ಮೇಲೆ ಕೋಣೆಗೆ ಬರುವಾಗ ಈ ಘಟನೆ ಒಂದು ಚಿಂತನೆಯನ್ನು ಮೂಡಿಸಿತು. ನಾವೂ ಆ ಯಂತ್ರದಂತೆಯೇ ಅಲ್ಲವೇ? ನಮ್ಮಲ್ಲಿಯೂ ಅನೇಕ ಶಕ್ತಿಗಳಿವೆ, ವಸ್ತುಗಳಿವೆ. ದೇಹಶಕ್ತಿ ಇದೆ, ಬುದ್ಧಿ ಇದೆ, ಮನಸ್ಸು ಇದೆ. ಅಂದರೆ ನೀಡಲು ಬೇಕಾದಷ್ಟಿದೆ. ಆದರೆ ಬಹಳಷ್ಟು ಜನ ಏನನ್ನೂ ನೀಡದೇ ನಮ್ಮಲ್ಲಿಯೇ ಇಟ್ಟುಕೊಳ್ಳುತ್ತೇವೆ ಈ ಯಂತ್ರದಂತೆ. ನಾಚಿಕೆಯಿಂದ, ಜಿಪುಣತನದಿಂದ, ಹೆದರಿಕೆಯಿಂದ, ಕೀಳರಿಮೆಯಿಂದ ನಮ್ಮಲ್ಲಿದ್ದುದನ್ನು ಸಂತೋಷದಿಂದ ಕೊಡದೇ ಹಾಗೆಯೇ ಜೀವನವನ್ನು ಬಂಜೆ ಮಾಡಿ ಮರೆಯಾಗುತ್ತೇವೆ. ಒಮ್ಮಮ್ಮೆ ನಾವಾಗಿಯೇ ಸಮಾಜಕ್ಕೆ ನೀಡದೆ ಹೋದಾಗ ಭಗವಂತ, ಆ ಹೋಟೆಲ್ನ ಹುಡುಗನಂತೆ ನಮಗೆ ಪೆಟ್ಟು ಕೊಟ್ಟು ಕೊಡಿಸುತ್ತಾನೆ. ನಾವು ಆ ಯಂತ್ರದಂತಾಗದೇ ನಮ್ಮಲ್ಲಿರುವುದನ್ನು ಸಂತೋಷದಿಂದ ಮತ್ತೊಬ್ಬರಿಗೆ ಕೊಡುವುದನ್ನು ಕಲಿಯೋಣ.