ಅಂತರ್ರಾಷ್ಟ್ರೀಯ ಖ್ಯಾತಿಯ ಕೃಷಿ ತಜ್ಞ ನಾರಾಯಣರೆಡ್ಡಿ ಅವರ ಬದುಕು ಪಾರದರ್ಶಕ. ಶ್ರೀಗಂಧದಂತೆ ತನ್ನನ್ನು ತೇಯ್ದುಕೊಂಡು ಜಗತ್ತಿಗೆ ಸುಗಂಧವನ್ನು ನೀಡುವ ಕಾಯಕ ಅವರದು. ತಮ್ಮ ಎಂಬತ್ತನೆಯ ವಯಸ್ಸಿನಲ್ಲಿ ಹದಿನೆಂಟರ ಹರೆಯದವರನ್ನು ನಾಚಿಸುವ ಉತ್ಸಾಹ.
ಮೊನ್ನೆ ಅವರೊಂದಿಗೆ ಒಂದೆರಡು ಗಂಟೆಗಳ ಕಾಲ ಕಳೆದಾಗ ಅವರು ಹೇಳಿದ ಒಂದು ಘಟನೆ ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತಿತು. ಅದು ಪ್ರಪಂಚಕ್ಕೊಂದು ಮಾದರಿಯಾಗುತ್ತದೆಂದು ಎನ್ನಿಸಿತು. ನಾರಾಯಣರೆಡ್ಡಿ ದಂಪತಿ ಹಾಗೂ ಸ್ನೇಹಿತರು ರೈಲಿನಲ್ಲಿ ಪ್ರವಾಸ ಮಾಡುತ್ತಿದ್ದರು. ರೈಲಿನಲ್ಲಿ ಊಟಕ್ಕೆಂದು ಅವರ ಶ್ರೀಮತಿ ಹೋಳಿಗೆ, ಅವರೆಕಾಳು ಹುಳಿ, ಅನ್ನ ಮಾಡಿ ತಂದಿದ್ದರು. ಆಕೆ ಅನ್ನಪೂರ್ಣೆಯ ಪ್ರತಿಮೂರ್ತಿ. ಎಲ್ಲರೂ ಹೊಟ್ಟೆ ತುಂಬ ತಿಂದರೂ ಇನ್ನೂ ಹತ್ತು ಜನಕ್ಕೆ ಆಗುವಷ್ಟು ಮಿಕ್ಕಿತ್ತು. ಆಗಲೇ ರಾತ್ರಿಯಾಗುತ್ತಿದೆ. ಅಷ್ಟು ಒಳ್ಳೆಯ ಪದಾರ್ಥ ಕೆಟ್ಟು ಹೋಗುತ್ತದಲ್ಲ ಎಂಬ ದುಃಖ ಅವರನ್ನು ಕಾಡಿತು.
ಇವರಿದ್ದದ್ದು ಕಾಯ್ದಿರಿಸಿದ ಬೋಗಿಯಾಗಿದ್ದರಿಂದ ಮತ್ತೆ ಬೇರೆ ಯಾರೂ ಬರುವಂತಿರಲಿಲ್ಲ. ಯಾರಾದರೂ ಊಟ ದೊರಕದೆ ಇದ್ದವರು ಸಿಕ್ಕಾರೆಯೇ ಎಂದು ಹುಡುಕಿಕೊಂಡು ನಾರಾಯಣರೆಡ್ಡಿ ಅವರು ಬೇರೆ ಬೋಗಿಗಳಿಗೆ ಹೊರಟರು. ಮುಂದೆ ಒಂದೆರಡು ಬೋಗಿಗಳಲ್ಲಿ ಜನಜಾತ್ರೆ. ಅವು ಮೊದಲೇ ಕಾದಿರಿಸದಿದ್ದ ಬೋಗಿಗಳು. ಅಲ್ಲಿ ಒಂದೊಂದರಲ್ಲಿ ನೂರು ಜನ ತುಂಬಿದ್ದಾರೆ. ಬಹಳಷ್ಟು ಜನ ನಿಂತೇ ಇದ್ದಾರೆ. ರೆಡ್ಡಿಯವರು ಗಮನಿಸಿದರು, ಅವರಲ್ಲಿ ಕೆಲವರು ತರುಣ, ತರುಣಿಯರು. ಅವರೆಲ್ಲ ಪೊಲೀಸ್ ಇಲಾಖೆಯ ಸ್ಥಾನಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಕಟ್ಟಲು ಬಂದವರು. ತುಂಬ ಬಡವರಂತೆ ಕಂಡರು. ಬಹುಶಃ ಅವರು ಊಟ ಮಾಡಿರಲಿಕ್ಕಿಲ್ಲ ಎಂದುಕೊಂಡು ಅವರನ್ನು, ‘ಊಟ ಮಾಡಿದ್ದೀರೇನಪ್ಪಾ?’ ಎಂದು ಕೇಳಿದರು. ಅವರು ಮಾಡಿದ್ದೇವೆ ಎಂಬಂತೆ ತಲೆ ಅಲ್ಲಾಡಿಸಿದರು.
ಇವರು, ‘ಅಲ್ಲಪ್ಪಾ, ನಿಮ್ಮ ಮುಖ ನೋಡಿದ್ರೆ ಊಟ ಆಗಿಲ್ಲ ಎಂದು ಗೊತ್ತಾಗುತ್ತದೆ. ಬನ್ನಿ, ನಾವು ತಂದಿದ್ದರಲ್ಲಿ ತುಂಬ ಊಟ ಉಳಿದಿದೆ. ಒಳ್ಳೇ ಪದಾರ್ಥ ಕೆಟ್ಟು ಹೋಗಬಾರದಲ್ಲವೇ?’ ಎಂದು ಹೇಳಿ ಒಪ್ಪಿಸಿಕೊಂಡು ತಮ್ಮ ಬೋಗಿಗೆ ಕರೆದು ತಂದರು. ಅವರನ್ನೆಲ್ಲ ಕೂಡ್ರಿಸಿ ಪ್ರೀತಿಯಿಂದ ಬಡಿಸಿದರು. ಪಾಪ! ಅವರಿಗೆ ಮಧ್ಯಾಹ್ನದ ಊಟವೂ ಸಿಕ್ಕಿರಲಿಕ್ಕಿಲ್ಲ. ಮಕ್ಕಳು ಚೆನ್ನಾಗಿ ಊಟ ಮಾಡಿದರು. ನಂತರ ಅಲ್ಲಿಗೆ ಟಿಕೆಟ್ ಪರೀಕ್ಷಕ ಬಂದಾಗ, ಇವರು, ‘ಸಾರ್, ಮಕ್ಕಳು ಇಲ್ಲಿಯೇ ಕೆಳಗೆ ಮಲಗಲಿ ಬಿಡಿ. ಪಾಪ! ಅಲ್ಲಿ ಬೆಳಗಿನವರೆಗೆ ಹೇಗೆ ನಿಂತಾರು?’ ಎಂದಾಗ ಆತ, ‘ಹಾಗಲ್ಲ ಅವರ ಬಳಿ ರಿಸರ್ವೇಶನ್ ಇಲ್ಲವಲ್ಲ?’ ಎಂದ.
ಇವರು, ‘ಬಿಡಿ ಸಾರ್, ಅವರ ಬಳಿ ಟಿಕೆಟ್ ಇದೆ. ಅವರೇನೂ ಕಳ್ಳರಲ್ಲ. ಅಷ್ಟಕ್ಕೂ ನಾವೇ ತಾನೇ ತಕರಾರು ಮಾಡಬೇಕು?’ ಎಂದು ಬೋಗಿಯಲ್ಲಿ ಸುತ್ತಮುತ್ತ ಇದ್ದವರನ್ನು ಒಪ್ಪಿಸಿ ಅಲ್ಲಿಯೇ ಕೆಳಗೆ ಮಲಗುವಂತೆ ವ್ಯವಸ್ಥೆ ಮಾಡಿದರು. ಆ ಟಿ.ಸಿ ಕೂಡ ದೊಡ್ಡ ಮನಸ್ಸಿನವನು, ಒಪ್ಪಿಕೊಂಡು ಹೋದ.
ಈ ಮಕ್ಕಳ ಕಣ್ಣಲ್ಲಿ ನೀರು, ‘ಸಾರ್, ನಮಗೆ ಹೊಟ್ಟೆ ತುಂಬ ಊಟ ಕೊಟ್ಟು ಮಲಗಲು ವ್ಯವಸ್ಥೆ ಮಾಡಲು ನೀವು ದೇವರಂತೆ ಬಂದಿರಿ’ ಎಂದರು.
ಆಗ ರೆಡ್ಡಿಯವರು, ‘ಮಕ್ಕಳೇ, ದಯವಿಟ್ಟು ಈ ಘಟನೆಯನ್ನು ಮರೆಯಬೇಡಿ. ದೇವರ ದಯದಿಂದ ನೀವು ಪರೀಕ್ಷೆ ಪಾಸಾಗಿ ಪೊಲೀಸ್ ಇಲಾಖೆಯನ್ನು ಸೇರಿದರೆ ಮನುಷ್ಯತ್ವವನ್ನು ಕಳೆದುಕೊಳ್ಳದೇ ಪ್ರೀತಿಯಿಂದ, ಪ್ರಾಮಾಣಿಕತೆಯಿಂದ ಜನರ ಸೇವೆ ಮಾಡಿ, ನಿಮ್ಮ ಬದುಕು ಬಂಗಾರವಾಗುತ್ತದೆ’ ಎಂದರು.
ಮಕ್ಕಳ ಕಣ್ಣಲ್ಲಿ ಮಿನುಗಿದ ಹನಿನೀರು, ತುಟಿಯಲ್ಲಿ ಹೊಳೆದ ಆತ್ಮವಿಶ್ವಾಸದ ಮಂದಹಾಸ, ಅವರು ಹಾಗೆಯೇ ಆಗುತ್ತಾರೆಂಬ ಭರವಸೆ ನೀಡಿತು. ರೆಡ್ಡಿಯವರು ಹೇಳುತ್ತಾರೆ, ‘ನಮ್ಮ ಯುವಕರದು ಯಾವುದೂ ತಪ್ಪಿಲ್ಲ, ತಪ್ಪೆಲ್ಲ ನಮ್ಮದೇ, ಹಿರಿಯರದು. ನಾವು ಅತ್ಯಂತ ಪ್ರೀತಿಯಿಂದ, ಪ್ರಾಮಾಣಿಕತೆಯಿಂದ ಹೇಳಿದರೆ ಅವರನ್ನು ಖಂಡಿತವಾಗಿ ಪರಿವರ್ತಿಸಬಹುದು’. ನನಗೂ ಅದರಲ್ಲಿ ಖಚಿತವಾದ ನಂಬಿಕೆ ಇದೆ. ಮಕ್ಕಳನ್ನು ತಮ್ಮ ಪ್ರೀತಿಯ ಸ್ಪರ್ಶದಿಂದ ಬದಲಾಯಿಸುವ ಶಕ್ತಿಯನ್ನು ಪಡೆದ ನಾರಾಯಣರೆಡ್ಡಿ ಅವರಂತಹ ಹಿರಿಯರ ಸಂಖ್ಯೆ ಸಾವಿರವಾಗಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.