ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಂದಾವನದಿಂದ ಕಾಣೆಯಾಗಿದ್ದಾಳೆ ‘ರಾಧೆ’!

Last Updated 9 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಪಂಜಾಬಿ ಜನಪದ ಭಕ್ತಿಗೀತೆಯೊಂದರ ಸಾಲುಗಳು ಇವು:
ಜ್ಯಾ ಜಾವೇ ಊಧೋ ಉಡ್ ಆಜಾ
ಅಸಿ ಹೋರ್ ಕಿಸೇಣು ಕೀ ಲೇಣಾ
ವೋ ನಯನನ್ ಕೇ ವಿಚ್ ಬಸದಾರಹೇ
ಅಸಿ ಮಥುರಾಬೃಂದಾವನ್ ಕಿ ಲೇಣಾ
(ತೊಲಗಯ್ಯ, ಉದ್ಭವ, ಈ ಕೂಡಲೇ
ಇತರರ ಗೊಡವೆ ನಮಗಿನ್ನೇತಕೆ?
ಕಂಗಳಲಿ ಆತನೇ ನೆಲೆಸಿರುವನು
ಮಥುರೆ -ಬೃಂದಾವನ ನಮಗೇತಕೆ?)

ರಾಧೆ-ಕೃಷ್ಣರೆಂಬ ದೈವತಗಳು ಸುಮಾರು ಒಂದು ಸಹಸ್ರಮಾನ ಪರ್ಯಂತ ಭಾರತೀಯ ಪ್ರತಿಭಾ ಸೃಷ್ಟಿಗೆ ಮಹಾನ್ ಸ್ಫೂರ್ತಿಯಾಗಿದ್ದಾರೆ. ‘ಅಲ್ಲಿ ನೋಡಲು ಕೃಷ್ಣ; ಇಲ್ಲಿ ನೋಡಲು ಕೃಷ್ಣ; ಎಲ್ಲೆಲ್ಲಿ ನೋಡಲು ಶ್ರೀಕೃಷ್ಣ’ ಹೀಗೊಂದು ದಾಸರ ಪದದ ಪಂಕ್ತಿ. ಭಾರತದ ಸಾಂಸ್ಕೃತಿಕ ಸಮೂಹ ಚೇತನದಲ್ಲಿ ಶ್ರೀಕೃಷ್ಣನ ಕಲ್ಪನೆ ರಾಧೆ­ಗಿಂತಲೂ ಹಳತು. ಕ್ರಿ.ಶ. 300ರ ಸುಮಾರಿನ­ದೆಂದು ಹೇಳಲಾದ ತಮಿಳಿನ ‘ಸಿಲಪ್ಪದಿಕಾರಂ’­ನಲ್ಲಿ ಕೃಷ್ಣನನ್ನು ಕಥಾನಾಯಕನನ್ನಾಗಿಸಿಕೊಂಡ ಒಂದು ಒಳನಾಟಕ ಬರುತ್ತದೆ. ಆದರೆ ಅಲ್ಲಿ ರಾಧೆಯಿಲ್ಲ. ಪ್ರಾಚೀನ ತಮಿಳಿನ ವೈಷ್ಣವ ಮೂಲ­ಗಳಲ್ಲಿ ಆಳ್ವಾರರುಗಳ ರಚನೆಯಲ್ಲಿ ರಾಧೆಯಿಲ್ಲ. ಅಲ್ಲಿ ಕೃಷ್ಣನ ಕೆಳದಿಯ ಹೆಸರು ನಪ್ಪಿನ್ನೈ ಎಂದು. ‘ಶ್ರೀಮದ್ಭಾಗವತ’ದಲ್ಲಿ ರಾಧೆ ಒಂದು ಸಣ್ಣ ಪಾತ್ರ.

ಶ್ರೀಕೃಷ್ಣನು ‘ರಾಧಾ ಸಮೇತ ಕೃಷ್ಣ’ನಾಗಿದ್ದು ಜಯದೇವನ ‘ಗೀತಗೋವಿಂದ’ದಲ್ಲಿ. ಅಂದರೆ ಕ್ರಿ.ಶ. ಹನ್ನೆರಡನೇ ಶತಮಾನದಲ್ಲಿ. ಜಯದೇವ ತನ್ನ ಸತ್ಕೃತಿಗೆ ಗೋವಿಂದನ ಹೆಸರನ್ನು ನೀಡಿದ್ದಾನೆ, ನಿಜ. ಆದರೆ ಕೃತಿಯ ಆಂತರ್ಯದಲ್ಲಿ ರಾಧೆಯೇ ಕೇಂದ್ರ ಬಿಂದು. ಪುರುಷತ್ವದ ಸಂಕೇತವಾದ ಕೃಷ್ಣ ಇಲ್ಲಿ ಚಂಚಲಚಿತ್ತ. ಆದರೆ ಪ್ರಕೃತಿಯ ರೂಪಕ-­ವಾದ ರಾಧೆ ಸ್ಥಿರಬಿಂದು. ಪುರುಷ ಚಾಂಚಲ್ಯ ಮತ್ತು ಪ್ರಕೃತಿ ಸ್ಥಿರತೆ ಭಾರತದ ದರ್ಶನಗಳಲ್ಲಿ ಪ್ರಭಾವಿಯಾದ ಸಾಂಖ್ಯ ದೃಷ್ಟಿಗೆ ವಿರುದ್ಧ­ವಾದರೂ, ತಂತ್ರಗಳ ಮಾತೃಕೆಗಳಾದ ಈಶಾನ್ಯ ಭಾರತದ ಚರಿಯಾಗೀತ ಪರಂಪರೆಗೆ ಸಮ್ಮತ.

ಜಯದೇವ ರಾಧೆಯನ್ನೇ ಶಕ್ತಿಯನ್ನಾಗಿ ಆರಾ­ಧಿಸುವ ತಾಂತ್ರಿಕ ಪಂಥದ ಯೋಗಿ ಇದ್ದಿರ­ಬಹುದೆಂದು ಕೆಲವರ ಅನುಮಾನ. ಅದೇನೇ ಇರಲಿ, ಜಯದೇವ ರಾಧೆಯನ್ನು ಕೃಷ್ಣಕತೆಯ ನಾಯಕಿಯನ್ನಾಗಿಸಿದಾಗಿನಿಂದ ರಾಧೆಯ ಪಾತ್ರ ಭಾರತೀಯ ಸಮೂಹಮಾನಸದ ಕಲ್ಪನಾ ವಿಲಾಸದಲ್ಲಿ ಹೆಚ್ಚುಹೆಚ್ಚು ಮಹತ್ವಪೂರ್ಣ­ವಾ­ಗುತ್ತಾ ಬಂದಿದೆ. ಜಯದೇವನಿಂದ ಪ್ರೇರಣೆ ಪಡೆದ ಬಂಗಾಳದ ಚೈತನ್ಯ ಮಹಾಪ್ರಭು ತಮ್ಮ ಗೌಡೀಯ ವೈಷ್ಣವ ಪಂಥದಲ್ಲಿ ರಾಧೆಗೆ ಅಗ್ರಗಣ್ಯ ಸ್ಥಾನ ಕೊಟ್ಟು, ಮುಂದೆ ರಾಧೆ ಕೆಲವು ವೈಷ್ಣವ ಪಂಥಗಳ ಪ್ರಧಾನ ಆರಾಧ್ಯ ದೈವ ಆಗುವ ಪ್ರಕ್ರಿಯೆಗೆ ಬುನಾದಿ ಹಾಕಿದರು. ತರುವಾಯ ವೈಷ್ಣವ ಕಾವ್ಯ, ಆಖ್ಯಾನಗಳಲ್ಲಿ ರಾಧೆಯ ಸ್ಥಾನ ಮೇಲಕ್ಕೇರುತ್ತಾ ಹೋಯಿತು.

ಗೌಡೀಯ ವೈಷ್ಣವದ ನಂತರ ಅತ್ಯಂತ ಪ್ರೌಢ­ವಾದ ಪೂರ್ಣಾದ್ವೈತ ವೈಷ್ಣವ ದರ್ಶನವನ್ನು ಪ್ರತಿಪಾದಿಸಿದ್ದು ಗುಜರಾತಿನ ವಲ್ಲಭಾಚಾರ್ಯರ ಪುಷ್ಟಿಮಾರ್ಗ. ಈ ಪಂಥದಲ್ಲೂ ಕೃಷ್ಣನ ಮಡದಿ­ಯರಾದ ರುಕ್ಮಿಣಿ, -ಸತ್ಯಭಾಮೆಯರಿಗಿಂತ ಹೆಚ್ಚಿನ­ವಳು ಅವನ ಪ್ರೇಮಿ ರಾಧೆ.

ಗುಜರಾತಿಗಳು ಕೃಷ್ಣನ ಹೆಸರನ್ನು ಉಚ್ಚರಿಸು­ವಾಗ ರಾಧೆಯ ಹೆಸರನ್ನೂ ಜೋಡಿಸಿಕೊಂಡು ‘ರಾಧಾಕೃಷ್ಣ’ ಎಂದೇ ಜಪಿಸುತ್ತಾರೆ. ದಕ್ಷಿಣದ ಕೇರಳದಲ್ಲೂ ರಾಧೆಗೆ ಅಗ್ರಸ್ಥಾನ. ನಾರಾಯಣ ಪಟ್ಟಪಾದ್ರಿಯ ಭಾಗವತಾಧಾರಿತ ‘ಶ್ರೀನಾರಾ­ಯ­ಣೀಯಂ’­ನಲ್ಲಿ ಮತ್ತು ಕೃಷ್ಣನಾಟ್ಟಂ ರಂಗ­ಪ್ರಯೋ­-­ಗಕ್ಕೆ ಆಧಾರವಾದ ಮನದೇವನ ‘ಕೃಷ್ಣ­ಗೀತಿ’­ಯಲ್ಲಿ ರಾಧೆ ರಾರಾಜಿಸುತ್ತಾಳೆ.

ಕೃಷ್ಣಕತೆಯ ಧಾರ್ಮಿಕ ಜಗತ್ತಿನಲ್ಲಿ ಶೃಂಗಾರ­ವನ್ನು ಸ್ಥಾಪಿಸಿದ ಕಾರಣ ಮುಂದಿನ ಕೆಲವು ವೈಷ್ಣವ ಪಂಥಗಳು ರಾಧೆಯನ್ನು ಹೊರದೂಡಿ­ದವು. ಕೃಷ್ಣರಾಧೆಯರ ಅನಿರ್ಬಂಧಿತ ಪ್ರೇಮ ಅವರ ಗಂಡಾಳಿಕೆಯ ವೈರಾಗ್ಯ ದೃಷ್ಟಿಗೆ ಸವಾ­ಲಾ­ಯಿತು. ಮಹಾರಾಷ್ಟ್ರದ ವಾರ್ಖರಿಗಳು ವಿಠಲ­ನಾದ ಕೃಷ್ಣನ ಬಗಲಿನ ಸ್ಥಾನವನ್ನು ರುಖು­ಮಾ­ಯಿಗೆ ನೀಡಿದರು. ರಾಧೆಯನ್ನು ಮರೆತೇಬಿಟ್ಟರು. ವೈರಾಗ್ಯ ಮತ್ತು ನೀತಿ ಪರವಾದ ಅವರ ಧಾರ್ಮಿಕ ಪಂಥವು ಶೃಂಗಾರ ಮಾಧುರ್ಯ­ದಿಂದ ವಂಚಿತವಾಯಿತು.

ಅದೇ ರೀತಿ ಅಸ್ಸಾಮಿನ ವೈಷ್ಣವ ಧರ್ಮ ಪ್ರವರ್ತಕ ಶ್ರೀಮಂತ ಶಂಕರ­ದೇವನೂ ತನ್ನ ವೈಷ್ಣವ ದೃಷ್ಟಿಯನ್ನು ರಾಧಾ ವಿಮುಕ್ತಗೊಳಿಸಿದ. ತನ್ನ ನಾಮಘರ್‌ಗಳಲ್ಲಿ  ಕೃಷ್ಣನ ಎಡವಂಕದಲ್ಲಿ ಅವನ ಮಡದಿ ರುಕ್ಮಿಣಿ­ಯನ್ನು ನಿಲ್ಲಿಸಿದ. ಎಲ್ಲ ಎಲ್ಲೆಗಳನ್ನೂ ದಾಟಿದ ರಾಧಾಕೃಷ್ಣರ ಪ್ರೇಮ ಅವನ ನೈತಿಕಪರ ದೃಷ್ಟಿಗೆ ಸಮ್ಮತವಾಗಲಿಲ್ಲ. ರಾಸಿಕ್ಯ ಪ್ರಧಾನವಾದ ಗೌಡೀಯ ವೈಷ್ಣವ ಮತ್ತು ಪುಷ್ಟಿ ಮಾರ್ಗಗಳು ಮಾತ್ರ ರಾಧೆಯನ್ನು ಸಂಪೂರ್ಣವಾಗಿ ಆತು­ಕೊಂಡವು.

ರಾಧೆಯನ್ನು ಕುರಿತ ನೀತಿ ಪರಾಯಣರ ದೃಷ್ಟಿ ಹೇಗೇ ಇರಲಿ, ಭಾರತೀಯ ಸಾಮೂಹಿಕ ಪ್ರತಿಭಾ ಸೃಜನದಲ್ಲಿ ಪ್ರೇಮದ ಆದರ್ಶವಾಗಿ ಆಕೆ ಸ್ಥಾಪಿ­ತಳಾದಳು. ಆಕೆಯ ಸಾಂಕೇತಿಕತೆ ಧರ್ಮ­ಪುರಾಣ­ಗಳ ಗಡಿ ದಾಟಿ ಕಾವ್ಯಾದಿ ಕಲೆಗಳಲ್ಲಿ ಕೀರ್ತಿ­ತ­ವಾಯಿತು. ಉತ್ತರ ಭಾರತದ ಭಕ್ತರು ರಾಧೆಯ ಮೂಲಕವೇ ಕೃಷ್ಣನಿಗೆ ಮೊರೆಯಿಡುತ್ತಾರೆ;

ರಾಧೆ ರಾಧೆ
ಶ್ಯಾಂ ಬುಲಾದೆ
ಬೃಂದಾವನಮೇ ರಾಧೆ ರಾಧೆ
ಯಮುನಾ ಕಿನಾರೆ ರಾಧೆ ರಾಧೆ

ಕೃಷ್ಣಭಕ್ತಿ ಪರಂಪರೆ­ಗಳು ರಾಧಾಕೃಷ್ಣರ ಆದರ್ಶಕ್ಕೆ ಒಂದು ಯೋಗ್ಯ­ವಾದ ಭಿತ್ತಿಯನ್ನೂ ಕಟ್ಟುತ್ತಾ ಬಂದವು. ಈ ನಿರ್ಮಿ­ತಿಯಲ್ಲಿ ಮೊದಲಿ­ಗರು ತಮಿಳು ಆಳ್ವಾ­ರರು. ಹರಿವಂಶ ಪುರಾಣದ ಆಧಾರದ ಮೇಲೆ ಬೃಂದಾ­ವನದ ರಮಣೀಯ ದೃಶ್ಯಗಳನ್ನು ನಿರ್ಮಿ­ಸ­ತೊಡಗಿದರು.

ಆಂಡಾಳರ ‘ತಿರುಪ್ಪಾವೈ’ನಲ್ಲಿ ಈ ನಿರ್ಮಿತಿ ಸೌಂದರ್ಯ­ಪೂರ್ಣ ಆಗಿರುವಂತೆ ವಿಸ್ಮಯದಾಯಕವೂ ಆಗಿದೆ. ಅಷ್ಟು­ಹೊತ್ತಿಗಾ­-ಗಲೇ ಉತ್ತರದಿಂದ ಬಂದು ತಮಿಳುನಾಡಿನಲ್ಲಿ ನೆಲೆಸಿದ ಗೋವಳರ ಸ್ಮೃತಿಯ ಬೃಂದಾವನದ ವಿವರಗಳು ಮಿಥಿಕ ಸ್ವರೂಪ ಪಡೆಯತೊಡಗಿವೆ. ಬೃಂದಾವನದ ಮಿಥಿಕ ಭೂಗೋಳದ ವಿವರ­ಗ­ಳಾದ ಯಮುನಾ ತೀರ ಇತ್ಯಾದಿಗಳು ತಮಿಳು­ನಾ­ಡಿನ ವಾಸ್ತವಿಕ ಭೂಗೋಳದೊಂದಿಗೆ ಸೇರಿ­ಕೊಂಡು ಹೊಸ­ದೊಂದು ಕಾವ್ಯಭೂಗೋಳ ಸೃಷ್ಟಿ­ಯಾಗ­ತೊಡಗಿದೆ. ಆದರೆ ಈ ಜಗತ್ತಿನಲ್ಲಿ ರಾಧೆಯಿಲ್ಲ.

ಆ ನಂತರ ‘ಶ್ರೀಮದ್ಭಾಗವತ’ ಕೃಷ್ಣನ ಕುರಿತ ಹಲವು ಪ್ರಸಂಗಗಳನ್ನು  ಒಂದು ಮಿಥಿಕ ಭಿತ್ತಿ­ಯಲ್ಲಿ ಬಿಡಿಸಿಟ್ಟು, ಮುಂದಿನ ಕೃಷ್ಣ ಕೇಂದ್ರಿತ ಕಾವ್ಯಾ­ದಿಗಳ ಆಕರವಾಯಿತು. ವೀರಗೋಪಾಲ ಮತ್ತು ಶೃಂಗಾರ ಗೋಪಾಲನ ಹಲವು ವಿಕ್ರಮ­ಗಳ ಈ ಕಥಾ ಸರಣಿಯಲ್ಲಿ ರಾಧೆಯ ಪಾತ್ರ ನಗಣ್ಯ. ಬೃಂದಾವನವನ್ನು ರಾಧೆ ಆವರಿಸಿ­ಕೊಳ್ಳಲು ಆರಂಭವಾದದ್ದು ಜಯದೇವ ಕವಿಯ ‘ಗೀತ­ಗೋವಿಂದ’­ದ ಮೂಲಕ. ಆಧುನಿಕ ಪೂರ್ವ ಭಾರ­ತದಾದ್ಯಂತ ಈ ಕೃತಿ ಎಷ್ಟು ಜನಪ್ರಿಯ­ವಾ­ಯಿ­ತೆಂದರೆ ಅದರ ರೂಪಾಂತರಗಳು, ಅನುಕ­ರ­-ಣೆ­ಗಳು ಬಹುತೇಕ ಭಾರತೀಯ ಭಾಗ­ಗಳಲ್ಲಿ ಆಗ­ತೊಡಗಿದವು.

ಗೀತಗೋವಿಂದದ ದೃಶ್ಯಗಳು ಹಲವು ಶೈಲಿಗಳ ಚಿತ್ರಕಲೆಗಳಲ್ಲೂ ಮೂಡಿದವು. ಅದರ ಘಟನೆ­ಗಳು, ಭಾವಗಳು ಎಲ್ಲ ಸ್ತರದ ಕಾವ್ಯ ರಚನೆಗಳಲ್ಲಿ ಅನುರಣಿತವಾದವು. ವಸಾಹತು ಕಾಲದ ನಂತರ ಧಾರ್ಮಿಕ ಆವರಣ ಮುಕ್ತವಾದ ರಾಧೆ ಕೇವಲ ಶೃಂಗಾರ ನಾಯಕಿಯಾಗಿ ಧರ್ಮ­ವೀರಭಾರತಿ ಅವರ ‘ಕನುಪ್ರಿಯಾ’, ರಮಾಕಾಂತ ರಥ ಅವರ ‘ಶ್ರೀರಾಧಾ’, ರಾಧಾವಲ್ಲಭ ಶಾಸ್ತ್ರಿ­ಯವರ ‘ರಾಧಾ’ ಮುಂತಾದ ಕಾವ್ಯಗಳಲ್ಲಿ ಮುನ್ನೆ­ಲೆಗೆ ಬಂದಳು. ರಾಧೆಯ ಕಲ್ಪನೆ ಸಿನಿಮಾದಿ ಜನಪ್ರಿಯ ಕಲೆಗಳಲ್ಲಿಯೂ ವಿಜೃಂಭಿಸ­ತೊಡ­ಗಿತು.

ಮುಂಬೈನ ಸಿನಿಮಾ ಹಾಡುಗಳಲ್ಲಿ ಭಕ್ತಿ­ನಿರ­ಪೇಕ್ಷವಾದ ರಾಧಾಕೃಷ್ಣ ಪ್ರೇಮ ಒಂದು ಹಳ­ಹಳಿ­ಕೆಯ ವಸ್ತುವಾಯಿತು. ಭಾಗವತ ಪ್ರೇರಿತ ಕಲಾ ಸೃಷ್ಟಿಗಳಲ್ಲಿ ರಾಧೆಯು ಕೃಷ್ಣನ ಅಸಂಖ್ಯಾತ ಗೋಪಿಕೆ­ಯರಲ್ಲಿ ಒಬ್ಬಳಾಗಿ ಉಳಿಯದೆ ಎಲ್ಲ ಗೋಪಿಕೆಯರ ಕೃಷ್ಣ ಪ್ರೇಮದ ಮೂಲ ಮಾದರಿ­ಯಾಗಿ ಬಿಟ್ಟಳು. ಆಧುನಿಕ ಕಾಲದ ಜನಪ್ರಿಯ ಕಲೆಗಳಲ್ಲೂ ರಾಧೆಯದು ಸಿಂಹಪಾಲು.

ರಾಧೆಯ ಈ ಅಭೂತಪೂರ್ವ ಜನಪ್ರಿ­ಯತೆ­ಯ ಕಾರಣ ಏನಿದ್ದೀತು? ಚೈತನ್ಯಪ್ರೇರಿತ ಪಂಥ­ಗಳಲ್ಲಿ ರಾಧಾಕೃಷ್ಣ ಪ್ರೇಮ ಜೀವ-ದೇವರ ಸಂಬಂಧದ ಸಂಕೇತ ಮಾತ್ರ. ಆದರೆ ಗೀತ ಗೋವಿಂದದಲ್ಲಿ ಇನ್ನೊಂದು ಪ್ರಕ್ರಿಯೆ ಸುರುವಾ­ಯಿತು. ಜಯದೇವ ತನ್ನ ಕೃತಿಯನ್ನು ಇಬ್ಬಗೆಯ ಓದುಗರಿಗಾಗಿ ರಚಿಸಿದ್ದಾಗಿ ಹೇಳಿಕೊಳ್ಳುತ್ತಾನೆ. ತನ್ನ ಕೃತಿ ಹರಿಭಕ್ತರು  ಮತ್ತು ಶೃಂಗಾರ ಕುತೂ­ಹಲಿಗಳು ಇಬ್ಬರಿಗೂ ಅರ್ಪಿತ ಎನ್ನುತ್ತಾನೆ.

ಕೃಷ್ಣ ಭಕ್ತನಾದ ಜಯದೇವ ತನ್ನನ್ನು ತನ್ನ ಪ್ರಿಯತಮೆ ಪದ್ಮಾವತಿಯ ಚರಣ ಚಾರಣ ಚಕ್ರವರ್ತಿ ಎಂದು ಬಣ್ಣಿಸಿಕೊಳ್ಳುತ್ತಾನೆ. ಭಕ್ತಿಯ ಜೊತೆಗೆ ಜಯ­ದೇವ ಶೃಂಗಾರದ ಹೂರಣವನ್ನು ತುಂಬಿ ರಾಧಾ­ಕೃಷ್ಣ ಕಲ್ಪನೆಯನ್ನು ಸಾರ್ವತ್ರಿಕಗೊಳಿಸಿದ. ಶೃಂಗಾರ ಸರ್ವಜನಪ್ರಿಯ  ರಸವಾದ ಕಾರಣ ಭಾರತದ ಹಲಬಗೆಯ ನಾಟ್ಯ ಪ್ರಸ್ತುತಿಗಳಿಗೆ ಗೀತ­ಗೋವಿಂದ ಪ್ರಮುಖ ಪಾಠವಾಯಿತು. ಪುರುಷ ಪ್ರಧಾನ ವೈಷ್ಣವ ಕಲ್ಪನೆ ಜಗತ್ತನ್ನು ಜಯದೇವ ಸ್ತ್ರೀ ಪ್ರಧಾನಗೊಳಿಸಿದ.

ದಶಾವತಾರ ಸ್ತುತಿಯ ವೀರಗೋಪಾಲ ಚಂಚಲನಾಗಿದ್ದಾನೆ. ಅವನಿಗೆ ಸ್ಥಿರತೆ ಲಭಿಸು­ವುದು ಏಕಚಿತ್ತದಿಂದ ತನ್ನಲ್ಲಿ ಅನುರಕ್ತಳಾಗಿರುವ ರಾಧೆಗೆ ಶೃಂಗಾರ­ದಲ್ಲಿ ಶರಣಾಗತನಾದಾಗ ಮಾತ್ರ. ಪುರುಷ ಜಗ­ತ್ತಿನ ಸ್ವಕಲ್ಪನೆ ತನ್ನಿಂದ ತಾನೇ ಮರೆಮಾಚಿಸುವ ಈ ಅನುಭವ ಸತ್ಯವನ್ನು ಮುನ್ನೆಲೆಗೆ ತಂದದ್ದೇ ಗೀತಗೋವಿಂದದ ಮತ್ತು ರಾಧೆಯ ಅಭೂತ­ಪೂರ್ವ ಜನಪ್ರಿಯತೆಗೆ ಕಾರಣ ಆಗಿರಬಹುದು. ಹೀಗಾಗಿ ರಾಧೆಯ ಪಾತ್ರದ ಜನಪ್ರಿಯತೆಗೆ ಕಾರಣ ಮನೋವೈಜ್ಞಾನಿಕವೇ ಹೊರತು ಕೇವಲ ಧಾರ್ಮಿಕವಲ್ಲ.

ರಾಧಾಕೃಷ್ಣರ ಅನಿರ್ಬಂಧಿತ ಪ್ರೇಮ ಎಂದೂ ನನಸಾಗದ ಕನಸು. ಆದರೆ ಎಲ್ಲ ನನಸುಗಳೂ ಆ ಕನಸಿನ ಆದರ್ಶಗಳತ್ತ ತುಡಿಯುತ್ತಿರುತ್ತವೆ. ಆ ಆದರ್ಶ ಅನುಭವ ಕಣಗಳಲ್ಲಿ ಭಾಗಶಃ ನಿಜವಾ­ದರೂ ಅದರಿಂದ ಉಂಟಾಗುವ ಆನಂದ ಪ್ರಾಪ್ತಿ­ಯನ್ನು ಕೃಷ್ಣ ಶೃಂಗಾರ ಲೀಲಾ ಪ್ರಸಂಗಗಳು ಅಭಿವ್ಯಕ್ತಿಸುತ್ತವೆ.

ಶ್ರೀಮದ್ಭಾಗವತದ ಕತೆಯನ್ನು ಅತ್ಯಂತ ಸುಂದರ ಕಾವ್ಯವನ್ನಾಗಿ ಸೃಷ್ಟಿಸಿದ ಗುರುವಾ­ಯೂ­ರಿನ ನಾರಾಯಣ ಭಟ್ಟಪಾದ್ರಿಯ ‘ನಾರಯ­ಣೀ­ಯಂ’ನಲ್ಲಿ ರಾಧೆ ಪ್ರಧಾನ ಪಾತ್ರವಾಗಿ ಪ್ರವೇಶಿ­ಸು­ತ್ತಾಳೆ. ಪರಮ ವಿಷ್ಣು ಭಕ್ತನಾದ ಭಟ್ಟ­ಪಾ­ದ್ರಿಯ ರಾಸಕ್ರೀಡಾ ಪ್ರಸಂಗದ ವರ್ಣನೆ ಶೃಂಗಾರ ರಸದ ಕಾರಂಜಿಯಂತೆ ಮನ ಸೆಳೆಯುತ್ತದೆ.

ವಾಸ್ತವ ಬದುಕಿನ ನಿತ್ಯ ವಿವರಗಳಲ್ಲಿ ಪ್ರತೀತ­ವಾಗದೆ ಆ ವಿವರಗಳಿಗೆ ಧೃವತಾರೆಯಂತಿರುವ ರಾಧೆ ಎಲ್ಲಿದ್ದಾಳೆ? ಅವಳ ಕಾಲ್ಪನಿಕ ಭಿತ್ತಿಯಾದ ಬೃಂದಾವನ ಎಲ್ಲಿದೆ?

ಇಡೀ ಭಾರತದ ವೈಷ್ಣ­ವರಿಗೆ ರಾಧಾ-ಕೃಷ್ಣರ ನೆನಪಿನಿಂದ ಪವಿತ್ರ­ವಾದ ಮಥುರಾ,-ಬೃಂದಾವನ­ಗಳು ಗಮ್ಯ ಸ್ಥಾನ­ಗಳು. ಹಿಂದೂ ಧರ್ಮದ  ರಾಧಾ­-ಕೃಷ್ಣ ಕಲ್ಪನೆ­ಯಿಂದ ಪುಳಕಿತ­ವಾಗಿ­ರುವ ದೊಡ್ಡ ಸಂಖ್ಯೆಯ ವಿದೇಶೀಯರೂ ಮಥುರಾ -ಬೃಂದಾವನಗಳಿಗೆ ಧಾವಿಸುತ್ತಾರೆ. ಹೃಷಿಕೇಶ, ಹರಿದ್ವಾರ, ವಾರಾಣಸಿಗಳ ಹಾಗೆ ಈ ವೈಷ್ಣವ ಕ್ಷೇತ್ರಗಳಲ್ಲಿ ಅನೇಕ ಆಶ್ರಮಗಳು ನಿರ್ಮಾಣವಾಗಿ ತಮ್ಮ ವೈಭವೋ­ಪೇತ ಕಟ್ಟಡಗಳಿಂದ ಬಡ ಭಕ್ತರನ್ನು ಹಂಗಿಸು­ವಂತಿವೆ.

ಪ್ರೇಮಿಗಳಂತೆ ಭಕ್ತರೂ ಕುರುಡರೆಂದು ಚೆನ್ನಾಗಿ ಅರ್ಥ ಮಾಡಿಕೊಂಡ ಸ್ಥಳೀಕರು ಭಕ್ತರ ಮುಗ್ಧತೆಯನ್ನು ಲೂಟಿ ಮಾಡಿ ಅತ್ಯಧಿಕ ಲಾಭ ಪಡೆಯಲೆಂದು ಸದಾ ಹವಣಿಸುತ್ತಿರುತ್ತಾರೆ. ಪೂಜಾರಿಗಳಿಂದ ಹಿಡಿದು ಅಲ್ಲಿನ ರಿಕ್ಷಾವಾಲಾ­ಗಳವರೆಗೆ ಎಲ್ಲರಿಗೂ ಹಣ ಗಳಿಸುವ ತುರಿಕೆ. ಅದು ಅವರ ಬದುಕಿನ ಮಜಬೂರಿ, ಅನಿವಾರ್ಯತೆ.

ಬೃಂದಾವನ ಹೊಕ್ಕ ಕೂಡಲೇ ಎಲ್ಲೆಡೆಯೂ ‘ರಾಧೆ ರಾಧೆ’ ಎಂಬ ಮಂತ್ರ ಪ್ರತಿಧ್ವನಿಸುತ್ತದೆ. ಭಕ್ತರು ಭಾವುಕರಾಗುತ್ತಾರೆ. ತಮ್ಮ ಮುಂದಿನ ವಾಸ್ತ­ವದ ಚಿತ್ರಗಳು ಅವರ ಕಣ್ಣಿಂದ ಮರೆ­ಯಾ­ಗು­ತ್ತವೆ. ಅವುಗಳ ಮೂಲಕ ತಮ್ಮ ಆದರ್ಶ ಲೋಕದ ವಿವರಗಳಲ್ಲಿ ಕಣ್ಣು ನೆಟ್ಟು ಆ ಕ್ಷೇತ್ರದ ಕೊಳಕು ಮತ್ತು ಕುಟಿಲತೆಯನ್ನು ಪೂರ್ತಿ  ಮರೆತು­ಬಿಡುತ್ತಾರೆ. ಹೀಗಾಗಿ ಪುಣ್ಯಕ್ಷೇತ್ರದ ಯಜಮಾನಪ್ಪಗಳಿಗೆ ನಿತ್ಯವೂ ಹಬ್ಬ.

ದೇವಸ್ಥಾನದ ಪೂಜಾರಿಗಳ ಮೋರೆಯ ಮೇಲೆ ಭಕ್ತಿಯ ಒಂದು ಗೆರೆಯೂ ಕಾಣುವುದಿಲ್ಲ. ಬದಲಿಗೆ ಏಮಾರಿಸಿ ಕಾಸು ಕಬಳಿಸುವ
ದುರಾಸೆ ತಾಂಡವವಾಡುತ್ತಿರುತ್ತದೆ. ಸ್ಥಳೀಯ ಆಡಳಿತ­ದವರೂ ಈ ನಿತ್ಯ ಲೂಟಿಯಲ್ಲಿ ಪಾಲುದಾರ­ರಂತೆ ಕಾಣುತ್ತಾರೆ. ಅವರಿಗೆ ಯಾತ್ರಿಗಳ ಹಿತ ಮತ್ತು ಸ್ವಾಸ್ಥ್ಯದ ಗೊಡವೆಯೇ ಇಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಬೃಂದಾವನದ ಅಸಂಖ್ಯಾತ ಅಸಹಾಯಕ ವಿಧವೆಯರು ಕಣ್ಣಿಗೆ ಮುಳ್ಳಾಗು­ತ್ತಾರೆ. ವಿಧವೆಯರಿಗಾಗಿ ವಿಶೇಷ ಆಶ್ರಮಗಳು ನಿರ್ಮಾಣವಾಗಿ ಅವರ ಊಟೋಪಚಾರಕ್ಕೆಂದು ಭಕ್ತರಿಂದ ಹೇರಳ ಹಣ ವಸೂಲಿಯಾಗುತ್ತದೆ. ಇನಿ ಮಾತುಗಳ ಮೂಲಕ ಭಕ್ತಾದಿಗಳನ್ನು ಬೇಸ್ತು ಬೀಳಿಸುವ ಪೂಜಾರಪ್ಪಗಳ ಕೈಯಲ್ಲಿ ಹಣ ವಸೂಲಿಯ ರಸೀತಿ ಪುಸ್ತಕ ಕಂಗೊಳಿ­ಸುತ್ತಿರುತ್ತದೆ. ನಿರಾಶ್ರಿತೆಯರಾದ ಆ ವಿಧವೆ­ಯರಿಗೆ ನೆರವು ನೀಡ­ದಿರಲು ಕಟುಕರಿಗೂ  ಅಸಾಧ್ಯ. ಆದರೆ ವಸೂಲಿ­ಯಾದ ಹಣ ಎಲ್ಲಿ ಗಾಯಬ್ಬಾಗುತ್ತದೋ ಗೊತ್ತಿಲ್ಲ. ಆ ವಿಧವೆಯರು ಬೀದಿಬೀದಿಗಳಲ್ಲಿ ವಿಹ್ವಲರಾಗಿ ಭಿಕ್ಷೆ ಬೇಡುತ್ತಿರುತ್ತಾರೆ.

ಬೃಂದಾವನಕ್ಕೆ ವಲಸೆ ಬರುವ ವಿಧವೆಯರ ಸಂಖ್ಯೆ ಅತ್ಯಧಿಕವಾಗಿದ್ದು ಇನ್ನು ಮುಂದೆ ಈ ವಲಸೆಯನ್ನು ಪ್ರತಿಬಂಧಿಸಬೇಕು ಎನ್ನುವುದು  ಸ್ಥಳೀಯ ಲೋಕಸಭಾ ಸದಸ್ಯೆ ಹೇಮಾಮಾಲಿನಿ ಅವರ ವಾದ. ಆದರೆ ಈಗಾಗಲೇ ಅನಾಥರಾಗಿ ಬೀದಿ­ಪಾಲಾಗಿರುವ ವಿಧವೆಯರ ಅನುಕೂಲದ ಬಗ್ಗೆ ಅವರಿಗೆ ಕಾಳಜಿ ಇದ್ದಂತೆ ತೋರುವುದಿಲ್ಲ.

ಆ ವಿಧವೆಯರನ್ನು ಕಂಡಾಗ ಹೆಂಗರುಳಿಗರ ಕರುಳು ಚುಳ್ಳೆನ್ನುತ್ತದೆ. ಅದರೆ ಆ ಅಸಹಾಯಕರ ಹಿತರಕ್ಷಣೆಯ ಸಾಮೂಹಿಕ ಪ್ರಯತ್ನಗಳು ಒಂದು ಮೋಸವಾಗಿರುವ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯ ಅನುಕಂಪದಿಂದ ಏನು ಪ್ರಯೋಜನ?

ಹೀಗಾಗಿ ಬೃಂದಾವನದ ಕೊಳಕಾದ ಸ್ಥಳಗಳ­ಲ್ಲಾಗಲೀ, ಕುಂಜನಿಕುಂಜಗಳ ನಡುವೆಯಾಗಲೀ ಅನಿರ್ಬಂಧಿತ ಪ್ರೇಮದ ಸಾಕಾರ ಮೂರ್ತಿ ರಾಧೆ ಕಾಣದೆ, ಆ ವಿಧವೆಯರ ಸೋತ ಮುಖಗಳಲ್ಲಿ ಸೊರಗುತ್ತಿರುವ ಹಾಗೆ ಕಾಣುತ್ತದೆ. ರಾಧಾ­ಕೃಷ್ಣರ ಆದರ್ಶ ಪ್ರೇಮ ನರಭಕ್ಷಕರ ಕೈಯಲ್ಲಿ ಒಂದು ಮೋಸದ ಗಳಿಕೆಯ ಸಾಧನ ಆಗಿರು­ವು­ದನ್ನು ಕಂಡಾಗ ಹೇಸಿಗೆಯಾಗುತ್ತದೆ.

ಆದ್ದರಿಂದ ನಾನು ಇನ್ನೆಂದಿಗೂ ಭೌತಿಕ ಬೃಂದಾ­ವನಕ್ಕೆ ಹೋಗುವುದಿಲ್ಲ. ಅನಿರ್ಬಂಧಿತ ಪ್ರೇಮದ ಅವಿಸ್ಮರಣೀಯ ರಸಕಣಗಳನ್ನು ಸವಿ­ಯಲು ಕಲಾವಂತರು ಶಬ್ದಗಳಲ್ಲಿ, ರಾಗ, -ಲಯ­ಗಳಲ್ಲಿ, ರಂಗು -ರೇಖೆಗಳಲ್ಲಿ, ಕಲ್ಪನಾ ಭಿತ್ತಿಗಳಲ್ಲಿ ಬಿಡಿಸಿಟ್ಟಿರುವ
ಮನೋ ಬೃಂದಾವನಗಳಿಗೆ ಮರ­ಳು­ತ್ತೇನೆ. 
ಈ ಬರಹದ ಸುರುವಲ್ಲಿ ಉಲ್ಲೇ­ಖಿ­ಸಿ­ರುವ ಪಂಜಾಬಿ ಗೀತೆಯೂ ಇದನ್ನೇ ಹೇಳುತ್ತದೆ.
ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT