನಂಬಲಾಗಲಿಲ್ಲ. ಪರೀಕ್ಷಾ ಕೊಠಡಿಯ ಮೇಲ್ವಿಚಾರಕರೇ ಕಪ್ಪು ಹಲಗೆಯ ಮೇಲೆ ಉತ್ತರಗಳನ್ನು ಬಿಡಿಸಿದರೂ ಯಥಾವತ್ತಾಗಿ ಉತ್ತರ ಪತ್ರಿಕೆಗೆ ಬರೆದುಕೊಳ್ಳುವ ಸಾಮರ್ಥ್ಯ ಅವನಿಗೆ ಇರಲಿಲ್ಲ. ಪವಾಡ ಜರುಗಿದಂತೆ ಅಲ್ಲಿಯ ವ್ಯವಸ್ಥೆ ಹನುಮಂತನನ್ನು ಪರೀಕ್ಷೆಯಲ್ಲಿ ತೇರ್ಗೆಡಗೊಳಿಸಿತ್ತು! ಈ ಫಲಿತಾಂಶದ ಅರ್ಹತೆಯಿಂದ ಜೆಸಿಬಿ ಲೈಸನ್ಸ್‌ ಪಡೆದುಕೊಂಡ. ಇದು ಕೊಪ್ಪಳ ತಾಲ್ಲೂಕಿನ ಹನುಮಂತ ಎಂಬ ಯುವಕ ಪ್ರಸಂಗ. ಇದು ಈ ಭಾಗದಲ್ಲಿ ಆಚರಣೆಯಲ್ಲಿರುವ ಶಿಕ್ಷಣ ವ್ಯವಸ್ಥೆಯ ಒಂದು ಮಾದರಿಯಷ್ಟೆ.

ಘಟನೆ ಎರಡು.
ಕೆಲಸ ಕೇಳಿಕೊಂಡು ಪತ್ರಿಕಾಲಯಕ್ಕೆ ಬಂದಿದ್ದ ವಿದ್ಯಾರ್ಥಿ ಪದವಿ ಮುಗಿಸಲು ಪರೀಕ್ಷೆ ಎದುರಿಸಿದ್ದ. ಆತನ ಕನ್ನಡ ಜ್ಞಾನವನ್ನು ಪರೀಕ್ಷಿಸಲು ಎದುರಿಗಿದ್ದ 150 ಪದಗಳ ಬರಹವನ್ನು ಓದಲು ಹೇಳಿದೆ. ಅಕ್ಷರಗಳನ್ನು ಕೂಡುತ್ತಾ, ಒತ್ತು, ದೀರ್ಘಗಳಿಗೆ ವಿನಾಯ್ತಿ ನೀಡುತ್ತಾ ಓದು ಮುಗಿಸುವ ವೇಳೆಗೆ ಇಪ್ಪತ್ತು ನಿಮಿಷಗಳೇ ಕಳೆದಿತ್ತು. ಕನ್ನಡ ಮಾಧ್ಯಮದಲ್ಲಿ ಓದಿ ಪದವಿ ಪಡೆಯಲು ಸಜ್ಜಾಗಿರುವ ಈ ವಿದ್ಯಾರ್ಥಿಯ ಬಗ್ಗೆ ಕನಿಕರವೆನಿಸಿತು.

ಏಕೆ? ಇಲ್ಲಿ ಕನ್ನಡ ಓದಲು ಬರೆಯಲು ಕಲಿಯಲು ಏನು ಕಷ್ಟ ಎಂದು ಯೋಚಿಸುತ್ತಿದ್ದೆ. ಇದಕ್ಕೆ ಪೂರಕವಾಗಿ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿದ್ದ ಜಾಹೀರಾತು ಕಾಣಿಸಿತು. ‘ಬೀದರ್‌ ಜಿಲ್ಲೆ ಭಾಲ್ಕಿ ಪಟ್ಟಣದ ಖಾಸಗಿ ಶಾಲೆಗೆ ಶಿಕ್ಷಕರು ಬೇಕಾಗಿದ್ದಾರೆ’ ಎಂದು ಈ ಜಾಹೀರಾತು ವಿಜಯಪುರ (ವಿಜಾಪುರ) ಆವೃತ್ತಿಯಲ್ಲಿ ಪ್ರಕಟಗೊಂಡಿತ್ತು. ಇದು ಅಚ್ಚರಿ ಜೊತೆಗೆ ಕುತೂಹಲ ಕೆರಳಿಸಿತು. ಇದೇನು, ಬೀದರ್‌ ಜಿಲ್ಲೆಯಲ್ಲಿ ಶಿಕ್ಷಕರು ಸಿಗುವುದಿಲ್ಲವೆ? ದೂರದ ಜಿಲ್ಲೆಯಲ್ಲಿ ಶಿಕ್ಷಕರನ್ನು ಹುಡುಕುತ್ತಿರುವ ಉದ್ದೇಶ ಅರ್ಥವಾಗಲಿಲ್ಲ.

ಇದೇ ಗುಂಗಿನಲ್ಲಿ ಯೋಚನೆ ಮಾಡುತ್ತಿದ್ದಾಗ, ಆಕಸ್ಮಿಕವಾಗಿ ಎದುರಾದ ಖಾಸಗಿ ಶಾಲೆಯ ಮಾಲೀಕರೊಂದಿಗೆ ಈ ಬಗ್ಗೆ ಚರ್ಚಿಸಿದೆ.
‘ಎಲ್ಲಿ ಸಾರ್‌..... ಈ ಭಾಗದಲ್ಲಿ ಶಿಕ್ಷಕರದೇ ದೊಡ್ಡ ಕೊರತೆ. ಶಾಲೆ ನಡೆಸುವುದೇ ಕಷ್ಟ ನೋಡಿ... ಅಂದ್ರೆ ಇಲ್ಲಿ ಶಿಕ್ಷಕರಿಗೆ ಕೊರತೆ ಅಂತ ಅಲ್ಲ. ಅಭ್ಯರ್ಥಿಗಳು ಬಿಎಡ್‌  ಪದವಿ ಪಡೆದಿದ್ದರೂ ಪ್ರಾಥಮಿಕ ತರಗತಿಗಳಿಗೂ ಬೋಧಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಇದಕ್ಕಾಗಿ ಕನ್ನಡ ಕಲಿಸಲು ಹಿಂದಿನಿಂದಲೂ ನಾವು ವಿಜಾಪುರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಶಿಕ್ಷಕರನ್ನು ಹುಡುಕುತ್ತಿದ್ದೇವೆ. ನಮಗೆ ಇದೊಂದು ಸಂಸ್ಕೃತಿಯೇ ಆಗಿಬಿಟ್ಟಿದೆ. ನಾವು ನೀಡುವ ಸಂಬಳ ಕಡಿಮೆ ಎನ್ನುವ ಕಾರಣಕ್ಕೆ ಹೊರ ಜಿಲ್ಲೆಯವರು ಬಂದರೂ ಸಹ ಹೆಚ್ಚು ಸಮಯ ಉಳಿಯುವುದೇ ಇಲ್ಲ’ ಎಂದರು.

ಕನ್ನಡ ನಾಡಿನಲ್ಲಿ ಕನ್ನಡ ಶಿಕ್ಷಕರಿಗೆ ಕೊರತೆ ಎಂದಾಗ ದುಃಖವಾದದ್ದು ನಿಜ. ಭಾಲ್ಕಿಯ ಹಿರೇಮಠ ಸಂಸ್ಥಾನ ನಡೆಸುವ ಗುರುಕುಲ ಶಾಲೆಗಳಿಗೂ ಉತ್ತರ ಕನ್ನಡ ಜಿಲ್ಲೆಯ ಶಿಕ್ಷಕರನ್ನು ಕರೆತರಲಾಗುತ್ತದೆ. ಬಸವಣ್ಣನ ನಾಡಿನಲ್ಲಿ ಉರ್ದು ಪ್ರಭಾವದಿಂದ ತಪ್ಪಿಸಿಕೊಂಡು ಕನ್ನಡದಲ್ಲಿದ್ದ ವಚನಗಳನ್ನು ಉಳಿಸಿಕೊಳ್ಳಲು ಭಾಲ್ಕಿಯ ಹಿರೇಮಠ ಸಂಸ್ಥಾನದ ಡಾ.ಚನ್ನಬಸವ ಪಟ್ಟದ್ದೇವರು ಪಟ್ಟಪಾಡು ಅಷ್ಟಿಷ್ಟಲ್ಲ.

ವಾಸ್ತವವಾಗಿ ಉತ್ತರ ಕರ್ನಾಟಕದ ಕನ್ನಡ ನಿಜಕ್ಕೂ ಸೊಗಸು. ನಮ್ಮ ಮನೆಯ ಪಕ್ಕದ ಮಹಿಳೆ ಮುಂಜಾನೆ ಮಲಗಿದ್ದ ಮಕ್ಕಳನ್ನು ಎಬ್ಬಿಸಲು ‘ಬೆಳಕಾತು. ಪಕ್ಷಿ ಹಾಡಾಕತ್ತಾವ ಎದ್ದೇಳ್ರಿ....’ ಎನ್ನುವುದು ಕಿವಿ ಮೇಲೆ ಬೀಳುತ್ತದೆ. ಇಲ್ಲಿ ಜನರಾಡುವ ಮಾತೇ ಕವಿತೆಗಳಿದ್ದಂತೆ. ಈ ಸುಂದರ ಭಾಷೆಯನ್ನು ಕೇವಲ ಆಡುಭಾಷೆಯಾಗಿ ಉಳಿಸಿಕೊಳ್ಳುವುದು ಅವಮಾನ. ಅಕ್ಷರದ ಕವಚ ಇದ್ದಾಗ ಮಾತ್ರ ಒಂದು ಭಾಷೆ ಪರಿಪೂರ್ಣ ಅನಿಸುತ್ತೆ. ಅಕ್ಷರವಿಲ್ಲದ ಭಾಷೆ ಆತ್ಮವಿಲ್ಲದ ದೇಹದಂತೆ. ಇಂಥ ಚಾರಿತ್ರಿಕ ನೆಲದಲ್ಲಿ ಕನ್ನಡ ಪಾಠ ಮಾಡಲು ಬೋಧಕರ ಕೊರತೆ ಎಂದಾಗ ನೋವಾಗುವುದು ಸಹಜ.

ಇಲ್ಲಿ ಏನಾಗಿದೆ? ಹೈದರಾಬಾದ್‌ ಕರ್ನಾಟಕದ ರಾಜಕಾರಣಿಗಳು ಏನು ಮಾಡುತ್ತಿದ್ದಾರೆ? ಆಡಳಿತ ವ್ಯವಸ್ಥೆ ಇಲ್ಲಿ ಇರಬಹುದುದೇ ಎಂದೆಲ್ಲ ಅನಿಸಿತು. ಬೀದರ್‌ ಜಿಲ್ಲೆಯ ಡಿಡಿಪಿಐ ಅವರನ್ನು ವಿಚಾರಿಸಿದೆ. ಮೊದಲಿಗೆ ‘ಹೊರಗಿನ ಶಿಕ್ಷಕರ ಬಗ್ಗೆ ಮಾಹಿತಿ ಇಲ್ಲ’ ಎಂದರು. ಆಮೇಲೆ ‘ಹತ್ತಕ್ಕೋ, ನೂರಕ್ಕೋ ಒಂದು ಇರಬಹುದು. ನಿಮಗೆ ಯಾರೋ ಉತ್ಪ್ರೇಕ್ಷೆ ಮಾಡಿ ಹೇಳಿದ್ದಾರೆ. ಇಲ್ಲಿ ಎಲ್ಲವೂ ಚೆನ್ನಾಗಿದೆ’ ಎಂದು ಮಾತು ನಿಲ್ಲಿಸಿದರು.

ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತ್ಯೇಕ ರಾಜ್ಯ ಕೇಳುತ್ತಿರುವ ರಾಜಕೀಯ ಧ್ವನಿಗಳ ನೆನಪಾಯಿತು. ಸ್ವಾತಂತ್ರ್ಯ ಬಂದ 68 ವರ್ಷಗಳಲ್ಲಿ ಕನಿಷ್ಠ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಸಾಧ್ಯವಾಗದಿದ್ದವರು ಹೊಸ ರಾಜ್ಯವನ್ನು ಕಟ್ಟಲು ಅರ್ಹರೆ ಎಂದುಕೊಂಡೆ. ಇದುವರೆಗೆ ರಾಜ್ಯ ಕಂಡ 19 ಮುಖ್ಯಮಂತ್ರಿಗಳ ಪೈಕಿ ಎಂಟು ಮಂದಿ ಉತ್ತರ ಕರ್ನಾಟಕದವರೇ. ಆದರೂ ಪರಿಸ್ಥಿತಿ ಹೀೇಗಿದೆ. ಇಲ್ಲಿಯ ಸಮಸ್ಯೆ ಏನೂ ಎನ್ನುವುದೇ ಅರ್ಥವಾಗುತ್ತಿಲ್ಲ. ಇಲ್ಲಿ ಏನಾಗಿದೆ ಎನ್ನುವುದೇ ತಿಳಿಯುತ್ತಿಲ್ಲ.
ನಮ್ಮನ್ನಾಳುವವರಿಗೆ ಪ್ರಾಥಮಿಕ ಶಿಕ್ಷಣದ ಪ್ರಾಮುಖ್ಯತೆಯೇ ಗೊತ್ತಾಗುತ್ತಿಲ್ಲ. ಹಿಂದೊಮ್ಮೆ ಸಚಿವರಾಗಿದ್ದ ಡಾ.ಜೀವರಾಜ ಆಳ್ವಾ ಅವರು ಶಾಲೆಗಳು ಅನುತ್ಪಾದಕ ಕ್ಷೇತ್ರಗಳೆಂದು ಹೇಳಿ ಕಷ್ಟಕ್ಕೆ ಸಿಕ್ಕಿದ್ದರು.

ರಾಜ್ಯವನ್ನಾಳುವ ಮುನ್ನ ರಾಜಕಾರಣಿಗಳಿಗೆ ಓದು ಅತ್ಯಗತ್ಯ. ಜಾಗತಿಕ ಚರಿತ್ರೆಗಳನ್ನು ಅಭ್ಯಸಿಸಿದಾಗ ಹೊಸ ಲೋಕ, ಹೊಸ ಆಯಾಮಗಳು ತೆರೆದುಕೊಂಡು ನಾಡನ್ನು ಕಟ್ಟುವ ಚಿಂತನೆಗೆ ಸ್ಪಷ್ಟತೆ ಸಿಗಬಹುದು. ಜೂಲಿಯಸ್‌ ನೇರೇರೆ ತಾಂಜೇನಿಯಾದ ಅಧ್ಯಕ್ಷರಾಗಿದ್ದರು. 1960 ರ ಅವಧಿಯಲ್ಲಿ ಅಧಿಕಾರಕ್ಕೆ ಬಂದ ನೇರೇರೆ ರಾಷ್ಟ್ರವನ್ನುದ್ದೇಶಿಸಿ ಹೀಗೆ ಭಾಷಣ ಮಾಡಿದರು: ‘ನಮ್ಮಲ್ಲಿ ಬಡತನವಿದೆ. ಕಡು ಬಡತನವಿದೆ.

ಆದರೆ, ದೇಶ ಅತ್ಯಂತ ಶ್ರೀಮಂತವಾಗಿವೆ. ಇಲ್ಲಿ ಅಡಗಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡಾಗ ದೇಶ ಸಹಜವಾಗಿ ಶ್ರೀಮಂತವಾಗಿ ಬಿಡುತ್ತದೆ. ಇದನ್ನು ನಿರ್ವಹಿಸಲು ನಮಗೆ ಶಿಕ್ಷಣದ ಕೊರತೆ ಇದೆ. ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡೋಣ. ನಮ್ಮವರು ಓದಿ ಎಂಜಿನಿಯರ್‌ಗಳಾಗಲಿ, ತಂತ್ರಜ್ಞರಾಗಲಿ, ವೈದ್ಯರಾಗಲಿ, ನಂತರ ನಮ್ಮ ಸಂಪನ್ಮೂಲವನ್ನು ಹೇಗೆ ಬಳಸಿಕೊಳ್ಳಬೇಕೆಂಬ ಜ್ಞಾನ ದಕ್ಕುತ್ತದೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯೋಣ. ಮಕ್ಕಳಿಗೆಲ್ಲ ವಿದ್ಯಾಭ್ಯಾಸ ನೀಡಲು ಶ್ರಮಿಸೋಣ, ತ್ಯಾಗ ಮಾಡೋಣ’.

ಈ ಹಿನ್ನೆಲೆಯಲ್ಲಿ ಇಂದಿಗೂ ತಾಂಜೇನಿಯಾದಲ್ಲಿ ಬಡತನ ಇದ್ದರೂ ಅಲ್ಲಿಯ ಸಂಪನ್ಮೂಲಗಳು ನಮ್ಮಂತೆ ಲೂಟಿಯಾಗಿಲ್ಲ. ಬಡತನವಿದ್ದರೂ ಭೂಪಟದ ಮೂಲೆ ಮೂಲೆಗಳಲ್ಲಿ ಭರವಸೆಯ ಮಿಂಚು ಹರಿದಾಡುತ್ತಿದೆ. ಈ ಚಿಂತನೆಯಿಂದಲೇ ನೇರೇರೆ ‘ಮೇಕ್‌ ಇನ್‌ ತಾಂಜೇನಿಯಾ’ ಬದಲಿಗೆ, ‘ಮೇಡ್‌ ಇನ್‌ ತಾಂಜೇನಿಯಾ’ ಕಲ್ಪನೆಗೆ ಒತ್ತುಕೊಟ್ಟರು. ಹೀಗಾಗಿ ವಿಶ್ವದ ಚರಿತ್ರೆಯು ಮಹಾನ್‌ ಚಿಂತಕ, ದಿವ್ಯದೃಷ್ಟಿ ಉಳ್ಳವರು ಎಂದು ಜಾಗ ಕೊಟ್ಟಿದೆ.

ನೇರೇರೆ ನೆನಪಾದ ಕಾರಣವಿಷ್ಟೆ. ಹೊಸ ರಾಜ್ಯ ಕಟ್ಟುವ ಕೂಗಿನ ಹಿಂದೆ ಪ್ರಾಮಾಣಿಕತೆ ಇರಬೇಕು. ದೂರದೃಷ್ಟಿ ಮತ್ತು ಕಳಕಳಿ ಇಲ್ಲದವರು, ಒಂದು ಪ್ರದೇಶದ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳದವರು, ಸಮಗ್ರವಾಗಿ, ನಿಸ್ವಾರ್ಥವಾಗಿ ಚಿಂತಿಸಲಾಗದವರು ಎಂದೂ ಹೊಸ ರಾಜ್ಯವನ್ನು ಕಟ್ಟಲು ಆಗುವುದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT