ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಲಾಲಸೆ: ನಟನಟಿಯರ ದುರಾಸೆ

Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ದೇಶದ ತುಂಬಾ ಈಗ ಚುನಾವಣಾ ಕದನ, ವಾಕ್ಸಮರ ಇತ್ಯಾದಿಗಳ ಭರಾಟೆ ಜೋರಾಗಿಯೇ ಆರಂಭವಾಗಿದೆ. ವಿಧಾನಸಭಾ ಚುನಾವಣೆಯೇ ಆಗಬಹುದು, ಲೋಕಸಭಾ ಚುನಾವಣೆಯೇ ಆಗಿರಬಹುದು, ಯಾವುದೇ ನಡೆದರೂ ನಮಗೂ ಒಂದು ಪಾಲಿರಲಿ ಎಂದು ಚಲನಚಿತ್ರರಂಗದ ಕಲಾವಿದರು ನುಗ್ಗುತ್ತಾರೆ.

ದಕ್ಷಿಣ ಭಾರತದಲ್ಲಿ ಅದರಲ್ಲೂ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಚಲನಚಿತ್ರ ನಟ, ನಟಿಯರ ಪ್ರಭಾವಳಿ ಪರಿಣಾಮ ಬೀರಿ, ಸಿನಿಮಾ ನಟನಟಿಯರು ಮುಖ್ಯಮಂತ್ರಿಗಳಾಗಿರಬಹುದು. ಆದರೆ ಇದೇ ಮ್ಯಾಜಿಕ್ಕನ್ನೇ ಉತ್ತರಭಾರತದಲ್ಲೂ ಪ್ರಯೋಗಿಸಬೇಕೆಂಬ ರಾಜಕೀಯ ಪಕ್ಷಗಳ ಹಟ ಅಥವಾ ರಾಜಕೀಯ ಏಣಿಯನ್ನೇರಿ ಅಧಿಕಾರ ಹಿಡಿಯಬೇಕೆಂಬ ಹೀರೋಗಳ ಆಸೆ ಈಡೇರಿಲ್ಲ.

ಉತ್ತರಭಾರತದಲ್ಲಿ ಸಿನಿಮಾನಟರ ಆಟ ನಡೆಯುತ್ತಿಲ್ಲ. ಅಮಿತಾಭ್‌ ಬಚ್ಚನ್, ರಾಜೇಶ್‌ ಖನ್ನಾ, ಸುನಿಲ್‌ ದತ್, ಧರ್ಮೇಂದ್ರ, ಗೋವಿಂದ ಎಲ್ಲರಿಗೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ ರಾಜಕೀಯ ಪ್ರವೇಶಿಸಿ ಇವರೆಲ್ಲರೂ ವಿಫಲರಾಗಿದ್ದಾರೆ.

ರಾಜಕೀಯ ಪ್ರವೇಶಿಸಬೇಕೆಂದು ಚಲನಚಿತ್ರ ನಟನಟಿಯರು ಹಂಬಲಿಸುತ್ತಾರೋ, ನಟ–ನಟಿಯರು ನಮ್ಮ ಪಕ್ಷಕ್ಕೆ ಬರಲಿ ಎಂದು ರಾಜಕೀಯ ಪಕ್ಷಗಳೇ ಹಾತೊರೆಯುತ್ತವೋ ಹೇಳುವುದು ಕಷ್ಟ. ಇದು ಒಂದು ರೀತಿಯಲ್ಲಿ ‘ಅನ್ನ ಹಳಸಿತ್ತು, ನಾಯಿ ಹಸಿದಿತ್ತು’ ಎನ್ನುವ ರೀತಿಯಲ್ಲಿನ ಸಂಬಂಧ. ತಮಿಳುನಾಡಿನಲ್ಲಿ ಐವತ್ತರ ದಶಕದಿಂದಲೇ ಚಲನಚಿತ್ರ ರಂಗದವರೆಲ್ಲಾ ರಾಜಕೀಯಕ್ಕೆ ನುಗ್ಗಿ, ಪ್ರಾದೇಶಿಕ ಪಕ್ಷ ರಚಿಸಿಕೊಂಡದ್ದು ಇತಿಹಾಸ.

ಆ ಸಮಯದಲ್ಲಿ ನಡೆದ ಮಹಾಚುನಾವಣೆಯ ಸಮಯದಲ್ಲಿ ಚಲನಚಿತ್ರರಂಗದವರು ಕಿರುಚಿತ್ರವೊಂದನ್ನು ತಯಾರಿಸಿದ್ದರು. ಅದು ಟೂರಿಂಗ್ ಟಾಕೀಸುಗಳಲ್ಲಿ ಪ್ರದರ್ಶನಗೊಂಡು ಜನರು ಅದರಿಂದ ಪ್ರಭಾವಿತರಾಗಿದ್ದರು. ಈ ತಂತ್ರದಿಂದ ಆಕರ್ಷಿತರಾದ ಕಾಂಗ್ರೆಸ್‌ನವರು ‘ಉತ್ತರ ಹಿಂದೂಸ್ತಾನ’ದಲ್ಲೂ ಇಂತಹ ಕಿರುಚಿತ್ರಗಳನ್ನು ತಯಾರಿಸಿ ಪ್ರದರ್ಶಿಸಬೇಕೆಂದು ಆಶಿಸಿದರು. ಕಾಂಗ್ರೆಸ್ ತನ್ನ ಮನದಿಂಗಿತವನ್ನು ಹೊರಗೆಡವಿದ್ದೇ ತಡ, ಇಂತಹ ಕಿರುಚಿತ್ರಗಳನ್ನು ತಯಾರಿಸಿಕೊಡುವುದಾಗಿ ಅಂದಿನ ಹೆಸರಾಂತ ಐದು ಚಿತ್ರತಯಾರಿಕಾ ಸಂಸ್ಥೆಗಳು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಚೇರಿಯ ಮುಂದೆ ಬಂದು ನಿಂತವು.

ಸಿನಿಮಾಲೋಕದವರು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಲು ಹಾತೊರೆಯುವ ಮನಸ್ಥಿತಿ ಅಂದಿನ ದಿನಗಳಲ್ಲೇ ರೂಢಿಯಲ್ಲಿತ್ತು ಎನ್ನುವುದನ್ನು ಗಮನಿಸಬಹುದು. ೨೦೦೯ರ ಚುನಾವಣೆಯಲ್ಲಿ ಕಾಂಗ್ರೆಸ್ ‘ಜೈಹೋ’ ಹಾಡನ್ನು ಪಕ್ಷದ ಪ್ರಚಾರ ಗೀತೆಯನ್ನಾಗಿಸಿಕೊಂಡಿತ್ತು.

ಚುನಾವಣಾ ದಿನಾಂಕ ಪ್ರಕಟಿಸುತ್ತಿದ್ದಂತೆಯೇ ನಟ–ನಟಿಯರು ರಾಜಕೀಯ ಪಕ್ಷ ಸೇರಲು ನಾಮುಂದು, ತಾಮುಂದು ಎಂದು ನುಗ್ಗುತ್ತಾರೆ. ಪಕ್ಷದ ಕಚೇರಿಯಲ್ಲಿ ಅಂತಹವರನ್ನು ಬರಮಾಡಿಕೊಳ್ಳಲೆಂದೇ ಪಕ್ಷದ ಅಧ್ಯಕ್ಷರು ಕಾದು ಕುಳಿತಿರುತ್ತಾರೆ. ಸಾಮಾನ್ಯವಾಗಿ ಬೇಡಿಕೆ ಕಳೆದುಕೊಂಡ ನಟ, ನಟಿಯರಷ್ಟೇ ಈ ರೀತಿ ಪಕ್ಷದ ಕಚೇರಿಗೆ ಎಡತಾಕುತ್ತಾರೆ ಎನ್ನುವುದನ್ನು ಗಮನಿಸಿ. ಇಂತಹ ನಟನಟಿಯರಿಗೆ ಯಾವುದಾದರೂ ಒಂದು ಕ್ಷೇತ್ರವಿದೆಯೇ ಎಂದರೆ ಅದೂ ಇಲ್ಲ. ಅಭಿಮಾನಿಗಳ ಸಂಘವಂತೂ ಇಲ್ಲವೇ ಇಲ್ಲ. ಇಂತಹವರಿಂದ ಪಕ್ಷ ಎಷ್ಟು ಮತ ಗಳಿಸಲು ಸಾಧ್ಯ? ಆದರೂ ಎಲ್ಲ ಪಕ್ಷಗಳೂ ‘ನಾಯಕಿಯರಿಗಾಗಿ’ ಬಾಯಿ ಬಾಯಿ ಬಿಡುತ್ತಿವೆ.

ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದ ನಟಿ ರಕ್ಷಿತಾ ಅವರ ಕತೆಯನ್ನೇ ಗಮನಿಸಿ. ಶ್ರೀರಾಮುಲು ಬಿಎಸ್‌ಆರ್ ಕಾಂಗ್ರೆಸ್ ರಚಿಸಿದಾಗ ಅವರು ಆ ಪಕ್ಷದ ಉಪಾಧ್ಯಕ್ಷರಾದರು. ಆ ಪಕ್ಷ ರಾಜಕೀಯವಾಗಿ ಏಳುಬೀಳು ಕಾಣತೊಡಗಿದಾಗ, ರಕ್ಷಿತಾ ಜೆಡಿಎಸ್‌ಗೆ ಹಾರಿದರು. ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಅಲ್ಲಿ ಅದು ಸಿಗುವುದಿಲ್ಲ ಎಂದು ಖಾತ್ರಿಯಾಗುತ್ತಿದ್ದಂತೆಯೇ ಬಿಜೆಪಿ ಮನೆ ಬಾಗಿಲು ತಟ್ಟಿದರು. ಲವಲೇಶವೂ ರಾಜಕೀಯ ಸಿದ್ಧಾಂತವಿಲ್ಲದ, ಯಾವುದೇ ಬದ್ಧತೆಯೂ ಇಲ್ಲದ ನಟಿಯರನ್ನು ಇಟ್ಟುಕೊಂಡು ರಾಜಕೀಯ ಪಕ್ಷಗಳು ಏನು ಸಾಧನೆ ಮಾಡುತ್ತವೆಯೋ ಅರ್ಥವಾಗುವುದಿಲ್ಲ.

ಪೂಜಾಗಾಂಧಿ ಅವರಂತೂ ರಕ್ಷಿತಾಗೆ ಪೈಪೋಟಿ ನೀಡುವಂತೆ ಒಂದೇ ವರ್ಷದಲ್ಲಿ ಮೂರು ಪಕ್ಷ ಬದಲಿಸಿದರು! ಲೋಕಸಭಾ ಉಪಚುನಾವಣೆ ಸಮಯದಲ್ಲಿ ಕೆಲವು ನಟರು ಒಂದೊಂದು ಕ್ಷೇತ್ರದಲ್ಲಿ ಒಂದೊಂದು ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಅಪ್ರಬುದ್ಧತೆ ಪ್ರದರ್ಶಿಸಿದ್ದು ಚುನಾವಣಾ ಪದ್ಧತಿಯ ಅಣಕದಂತಿತ್ತು.

ಆದರೂ ಸಿನಿಮಾ ನಟರನ್ನು ರಾಜಕೀಯ ಪಕ್ಷದೊಳಗೆ ಬಳಸಿಕೊಳ್ಳುವ ಕೆಲಸ ಚುನಾವಣೆಯಿಂದ ಚುನಾವಣೆಗೆ ಹೆಚ್ಚಾಗುತ್ತಿದೆ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಸಿನಿಮಾ ತಾರೆಯರಿಗೆ ಮಣೆ ಹಾಕಿವೆ. ಇದೀಗ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಭಾರೀ ಸಂಚಲನದೊಂದಿಗೆ ಕಣಕ್ಕಿಳಿದಿರುವ ಆಮ್‌ ಆದ್ಮಿ ಪಕ್ಷದಲ್ಲೂ ಸಿನಿಮಾ ನಟಿಯಿದ್ದಾರೆ! ಚಂಡೀಗಢದಿಂದ ಎಎಪಿ ಅಭ್ಯರ್ಥಿಯಾಗಿರುವ ಗುಲ್‌ಪನಾಗ್ ನಟಿ ಮತ್ತು ಮಾಡೆಲ್.

ತೃಣಮೂಲ ಕಾಂಗ್ರೆಸ್ ಕೂಡ ನಟ, ನಟಿಯರನ್ನು ಕಣಕ್ಕಿಳಿಸಿದೆ. ನಟಿ ಮೂನ್‌ಮೂನ್ ಸೇನ್ ಬಂಗಾಳದ ಬಂಕೂರ ಲೋಕಸಭಾ ಕ್ಷೇತ್ರದಿಂದ, ಬಂಗಾಳಿ ನಟ ಜಾಯ್‌ಬ್ಯಾನರ್ಜಿ ನವದೆಹಲಿಯಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಗ್ಲಾಮರ್ ಗರ್ಲ್ ರಾಖಿ ಸಾವಂತ್ ಕತೆ ಇನ್ನೂ ಸ್ವಾರಸ್ಯಕರವಾಗಿದೆ. ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗಿರುವ ನರೇಂದ್ರ ಮೋದಿಯವರ ಪರಮಭಕ್ತೆ ರಾಖಿಸಾವಂತ್. ಪದೇಪದೇ ಬಿಜೆಪಿ ಕಚೇರಿಗೆ ಬಂದು ಕುಳಿತುಕೊಳ್ಳುತ್ತಿದ್ದಳು. ‘ನಾನು ಬಿಜೆಪಿಯ ಮಗಳು’ ಎಂದು ಬಿಜೆಪಿ ಕಚೇರಿಯಲ್ಲಿ ಕುಳಿತು ಘೋಷಿಸಿಕೊಂಡಳು. ಗ್ಲಾಮರ್ ಇದೆ, ಪಡ್ಡೆ ಹುಡುಗರು ಈ ಹುಡುಗಿಯ ಸೆರಗು ಹಿಡಿದುಕೊಂಡು ಪಕ್ಷಕ್ಕೆ ಬಂದರೆ ಬರಲಿ ಎಂದು ಬಿಜೆಪಿ ಪಶ್ಚಿಮ ಬಂಗಾಳದ ಶ್ರೀರಾಂಪುರದ ಲೋಕಸಭಾ ಕ್ಷೇತ್ರದಲ್ಲಿ ರಾಖಿಗೆ ಟಿಕೆಟ್ ನೀಡಿತು.

‘ನನಗೆ ಬಂಗಾಳಿ ಬರುವುದಿಲ್ಲ, ಹಿಂದಿ ಮತ್ತು ಮರಾಠಿ ಭಾಷೆ ಮಾತ್ರ ಗೊತ್ತು, ಅಲ್ಲಿ ಹೋಗಿ ಏನು ಮಾಡ್ಲಿ?’ ಎಂದು ರಾಖಿ ಸಾವಂತ್ ಟಿಕೆಟ್ ನಿರಾಕರಿಸಿದಳು. ಈಗ ಮುಂಬೈ ವಾಯವ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾಳೆ.

ಹಿಂದಿ ಚಲನಚಿತ್ರಗಳಿಗಿಂತ ದಕ್ಷಿಣ ಭಾರತದ ಚಿತ್ರಗಳಲ್ಲೇ ಹೆಚ್ಚಾಗಿ ಅಭಿನಯಿಸಿರುವ ನಟಿ ನಗ್ಮಾ, ಮೀರತ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ. ೨೦೦೪ರಿಂದ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತಾ, ರಾಜ್ಯಸಭೆಗೆ ಹಿಂಬಾಗಿಲ ಮೂಲಕ ಪ್ರವೇಶ ಪಡೆಯಲು ಕಾದಿದ್ದ ನಗ್ಮಾ ಈಗ ಒಲ್ಲದ ಮನಸ್ಸಿನಿಂದ ಮತದಾರನ ಮುಂದೆ ಬಂದು ನಿಂತಿದ್ದಾರೆ. ಸೋಮವಾರ ಪ್ರಚಾರ ಸಭೆಗೆ ನಗ್ಮಾ ಆಗಮಿಸುತ್ತಿದ್ದಾಗ, ಕಾಂಗ್ರೆಸ್ ಶಾಸಕನೊಬ್ಬ ಅವರ ಕಿವಿಯಲ್ಲಿ ಏನನ್ನೋ ಹೇಳುವಂತೆ ಸಮೀಪಿಸಿ ಚುಂಬಿಸಿದ್ದು, ನಟಿಯರ ಬಗ್ಗೆ ಸಮಾಜದಲ್ಲಿ ಪುರುಷರಿಗೆ ಯಾವ ರೀತಿಯ ಭಾವನೆಗಳಿವೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ.

ಜಯಾಬಚ್ಚನ್ ಅವರಿಗೂ ಇದೇ ರೀತಿ ಸಿನಿಮಾ ನಟಿಗೇನು ಗೊತ್ತು ಎನ್ನುವಂತೆ ಗೃಹ ಸಚಿವರೇ ಮಾತನಾಡಿದ್ದರು. ರಮ್ಯ ಅವರು ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದಾಗ, ಅವರ ವೈಯಕ್ತಿಕ ವಿಚಾರಗಳನ್ನು ಕೆದಕಿದ್ದೂ ಕೂಡ ಇಂತಹ ಮನೋಭಾವದ ಒಂದು ಮುಖವಾಗಿಯೇ ಕಾಣುತ್ತದೆ.

ಬಾಲಿವುಡ್ ನಟಿಯಾಗಬೇಕು ಎಂಬ ಆಸೆಯಿಟ್ಟುಕೊಂಡಿರುವ ಮಾಡೆಲ್ ಮೇಘನಾ ಪಟೇಲ್ ಬಿಜೆಪಿ ತೆಕ್ಕೆಯಲ್ಲಿದ್ದಾಳೆ. ಕಮಲದ ಹೂಗಳ ಹಾಸಿಗೆಯ ಮೇಲೆ ಬಿಕಿನಿಯಲ್ಲಿ ಮಲಗಿರುವ ಮೇಘನಾ ಕೈಯಲ್ಲಿ ಮೋದಿ ಚಿತ್ರವಿರುವ ಬಿಜೆಪಿಗೆ ಮತಹಾಕಿ ಎನ್ನುವ ಪೋಸ್ಟರ್ ಇದೆ! ಈ ಚಿತ್ರ ಬ್ಲಾಗ್‌ನಲ್ಲಿ ಹರಿದಾಡುತ್ತಿದೆ. ರಾಜಕೀಯ ಪಕ್ಷಗಳು ನಟಿಯರನ್ನು ಬಳಸಿಕೊಳ್ಳುವ ಮತ್ತೊಂದು ಸ್ಯಾಂಪಲ್ ಇದು.

ಹೇಮಾಮಾಲಿನಿಯವರನ್ನು ಮಥುರಾದಿಂದ ಬಿಜೆಪಿ ಕಣಕ್ಕಿಳಿಸಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಬಿಜೆಪಿಯಿಂದಲೇ ನಾಮಕರಣವಾಗಿದ್ದ ಹೇಮಾಮಾಲಿನಿ ಇದೇ ಮೊದಲ ಬಾರಿಗೆ ಜನರಿಂದ ಮತ ಕೇಳುತ್ತಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ಕರ್ನಾಟಕಕ್ಕೆ ಏನು ಮಾಡಿದರು ಅನ್ನುವುದು ಇನ್ನೂ ತಿಳಿಯಬೇಕಿದೆ.

ಅಮರ್‌ಸಿಂಗ್ ಎಲ್ಲೋ ನಾನಲ್ಲೇ ಎನ್ನುವ ಜಯಪ್ರದಾ ಈ ಬಾರಿ ಲೋಕದಳ (ಆರ್‌ಜೆಡಿ) ಪಕ್ಷದಿಂದ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ. ಸಂಪೂರ್ಣ ಹವಾನಿಯಂತ್ರಿತ ಆಡಿ ಕಾರಿನಲ್ಲಿ ಹಾಗೂ ಫಾರ್ಚೂನರ್ ಕಾರಿನಲ್ಲಿ ಸಣ್ಣಸಣ್ಣ ಹಳ್ಳಿಗಳಿಗೆ ಆಗಮಿಸಿ, ಕಾರಿನಿಂದ ಇಳಿಯದೇ ಕಿಟಿಕಿಯಿಂದಲೇ ಕೈ ಬೀಸಿ ಹೋಗುತ್ತಿರುವ ಈ ನಟಿಯರಿಂದ ಬಿಸಿಲಿನಲ್ಲಿ ಒಣಗುತ್ತಾ, ಬರಿಗಾಲಲ್ಲಿ ನಡೆಯುತ್ತಾ ಪ್ರತಿದಿನದ ಊಟಕ್ಕೂ ತಿಣಕುತ್ತಿರುವ ಶ್ರೀಸಾಮಾನ್ಯನ ಉದ್ದಾರ ಹೇಗೆ ಸಾಧ್ಯ?

ಭುವನೇಶ್ವರದಲ್ಲಿ ಬಿಜೆಡಿಯ ನವೀನ್‌ ಪಟ್ನಾಯಕ್ ಅವರಿಗೆ ಕೊಳಚೆ ಪ್ರದೇಶದ ನಿವಾಸಿಗಳ ಬೆಂಬಲವಿಲ್ಲ. ಆದರೆ, ವರ್ಷಗಳ ಹಿಂದೆ ನಡೆದ ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಡಿ ಅಧಿಕಾರ ಹಿಡಿಯಲೇಬೇಕಿತ್ತು. ಹೀಗಾಗಿ ಅವರು ಮಾಡಿದ ತಂತ್ರ ಸಿನಿಮಾನಟರನ್ನು ಪ್ರಚಾರಕ್ಕೆ ಕರೆತರುವುದು. ಇಂದು ಒಡಿಶಾದಲ್ಲಿ ಸೂಪರ್‌ಸ್ಟಾರ್ ಆಗಿರುವ ಅನುಭವ್, ಹಿಂದಿನ ದಶಕಗಳ ಖ್ಯಾತನಟ ಉತ್ತಮ್‌ ಮೊಹಾಂತಿ ಹಾಗೂ ನಟ, ಸಂಸತ್‌ ಸದಸ್ಯ ಸಿದ್ಧಾಂತ್ ಮಹೋಪಾತ್ರ ಅವರು ನಗರಪಾಲಿಕೆ ಚುನಾವಣಾ ಪ್ರಚಾರಕ್ಕಿಳಿದರು. ಕೊಳಚೆ ಪ್ರದೇಶದ ಜನರ ಡಾರ್ಲಿಂಗ್ ಎನಿಸಿಕೊಂಡಿರುವ ಅನುಭವ್ ಅವರ ಸೇವೆಯನ್ನು ಪಕ್ಷ ಬಳಸಿಕೊಂಡಿತು. ಚಿರಂಜೀವಿ ಕೂಡ ಇಲ್ಲಿ ಪ್ರಚಾರ ಮಾಡಿದರು.

ಆಂಧ್ರದಲ್ಲಿ ಪವನ್‌ಕಲ್ಯಾಣ್ ಪಕ್ಷವೊಂದನ್ನು ಸ್ಥಾಪಿಸಿರುವುದು, ರಾಜಕೀಯ ಪಕ್ಷ ಸ್ಥಾಪನೆ ಮಾಡಿರುವ ನಟರ ಸಾಲಿಗೆ ಒಂದು ಸೇರ್ಪಡೆ ಅಷ್ಟೇ. ಚಿರಂಜೀವಿ ಮಾಡಿದ್ದೂ ವಿಫಲ ಸಾಧನೆ. ಎಂಜಿಆರ್, ಎನ್‌ಟಿಆರ್, ಜಯಲಲಿತಾ ಅವರುಗಳ ಹಾಗೆ ಮತ್ತೊಬ್ಬ ನಟ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದರೆ ಅದು ಇಂದಿನ ಬೆಳವಣಿಗೆಯ ಯುಗದಲ್ಲಿ ಅಸಾಧ್ಯ ಎಂದೇ ಹೇಳಬೇಕಾಗುತ್ತದೆ. ತಮಿಳುನಾಡಿನಲ್ಲಿ ವಿಜಯಕಾಂತ್ ಅರ್ಧದಾರಿ ಸವೆಸಿದ್ದಾರೆ. ಮುಂದಿನ ಹಾದಿ ಅಸ್ಪಷ್ಟ. ಜಯಲಲಿತಾ ಅವರ ಪಕ್ಷದಲ್ಲಿ ಮತ್ತೊಬ್ಬ ನಟ ಅಥವಾ ನಟಿ ಕಾಣಸಿಗುವುದಿಲ್ಲ. ಡಿಎಂಕೆ ಕೂಡಾ ಯಾವ ಕಲಾವಿದನನ್ನು ಕಳಗಂ ಒಳಗೆ ಬಿಟ್ಟುಕೊಂಡಿಲ್ಲ.

ಉತ್ತರಭಾರತದಲ್ಲಿ ರಾಜ್‌ಬಬ್ಬರ್, ವಿನೋದ್‌ ಖನ್ನ, ಶತ್ರುಘ್ನ ಸಿನ್ಹ, ಬೋಜ್‌ಪುರಿ ನಟ ರವಿ ಕಿಷನ್‌ಶುಕ್ಲ, ಬಿಹಾರಿ ಸಂಗೀತ ನಿರ್ದೇಶಕ ಮನೋಜ್‌ ತಿವಾರಿ, ಕಿರನ್‌ಖೇರ್, ಗುಲ್‌ಪನಾಗ್, ಸ್ಮೃತಿ ಇರಾನಿ ಬಪ್ಪಿ ಲಹರಿ, ಪರೇಶ್‌ ರಾವಲ್, ಬಾಬೂಲ್ ಸುಪ್ರಿರೇ, ಮಹೇಂದ್ರ ಮಾಂಜ್ರೇಕರ್ ಮೊದಲಾದವರೆಲ್ಲಾ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಸಾಮಾನ್ಯವಾಗಿ ಮಹಾಚುನಾವಣೆ ಬಂದಾಗಲೆಲ್ಲಾ ತಮಿಳುನಾಡಿನಲ್ಲಿ ರಜನೀಕಾಂತ್, ಕರ್ನಾಟಕದಲ್ಲಿ ರಾಜಕುಮಾರ್ ಅವರ ಹೆಸರುಗಳನ್ನು ಎಳೆತರಲಾಗುತ್ತದೆ. ರಜನೀಕಾಂತ್ ಕೆಲದಿನಗಳ ಹಿಂದೆ ಮೋದಿ ಅವರನ್ನು ಪ್ರಶಂಸಿಸಿದ್ದೇ ತಡ, ಅವರನ್ನು ರಾಜಕೀಯ ವೇದಿಕೆಗೆ ಎಳೆತಂದು ನಾನಾ ರೀತಿಯ ವಿಶ್ಲೇಷಣೆಗಳನ್ನು ಮಾಡಲಾಯಿತು. ಇತ್ತೀಚೆಗೆ ಡಿಎಂಕೆಯಿಂದ ಹೊರದೂಕಲ್ಪಟ್ಟ ಅಳಗಿರಿ, ರಜನೀಕಾಂತ್ ಅವರನ್ನು ಭೇಟಿಯಾದರು. ಅದೂ ಬಿಸಿಬಿಸಿ ರಾಜಕೀಯ ಚರ್ಚೆಗೆ ಒಳಗಾಯಿತು. ಈ ಹಿಂದೆ ರಜನೀಕಾಂತ್ ಪಕ್ಷವೊಂದನ್ನು ಬೆಂಬಲಿಸಿ ತೊಂದರೆಗೊಳಗಾಗಿದ್ದರು. ಈ ಬಾರಿ ಅವರು ಯಾವ ಪಕ್ಷವನ್ನೂ ಬೆಂಬಲಿಸಿಲ್ಲ. ರಾಜಕೀಯದಿಂದ ದೂರ ಉಳಿಯುವುದಾಗಿ ಪ್ರಕಟಿಸಿದ್ದಾರೆ. ಅವರ ಅಭಿನಯದ ‘ಕೊಚಾಡಿಯನ್’ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಜಯಲಲಿತಾ ಅಧೀನದ ಜಯಾ ಟಿವಿ ಖರೀದಿಸಿದೆ. ಇದರಲ್ಲೂ ಜಯಲಲಿತಾ ರಾಜಕೀಯ ಲಾಭ ಪಡೆದಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಮತ್ತೆ ಮತ್ತೆ ಪ್ರಸ್ತಾಪವಾಗುವ ಮತ್ತೊಂದು ಹೆಸರೆಂದರೆ ರಾಜಕುಮಾರ್. ಈ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ರಾಜಕುಮಾರ್ ಅವರ ಸೊಸೆ, ಬಂಗಾರಪ್ಪ ಅವರ ಪುತ್ರಿ ಗೀತಾ ಅವರು ಸ್ಪರ್ಧಿಸಿರುವುದರಿಂದ ರಾಜಕುಮಾರ್ ಹೆಸರು ಪ್ರಸ್ತಾಪವಾಗುತ್ತಿದೆ. ಶಿವರಾಜ್‌ ಕುಮಾರ್ ಅವರು ಪತ್ನಿಯ ಪರವಾಗಿ ಪ್ರಚಾರಕ್ಕಿಳಿದಿರುವುದರಿಂದ ಶಿವರಾಜ್‌ಕುಮಾರ್ ಅವರ ಪರವಾಗಿ ಮತ್ತಷ್ಟು ತಾರೆಯರು ಶಿವಮೊಗ್ಗದತ್ತ ಧಾವಿಸಿರುವುದರಿಂದ ಅಲ್ಲಿ ತಾರಾ ಪ್ರಚಾರದ ಮೆರಗು ಬಂದಿದೆ.

ರಾಜಕುಮಾರ್ ಅವರಿಗೆ ರಾಜಕೀಯ ಪ್ರವೇಶಿಸಬೇಕೆಂಬ ಹಂಬಲ ಇತ್ತೇ ಇಲ್ಲವೇ? ಎಂಬುದು ಈಗ ಅಪ್ರಸ್ತುತ. ಅದು ಅಂದಿನ ದಿನಗಳ ರಾಜಕೀಯ ಪರಿಸ್ಥಿತಿಯನ್ನು ಅವಲಂಬಿಸಿದೆ. ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಇಂದಿರಾಗಾಂಧಿ ಅವರ ವಿರುದ್ಧ ರಾಜಕುಮಾರ್ ಅವರು ಸ್ಪರ್ಧಿಸುವಂತೆ ಮನವೊಲಿಸಲು ಇನ್ನಿಲ್ಲದ ವಿಫಲ ಪ್ರಯತ್ನ ನಡೆಯಿತೆಂದು, ಒತ್ತಡದಿಂದ ತಪ್ಪಿಸಿಕೊಳ್ಳಲು ರಾಜಕುಮಾರ್ ಅವರು ಅಜ್ಞಾತ ಸ್ಥಳದಲ್ಲಿದ್ದರೆಂದೂ ಹೇಳುವ ಕತೆಗಳು ಹಲವಾರು ರೂಪಾಂತರಗಳ ಮೂಲಕ ಚಾಲನೆಯಲ್ಲಿವೆ. ಆದರೆ ರಾಜಕುಮಾರ್ ಅವರು ರಾಜಕೀಯದಿಂದ ದೂರವಿದ್ದರೂ, ಕುಟುಂಬದವರಾಗಲಿ, ಅಭಿಮಾನಿ ಗಳಾಗಲಿ ರಾಜಕೀಯ ಪ್ರವೇಶ ಮಾಡಬಾರದು ಎಂದು ಹೇಳಿದಂತಿಲ್ಲ.

ಆ ರೀತಿಯ ಅವರ ಮನೋಭಾವ ವಿದ್ದಿದ್ದೇ ಆದರೆ, ಅಭಿಮಾನಿ ಸಂಘದ ಸದಸ್ಯರು ಮಲ್ಲೇಶ್ವರಂನಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶವಾಗುತ್ತಿರಲಿಲ್ಲ. ಶಿವರಾಜ್‌ಕುಮಾರ್ ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರ ಮಾಡಲು, ಅಥವಾ ಸ್ಪರ್ಧಿಸಲು ಸ್ವತಂತ್ರರು. ರಾಜಕುಮಾರ್ ಅವರ ಹೆಸರನ್ನು ಎಳೆತಂದು ಶಿವರಾಜ್ ಅವರನ್ನು ಕಟ್ಟಿಹಾಕುವ ಪ್ರಯತ್ನ ವೈಯಕ್ತಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT