ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ದೆಹಲಿ ಸೋಲಿಗುಂಟು ಅಪ್ಪಅಮ್ಮ

Last Updated 16 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ದೆಹಲಿ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಒಂದಂತೂ ಸ್ಪಷ್ಟವಾಯಿತು. ಈಗ ನಮ್ಮ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಜನರಿಗಿಂತ ಬಿಜೆಪಿಯನ್ನು ಟೀಕೆ ಮಾಡುವ ಮತ್ತು ಅದಕ್ಕೆ ಉಪದೇಶ ನೀಡುವ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಾ­ಚುನಾ­ವಣೆ ನಡೆದಾಗ ಜಗತ್ತೇ ಬೆರಗಾಗುವಂತೆ ದಿಗ್ವಿಜಯ ಸಾಧಿಸಿ ದೇಶದ ಆಡಳಿತದ ಸೂತ್ರ ಹಿಡಿದ ಬಿಜೆಪಿ, ಸರಿಯಾಗಿ ಒಂಬತ್ತು ತಿಂಗಳ ನಂತರ ಹೆತ್ತದ್ದು ಇದನ್ನೇ! ಯಾವ್ಯಾವ ಜೀನ್‌ಗಳ ಯಾವ್ಯಾವ ಮ್ಯುಟೇಶನ್‌ಗಳು ಅದರ ಪಾಲಿಗೆ ಈ ನಿರ್ಜೀವ ಫಲವನ್ನು ಸೃಷ್ಟಿಸಿದವು ಎಂಬುದರ ಪರಾಮರ್ಶೆ ನಡೆಸಬೇಕೋ ಅಥವಾ ವಾಸ್ತವವಾಗಿ ಬಿಜೆಪಿಯ ಡಿಎನ್‌ಎನಲ್ಲಿರುವ ಮೂಲಾಂಶವೇ ವಿಪರೀತ ಬಹಿರಂಗವಾಗಿ ಮತದಾನದ ಮೇಲೆ ಪರಿಣಾಮ ಬೀರಿತು ಎಂದು ವ್ಯಾಖ್ಯಾನಿಸಬೇಕೋ?

ಯಾವುದೇ ಚುನಾವಣೆಯ ಫಲಿತಾಂಶ, ಸೋತವರಿಗೆ ಪಾಠಗಳನ್ನು ಬಿಚ್ಚಿಟ್ಟಂತೆ ಗೆದ್ದವರಿಗೂ ಪಾಠಗಳನ್ನು ಬಚ್ಚಿಟ್ಟಿರುತ್ತದೆ. ಬಹುಮತದ ನೆರಳಿನಲ್ಲೇ ಭಿನ್ನಮತ ಇರುತ್ತದೆ. ಆದರೆ ಗೆಲುವಿನ ಮದ ಅವುಗಳನ್ನು ಗ್ರಹಿಸಲು ಬಿಡುವುದಿಲ್ಲ. ಒಂದು ಚುನಾವಣೆಯಲ್ಲಿ ಜನರಿಂದ ಸಿಕ್ಕ ಬೆಂಬಲಕ್ಕೆ ಕಾರಣಗಳಿರುವಂತೆ, ಇನ್ನೊಂದು ಚುನಾವಣೆಯಲ್ಲಿ ಸಿಗದಿರುವ ಬೆಂಬಲಕ್ಕೂ ಕಾರಣಗಳಿರುತ್ತವೆ. ಚುನಾವಣಾ ರಾಜಕಾರಣದಲ್ಲಿ ಎಲ್ಲದಕ್ಕೂ ಒಂದು ‘ಎಕ್ಸ್‌ಪೈರಿ ಡೇಟ್‌’ ಇರುವುದು ನಿಜವಾದರೂ ಅದು ಇಷ್ಟು ಬೇಗ, ಇಷ್ಟು ಹತ್ತಿರದಲ್ಲಿ ಇದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಒಟ್ಟಿನಲ್ಲಿ ದೆಹಲಿಯ ಮತದಾರರಂತೂ ಈ ಚುನಾವಣೆಯಲ್ಲಿ ತಮ್ಮ ‘ಮನ್‌ ಕಿ ಬಾತ್‌’ ಏನು ಎಂಬುದನ್ನು ಜೋರಾಗಿ ಕೂಗಿ ಹೇಳಿದರು. ಮೊದಲ ಗೆಲುವಿನ ನಾಗಾಲೋಟದ ನಂತರ ಈಗ ಕಾಲು ಮುರಿದು­ಕೊಂಡ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳು­ವುದು ಖಂಡಿತ. ಆದರೆ ಈ ಕೆಲಸದಲ್ಲಿ ಅದನ್ನು ಒಂಟಿಯಾಗಿ ಬಿಡುವುದು ತರವಲ್ಲ ಎಂದು ಭಾವಿಸಿ ನೂರಾರು ಜನ ನೆರವಾಗುತ್ತಿದ್ದಾರೆ.

‘ಯಶಸ್ಸಿಗೆ ಹಲವು ಅಪ್ಪಂದಿರು ಇರುತ್ತಾರೆ, ಸೋಲು ಮಾತ್ರ ಅನಾಥ’ ಎಂಬ ಗಾದೆ ಮಾತಿದೆ. ಆದರೆ ರಾಜಕಾರಣದಲ್ಲಿ ಹಾಗಲ್ಲ, ಸೋಲಿನ ಅಪ್ಪಅಮ್ಮಂದಿರನ್ನು ಬಿಡಿ, ಅಜ್ಜಅಜ್ಜಿ­ಯರನ್ನೂ ಸುಲಭವಾಗಿ ಗುರುತಿಸಿಬಿಡಬಹುದು! ಹಾಗಾಗಿ ಸೋಲಿನ ಪ್ರವರ ಗುರುತಿಸುವ ಆ ಕೆಲಸ, ನಗರಗಳ ಮಾಧ್ಯಮಗಳಲ್ಲಿ ಮಾತ್ರವಲ್ಲ, ಹಳ್ಳಿಗಳ ಅರಳೀಕಟ್ಟೆಗಳ ಮೇಲೂ  ನಡೆಯು­ತ್ತಿದೆ. ನಮ್ಮ ದೇಶದಲ್ಲಿ ಅನೇಕ ಸಾರ್ವಜನಿಕ ಸಂಗತಿಗಳಲ್ಲಿ ಬಹುತ್ವ ಇರುವಂತೆ ಈ ಸೋಲಿನ ಕಾರಣಗಳ ಟೀಕೆಟಿಪ್ಪಣಿಯಲ್ಲೂ ಬಹುತ್ವವೇ ರಾರಾಜಿಸುತ್ತಿದೆ. ಆದರೆ ‘ಎಷ್ಟಾದರೂ ಈಗ ನಾನು ಹಳ್ಳಕ್ಕೆ ಬಿದ್ದ ತೋಳ. ಆಳಿಗೊಂದು ಕಲ್ಲು ಬೀರುವುದು ಇದ್ದದ್ದೇ’ ಎಂದು ಬಿಜೆಪಿ ಇದನ್ನು ಹಗುರವಾಗಿ ತೆಗೆದುಕೊಳ್ಳುವುದು ಮಾತ್ರ ಸಾಧ್ಯವಿಲ್ಲ. 

ಬಹುಪಾಲು ರಾಜಕೀಯ ಪಕ್ಷಗಳ ವಿಚಾರ­ದಲ್ಲಿ ಹೇಳುವುದಾದರೆ ಪಕ್ಷವೂ ಹೈಕಮಾಂಡೂ ಉನ್ನತ ನಾಯಕತ್ವವೂ ಬಹುತೇಕ ಒಂದೇ ಆಗಿರುತ್ತದೆ. ಆದರೆ ಬಿಜೆಪಿಯ ಕಷ್ಟವೇ ಬೇರೆ. ಅಲ್ಲಿ ಅರಮನೆಯೇ ಬೇರೆ, ಗುರುಮನೆಯೇ ಬೇರೆ. ಮೊದಲನೆಯದು ಎರಡನೆಯದರ ನಿಯಂತ್ರಣದಲ್ಲಿ ಇರುತ್ತದೆ. ಹಿಂದಿನ ಕಾಲದ ರಾಜರಂತೆ, ಈ ರಾಜಕಾರಣಿಗಳೆಲ್ಲ ರಾಜಗುರು­ಗಳ ಹತೋಟಿಯಲ್ಲಿ ಇರುತ್ತಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನದೇ ಚಾರಿತ್ರಿಕ ಕಾರಣಗಳಿಗಾಗಿ ಸ್ವಂತದ್ದೊಂದು ರಾಜಕೀಯ ಪಕ್ಷವನ್ನು ರೂಪಿಸಿಬಿಟ್ಟ ಮೇಲೆ ಅದೊಂದು ಬರೀ ಸೈದ್ಧಾಂತಿಕ ಸಂಘಟನೆ ಎಂದು ಯಾರೂ ಮುಗ್ಧವಾಗಿ ಭಾವಿಸುವುದಿಲ್ಲ. ಆರ್‌ಎಸ್‌ಎಸ್ ಕೂಡ ಒಂದು ರಾಜಕೀಯ ಪಕ್ಷದ ಪಾಲಿಟ್‌­ಬ್ಯೂರೋ– ಅಂದರೆ ಪೊಲಿಟಿಕಲ್ ಬ್ಯೂರೋ. ಹಿಂದೂ ಸಿದ್ಧಾಂತ ಪ್ರಚಾರ ಮುಂತಾದ ಹಿಂದಿನ ಉದ್ದೇಶಗಳಿಗಾಗಿ ಅದು ಶ್ರಮಿಸುವುದು ಮುಂದುವರೆದಿದೆ. ಆದರೆ ಎಲ್ಲರಿಗೂ ತಿಳಿದಿರು­ವಂತೆ, ಇಂದು ಬಿಜೆಪಿಯ ಯಾವ ಪ್ರಮುಖ ರಾಜಕಾರಣಿಯ ತಲೆ ಮೇಲೆ ಆರ್‌ಎಸ್‌ಎಸ್‌ನ ಕೈ ಇಲ್ಲ? ಬಿಜೆಪಿಯ ಯಾವ ಪ್ರಮುಖ ರಾಜಕಾರಣಿ ಅದಕ್ಕೆ ನೆರವಾಗುವುದಿಲ್ಲ? ಯಾವ ರಾಜ್ಯದ ಬಿಜೆಪಿ ಸರ್ಕಾರ ಅದಕ್ಕೆ (ಮತ್ತು ಕೆಲವೆಡೆ ಅದರ ಪ್ರಮುಖರಿಗೆ) ಸಂಪನ್ಮೂಲ­ಗಳನ್ನು ಒದಗಿಸಿಲ್ಲ? ಆರ್‌ಎಸ್‌ಎಸ್ ತನ್ನ ಎದೆ ಮೇಲೆ ಕೈಯಿಟ್ಟುಕೊಂಡು ‘ಇಲ್ಲ’ ಅಂತ ಹೇಳಲಿ!

ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ತುಂಬಿದ ದುರಾಡಳಿತದಿಂದ ಆ ಪಕ್ಷದ ಬಗ್ಗೆ ಬೆಳೆದ ಅತೀವ ರೋಷ, ಏನೋ ಹೊಸತನ್ನು ತರಬಹುದು ಎಂದು ನರೇಂದ್ರ ಮೋದಿ ಬಗ್ಗೆ ಬೆಳೆದ ಅಪಾರ ಭರವಸೆ, ಹೆಚ್ಚಿನ ಸಂಖ್ಯೆಯ ಯುವ ಮತದಾರರಿಗಿದ್ದ ಬದಲಾವಣೆಯ ಆಕಾಂಕ್ಷೆ ಹೀಗೆ ಹತ್ತುಹಲವು ಕಾರಣಗಳಿಂದಾಗಿ ಕಳೆದ ಏಪ್ರಿಲ್–ಮೇನಲ್ಲಿ ನಡೆದ ಮಹಾಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರ ಹಿಡಿಯಿತು. ಆದರೆ ಈ ಯಶಸ್ಸಿನಲ್ಲಿ ಪಾಲು ಪಡೆಯುವ ಸುವರ್ಣಾವ­ಕಾಶವನ್ನು ಮೂಲ ಸಂಘಟನೆಯವರು ಬಿಟ್ಟು­ಕೊಡ­ಲಿಲ್ಲ. ಹಿಂದಿನ ದಶಕಗಳಲ್ಲಿ ಎಷ್ಟೋ ಚುನಾ­ವಣೆಗಳಲ್ಲಿ ಬಿಜೆಪಿ ಸೋತಿರಬಹುದು, ಈ ಹೊತ್ತು ಗೆದ್ದಿರುವುದಂತೂ ನಮ್ಮಿಂದಲೇ ಎಂದು ಹೇಳಿಕೊಳ್ಳುವುದು ಬಹಳ ಸುಲಭ. ಆದರೀಗ ದೆಹಲಿಯ ಸೋಲಿಗೂ ನಮಗೂ ಸಂಬಂಧವಿಲ್ಲ, ಅದಕ್ಕೆ ನಾವು ಕಾರಣ ಅಲ್ಲ ಎಂದು ಹೇಳುವುದು ಇನ್ನೂ ಸುಲಭ. ರಾಜಕೀಯ ರಂಗದಲ್ಲಿ ಚುನಾವಣೆಗಳನ್ನು ಗೆಲ್ಲಲು ಸಿದ್ಧಾಂತ ಮತ್ತು ಸಂಘಟನೆ ಇವೆರಡು ಮಾತ್ರ ಸಾಕಾಗುವುದಿಲ್ಲ ಅನ್ನುವುದು ಅವರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ.

ಆದರೂ ‘ನಮ್ಮ ಸರ್ಕಾರದಲ್ಲಿ ನಮ್ಮ ರಾಜಕಾರಣಿಗಳು ನಮ್ಮ ವಿಚಾರಗಳನ್ನು ಪ್ರತಿಪಾದಿಸಬೇಕು’ ಎನ್ನುವುದರಲ್ಲಿ ತೋರುತ್ತಿ­ರುವ ಆತುರ ಅತ್ಯಂತ ಗಮನಾರ್ಹವಾಗಿ ಕಾಣುತ್ತಿದೆ. ಹಾಗಾಗಿಯೇ ನಮ್ಮ ದೇಶದ ರಾಜಕಾರಣದಲ್ಲಿ ಏಕಕಾಲಕ್ಕೆ ಎರಡು ಬಗೆಯ ರಾಜಕೀಯ ಸಂಕಥನಗಳು (ಪೊಲಿಟಿಕಲ್ ಡಿಸ್ಕೋರ್ಸ್) ಚಾಲ್ತಿಯಲ್ಲಿದ್ದು ನಡೆಯುತ್ತಿವೆ. ಮೊದಲನೆಯದು– ಒಳ್ಳೆಯ ಆಡಳಿತ ಕುರಿತು ಚಿಂತನೆ, ನೆರೆಹೊರೆಯವರೊಂದಿಗೆ ಬಾಂಧವ್ಯ ವೃದ್ಧಿ, ವಿದೇಶಗಳಿಗೆ ಭೇಟಿ ನೀಡಿ ಅಥವಾ ಅಲ್ಲಿನ ಪ್ರಮುಖರನ್ನು ಆಹ್ವಾನಿಸಿ ಭಾರತಕ್ಕೆ ವಿಶೇಷ ಗೌರವ ಪಡೆಯುವಿಕೆ, ಆಯ್ದ ದೇಶೀ ಬೃಹತ್ ಉದ್ಯಮಗಳಿಗೆ (ಅಥವಾ ಉದ್ಯಮಿಗಳಿಗೆ) ನೆರವು, ಭಾರತದಲ್ಲೇ ತಯಾರಿಸಿ ನಮ್ಮವರ ಕೈಗಳಿಗೆ ಕೆಲಸ ಕೊಡಿ ಎಂದು ವಿದೇಶಿ ಕೈಗಾರಿಕೆಗಳಿಗೆ ಆಹ್ವಾನ, ದೇಶದ ಸ್ವಚ್ಛತೆ ಮುಂತಾದ ವಿಷಯಗಳನ್ನು ರಾಷ್ಟ್ರೀಯ ಆದ್ಯತೆಗೆ ತರುವುದು – ಇವೇ ಮುಂತಾದ್ದರ ಮೂಲಕ ‘ಅಭಿವೃದ್ಧಿಯೇ ನನ್ನ ಮೂಲಮಂತ್ರ’ ಎನ್ನುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ಅಥವಾ ಅದಕ್ಕಿಂತ ಮುಖ್ಯವಾಗಿ ಅವರ ಆಶಯಘೋಷಣೆ. ಬಡವರಿಗೆ ಅನ್ನ, ಅಕ್ಷರ, ಆರೋಗ್ಯ, ಆತ್ಮವಿಶ್ವಾಸ ಇತ್ಯಾದಿಗಳನ್ನು ಕೊಡುವುದನ್ನು ಮಾತ್ರ ‘ಅಭಿವೃದ್ಧಿ’ ಎಂದು ಕರೆಯುವುದು ಹಳೆಯ ಕಾಲದ ಮಾತಾಯಿತು. ‘ಜೈ ಜವಾನ್‌, ಜೈ ಕಿಸಾನ್‌’, ‘ಗರೀಬಿ ಹಠಾವೊ’ ಮುಂತಾದುವು ಎಲ್ಲ ರಾಜಕೀಯ ನಿಘಂಟು­ಗಳಿಂದಲೂ ಹೇಗೂ ಮಾಯವಾಗಿರು­ವುದ­ರಿಂದ, ಹೊಸ ಕಾಲಕ್ಕೆ ತಕ್ಕಂತೆ ಅಭಿವೃದ್ಧಿಗೆ ಹೊಸ ಭಾಷೆ, ಹೊಸ ಭಾಷ್ಯವಾಗಿ ‘ಅಚ್ಛೇ ದಿನ್‌’ ಎಂಬ ಮುದ್ದಾದ ಪದಗಳು ತೇಲಿಬಂದವು. ಆಮೇಲೆ ಎಲ್ಲ ಹೊಸತನದ ಸಂಕೇತವಾಗಿ ಆಕರ್ಷಕ ವೇಷಭೂಷಣ, ಟ್ವಿಟರ್‌ ಎಫ್‌ಎಂ ಇ–ಮೇಲ್ ಮುಂತಾದ ಸಂವಹನ ಉಪಕರಣ ಎಲ್ಲವೂ ಯುವಜನರನ್ನು ಮೋದಿ ಮೋಡಿಗೆ ಒಳಪಡಿಸಿ ಅವರೇ ಅಭಿವೃದ್ಧಿ ಸಂಕಥನದ ರಾಜರ್ಷಿಯಾದರು. 


ಎರಡನೆಯದು, ‘ನಾವಿರೋದೇ ಹೀಗೆ ನಾವು ಮಾಡುವುದೇ ಹೀಗೆ’ ಎನ್ನುವಂತೆ ಅವಕಾಶ ಸಿಕ್ಕಿದೊಡನೆ ತಾವು ಅನಾದಿಕಾಲದಿಂದಲೂ ಪ್ರತಿಪಾದಿಸುತ್ತಿದ್ದ ವಿಷಯಗಳನ್ನು ಈಗ ಅಧಿಕೃತವಾಗಿ ಜಾರಿಗೆ ತರಬೇಕೆನ್ನುವ ಆರ್‌ಎಸ್‌ಎಸ್‌ ವಲಯದ ನಡೆ ಅತ್ಯಂತ ನಿರೀಕ್ಷಿತ. ಅವರು ಹಾಗಿಲ್ಲದಿದ್ದರೆ ಆಶ್ಚರ್ಯವಾಗು­ತ್ತಿತ್ತು ಅನ್ನುವಂತೆ ಅಧಿಕಾರವನ್ನು ಬಳಸಿಕೊಂಡು ರಾಜಕೀಯ ಒತ್ತಡ ಹೇರುವ ತರಾತುರಿ. ಕ್ರಿಸ್‌ಮಸ್‌ ದಿನದ ಮಹತ್ವಕ್ಕೆ ಕೊಕ್‌ ಕೊಡಲೆಂದೇ ನೀಡಿದ ಹೊಸ ದಿನಾಚರಣೆಯ ಕೇಕ್‌, ಯಾವ ಕಾಲದ ರಾಜಕಾರಣಕ್ಕೂ ಅತಿ ಸೂಕ್ಷ್ಮತೆಗಳನ್ನು ಬೋಧಿಸುವ ‘ಭಗವದ್ಗೀತೆ’­ಯಿಂದ ಏನನ್ನೂ ಕಲಿಯದ ಸಚಿವೆಯೊಬ್ಬರು ಅದನ್ನು ರಾಷ್ಟ್ರೀಯ ಗ್ರಂಥ ಮಾಡಲು ನಡೆಸಿದ ಯತ್ನ, ಗೋಡ್ಸೆಗೆ ಗೌರವ ಕೊಡುವ ಮೂಲಕ ಮತ್ತೊಮ್ಮೆ ನಡೆದ ಗಾಂಧಿ ಹತ್ಯೆ ಹೀಗೆ ಅದು ವೈವಿಧ್ಯಮಯವಾಗಿ ಪ್ರಕಟವಾಯಿತು. ಸಾಧ್ವಿ ನಿರಂಜನ ಜ್ಯೋತಿ ಎಂಬ ಹೆಸರಿನ ಸಚಿವೆ ನಿಮಗೆ ರಾಮ ಅಥವಾ ಹರಾಮ ಇಬ್ಬರಲ್ಲಿ ಯಾರು ಬೇಕು ಎಂದು ಚುನಾವಣಾ ಭಾಷಣದಲ್ಲಿ ಅಸಭ್ಯತೆಯ ಕತ್ತಲನ್ನು ಹರಡಿದರೆ, ಮತ್ತೊಬ್ಬ ಸಾಧ್ವಿ ಪ್ರಾಚಿ ಎಂಬ ಸಂಸದೆ ತೋಚಿದಂತೆ ಮಾತನಾಡಿದ್ದು ಅನೇಕ ವಿಷಯಗಳಿಗೆ ದಿಕ್ಸೂಚಿ ಆಯಿತು.

ಇನ್ನು ಸಾಕ್ಷಿ ಮಹಾರಾಜ್ ಎಂಬ ಸಂಸದ ಮಾಡುತ್ತಿರುವ ಅವಾಂತರಗಳಂತೂ ಈ ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯೇ ಹೌದು. ‘ನೀವು ನಾಲ್ಕು ಮಕ್ಕಳನ್ನು ಹೆರಲೇಬೇಕು’ ಎಂದು ಈ ಬ್ರಹ್ಮಚಾರಿ ವಿಧಿಸಿದ ಕಟ್ಟಪ್ಪಣೆಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಹೊಸ ತಲೆಮಾರಿನ ಜೀನ್ಸ್‌ಧಾರಿ ಮತದಾರರು ಬೇಹೋಶ್ ಆದರು. ಹಾಗಾಗಿ ಕಾವಿಧಾರಿ ಸನ್ಯಾಸಿಯ ಪರಮ ಲೌಕಿಕ ಬೋಧನೆ ಹೆತ್ತದ್ದು ದೇಶಾದ್ಯಂತ ತಿರಸ್ಕಾರವನ್ನು ಮಾತ್ರ. ಆಮೇಲೆ ಯಾವ ಧರ್ಮಕ್ಕೆ ಅನ್ನುವುದೇನೋ ಸರಿ, ಆದರೆ ಯಾವ ಜಾತಿಗೆ ವಾಪಸಾತಿ ಅನ್ನುವುದನ್ನು ಖಚಿತವಾಗಿ ಹೇಳದ ‘ಘರ್‌ ವಾಪಸಿ’ ಕಾರ್ಯಕ್ರಮ ಕುರಿತು ಹೆಚ್ಚು ಹೇಳುವುದು ಬೇಡವೇಬೇಡ. ಅದರ ಪ್ರಭಾವದಿಂದ ಈಗಿನ ಅಧಿಕಾರಸ್ಥರು ಸಂಸತ್ತಿನಿಂದ ಮನೆಗೆ ವಾಪಸಾಗದಿದ್ದರೆ ಪುಣ್ಯ.   

ನಮ್ಮ ಜನರಿಗೆ ಅನ್ನ ಅಥವಾ ರೋಟಿ ಇಲ್ಲದಿದ್ದರೂ ಪರವಾಗಿಲ್ಲ, ಅವರು ಹೊಟ್ಟೆ ತುಂಬಾ ‘ಕೇಸರಿಬಾತ್’ ತಿನ್ನಲಿ ಎನ್ನುವ ಸದುದ್ದೇಶದ ಸಂಕಥನ ಅಷ್ಟಕ್ಕೆ ನಿಲ್ಲುವುದಿಲ್ಲ. ಇದರಿಂದ ಬೇರೆ ಏನೇನು ಲಾಭ ಆಗುತ್ತದೋ ಗೊತ್ತಿಲ್ಲ, ನಮಗಂತೂ ಮೊದಲೇ ಗೊತ್ತಿದ್ದ ಮೋಹನ್ ಭಾಗವತ್ ಅವರಲ್ಲದೆ ಇನ್ನೂ ಅನೇಕ ಸೈದ್ಧಾಂತಿಕ ಪ್ರಮುಖರ ಪರಿಚಯವಾ­ಯಿತು. ‘ನಮ್ಮ ದೇಶದ ಪ್ರತೀ ಹಳ್ಳಿಯಲ್ಲಿ ಆರ್‌ಎಸ್‌ಎಸ್‌ ಶಾಖೆ ತೆರೆಯುತ್ತೇವೆ. ಎಲ್ಲ ಹಳ್ಳಿಗಳಲ್ಲಿ ಭಗವಾ ಝಂಡಾ ಹಾರಾಡಬೇಕು’ ಎಂದು ಭಾಗವತ್ ಅವರು ಇತ್ತೀಚೆಗೆ ಘೋಷಿಸಿದ್ದಾರೆ. ನಮ್ಮ ಹಳ್ಳಿಗಳಿಗೆ ಬೇಕಾಗಿರುವುದು ನೀರು, ಶಾಲೆ, ರಸ್ತೆ, ಶೌಚಾಲಯ ಇತ್ಯಾದಿ ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ಅವರ ತಪ್ಪು.

ಹೀಗೆ ಆದ್ಯತೆಗಳು, ಉದ್ದೇಶಗಳು ಸಂಪೂರ್ಣ ಭಿನ್ನವಾಗಿರುವ ಅಥವಾ ವಿರುದ್ಧ ದಿಕ್ಕಿನಲ್ಲಿರುವ ಎರಡು ರಾಜಕೀಯ ಸಂಕಥನಗಳು ದೇಶಾದ್ಯಂತ ಹರಿಯುತ್ತಿವೆ. ಮೊದಲನೆಯದರ ನೈಜತೆ ಮತ್ತು ಪ್ರಾಮಾಣಿಕತೆಯ ಬಗ್ಗೆ ಬಹುಮಂದಿಗೆ ಅನುಮಾನವಿದ್ದು, ಈ ಅಭಿವೃದ್ಧಿಯ ಅಜೆಂಡಾ ಬೇರೆ ಇದೆ ಎಂದು ಟೀಕಿಸಬಹುದು. ಆದರೆ ಎರಡನೆಯದರ ಪಾರದರ್ಶಕತೆಯ ಬಗ್ಗೆ ಅನುಮಾನಗಳೇ ಇಲ್ಲ. ದೆಹಲಿ ಚುನಾವಣೆ­ಯಲ್ಲಿ ಮೊದಲನೆಯದರ ಪ್ರಭಾವವನ್ನು ಎರಡನೆಯದು ತಿಂದು ಹಾಕಿತೇ? ಕೋಡಗನ ಕೋಳಿ ನುಂಗಿತ್ತಾ, ಮಗ್ಗವ ಹಗ್ಗ ನುಂಗಿತ್ತಾ...?

‘ಸ್ಮಾರ್ಟ್ ಸಿಟಿ’ ನಿರ್ಮಾಣ ನರೇಂದ್ರ ಮೋದಿ ಅವರ ಕನಸಿನ ಯೋಜನೆ. ಆದರೆ ದೆಹಲಿ ಈಗಾಗಲೇ ಸ್ಮಾರ್ಟ್ ಸಿಟಿ ಆಗಿಹೋಗಿದೆ ಸ್ವಾಮಿ ಎಂದು ಶಬಾನಾ ಆಜ್ಮಿ ಫಲಿತಾಂಶ ಕುರಿತು ಟ್ವೀಟ್ ಮಾಡಿದ್ದಾರೆ. ನರೇಂದ್ರ ಮೋದಿ, ಅಮಿತ್ ಷಾ ಮೊದಲಾದವರಿಗೆ ಅದು ಅರ್ಥವಾಗದ್ದೇನಲ್ಲ. ಆಡಿಸುವಾತ ಇರುವಾಗ ಸೂತ್ರದ ಬೊಂಬೆಗಳಿಗೆ ಹೆಚ್ಚು ಚಲನೆ ಇರುವುದಿಲ್ಲ ಎನ್ನುವುದೂ ಅವರಿಗೆ ಗೊತ್ತಿದೆ. ಹಾಗೆಯೇ ಬರೀ ರಕ್ಷಣಾತ್ಮಕ ಆಟ ಆಡುತ್ತಿದ್ದರೆ ಹೆಚ್ಚು ಸ್ಕೋರ್ ಮಾಡಲು ಆಗುವುದಿಲ್ಲ ಅನ್ನುವುದು ಇನ್ನೂ ಚೆನ್ನಾಗಿ ಗೊತ್ತಿದೆ. ಅವರಿಗೆ ಗೊತ್ತಿಲ್ಲದಿದ್ದರೆ ನಮ್ಮ ಜನರಿಗಂತೂ ಗೊತ್ತೇ ಇರುತ್ತದೆ. 

ನಿಮ್ಮ ಅನಿಸಿಕೆ ತಿಳಿಸಿ
 editpagefeedback@prajavani.co

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT