ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯತ್ವದ ಮರು ಆವಿಷ್ಕಾರದ ತುರ್ತು

Last Updated 19 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಕ್ಕಳಲ್ಲಿನ ಆತ್ಮಹತ್ಯಾ ಪ್ರವೃತ್ತಿಯ ಕುರಿತು ಬರೆಯಬೇಕೆಂದು ಅನೇಕ ದಿನಗಳಿಂದ ಯೋಚಿಸುತ್ತಿದ್ದೆ. ನನ್ನ ಅಂಕಣದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕೆಂಬ ಮನವಿಯನ್ನು ಸ್ನಾತಕೋತ್ತರ ವಿದ್ಯಾರ್ಥಿ ಡಾ. ಅರುಣ್‌ ಮುಂದಿಟ್ಟರು.

ಆತ್ಮಹತ್ಯಾ ಪ್ರವೃತ್ತಿಯು ನಿಧಾನವಾಗಿ, ಆದರೆ ದೃಢವಾಗಿ ಎಲ್ಲಾ ವಯೋಮಾನದ ಮಕ್ಕಳಲ್ಲಿ ಹೆಚ್ಚುತ್ತಿದೆ ಮತ್ತು ಬೆಂಗಳೂರು ಹೆಚ್ಚೂ ಕಡಿಮೆ ಆತ್ಮಹತ್ಯೆಗಳ ರಾಜಧಾನಿಯಾಗಿ ಬೆಳೆಯುತ್ತಿದೆ. ಪ್ರತಿ ಆತ್ಮಹತ್ಯೆ ಹಿಂದೆ ಅಂತಹ 20–30 ಪ್ರಯತ್ನಗಳಿರುತ್ತವೆ.
1990ನೇ ಇಸವಿ ಇರಬೇಕು. ನಾನಾಗ ಶಿಶುವೈದ್ಯಕೀಯ ವಿಭಾಗದ ಉಪನ್ಯಾಸಕಿಯಾಗಿದ್ದೆ, ರಾತ್ರಿ ಪಾಳಿಯ ಕೆಲಸವನ್ನೂ ಮಾಡುತ್ತಿದ್ದೆ.

ವೈದ್ಯಕೀಯ ಕಾಲೇಜುಗಳ ಉಪನ್ಯಾಸಕರು ಪ್ರೊಫೆಸರ್‌ ಪದವಿಗೆ ಏರುವವರೆಗೂ ರಾತ್ರಿ ಪಾಳಿಗಳಲ್ಲಿ ದುಡಿಯುತ್ತಾರೆ. ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಹೌಸ್‌ ಸರ್ಜನ್‌ಗಳೂ ನಮ್ಮೊಂದಿಗೆ ರಾತ್ರಿಪಾಳಿಯಲ್ಲಿರುತ್ತಾರೆ. ನಮ್ಮ ಕರ್ತವ್ಯ ಶುರುವಾಗುತ್ತಿದ್ದದ್ದು ಬೆಳಿಗ್ಗೆ 9ಕ್ಕೆ ಮತ್ತು ಮುಗಿಯುತ್ತಿದ್ದದ್ದು ಮರುದಿನ ಸಂಜೆ 4ಕ್ಕೆ.

ಕರ್ತವ್ಯದ ವೇಳೆ ನಾವು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ತರಬೇತಿ ನೀಡುತ್ತೇವೆ. ಮುಖ್ಯವಾಗಿ, ಆತ್ಮಹತ್ಯೆ ಒಳಗೊಂಡಂತೆ ತುರ್ತು ಪ್ರಕರಣಗಳನ್ನು ನಿರ್ವಹಿಸುವುದನ್ನು ಕಲಿಸಲಾಗುತ್ತದೆ. ಅದರಲ್ಲಿ ಮೊದಲ ಪಾಠ, ಎಲ್ಲಾ ಆತ್ಮಹತ್ಯೆ ಪ್ರಕರಣಗಳೂ ‘ಮೆಡಿಕೊಲೀಗಲ್‌ ಪ್ರಕರಣಗಳು’ ಎನ್ನುವುದು.

ಹತ್ತನೇ ತರಗತಿ ಓದುತ್ತಿದ್ದ ಹದಿನೈದು ವರ್ಷದ ಬಾಲಕ ಎನ್‌. ಮೂರ್ತಿ ಕನಕಪುರದ ಹಳ್ಳಿಯೊಂದರ ರೈತರೊಬ್ಬರ ಮಗ. ಮಗನನ್ನು ಎಂಜಿನಿಯರಿಂಗ್‌ ಓದಿಸುವ ಕನಸು ಅಪ್ಪನದಾಗಿತ್ತು. ಆದರೆ ಮಗ ಶಾಲೆ ತಪ್ಪಿಸುತ್ತಿದ್ದ ಮತ್ತು ಗಣಿತದಲ್ಲಿ ತುಂಬಾ ಹಿಂದೆ ಇದ್ದದ್ದು ತಿಳಿದಾಗ ಅವರು ದಿಗಿಲುಗೊಂಡರು. ಈ ಅನಕ್ಷರಸ್ಥ ತಂದೆ, ಮಗನಿಗೆ ಬೈದು ಬುದ್ಧಿ ಹೇಳಲು ಶಿಕ್ಷಕರೊಬ್ಬರ ಸಹಾಯ ಯಾಚಿಸಿದರು. ಆ ಶಿಕ್ಷಕರೂ ಒಳ್ಳೆಯ ಉದ್ದೇಶಗಳೊಂದಿಗೆ ಆಪ್ತಸಮಾಲೋಚನೆ ನಡೆಸಿದರು.

ಆಗ ಆಪ್ತಸಮಾಲೋಚನೆ ಏನೆಂಬುದು ಅಷ್ಟಾಗಿ ತಿಳಿದಿರಲಿಲ್ಲ. ಆದರೆ ಈಗ ಅದು ವೈದ್ಯಕೀಯದ ವಿಶೇಷ ಅಂಗವಾಗಿ ಬೆಳೆದಿದೆ. ಹುಡುಗನಿಗೆ ತನ್ನ ನೆಚ್ಚಿನ ಶಿಕ್ಷಕರ ಬೈಯ್ಗುಳ ಪಥ್ಯವಾಗಲಿಲ್ಲ. ಮತ್ತಷ್ಟು ಖಿನ್ನತೆಯೊಂದಿಗೆ ಮನೆಗೆ ಹಿಂದಿರುಗಿದ ಆತ ಅದಕ್ಕೆ ಪರಿಹಾರ ಕಂಡುಕೊಂಡದ್ದು ವಿಷದಿಂದ.

ತಾರುಣ್ಯಕ್ಕೆ ಕಾಲಿರಿಸುವ ಮಕ್ಕಳು ಬಾಲ್ಯ–ಪ್ರೌಢವಯಸ್ಸಿನ ನಡುವಿನ ಸ್ಥಿತಿಯಲ್ಲಿ ತೊಳಲಾಡುತ್ತಾರೆ. ಇದು ಮಹತ್ತರ ಸಾಧ್ಯತೆಗಳ ಆದರೆ, ಒತ್ತಡ ಮತ್ತು ಕ್ಲೇಷಸ್ಥಿತಿಯ ಅವಧಿ ಕೂಡ. ಶೈಕ್ಷಣಿಕವಾಗಿ ಪ್ರಗತಿ ತೋರಿಸಲು ಮತ್ತು ಜವಾಬ್ದಾರಿ ಪ್ರದರ್ಶಿಸುವ ಒತ್ತಡದಲ್ಲಿ ಅವರಿರುತ್ತಾರೆ. 15–24 ವರ್ಷದ ವಯೋಮಾನದವರ ಸಾವಿನ ಕಾರಣಗಳಲ್ಲಿ ಆತ್ಮಹತ್ಯೆ ಮೂರನೇ ಸ್ಥಾನದಲ್ಲಿದೆ.

ನಮ್ಮ ಆಸ್ಪತ್ರೆಯಲ್ಲಿಯೇ ಆತ್ಮಹತ್ಯೆಯ ಪ್ರಯತ್ನದಿಂದ ಶಿಶುವೈದ್ಯ ತೀವ್ರ ನಿಗಾ ಘಟಕಕ್ಕೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಅಧಿಕ ಸಂಖ್ಯೆಯಲ್ಲಿರುವುದು ಹೆಣ್ಣುಮಕ್ಕಳು. ಹೀಗೆ ದಾಖಲಾದ ಮಕ್ಕಳಲ್ಲಿ ಅತಿ ಚಿಕ್ಕ ವಯಸ್ಸಿನ ಮಗುವೆಂದರೆ ಆರರ ಹರೆಯದ್ದು!

ಮೂರ್ತಿಯನ್ನು ಆಸ್ಪತ್ರೆಗೆ ಕರೆತಂದದ್ದು ಒಂದು ನಸುಕಿನಲ್ಲಿ. ಸಾಮಾನ್ಯವಾಗಿ ಹೆಚ್ಚಿನ ಆತ್ಮಹತ್ಯೆಗಳು ನಡೆಯುವುದು ಮಧ್ಯರಾತ್ರಿಯಿಂದ ಬೆಳಗಿನ ಮೂರು ಗಂಟೆಯ ಅವಧಿಯಲ್ಲಿ ಮತ್ತು ಮನೆಯಲ್ಲಿ, ಕುಟುಂಬದ ಎಲ್ಲಾ ಸದಸ್ಯರು ಗಾಢ ನಿದ್ರೆಯಲ್ಲಿರುವ ಹೊತ್ತಿನಲ್ಲಿ. ಆ ದಿನಗಳಲ್ಲಿ ರಾತ್ರಿಕರ್ತವ್ಯದಲ್ಲಿರುವಾಗ ನನ್ನ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ನಾನು ಅಪಘಾತ ವಿಭಾಗದಲ್ಲಿ ಸರದಿಯಂತೆ ಕುಳಿತುಕೊಳ್ಳುತ್ತಿದ್ದೆವು. ಟೆಂಪೋದಲ್ಲಿ ಮೂರ್ತಿಯನ್ನು 10–15 ಗ್ರಾಮಸ್ಥರ ಗುಂಪು ಕರೆತಂದಿತು. ಮಗುವನ್ನು ಕೂಡಲೇ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ಯಲಾಯಿತು.

ವಿಷಸೇವನೆ ಪ್ರಕರಣಗಳಲ್ಲಿ ನಾವು ಮಾಡುವ ಮೊದಲ ಕೆಲಸವೆಂದರೆ ಮಗುವಿನ ಬಟ್ಟೆಗಳನ್ನು ಕಳಚಿ ದೇಹವನ್ನು ಸ್ವಚ್ಛಗೊಳಿಸುವುದು. ದೇಹದಲ್ಲಿ ಅತಿ ದೊಡ್ಡ ಅಂಗವಾಗಿರುವ ಚರ್ಮ, ವಿಷವನ್ನು ತ್ವರಿತವಾಗಿ ಹೀರಿಕೊಳ್ಳುವುದಲ್ಲದೆ, ಸಾವಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಗುಂಪನ್ನು ಆಸ್ಪತ್ರೆಯ ಹೊರಭಾಗದಲ್ಲಿಯೇ ತಡೆದು ನಿಲ್ಲಿಸುವುದು ಬಹಳ ಕಷ್ಟಕರವಾಗಿತ್ತು.

ಮಗುವಿನ ತಂದೆಯನ್ನು ಕರೆದು, ಗುಂಪು ಹೀಗೆ ಅಡ್ಡಿ ಮಾಡುತ್ತಿದ್ದರೆ ಮಗುವನ್ನು ಪರೀಕ್ಷಿಸಲು ಮತ್ತು ಉಳಿಸಲು ನಮ್ಮಿಂದ ಸಾಧ್ಯವಾಗದು ಎಂದು ಮನದಟ್ಟು ಮಾಡಿದೆವು. ಕೊನೆಗೂ ಗ್ರಾಮಸ್ಥರು ನಮ್ಮ ಕೆಲಸ ಮಾಡಲು ನಮಗೆ ಅನುವು ಮಾಡಿಕೊಟ್ಟರು. ಆಗ ಬಲು ದುಬಾರಿಯಾಗಿದ್ದ ವಿಷಾಪಹಾರಿ ಔಷಧಿಗಳು (ಆ್ಯಂಟಿಡೋಟ್‌) ಆಸ್ಪತ್ರೆಗಳಲ್ಲಿ ಲಭ್ಯವಿರುತ್ತಿರಲಿಲ್ಲ. ವಿದ್ಯಾರ್ಥಿಗಳಲ್ಲೊಬ್ಬರು ಕೂಡಲೇ ಆಸ್ಪತ್ರೆಯ ಮುಂಭಾಗದಲ್ಲಿರುವ ಮೇತ್ರಿ ಮೆಡಿಕಲ್ಸ್‌ಗೆ ಓಡಿದರು.

ದಿನದ 24 ಗಂಟೆಯೂ ತೆರೆದಿರುವ ಹಳೆಯ ಔಷಧ ಅಂಗಡಿಗಳಲ್ಲಿ ಅದು ಕೂಡ ಒಂದು. ಅವರು ತಂದ ಪ್ಯಾಮ್‌ ಅಥವಾ ಪ್ರಾಲಿಡೊಕ್ಷಿಮ್‌ ಅನ್ನು ಮಗುವಿಗೆ ಕೂಡಲೇ ನೀಡಲಾಯಿತು. ಮೂರ್ತಿ ಚಿಂತಾಜನಕ ಸ್ಥಿತಿಗೆ ಜಾರಿದ್ದ. ನಮ್ಮ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ಈ ಮಗುವಿನ ಆರೈಕೆಗೆ ಮುಂದಾಯಿತು. ಆ ರಾತ್ರಿ ಕರ್ತವ್ಯದ ಬಗ್ಗೆ ನನ್ನಲ್ಲಿ ಭೀತಿ ಆವರಿಸಿತು. ಹತಾಶಳಾಗಿ ಬೆಳಗಾಗುವುದನ್ನು ಕಾಯಲಾರಂಭಿಸಿದೆ.

ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಅಲ್ಲಿ ನೆರೆದಿದ್ದ ಗ್ರಾಮಸ್ಥರ ಸಂಖ್ಯೆ ಅದನ್ನೂ ಮೀರಿಸುವಂತಿತ್ತು. ಬೆಳಗಿನ ಹೊತ್ತಿಗೆ ಮಗುವಿನ ಪರಿಸ್ಥಿತಿ ಸುಮಾರಾಗಿ ಸುಧಾರಿಸಿತು. ಮಗುವಿಗೆ ಮತ್ತಷ್ಟು ಆ್ಯಂಟಿಡೋಟ್ ಅಗತ್ಯವಿತ್ತು. ಆ್ಯಂಟಿಡೋಟ್ ಆ ದಿನಗಳಲ್ಲಿ ದುಬಾರಿ. ನಮ್ಮ ಆಸ್ಪತ್ರೆ ಎದುರು ಭಾಗದಲ್ಲಿದ್ದ ವಿಕ್ಟೋರಿಯಾ ಔಷಧ ಅಂಗಡಿಯ ಮಾಲೀಕ ಪ್ರಕಾಶ್, ನನ್ನ ಉತ್ತಮ ಸ್ನೇಹಿತರು. ನಾನು ಖರೀದಿಸುವ ಔಷಧಗಳು ಮತ್ತು ಅದರ ಮೊತ್ತವನ್ನು ಒಂದು ಪುಸ್ತಕದಲ್ಲಿ ದಾಖಲಿಸಿಡಲಾಗುತ್ತಿತ್ತು.

ತಿಂಗಳಿಗೊಮ್ಮೆ ಅವರೊಂದಿಗಿನ ವ್ಯವಹಾರವನ್ನು ನಾನು ಪೂರ್ಣಗೊಳಿಸುತ್ತಿದ್ದೆ. ಕೆಲವು ವರ್ಷಗಳ ಬಳಿಕ ಅವರೂ ಬಡ ರೋಗಿಗಳಿಗೆ ಉಚಿತ ಔಷಧವನ್ನು ನೀಡಲು ಪ್ರಾರಂಭಿಸಿದರು. ೨೫ ಸೀಸೆಯ ಕೊಳವೆಗೂ ಅಧಿಕ ಪ್ಯಾಮ್ ಬೇಕೆಂದು ಕೇಳಿದಾಗ ಅವರು ಅಚ್ಚರಿಗೊಂಡರು. ನಮ್ಮ ಶಿಶುವೈದ್ಯ ಪತ್ರಿಕೆಗಳಲ್ಲಿ ಒಂದರ ಪ್ರಕಾರ, ಪ್ಯಾಮ್‌ ಅನ್ನು ಡ್ರಿಪ್ ಮಾದರಿಯಲ್ಲಿ ನೀಡಬೇಕಿತ್ತು.

ಈ ಚಿಕಿತ್ಸಾ ವಿಧಾನವನ್ನು ನಾವು ನಮ್ಮ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಪ್ರಯತ್ನಿಸಿದ್ದು. ಎನ್. ಮೂರ್ತಿಗೆ ೪೮ ಗಂಟೆಗೂ ಅಧಿಕ ಸಮಯ ಪ್ಯಾಮ್ ಹನಿ ನೀಡಲಾಗಿತ್ತು. ನಮ್ಮಲ್ಲಿ ನಿಜಕ್ಕೂ ಅಚ್ಚರಿಯ ಸಂಭ್ರಮವನ್ನು ಆತ ಮೂಡಿಸಿದ್ದ. ತನ್ನ ಅಂಗಾಂಗಗಳನ್ನು ಚಲಿಸಲು, ನೋವಿಗೆ ಪ್ರತಿಸ್ಪಂದಿಸಲು, ಕಣ್ಣುಗಳನ್ನು ತೆರೆಯಲು ಪ್ರಾರಂಭಿಸಿದ್ದ. ಆತನ ಮೊದಲ ನುಡಿ ‘ನನ್ನ ಮೇಷ್ಟ್ರು ಎಲ್ಲಿ?’
ನಾನು ಹೇಗೆ ಆತನಿಗೆ ಹೇಳಲಿ? ಆತನ ಮೇಷ್ಟ್ರನ್ನು ಕಾರ್ ಪಾರ್ಕಿಂಗ್ ಪ್ರದೇಶದ ಕಲ್ಲಿನ ಕಂಬಕ್ಕೆ ಕಟ್ಟಿಹಾಕಿದ್ದಾರೆ ಎಂದು.

ರೊಚ್ಚಿಗೆದ್ದಿದ್ದ ಜನ ಮೇಷ್ಟ್ರನ್ನು ಎಳೆದುಕೊಂಡು ಬಂದು ಕಟ್ಟಿಹಾಕಿದ್ದರು. ಹೀಗಾಗಿ ಆ ಮಗುವನ್ನು ಉಳಿಸುವ ಹೊಣೆಗಾರಿಕೆಯ ಸಮಯ ನಮ್ಮೆಲ್ಲರನ್ನೂ ಹಲವು ಆತಂಕದ ಕ್ಷಣಗಳಲ್ಲಿ ಕಟ್ಟಿಹಾಕಿತ್ತು. ಆಸ್ಪತ್ರೆಯಲ್ಲಿ ನಡೆಯುವ ಘಟನೆಗಳೆಲ್ಲವನ್ನೂ ಅಪ್ಪಾಜಿಗೆ ತಿಳಿಸುತ್ತಿದ್ದೆ. ಅವರು ನನಗೆ ಹೇಳಿದ್ದು ನಾನು ಆ ಶಿಕ್ಷಕರನ್ನೂ ರಕ್ಷಿಸಬೇಕಿತ್ತು ಎಂದು. ರಾತ್ರಿ ಪಾಳಿ ಮಾಡುವಾಗಲೇ ಕೈಕೊಡಲಿಯನ್ನು ಇಟ್ಟುಕೊಂಡು (ಆನಂದ ವಿಹಾರದ ಮುಂಭಾಗದಲ್ಲಿ ಕಬ್ಬಿನಹಾಲು ಮಾರುವಾತನಿಂದ ಅದನ್ನು ನಾನು ಪಡೆದುಕೊಂಡಿದ್ದೆ) ವಾರ್ಡ್‌ಬಾಯ್ ವೆಂಕಟೇಶ್‌ನ ಸಹಾಯದೊಂದಿಗೆ ಹಗ್ಗದ ಹುರಿಯ ಕಟ್ಟನ್ನು ಕತ್ತರಿಸಿ ಶಿಕ್ಷಕರನ್ನು ಬಿಡುಗಡೆ ಮಾಡಿ ತಪ್ಪಿಸಿಕೊಂಡು ಹೋಗುವಂತೆ ಅವರಿಗೆ ಸೂಚಿಸಿದೆವು.

ಬಂಧಮುಕ್ತರಾದ ಶಿಕ್ಷಕರು ಕಣ್ಣಲ್ಲಿ ನೀರು ತುಂಬಿಕೊಂಡು ದೇಹದಲ್ಲಿ ಶಕ್ತಿ ಇಲ್ಲದಿದ್ದರೂ ಗ್ರಾಮಸ್ಥರ ಭಯದಿಂದಾಗಿ ಓಡಿ ಹೋದರು. ಅಲ್ಲಿ ನಾವೆಲ್ಲರೂ ತಾರುಣ್ಯದ ಹರೆಯದವರೇ ಆಗಿದ್ದರಿಂದ ಪ್ರೊ. ವೀಣಾ ಟಿ.ಎ. ಅವರನ್ನು ಗ್ರಾಮಸ್ಥರಿಗೆ ತಿಳಿಹೇಳಲು ಕೇಳಿಕೊಂಡೆವು. ಒಂದು ವೇಳೆ ಆ ಶಿಕ್ಷಕರಿಗೆ ಏನಾದರೂ ಮಾಡಲು ಪ್ರಯತ್ನಿಸಿದರೆ ಎಲ್ಲರನ್ನೂ ಜೈಲಿಗೆ ಕಳುಹಿಸುವುದಾಗಿ ತೀಕ್ಷ್ಣವಾಗಿ ಎಚ್ಚರಿಸಿದರು. ಅಷ್ಟಕ್ಕೂ ಆ ಶಿಕ್ಷಕರು ಮಾಡಿದ್ದ ತಪ್ಪೇನು? ತನ್ನ ವಿದ್ಯಾರ್ಥಿಗೆ ಚೆನ್ನಾಗಿ ಓದಿ, ತಂದೆಯ ಕನಸು ನನಸು ಮಾಡಲು ಎಂಜಿನಿಯರಿಂಗ್ ಸೀಟು ಪಡೆದುಕೊಳ್ಳುವಂತೆ ಸಲಹೆ ನೀಡಿದ್ದರು. ಚೇತರಿಸಿಕೊಂಡ ಮೂರ್ತಿ ಸಹ ತನ್ನ ಪ್ರೀತಿಯ ಗುರುಗಳನ್ನು ಕಳೆದುಕೊಳ್ಳುವಂಥ ಪರಿಸ್ಥಿತಿ ಉಂಟಾಗಿದ್ದರ ಕುರಿತು ಬೇಸರಪಟ್ಟುಕೊಂಡ.

ಕೆಲವು ವರ್ಷದ ಬಳಿಕ ವಾಣಿ ವಿಲಾಸ ಆಸ್ಪತ್ರೆಯ ನಡುವಿನ ಹಾಲ್‌ನಲ್ಲಿ ವ್ಯಕ್ತಿಯೊಬ್ಬರು ಎದುರಾದರು. ನನ್ನತ್ತ ಓಡಿಬಂದ ಅವರು ‘ಅಕ್ಕಾ, ನಾನು ನೆನಪಿದ್ದೇನೆಯೇ’? ಎಂದರು. ನೆನಪಿಗೆ ಬರಲಿಲ್ಲ. ಕೊನೆಗೆ ಅವರೇ ಕಂಬಕ್ಕೆ ಕಟ್ಟಿಹಾಕಿದ್ದ ಶಿಕ್ಷಕರು, ಮುಂತಾದ ವಿಷಯಗಳನ್ನು ಹೇಳತೊಡಗಿದರು.

ಆ ಕತ್ತಲಲ್ಲಿ (ಅವರ ಮುಖವನ್ನೂ ನಾವು ನೋಡಿರಲಿಲ್ಲ) ನಾವು ಬಂಧಮುಕ್ತಗೊಳಿಸಿ ಬದುಕಿಸಿದ ಶಿಕ್ಷಕರನ್ನು ಭೇಟಿ ಮಾಡಲು ಸಾಧ್ಯವಾಗಿದ್ದು ನನಗೆ ತುಂಬಾ ಸಂತೋಷ ಉಂಟುಮಾಡಿತು. ಆದರೆ ಅವರು ತಮ್ಮ ಕಥೆಯನ್ನು ವಿವರಿಸತೊಡಗಿದರು, ಆ ವ್ಯಕ್ತಿ ಎನ್. ಮೂರ್ತಿ. ತನ್ನ ಪತ್ನಿಯ ಚೊಚ್ಚಿಲ ಹೆರಿಗೆಗೆ ಬಂದಿದ್ದರು. ತಂದೆಯ ಆಸೆಯಂತೆ ಎಂಜಿನಿಯರಿಂಗ್ ಡಿಪ್ಲೊಮಾ ಮುಗಿಸಿದ್ದರು. ಆದರೆ ಮೇಷ್ಟ್ರ ಕಥೆಯೇನು?

‘ಅಕ್ಕಾ, ಆ ದಿನದ ಬಳಿಕ ಮೇಷ್ಟ್ರನ್ನು ಮತ್ಯಾರೂ ನೋಡಲೇ ಇಲ್ಲ. ಇಂದಿಗೂ ನನ್ನೊಳಗೆ ಆ ಘಟನೆಯಿಂದಾಗಿ ತಪ್ಪಿತಸ್ಥ ಭಾವ ಕಾಡುತ್ತಿದೆ. ಮೇಷ್ಟ್ರು ತುಂಬಾ ಒಳ್ಳೆಯವರಾಗಿದ್ದರು. ಒಂದಲ್ಲ ಒಂದು ದಿನ ಅವರನ್ನು ನೋಡುತ್ತೇನೆ ಎಂಬ ನಂಬಿಕೆ ನನಗಿದೆ’.
ಹಿಂದಿನ ದಿನಗಳಲ್ಲಿ ಆತ್ಮಹತ್ಯೆ ತೀರಾ ಅಪರೂಪವಾಗಿತ್ತು. ಹೀಗಾಗಿ ಈ ಕಥೆ ನನಗೆ ಚೆನ್ನಾಗಿ ನೆನಪಿದೆ. ಇಂದು ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳಿಗೆ ಹೆಚ್ಚಿನ ಕಾರಣ ಆತ್ಮಹತ್ಯೆಗಳು.

ಅದರಲ್ಲಿ ಶೇ ೮೩ರಷ್ಟು ಪ್ರಮಾಣ ಹನ್ನೆರಡು ಮತ್ತು ಅದಕ್ಕೂ ಮೇಲ್ಪಟ್ಟ ವಯಸ್ಸಿನ ಹೆಣ್ಣುಮಕ್ಕಳದು. ಆತ್ಮಹತ್ಯೆಗೆ ಕುಟುಂಬದ ಸದಸ್ಯರೊಂದಿಗಿನ ವಿವಾದವೇ ಹೆಚ್ಚು ಕಾರಣ. ಶೇ ೩೦ರಷ್ಟು ಶಾಲೆ ಬಿಟ್ಟವರದ್ದು ಮತ್ತು ಶೇ ೩೩ರಷ್ಟು ಒಡೆದುಹೋದ ಕುಟುಂಬಗಳದ್ದು. ಸಾಂಘಿಕ ಪ್ರಯತ್ನದ ಮೂಲಕ ಬಹುತೇಕ ಈ ಎಲ್ಲಾ ಮಕ್ಕಳನ್ನೂ ನಾವು ಬದುಕಿಸುವಲ್ಲಿ ಯಶಸ್ವಿಯಾಗಿದ್ದೇವೆ.

ಇತ್ತೀಚೆಗೆ (ಸೆ. 23) ೧೩ ವರ್ಷದ ‘ಎಂ’ಳನ್ನು ‘ಎಕ್ಸ್’ ವಿಷಸೇವನೆಯ ಕಾರಣಕ್ಕೆ ದಾಖಲಿಸಲಾಯಿತು. ಆಕೆ ಚೇತರಿಸಿಕೊಂಡು ಮನೆಗೆ ಮರಳುವವರೆಗೂ ನಾವು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದೆವು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಂದೆ ಸತ್ತು ೨೦ ದಿನಗಳಾಗಿತ್ತು. ಎಂಟು ಲಕ್ಷ ವ್ಯಯಿಸಿದ್ದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ತಂದೆ ಅಗಲಿಕೆಯಿಂದ ಖಿನ್ನಳಾದ ಈ ಮಗು, ಕನಸಿನಲ್ಲಿ ತಂದೆ ಬಂದು ತನ್ನನ್ನು ಸೇರಿಕೊಳ್ಳಲು ಕರೆಯುತ್ತಿದ್ದಾರೆ ಎಂದು ಅವರನ್ನು ಸೇರಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿತ್ತು.

ವಿಷಗಳ ಹೆಸರನ್ನು ಉಲ್ಲೇಖಿಸಬಾರದು ಎಂದು ನಾನು ತುಂಬಾ ಎಚ್ಚರಿಕೆಯಿಂದಿದ್ದೇನೆ. ಮಾಧ್ಯಮಗಳು ಆತ್ಮಹತ್ಯೆಯನ್ನು ವೈಭವೀಕರಿಸುವ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಯನ್ನು ವರ್ಣರಂಜಿತವಾಗಿ ಚಿತ್ರಿಸುವುದನ್ನು ಮಾಡಬಾರದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.

ಖಿನ್ನತೆಯತ್ತ ಜಾರುತ್ತಿರುವ ವ್ಯಕ್ತಿಯಲ್ಲಿ ಮೇಲ್ನೋಟಕ್ಕೆ ಕಾಣಿಸುವ ಕೆಲವು ಲಕ್ಷಣಗಳನ್ನು ಕೆಳಗಿನಂತೆ ಪಟ್ಟಿಮಾಡಬಹುದು:
೧. ಮಲಗುವ ವಿಧಾನದಲ್ಲಿ ಬದಲಾವಣೆ: ತಡವಾಗಿ ಮಲಗುವುದು, ಬೇಗನೆ ಏಳುವುದು, ಸರಿಯಾಗಿ ನಿದ್ರಿಸದೆ ಇರುವುದು ಅಥವಾ ನಿರಂತರವಾಗಿ ನಸುನಿದ್ದೆಗೆ ಜಾರುವುದು.
2. ಊಟದ ವಿಧಾನದಲ್ಲಿ ಬದಲಾವಣೆ: ಮಾಮೂಲಿಗಿಂತ ಹೆಚ್ಚಾಗಿ ಅಥವಾ ಕಡಿಮೆ ತಿನ್ನುವುದು ಮತ್ತು ಸುಲಭವಾಗಿ ಗೋಚರಿಸುವಂಥ ರೀತಿಯಲ್ಲಿ ತೂಕ ಕಳೆದುಕೊಳ್ಳುವುದು ಅಥವಾ ಹೆಚ್ಚಾಗಿರುವುದು.
3. ವಿಶ್ರಾಂತಿ ಇಲ್ಲದಿರುವುದು, ಸ್ನೇಹಿತರು ಅಥವಾ ಕುಟುಂಬದವರಿಂದ ದೂರ ಇರುವುದು.
4. ತಪ್ಪಿತಸ್ಥ ಅಥವಾ ಹತಾಶೆಯ ಭಾವ.
5. ಮನೋಭಾವ ಅಥವಾ ನಡತೆಯಲ್ಲಿನ ಬದಲಾವಣೆಗಳು: ತೀವ್ರವಾದ ಚಟುವಟಿಕೆ ಅಥವಾ ಅತಿಯಾದ ನಿವರ್ತನೆ, ಹವ್ಯಾಸ ಮತ್ತು ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಏಕಾಗ್ರತೆ ಕಳೆದುಕೊಳ್ಳುವುದು, ಶಾಲೆಯಲ್ಲಿ ತೊಂದರೆಗಳು.
6. ತುಂಬಾ ಇಷ್ಟದ ವಸ್ತುಗಳತ್ತ ವಿಮುಖತೆ, ಅದರಲ್ಲೂ ಮುಂಚೆ ಖುಷಿಯಿಂದ ಇದ್ದು, ಪಡೆದುಕೊಂಡ ಬಳಿಕ ಖಿನ್ನರಾಗುವುದು. ಬೈಯ್ಗುಳ, ಶಾಲೆಯಲ್ಲಿನ ವೈಫಲ್ಯ, ಕಳೆದುಕೊಳ್ಳುವಿಕೆ (ಸ್ನೇಹಿತ/ಸ್ನೇಹಿತೆ) ಅಥವಾ ಪೋಷಕರ ವೈವಾಹಿಕ ಸಂಬಂಧದ ಮುರಿಯುವಿಕೆಯಂಥ ಒತ್ತಡಗಳು.
7. ಆಲ್ಕೊಹಾಲ್ ಅಥವಾ ಮಾದಕ ವಸ್ತುವಿನ ಚಟ.

ಜನರು ಆತ್ಮಹತ್ಯೆಗೆ ಶರಣಾಗುವುದು ಒತ್ತಡ, ಖಿನ್ನತೆ ಮತ್ತು ಉದ್ವೇಗದ ಸಂದರ್ಭಗಳಲ್ಲಿ. ಏಕೆಂದರೆ, ಅವರಿಗೆ ಇಂಥ ಸಂದರ್ಭಗಳಲ್ಲಿ ಯಾರನ್ನು ಸಂಪರ್ಕಿಸಬೇಕು ಮತ್ತು ಎಲ್ಲಿ ಸಂಪರ್ಕಿಸಬೇಕು ಎನ್ನುವುದು ಗೊತ್ತಿರುವುದಿಲ್ಲ. ಯಾವ ಆಸ್ಪತ್ರೆಗೆ ಹೋಗಬೇಕು ಎಂಬುದು ಅವರಿಗೆ ತಿಳಿದಿರುವುದಿಲ್ಲ ಮತ್ತು ಚಿಕಿತ್ಸೆ ಪಡೆಯಲು ಹಣವನ್ನು ಹೊಂದಿರುವುದಿಲ್ಲ.

ಅಂಥ ವೇಳೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳೇ ಅತ್ಯುತ್ತಮ. ಅಲ್ಲಿ ಈ ಬಗೆಯ ದುರಂತಗಳನ್ನು ತಡೆಯಲು ಕೌನ್ಸೆಲಿಂಗ್ ಸೇವೆಗಳನ್ನು ಪ್ರಾರಂಭಿಸುವ ತುರ್ತು ಅಗತ್ಯವಿದೆ. ಆತ್ಮಹತ್ಯೆಯ ವರ್ತನೆಯು ಬಹು ಆಯಾಮದ್ದು ಮತ್ತು ಅದನ್ನು ತಡೆಯಬಲ್ಲ ಯಾವುದೇ ತಂತ್ರಜ್ಞಾನವಿಲ್ಲ.

ಆದರೆ, ಸಂಕಟದಲ್ಲಿರುವ ಖಿನ್ನತೆಗೆ ಒಳಗಾದ ಮನಸುಗಳನ್ನು ತಲುಪುವುದು ಎಲ್ಲಾ ತಂತ್ರಜ್ಞಾನಗಳನ್ನೂ ಮೀರಿದ್ದು. ಸಮಾಜ ಎಚ್ಚೆತ್ತುಕೊಳ್ಳಬೇಕು ಮತ್ತು ಜೀವಗಳನ್ನುಳಿಸುವ ಅಗತ್ಯ ಮಾರ್ಗಗಳನ್ನು ಗುರುತಿಸಬೇಕು. ಇಂದು ನಾವೆಲ್ಲರೂ ಒಂದು ಒಂಟಿ ದ್ವೀಪದಲ್ಲಿ ಜೀವಿಸುತ್ತಿದ್ದೇವೆ. ಇಲ್ಲಿನ ಕುಟುಂಬಗಳು ಮತ್ತು ಗೆಳೆಯರ ಬಳಗದ ನಡುವೆ ಯಾವುದೇ ಸಂವಹನ ಅಥವಾ ವ್ಯಕ್ತಿಗಳ ನಡುವಿನ ಸಂಬಂಧಗಳಿಲ್ಲ. ಸಮುದಾಯವು ತುರ್ತಾಗಿ ಮನುಷ್ಯತ್ವದ ಮರು ಆವಿಷ್ಕಾರ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT