ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಬಿ ಡೋ

Last Updated 24 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಕೆಲವು ವಾರಗಳ ಹಿಂದೆ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್‌ಓ) ಕುಮಾರ್‌ ಅವರ ಸ್ನೇಹಿತರೊಬ್ಬರು ನನ್ನನ್ನು ಹುಡುಕಿಕೊಂಡು ಬಂದಿದ್ದರು. ಜವಳಿ ಕಾರ್ಖಾನೆಯೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದ ಅವರ 28 ವರ್ಷದ ಸ್ನೇಹಿತ ತಮ್ಮ ದೂರದ ಸಂಬಂಧಿಯೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದರು. ಅವರ ಮೂರು ವರ್ಷದ ಮಗ ತೀರಾ ಅಪರೂಪವಾದ ‘ಮೆಟಾಕ್ರೊಮ್ಯಾಟಿಕ್‌ ಲ್ಯುಕೊ ಡಿಸ್ಟ್ರೊಫಿ’ ಎಂಬ ಕಾಯಿಲೆಯಿಂದ ನರಳುತ್ತಿದ್ದ.

ಮಗುವಿನ ರಕ್ತದ ಮಾದರಿಯನ್ನು ಒಂದು ವರ್ಷದ ಹಿಂದೆಯೇ ಪಡೆದುಕೊಂಡಿದ್ದರೂ ಇನ್ನೂ ವರದಿ ಬಾರದಿರುವುದು ಅವರ ಕಳವಳಕ್ಕೆ ಕಾರಣವಾಗಿತ್ತು. ನಾನು ವಿವರಣೆ ಪಡೆದುಕೊಳ್ಳಲು ಮೂರು ನಾಲ್ಕು ಗಂಟೆ ಪ್ರಯತ್ನ ನಡೆಸಿದ ನಂತರ ಕೊನೆಗೂ ಉತ್ತರ ಸಿಕ್ಕಿದ್ದು ಅದು ಇನ್ನಷ್ಟು ಸಮಯ ತೆಗೆದುಕೊಳ್ಳುತ್ತದೆಯೆಂದು. ಆ ರಕ್ತ ಮಾದರಿಯನ್ನು ಮುಂಬೈಗೆ ಕಳುಹಿಸಲಾಗಿತ್ತು. ಈ ಮಗುವಿನ ಕಾಯಿಲೆ ಕುರಿತು ಸ್ಪಷ್ಟವಾಗಿ ತಿಳಿದುಕೊಂಡಿದ್ದ ಪೋಷಕರು ಮತ್ತೊಂದು ಮಗುವನ್ನು ಹೊಂದಲು ಬಯಸಿದ್ದರು, ಅದು ‘ಸಹಜ’ ಮಗುವಾಗಿರುತ್ತದೆ ಎಂಬ ಭರವಸೆಯೊಂದಿಗೆ.

ಆದರೆ ಅವರಿಗೆ ಅದಕ್ಕೂ ಮೊದಲು ಈ ವರದಿ ಕೈ ಸೇರುವ ಅಗತ್ಯವಿತ್ತು. ಏಕೆಂದರೆ ಈ ಕಾಯಿಲೆ ಆನುವಂಶೀಯವೇ ಅಲ್ಲವೇ ಎಂಬುದನ್ನು ವರದಿ ಖಚಿತಪಡಿಸುತ್ತಿತ್ತು.

ಡೆಂಗೆಯಿಂದ ಬಳಲುತ್ತಿದ್ದ ಹನ್ನೊಂದು ವರ್ಷದ ಲಕ್ಷ್ಮೀಯನ್ನು ಶಿಶುವೈದ್ಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಚರ್ಮ, ಕರುಳು, ಶ್ವಾಸಕೋಶ ಮತ್ತು ಮಿದುಳಿನಿಂದ ರಕ್ತ ಜಿನುಗುತ್ತಿದ್ದರಿಂದ ಆಕೆಯನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಈ ತೀವ್ರ ರೋಗಪೀಡಿತ ಮಗುವನ್ನು ನೋಡಿಕೊಳ್ಳಲು ಇರುತ್ತಿದ್ದ ಏಕೈಕ ಜೀವವೆಂದರೆ ಆಕೆಯ ತಾಯಿ ಮಂಗಳಾ. ಮನೆಗೆಲಸದಿಂದ ಬದುಕು ಸಾಗಿಸುತ್ತಿದ್ದ ಮಂಗಳಾ, ‘ನನ್ನ ಮಗಳು ಯಾವಾಗ ಹುಷಾರಾಗುತ್ತಾಳೆ? ಕೆಲಸಕ್ಕೆ ಹೋಗದಿದ್ದರೆ ನನಗೆ ಹಣ ಸಿಗುವುದಿಲ್ಲ. ಈ ವೆಚ್ಚವನ್ನೆಲ್ಲಾ ಹೇಗೆ ಭರಿಸುವುದು? ದಯವಿಟ್ಟು ನನ್ನ ಮಗುವಿಗೆ ಸಹಾಯ ಮಾಡಿ’ ಎಂದು ಪ್ರತಿನಿತ್ಯವೂ ನಮ್ಮನ್ನು ಬೇಡಿಕೊಳ್ಳುತ್ತಿದ್ದರು.

ಆಕೆ ಈ 15 ದಿನಗಳಲ್ಲಿ ಸ್ನಾನವನ್ನೂ ಮಾಡಿರಲಿಲ್ಲ. ಅದೇ ಬಟ್ಟೆಗಳನ್ನೇ ಧರಿಸುತ್ತಿದ್ದಳು. ಆಕೆಗೆ ಊಟದ್ದು ದೊಡ್ಡ ಸಮಸ್ಯೆಯಾಗಿತ್ತು. ಆಸ್ಪತ್ರೆಯ ವೆಚ್ಚ ಭರಿಸುವಲ್ಲಿ ನಾನು ನೆರವಾಗುತ್ತೇನೆ ಎಂದು ಆಕೆಗೆ ಭರವಸೆ ನೀಡಿದೆ. ಆದರೆ ಆ ತಾಯಿಯ ಅಗತ್ಯಗಳಿಗೆ ಏನು ಮಾಡುವುದು?

ಈ ಸಂದರ್ಭದಲ್ಲಿ ನಾನು ಅಪ್ಪಾಜಿ ಆಡಳಿತ ನಡೆಸುತ್ತಿದ್ದಾಗ, ದೀರ್ಘಕಾಲದಿಂದ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಡಮಕ್ಕಳು ಅಥವಾ ಅವರನ್ನು ನೋಡಿಕೊಳ್ಳುತ್ತಿದ್ದವರಿಗೆ ಕುಟುಂಬದ ಸದಸ್ಯರು ಆಹಾರ ತರುತ್ತಿದ್ದ ದಿನಗಳಲ್ಲಿ ಆ ತಾಯಂದಿರಿಗೆ ಸರ್ಕಾರವೇ ಆಹಾರ ಒದಗಿಸಬೇಕು ಎಂದು ಹೋರಾಟ ನಡೆಸಿದ್ದು ನೆನಪಿಗೆ ಬಂತು. ಒಬ್ಬ ಬಡ ತಾಯಿ ನೀಡಿದ್ದ ವಾಗ್ದಾನ ತಮ್ಮ ಮನಸ್ಸನ್ನು ಹೇಗೆ ಕಲಕಿತು ಎನ್ನುವುದನ್ನು ನನಗೆ ಅಪ್ಪಾಜಿ ಹೇಳುತ್ತಿದ್ದರು.

ಆಸ್ಪತ್ರೆ ಮಗುವಿಗೆ ಆಹಾರ ಒದಗಿಸುತ್ತಿತ್ತು. ತಾಯಿಗೆ ಆಹಾರ ಕೊಡುತ್ತಿದ್ದಂತೆ ಕಾಯಿಲೆ ಪೀಡಿತ ಮಗು ಅದಕ್ಕಾಗಿ ಹೋರಾಡುತ್ತಿತ್ತು. ಅವರ ಅವಧಿಯಲ್ಲಿ ಎಲ್ಲಾ ಸಿಬ್ಬಂದಿ ಒಟ್ಟಿಗೆ ಕುಳಿತು ಊಟ ಮಾಡಲು ಯೋಗ್ಯವಾದ ಕಾಫೀ ಕ್ಲಬ್ ನಡೆಸಲಾಗುತ್ತಿತ್ತು. ಅಲ್ಲಿ ಹೆಚ್ಚುವರಿಯಾಗಿ ಉಳಿಯುತ್ತಿದ್ದ ಆಹಾರವನ್ನು ಮತ್ತೆ 8–12 ಜನರಿಗೆ ನೀಡಬಹುದಾಗಿತ್ತು

ಕೆಲವು ವೇಳೆ ಅಮ್ಮ ಇದೇ ಉದ್ದೇಶಕ್ಕಾಗಿ ವಿಶೇಷ ಟಿಫನ್‌ ಕ್ಯಾರಿಯರ್‌ನಲ್ಲಿ ಕನಿಷ್ಠ 2–3 ಮಕ್ಕಳಿಗೆ ಸಾಕಾಗುವಷ್ಟು ಆಹಾರ ಕಟ್ಟಿ ಕಳುಹಿಸುತ್ತಿದ್ದರು. ಆಗಾಗ್ಗೆ ನಾನೂ ಈ ಮಕ್ಕಳು ಮತ್ತು ತಾಯಂದಿರಿಗೆ ಆಹಾರ ಒಯ್ಯುತ್ತಿದ್ದೆ.
ಕೆಲವು ಗಂಟೆಗಳವರೆಗೆ ಮನೆಗೆ ತೆರಳಿ ಮತ್ತೆ ಹಿಂದಿರುಗಲು ಆ ತಾಯಿ ಅನುಮತಿ ಬಯಸಿದ್ದರು. ನನ್ನ ಸ್ನಾತಕೋತ್ತರ ವಿದ್ಯಾರ್ಥಿಗಳ ಜೊತೆಯಲ್ಲಿ ಮಗುವಿನ ಯೋಗಕ್ಷೇಮ ನೋಡಿಕೊಳ್ಳುವುದಾಗಿ ಭರವಸೆ ನೀಡಿದೆ.

ದಾದಿಯೊಬ್ಬರು ಓಡಿ ಬಂದು ‘ಡಾಕ್ಟರ್‌, ಹಾಗೆ ಮಾಡಬೇಡಿ. ಇಷ್ಟು ದೊಡ್ಡ ಮೊತ್ತದ ಆಸ್ಪತ್ರೆ ವೆಚ್ಚ ಉಳಿಸಿ ಆಕೆ ಹಾಗೆಯೇ ಓಡಿಹೋಗುತ್ತಾಳೆ. ಅದಕ್ಕೆ ಹಣವನ್ನು ನಮ್ಮ ಸಂಬಳದಿಂದ ಕಡಿತಗೊಳಿಸುತ್ತಾರೆ’ ಎಂದರು.
ನನಗೆ ಆಶ್ಚರ್ಯವಾಯಿತು. ಯಾವುದೇ ತಾಯಿ ತನ್ನ 11 ವರ್ಷದ ಮಗಳನ್ನು ಹಾಗೆ ತ್ಯಜಿಸಿ ಓಡಲು ಸಾಧ್ಯವೇ? ನಿಜ. ಈ ರೀತಿಯ ಘಟನೆ ಹಲವು ಬಾರಿ ನಡೆದಿದೆ. ಮುಖ್ಯವಾಗಿ ಮಗು ಮಾನಸಿಕ ಬೆಳವಣಿಗೆ ಹೊಂದಿರದ ಸಂದರ್ಭದಲ್ಲಿ.

ಶುಲ್ಕದ ನಿರ್ವಹಣೆಯನ್ನು ನಾನು ನಿಭಾಯಿಸುತ್ತೇನೆ ಎಂದು ದಾದಿಗೆ ಭರವಸೆ ನೀಡಿದೆ. ಆಕೆ ಅದನ್ನು ನಿರಾಕರಿಸಿದರು. ನನ್ನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಹೇಳಿದರು, ‘ನನಗೆ ನಿಮ್ಮ ಒಳ್ಳೆ ಉದ್ದೇಶ ಅರ್ಥವಾಗುತ್ತದೆ. ಮಂಗಳಮ್ಮ ವಾಪಸು ಬರುವ ವೇಳೆಗೆ ಮಗು ಸತ್ತು ಹೋಗಿದ್ದರೆ ಏನು ಮಾಡುತ್ತೀರ?’. ಹೌದು ನಾವು ವೈದ್ಯರು ಕೆಲವೊಮ್ಮೆ ಭಾವನೆಗಳಿಂದಾಗಿ ಕುರುಡಾಗುತ್ತೇವೆ. ದಾದಿಯ ಕಳಕಳಿ ಮತ್ತು ವ್ಯಾವಹಾರಿಕತೆಯನ್ನು ನಾನು ಮೆಚ್ಚಿಕೊಳ್ಳುತ್ತೇನೆ.

ಮಂಗಳಮ್ಮನಿಗೆ ವಿಷಯವನ್ನು ವಿವರಿಸಿ, ನನ್ನ ಬಡ ರೋಗಿಗಳಿಂದಲೇ ಸ್ನೇಹಿತೆ ಲತಾ ಸುಮಂತ್‌ ಸಂಗ್ರಹಿಸಿದ ಬಟ್ಟೆಗಳನ್ನು ಆಕೆಗೆ ನೀಡಿದೆ. ಬಟ್ಟೆಗಳನ್ನು ತೆಗೆದುಕೊಂಡ ಆ ತಾಯಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು.
ಈ ಮಗುವಿನ ತಪಾಸಣೆ ನಡೆಸುತ್ತಿದ್ದ ಸ್ನಾತಕೋತ್ತರ ವಿದ್ಯಾರ್ಥಿ ಡಾ. ಅರುಣ್‌, ‘ಮೇಡಂ, ತನ್ನ ಮಗು ತೀವ್ರವಾಗಿ ಮಾನಸಿಕ ವೈಕಲ್ಯಕ್ಕೆ ಒಳಗಾಗಿದೆ ಎನ್ನುವ ಸಂಗತಿ ಅವರಿಗೆ ಗೊತ್ತಿಲ್ಲ, ಮೇಡಂ ಮಗುವನ್ನು ಉಳಿಸಲು ಹೆಣಗಾಡುತ್ತಿದ್ದಾರೆ ಎಂದು ಆಕೆ ಭಾವಿಸಿದ್ದಾರೆ. ಆಕೆ ಮಗುವನ್ನು ಬಿಟ್ಟು ತಪ್ಪಿಸಿಕೊಳ್ಳಬಹುದು ಎಂದು ದಾದಿಗೆ ಅನಿಸಿದ್ದಕ್ಕೂ ಇದೇ ಕಾರಣ’ ಎಂದರು.

ವೈದ್ಯಕೀಯ ಭಾಷೆಯಲ್ಲಿ ಲಕ್ಷ್ಮೀ ವೆಜಿಟೇಟಿವ್ ಸ್ಥಿತಿಯಲ್ಲಿದ್ದಳು. ಆಕೆ ನೋಡುವ, ಕೇಳುವ, ಮಾತನಾಡುವ ಅಥವಾ ಅಂಗಾಂಗಗಳನ್ನು ಚಲಿಸುವ, ಹಸಿವು, ನಿದ್ರೆ ಮತ್ತು ಶೌಚದ ಅಗತ್ಯಗಳನ್ನು ಸೂಚಿಸಲು ಸಾಧ್ಯವಾಗದ ಸ್ಥಿತಿ ಅದು.

ಹಾಸಿಗೆ ಹುಣ್ಣಿನಿಂದ ದೇಹ ಸೆಟೆದುಕೊಂಡಿತ್ತು. ಆದರೆ ಆಕೆಯಿನ್ನೂ ಬದುಕಿದ್ದಳು– ಹೃದಯ ಬಡಿತ ಮತ್ತು ಉಸಿರಾಟ ಸಹಜವಾಗಿತ್ತು. ಲಕ್ಷ್ಮೀ ದಾಖಲಾದ ಸಮಯದಲ್ಲಿಯೇ ತೀವ್ರ ಡೆಂಗೆಯಿಂದ ಬಳಲುತ್ತಿದ್ದರೂ ದೇಹದ ಸ್ಥಿತಿ ಸಹಜವಾಗಿದ್ದ ಮೂರು ನಾಲ್ಕು ಮಕ್ಕಳನ್ನು ಕಳೆದುಕೊಂಡಿದ್ದೆವು. ಅನೇಕರು ಲಕ್ಷ್ಮೀ ಈ ನೋವನ್ನು ಸಹಿಸಿಕೊಳ್ಳಲಾರಳು ಮತ್ತು ಆಕೆ ಸಸ್ಯೀಯ ಸ್ಥಿತಿಯಲ್ಲಿಯೇ ಬದುಕಿಗೆ ಅಂತ್ಯ ಹಾಡಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಏಕೆಂದರೆ ಲಕ್ಷ್ಮೀ ಕಾಯಿಲೆ ಆ ಬಡ ಕುಟುಂಬಕ್ಕೆ ಅತಿಯಾದ ಭಾರವಾಗಿತ್ತು.

ನಾಲ್ಕು ಬಾರಿ ಗರ್ಭಿಣಿಯಾಗಿದ್ದ ಮಂಗಳಮ್ಮನ 16 ವರ್ಷದ ಮೊದಲ ಮಗ ಕೂಡ ತೀವ್ರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಆಕೆ ತನ್ನ ಎರಡು ಮತ್ತು ಮೂರನೇ ಗರ್ಭವನ್ನು ಹಣಕಾಸಿನ ಕೊರತೆ ಮತ್ತು ಅಸಮರ್ಥ ಮಗನ ಕಾರಣಗಳಿಂದಾಗಿ ತೆಗೆಸಿಹಾಕಿದ್ದರು. ಐದು ವರ್ಷದ ಬಳಿಕ ಆಕೆ ಮತ್ತೆ ಗರ್ಭಿಣಿಯಾದರು. ಈ ಬಾರಿ ಆಕೆಗೆ ಅವಳಿ ಮಕ್ಕಳು.

ಈ ಅವಳಿಗಳಲ್ಲಿ ಮೊದಲನೆ ಮಗಳು ಎರಡೂವರೆ ವಯಸ್ಸಿಗೆ ಅಸಹಜ ಸಾವು ಕಂಡರೆ, ಲಕ್ಷ್ಮೀ ಬದುಕುಳಿದಳು. ಮಂಗಳಮ್ಮ ತೀವ್ರ ಹತಾಶೆಗೆ ಒಳಗಾಗಿದ್ದು ಲಕ್ಷ್ಮೀ ಕೂಡ ಅಸಹಜ ಮಗು ಎಂದು ತಿಳಿದಾಗ. ಈ ಎಲ್ಲಾ ವೇದನೆಗಳನ್ನು ಎದುರಿಸುವ ಬದಲು ಸೂಕ್ತ ತಪಾಸಣೆಗೆ ಒಳಗಾಗಬಹುದಿತ್ತಲ್ಲವೇ ಎಂದು ಆ ಬಡ ಮಹಿಳೆಯನ್ನು ಕೇಳಿದೆ. ಆಕೆಯ ಉತ್ತರ ಪ್ರಾಮಾಣಿಕವಾಗಿತ್ತು– ಪ್ರಸವಪೂರ್ವ ರೋಗಪತ್ತೆಯ (ಗರ್ಭಾವಸ್ಥೆಯಲ್ಲಿನ ಕಾಯಿಲೆ ಪತ್ತೆಹಚ್ಚುವುದು) ವೆಚ್ಚ ದುಬಾರಿ. ಅದಕ್ಕಾಗಿಯೇ ಸಹಜ ಮಗು ಜನಿಸುತ್ತದೆ ಎಂಬ ಭರವಸೆಯೊಂದಿಗೆ ಅಪಾಯ ಸ್ವೀಕರಿಸಿದ್ದು. ಆದರೆ ಈ ಅಪಾಯದ ಪರಿಣಾಮ ಅತಿಯಾಗಿತ್ತು.

ಲಕ್ಷ್ಮೀ ಆಸ್ಪತ್ರೆಯಲ್ಲಿ ಇರುವಾಗ ಡೆಂಗೆಯ ಸಮಸ್ಯೆಗೆ ಆರೋಗ್ಯವಂತ ಮಕ್ಕಳು ಸಾವಿಗೀಡಾಗಿದ್ದರೂ ಇಂಥ ಮಕ್ಕಳು ಹೇಗೆ ಬದುಕುಳಿಯುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಅನೇಕರಿಗೆ ಕಾಡಬಹುದು. ಪ್ರಾಯಶಃ ಅವರು ದೇವರ ವಿಶೇಷ ಮಕ್ಕಳು ಇರಬೇಕು.ಮಕ್ಕಳ ವೈದ್ಯಕೀಯ ಹಕ್ಕುಗಳು ಮತ್ತು ‘ದಿ ಬೇಬಿ ಡೋ’ ವಿವಾದದ ಕುರಿತು ವಿದ್ಯಾರ್ಥಿಗಳಿಗೆ ವಿವರಿಸುತ್ತಿದ್ದೆ.

1982ರ ಏಪ್ರಿಲ್‌ 9ರಂದು, ಬ್ಲೂಮಿಂಗ್ಟಾನ್‌ನ ಇಂಡಿಯಾನಾ ಆಸ್‍ಪತ್ರೆಯಲ್ಲಿ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮವಿತ್ತಳು. ಮಾನಸಿಕ ಬೆಳವಣಿಗೆಯನ್ನು ಕುಂಠಿತಗೊಳಿಸುವ ಡಾನ್‌ ಸಿಂಡ್ರೋಮ್‌ ಆ ಮಗುವಿನಲ್ಲಿರುವುದು ಪತ್ತೆಯಾಯಿತು. ಈ ಮಗುವಿನ ಅನ್ನನಾಳ ರಂಧ್ರ ಮುಚ್ಚಿಹೋಗಿ ಹೊಟ್ಟೆಯು ಆಹಾರ ನಳಿಗೆಗೆ ಸಂಪರ್ಕ ಹೊಂದಿಲ್ಲದೆ ಆಹಾರ ಸೇವನೆಯ ಸಂಕಷ್ಟವನ್ನೂ ಎದುರಿಸುತ್ತಿತ್ತು. ಶಸ್ತ್ರಚಿಕಿತ್ಸೆ ಮಾಡಿದರೆ ಮಾತ್ರ ಮಗು ಬದುಕುಳಿಯುವ ಸಾಧ್ಯತೆ ಶೇ 50ರಷ್ಟು ಇದೆ.

ಶಸ್ತ್ರಚಿಕಿತ್ಸೆ ಯಶಸ್ವಿಯಾದರೂ ಮಾನಸಿಕ ವೈಕಲ್ಯ ಹಾಗೆಯೇ ಉಳಿದುಕೊಳ್ಳುತ್ತದೆ. ಇದು ಜೀವನಪರ್ಯಂತ ವೈದ್ಯಕೀಯ ಚಿಕಿತ್ಸೆ, ಅಸಮರ್ಥತೆ ಮತ್ತು ಪರಾವಲಂಬನೆಯನ್ನು ಬೇಡುತ್ತದೆ ಎಂದು ಪ್ರಸವ ಮಾಡಿದ ವೈದ್ಯರು ತಿಳಿಸಿದ್ದರು. ಚಿಕಿತ್ಸೆಯನ್ನು ನಿಲ್ಲಿಸಿ, ಮಗು ತನ್ನ ಜನನದ ದೋಷದ ಕಾರಣದಿಂದ ಸಾಯುವುದಕ್ಕೆ ಅನುವು ಮಾಡಿಕೊಡುವುದು ಒಳಿತು ಎಂದು ಪೋಷಕರಿಗೆ ವೈದ್ಯರು ಸಲಹೆ ನೀಡಿದರು. ಈ ಮಗುವಿನ ಪೋಷಕರೂ ಮಗುವಿಗೆ ಚಿಕಿತ್ಸೆ ನೀಡಲು ಬಯಸಿರಲಿಲ್ಲ.

ಆದರೆ ಆಸ್ಪತ್ರೆ ಆಡಳಿತ, ಸಾರ್ವಜನಿಕರು ಮತ್ತು ಪತ್ರಿಕೆಗಳು ಅಮೆರಿಕದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಜಾನ್‌ ಪಾಲ್ ಸೆವೆನ್ಸ್‌ ಅವರಿಗೆ ಮನವಿ ಸಲ್ಲಿಸಿದವು. ಪತ್ರಿಕೆಗಳು ಮಗುವಿಗೆ ‘ಬೇಬಿ ಡೋ’ ಎಂದು ನಾಮಕರಣ ಮಾಡಿದವು. ಕಾನೂನು ಸೆಣಸಾಟ ನಡೆಯುವಾಗಲೇ ‘ಬೇಬಿ ಡೋ’ ನಿರ್ಜಲೀಕರಣ (ಡಿಹೈಡ್ರೇಷನ್‌) ಮತ್ತು ಶ್ವಾಸಕೋಶ ಸೋಂಕಿನಿಂದಾಗಿ 1982ರ ಏಪ್ರಿಲ್‌ 15ರಂದು, ಜಗತ್ತಿಗೆ ಪ್ರವೇಶಿಸಿ ಏಳು ದಿನಗಳ ಬಳಿಕ ಮರಣ ಹೊಂದಿತು.

ಮಗುವಿನ ಬಾಯಲ್ಲಿನ ಜೊಲ್ಲು, ಆಹಾರ ನಳಿಗೆ ಹೊಟ್ಟೆಯೊಂದಿಗೆ ಸಂಪರ್ಕ ಹೊಂದಿರದ ಕಾರಣ ಅದರೊಳಗೆ ತುಂಬಿ ಶ್ವಾಸಕೋಶದ ಮೇಲೆ ಹರಿದಿತ್ತು. ಇದು ಶ್ವಾಸಕೋಶ ಸೋಂಕು ಮತ್ತು ಸಾವಿಗೆ ಕಾರಣವಾಗಿತ್ತು. ಅದು ಸಾವಿನೊಂದಿಗೆ ಹೋರಾಡುವ ಹೊತ್ತಿಗೆ ಮಗುವಿನ ಗೊಂದಲಕ್ಕೊಳಗಾದ ಪೋಷಕರು, ಮಾಧ್ಯಮಗಳು ಮತ್ತು ಕಾನೂನು ಚರ್ಚೆಯಲ್ಲಿ ಮುಳುಗಿದ್ದವು.

‘ಬೇಬಿ ಡೋ’ನ ಸಾವು ಆಜನ್ಮ ಸಮಸ್ಯೆಗಳುಳ್ಳ ಶಿಶುಗಳ ವೈದ್ಯಕೀಯ ಚಿಕಿತ್ಸೆಯ ಹಕ್ಕುಗಳ ಕುರಿತು ಜೋರಾದ ವಿವಾದವನ್ನೇ ಹುಟ್ಟುಹಾಕಿತು. ಇದು ವೈದ್ಯರು ಮತ್ತು ಪೋಷಕರ ಸಂಬಂಧದಲ್ಲಿ, ಪೋಷಕರು ತಮ್ಮ ಮಕ್ಕಳ ಭವಿಷ್ಯದ ಕುರಿತು ನಿರ್ಧಾರ ತೆಗೆದುಕೊಳ್ಳುವಲ್ಲಿ ಸರ್ಕಾರ ಮಧ್ಯಪ್ರವೇಶಿಸಬೇಕೆಂಬ ಚರ್ಚೆಗಳು ವ್ಯಾಪಕವಾಗಿ ನಡೆದವು.

1983ರ ಅಕ್ಟೋಬರ್ 11. ದೈಹಿಕ ವೈಕಲ್ಯಗಳೊಂದಿಗೆ ಜನಿಸಿದ ಹೆಣ್ಣುಮಗುವಿನ ಹೆಸರು ‘ಬೇಬಿ ಜೇನ್‌ ಡೋ’. ನರಗಳ ಅಂಗಾಂಶ ಮತ್ತು ಮಿದುಳು ಹಾಗೂ ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಬಲ್ಲ ಸೋಂಕಿಗೆ ಕಾರಣವಾಗಬಲ್ಲ ವಿಶೇಷ ಮೂಳೆಯಲ್ಲಿನ ಸಮಸ್ಯೆಯೊಂದಿಗೆ ಮಗು ಜನಿಸಿತ್ತು. ಈ ಮಗು ನೀರು ತುಂಬಿದ್ದ ಚಿಕ್ಕ ಗಾತ್ರದ ಮಿದುಳನ್ನು ಹೊಂದಿತ್ತು. ಚಿಕಿತ್ಸೆಯನ್ನು ತಡೆಹಿಡಿದಾಗ ಹಿಂದಿನಂತೆಯೇ ವೈದ್ಯಕೀಯ ಮತ್ತು ಕಾನೂನು ಸಮರಗಳು ಶುರುವಾದವು. ಈ ಸನ್ನಿವೇಶದಲ್ಲಿ ಮಗು ಬದುಕುಳಿಯಿತು. ಆದರೆ ತಡ ಚಿಕಿತ್ಸೆಯಿಂದಾಗಿ ಬೆನ್ನುಹುರಿ ಮತ್ತು ಮಿದುಳಿಗೆ ಸೋಂಕು ತಗುಲಿತ್ತು.

ಈ ಪ್ರಕರಣಗಳ ಸನ್ನಿವೇಶಗಳಿಂದ ಹುಟ್ಟಿಕೊಂಡ ನವಜಾತ ಶಿಶುಗಳ ವೈದ್ಯಕೀಯ ಹಕ್ಕುಗಳ ಕುರಿತ ಕಟು ವಾಗ್ವಾದಗಳು ಅಂತಿಮವಾಗಿ ಅಮೆರಿಕದ ಕಾನೂನಿನಲ್ಲಿ ಬೇಬಿ ಡೋ ತಿದ್ದುಪಡಿ ಅಳವಡಿಕೆಗೆ ಪ್ರೇರಣೆ ನೀಡಿತು. ಈ ಚರ್ಚೆ ಸರ್ಕಾರದ ಅಧಿಕಾರದ ವ್ಯಾಪ್ತಿ ವಿಸ್ತರಣೆ, ಅಂದರೆ ಪೌರತ್ವ ಮತ್ತು ಬದುಕಿನ ಮೌಲ್ಯಗಳನ್ನು ಕೇಂದ್ರವಾಗಿರಿಸಿಕೊಂಡಿತ್ತು.

ಬೇಬಿ ಜೇನ್‌ನ ಪೋಷಕರು ಶಸ್ತ್ರಚಿಕಿತ್ಸೆಯ ವಿರುದ್ಧದ ನಿರ್ಧಾರವನ್ನು ತೆಗೆದುಕೊಂಡಿದ್ದರು. ಮಗು ಬದುಕುಳಿದಿತು. ತಿಂಗಳುಗಳು ಉರುಳಿದಂತೆ ಬೆನ್ನುಮೂಳೆಯು ನಿಧಾನವಾಗಿ ಮತ್ತು ಸಹಜವಾಗಿ ಸರಿಹೋಗತೊಡಗಿತು. ಬಳಿಕ ಅವರು ಮಿದುಳಿನಲ್ಲಿದ್ದ ನೀರನ್ನು ಹೊರತೆಗೆಯಲು ತೀರ್ಮಾನಿಸಿದರು. ಆಕೆ ಜೀವಂತವಾಗಿದ್ದಾಳೆ. ಆದರೆ ಆಕೆಯದು ವೆಜಿಟೇಟಿವ್ ಸ್ಥಿತಿ!

ಲಕ್ಷ್ಮೀಗೆ ಅಳವಡಿಸಿದ್ದ ವೆಂಟಿಲೇಟರ್‌ ವೆಚ್ಚವೇ 22,500 ರೂಪಾಯಿಗೆ ಏರಿತ್ತು. ಮಂಗಳಮ್ಮ ನಮ್ಮನ್ನು ಕೇಳುತ್ತಲೇ ಇದ್ದರು– ಅವಳು ಬದುಕಿ ಉಳಿಯುತ್ತಾಳೆಯೇ? ಆಸ್ಪತ್ರೆ ಖರ್ಚು ಎಷ್ಟಾಗುತ್ತದೆ? ಮನೆಯಲ್ಲಿದ್ದ ಅಪಸಾಮಾನ್ಯ ಮಗನ ಸಲುವಾಗಿ ಆಕೆಯ ಆತಂಕ ಇಮ್ಮಡಿಸಿತ್ತು. ಇಂಥ ಸಂದರ್ಭಗಳಲ್ಲಿ ನಾವು ವೈದ್ಯರು 48 ಗಂಟೆಗಳ ಸಮಯ ಕೇಳುತ್ತೇವೆ.

ಈ ಅವಧಿಯಲ್ಲಿ ಪವಾಡಗಳು ಸಂಭವಿಸಬಹುದು ಮತ್ತು ಎಷ್ಟೋ ಸಲ ಇದು ನಮ್ಮ ನಿರ್ಧಾರಗಳಿಗೆ ನೆರವಾಗಿದ್ದಿದೆ. ಗಂಭೀರವಾಗಿ ಅಸ್ವಸ್ಥಗೊಂಡ ಮಕ್ಕಳು ಈ ಅವಧಿಯಲ್ಲಿ ಸಾವಿಗೀಡಾಗಬಹುದು ಅಥವಾ ಹದಗೆಡಬಹುದು ಅಥವಾ ಚೇತರಿಕೆಯ ಲಕ್ಷಣಗಳನ್ನು ತೋರಿಸಬಹುದು. ಲಕ್ಷ್ಮೀ ಪಿಐಸಿಯುನಲ್ಲಿದ್ದ 15 ದಿನಗಳಲ್ಲಿ ಇಂಥ ಅನೇಕ ಹಂತಗಳನ್ನು ದಾಟಿದ್ದಳು.

ಎಲ್ಲಾ ಚಿಕಿತ್ಸೆಗಳನ್ನೂ ನಿಲ್ಲಿಸಿ ಮಗು ನೆಮ್ಮದಿಯಿಂದ ಸಾಯಲು ಬಿಡಿ ಎಂಬ ತಾಯಿಯ ಮನವಿಯನ್ನು ನಾನು ಒಪ್ಪಿಕೊಳ್ಳಬೇಕಿತ್ತೇ? ನಮ್ಮಿಂದ ಅದು ಸಾಧ್ಯವಿರಲಿಲ್ಲ, ನಾವು ನೀತಿ ನಿಯಮಗಳ ಪರಿಧಿಯಲ್ಲಿದ್ದೇವೆ.

1984ರಲ್ಲಿ ಅಮೆರಿಕದಲ್ಲಿ ಅಂಗೀಕೃತವಾದ ಮಕ್ಕಳ ನಿಂದನಾತ್ಮಕ ಕಾನೂನುಗಳಲ್ಲಿ ಬೇಬಿ ಡೋ ತಿದ್ದುಪಡಿಯೂ ಒಂದು. ಈ ತಿದ್ದುಪಡಿ ಹುಟ್ಟಿನಿಂದಲೇ ಗಂಭೀರ ಕಾಯಿಲೆ ಅಥವಾ ಅಸಮರ್ಥತೆ ಹೊಂದಿರುವ ನವಜಾತ ಶಿಶುಗಳ ಚಿಕಿತ್ಸೆಗಾಗಿ ಮಕ್ಕಳ ಪೋಷಕರ ಅಭಿಪ್ರಾಯದ ಅಗತ್ಯವಿಲ್ಲದೆಯೇ ನಿಶ್ಚಿತವಾದ ನೀತಿ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ನಿಗದಿಪಡಿಸಿತು. ಲಕ್ಷ್ಮೀ ಕ್ರಮೇಣ ಚೇತರಿಸಿಕೊಂಡಳು. ಒಂದು ವಾರದ ಬಳಿಕ ಮನೆಗೆ ಹಿಂದಿರುಗಿದಳು.

ತಾಯಿ ನಮ್ಮನ್ನು ಕೇಳಿಕೊಂಡ ಕಾರಣಕ್ಕೆ ಲಕ್ಷ್ಮೀಯನ್ನು ವೆಂಟಿಲೇಟರ್‌ನಿಂದ ಹೊರ ತೆಗೆಯಬೇಕಿತ್ತೇ?
ಕುಮಾರ್‌ ಅವರ ಸ್ನೇಹಿತರಿಗೆ ಒಂದು ಲಕ್ಷ ರೂಪಾಯಿಗೂ ಅಧಿಕ ವೆಚ್ಚದಾಯಕ ಮತ್ತು ವರದಿಗಾಗಿ ತಿಂಗಳಿನಿಂದ ವರ್ಷದವರೆಗೆ ಕಾಯಬೇಕಾಗುವ ರಕ್ತ ಪರೀಕ್ಷೆಗೆ ಪೋಷಕರು ಮತ್ತು ಮಗು ಒಳಪಡಬೇಕು ಎಂದು ಸೂಚಿಸಲೇ? ಅಥವಾ ಮುಂದಿನ ಮಗು ಸಹಜವಾಗಿ ಹುಟ್ಟಲಿದೆ ಎಂಬ ಆಶಾವಾದದೊಂದಿಗೆ ಮತ್ತೊಮ್ಮೆ ಪ್ರಯತ್ನಿಸಿ ಎಂದು ಹೇಳಲೇ?

ashabenakappa@yahoo.com
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT