ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತುನಿಷ್ಠೆಗೆ ಹೊರತಾದ ಕಾಂಗ್ರೆಸ್ ಇತಿಹಾಸ

Last Updated 13 ಜನವರಿ 2011, 10:05 IST
ಅಕ್ಷರ ಗಾತ್ರ

ಇತಿಹಾಸವು ದೇಶವೊಂದರಲ್ಲಿ ಘಟಿಸಿದ ಪ್ರಮುಖ ಘಟನೆಗಳ ಬರೀ ದಾಖಲೆಯಾಗಿದ್ದರೂ ಅದೊಂದು ಕರಾರುವಾಕ್ಕಾದ ಮತ್ತು ಪಕ್ಷಪಾತರಹಿತ ದಾಖಲೆಯಾಗಿರಬೇಕು ಎನ್ನುವುದು ಅಪೇಕ್ಷಣೀಯವಾದದ್ದು. 125 ವರ್ಷಗಳಷ್ಟು ಇತಿಹಾಸ ಇರುವ ಕಾಂಗ್ರೆಸ್ ಪಕ್ಷದ ಅಧಿಕೃತ ದಾಖಲಾತಿಯು ಪ್ರಾಮಾಣಿಕವೂ ಆಗಿಲ್ಲ ಮತ್ತು ನಡೆದ ಘಟನಾವಳಿಗಳನ್ನು ವಸ್ತುನಿಷ್ಠವಾಗಿಯೂ ದಾಖಲಿಸಿಲ್ಲ.

ಭಾರತೀಯರು, ರಾಜಕೀಯ ಮುಖಂಡರು ಆಡಿದ ಮಾತನ್ನು ಒಂದು ವೇಳೆ ಮರೆಯಬಹುದು, ಆದರೆ ಅವರ ಕೃತ್ಯಗಳನ್ನು ಮಾತ್ರ ಎಂದಿಗೂ ಮರೆಯುವುದಿಲ್ಲ.

1975ರಿಂದ 1977ರವರೆಗೆ ಸಂವಿಧಾನವನ್ನೇ ರದ್ದುಪಡಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಅಂಟಿಕೊಂಡಿರುವ ಅತಿದೊಡ್ಡ ಕಳಂಕವಾಗಿದೆ. ಕಾಂಗ್ರೆಸ್ ಪಕ್ಷವು ಪತ್ರಿಕೆಗಳ ಸದ್ದು ಅಡಗಿಸಿದ, ಪಕ್ಷದ ಒಳಗಿನ ಭಿನ್ನಮತ ಉಸಿರುಗಟ್ಟಿಸಿದ ಮತ್ತು ವಿಚಾರಣೆ ಇಲ್ಲದೆಯೇ ಒಂದು ಲಕ್ಷಕ್ಕಿಂತ ಹೆಚ್ಚಿನ ಜನರನ್ನು ಬಂಧನದಲ್ಲಿ ಇರಿಸಿದ ಕರಾಳ ಘಟನಾವಳಿಗಳಿಗೆ ನಾನೂ ಸಾಕ್ಷಿಯಾಗಿರುವೆ.

ತನ್ನೆಲ್ಲ ಅಕ್ರಮ, ದೌರ್ಜನ್ಯದ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷವು ದೇಶದ ಕ್ಷಮೆ ಕೋರಲಿದೆ ಎಂದು ನಾನು ಬಹುವಾಗಿ ನಿರೀಕ್ಷಿಸಿದ್ದೆ. ಅದರ ಬದಲಾಗಿ ಪಕ್ಷದ ಅಧಿಕೃತ ಇತಿಹಾಸದಲ್ಲಿ ತುರ್ತು ಪರಿಸ್ಥಿತಿಯನ್ನು ದೇಶ ಬಾಂಧವರು ಸ್ವಾಗತಿಸಿದ್ದರು ಎಂದು ಹೇಳುವ ಸೊಕ್ಕು ಪ್ರದರ್ಶಿಸಿದೆ.

ದೇಶವು ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಗೆ ಎರವಾಗಿದ್ದಕ್ಕೆ ಜನಮಾನಸದಲ್ಲಿ ತೀವ್ರ ವಿಷಾದ ಮಡುಗಟ್ಟಿತ್ತು. ತುರ್ತು ಪರಿಸ್ಥಿತಿ ಹೇರುತ್ತಿದ್ದಂತೆ ಜನರು ಆಘಾತಕ್ಕೆ ಒಳಗಾಗಿದ್ದರು. ಇಂತಹ ನಿರ್ಧಾರವು ಅವರನ್ನು ಆಶ್ಚರ್ಯದ ಕಡಲಲ್ಲಿ ಮುಳುಗಿಸಿತ್ತು. ಕೇಂದ್ರ ಸರ್ಕಾರದ ಹಠಾತ್ ನಿರ್ಧಾರದ ಪೂರ್ಣ ಪ್ರಮಾಣದ ಪರಿಣಾಮಗಳೇನು ಎನ್ನುವುದು ತಿಳಿಯದೆ ಗೊಂದಲದಲ್ಲಿ ಮುಳುಗಿದ್ದರು.

ತುರ್ತು ಪರಿಸ್ಥಿತಿಯ ಅತಿರೇಕಗಳಿಗೆ ಸಂಜಯ್ ಗಾಂಧಿ ಅವರನ್ನು ಹೊಣೆಗಾರರನ್ನಾಗಿ ಮಾಡುವುದರ ಮೂಲಕ ಪಕ್ಷವು ತನ್ನ ಮೇಲಿನ ಕಳಂಕ ತೊಳೆದುಕೊಳ್ಳಲು ಹೊರಟಿರುವುದೂ ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಸಂಜಯ್ ಗಾಂಧಿ ಸರ್ಕಾರದ ಮೇಲೆ ಹಿಡಿತ ಹೊಂದಿದ್ದರೆನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಅವರ ಎಲ್ಲ ಕೃತ್ಯಗಳಿಗೆ ತಾಯಿ ಇಂದಿರಾ ಗಾಂಧಿ ಅವರ ಸಮ್ಮತಿ ಇದ್ದೇ ಇತ್ತು.

ಇಂದಿರಾ ಗಾಂಧಿ ಮತ್ತು ಸಂಜಯ್ ಗಾಂಧಿ ಅವರಿಗೆ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಆರ್. ಕೆ. ಧವನ್ ಅವರು ಪಕ್ಷದ ಇತಿಹಾಸದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವುದು ಸರಿಯಾಗಿಯೇ ಇದೆ. ಇಂದಿರಾ ಗಾಂಧಿ ಅವರ ಬಲಿಷ್ಠ ಮತ್ತು ಸಮರ್ಥ ವ್ಯಕ್ತಿತ್ವದ ಹಿನ್ನೆಲೆಯಲ್ಲಿ, ತಪ್ಪುಗಳ ಹೊಣೆಯನ್ನೆಲ್ಲ ಸಂಜಯ್ ಗಾಂಧಿ ತಲೆಗೆ ಕಟ್ಟುವುದು ಸರಿಯಲ್ಲ ಎಂಬುದು ಅವರ ಅನಿಸಿಕೆಯಾಗಿದೆ.

ಅಧಿಕಾರಕ್ಕೆ ಎರವಾಗಬಾರದು ಎನ್ನುವ ಏಕೈಕ ಕಾರಣಕ್ಕೆ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ್ದರು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿಯಾಗಿದೆ. ಚುನಾವಣಾ ಉದ್ದೇಶಕ್ಕೆ ಅಧಿಕಾರ ದುರುಪಯೋಗ ಮಾಡಿಕೊಂಡ ಆರೋಪ ಸಾಬೀತಾದ ಕಾರಣಕ್ಕೆ ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿತ್ತು.

ಕಾಂಗ್ರೆಸ್ ಪಕ್ಷವು ಪ್ರಕಟಿಸಿದ ಪುಸ್ತಕದಲ್ಲಿ ಕೋರ್ಟ್ ತೀರ್ಪನ್ನೇ ಉಲ್ಲೇಖಿಸಿಲ್ಲ. ಆಂತರಿಕ ಕ್ಷೋಭೆ ಮತ್ತು ದೇಶದಲ್ಲಿ ತಲೆದೋರಿದ ಅಭದ್ರತೆಯ ಪರಿಸ್ಥಿತಿ ಕಾರಣಕ್ಕೆ ತುರ್ತು ಪರಿಸ್ಥಿತಿ ಹೇರಬೇಕೆಂದು ರಾಷ್ಟ್ರಪತಿಗಳಿಗೆ ಮಾಡಿದ ಶಿಫಾರಸು ಪತ್ರಕ್ಕೆ ಪ್ರಧಾನಿ ಇಂದಿರಾ ಗಾಂಧಿ ಸಹಿಯನ್ನೂ ಹಾಕಿರಲಿಲ್ಲ ಎನ್ನುವ ಸಂಗತಿಯು ಇತ್ತೀಚೆಗೆ ಬೆಳಕಿಗೆ ಬಂದಿತ್ತು.

ದೇಶದಲ್ಲಿ ಅಭದ್ರತೆ ತಾಂಡವವಾಡುತ್ತಿದೆ ಎನ್ನುವ ಇಂದಿರಾ ವಾದಸರಣಿಯನ್ನೂ, ತುರ್ತು ಪರಿಸ್ಥಿತಿಯ ಅಕ್ರಮಗಳ ಬಗ್ಗೆ ತನಿಖೆ ನಡೆಸಿದ ಷಾ ಆಯೋಗವು ಸಂಪೂರ್ಣವಾಗಿ ತಳ್ಳಿ ಹಾಕಿತ್ತು.

ದೇಶಕ್ಕೆ ಬಾಹ್ಯ ಅಥವಾ ಆಂತರಿಕ  ಶಕ್ತಿಗಳಿಂದ ಯಾವುದೇ ಬೆದರಿಕೆ ಇದ್ದಿರಲಿಲ್ಲ. ಇಂದಿರಾ ಗಾಂಧಿ  ಅಥವಾ ಇತರರು ಸಲ್ಲಿಸಿದ ಸಾಕ್ಷ್ಯಾಧಾರಗಳಲ್ಲಿ ದೇಶದ ಭದ್ರತೆಗೆ ಬೆದರಿಕೆ ಇರುವುದು ದೃಢಪಟ್ಟಿರಲಿಲ್ಲ. ‘ಆಂತರಿಕ ತುರ್ತು ಪರಿಸ್ಥಿತಿ’ ಘೋಷಿಸುವಂತೆ ರಾಷ್ಟ್ರಪತಿಗಳಿಗೆ ಸಲಹೆ ನೀಡಲು, ಆಡಳಿತಾರೂಢ ಪಕ್ಷ ಮತ್ತು ವಿರೋಧ ಪಕ್ಷಗಳಲ್ಲಿ ನಡೆದ ತೀವ್ರ ಸ್ವರೂಪದ ರಾಜಕೀಯ ಚಟುವಟಿಕೆಗಳೇ  ಮುಖ್ಯ ಕಾರಣವಾಗಿತ್ತು.

ಚುನಾವಣಾ ಅಕ್ರಮಗಳಿಗಾಗಿ ಪ್ರಧಾನಿ ಹುದ್ದೆಯಲ್ಲಿದ್ದ  ಇಂದಿರಾ ಗಾಂಧಿ ಅವರ ಆಯ್ಕೆಯು ಅಸಿಂಧು ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದೇ ಇಂದಿರಾ ಗಾಂಧಿ ಇಂತಹ ದುಡುಕಿನ ನಿರ್ಧಾರಕ್ಕೆ ಬಂದಿದ್ದರು. ಅಧಿಕಾರದಲ್ಲಿ ಮುಂದುವರೆಯಬೇಕು ಎನ್ನುವ ಏಕೈಕ ಕಾರಣಕ್ಕೆ ಇಂದಿರಾ ಗಾಂಧಿ, ತುರ್ತು ಪರಿಸ್ಥಿತಿಯ ಮೊರೆ ಹೊಕ್ಕರು. ಇದರಿಂದ ಅವರು ಅಧಿಕಾರದಲ್ಲಿ ಮುಂದುವರೆಯಲು ನೆರವಾಯಿತು. ಕೆಲವರ ಮಹತ್ವಾಕಾಂಕ್ಷೆ ಈಡೇರಿಸಲು ಪೊಲೀಸ್ ಪಡೆಯು ಅನೇಕರ ಹಿತಾಸಕ್ತಿಗಳನ್ನು ಬಲಿ ತೆಗೆದುಕೊಂಡಿತು’ ಎಂದು ಆಯೋಗವು ಅಭಿಪ್ರಾಯಪಟ್ಟಿದೆ.

ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯ ಆಡಳಿತವನ್ನು ಸಮರ್ಥಿಸಿದ್ದ 1976ರ  ತೀರ್ಪು, ಆಗ ಬಹುಸಂಖ್ಯಾತ ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟು ಮಾಡಿತ್ತು ಎಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಈಗ ಮೊನ್ನೆಯಷ್ಟೇ  ದೃಢಪಡಿಸಿರುವುದು ಕಾಕತಾಳೀಯ. ಈ ಪೀಠವು ಐದು ಮಂದಿ ನ್ಯಾಯಮೂರ್ತಿಗಳ ಪೀಠವು ನೀಡಿದ್ದ (4-1) ತೀರ್ಪು ತಪ್ಪು ಎಂದೂ ಅಭಿಪ್ರಾಯಪಟ್ಟಿದೆ. ಐದು ಮಂದಿ ನ್ಯಾಯಮೂರ್ತಿಗಳ ಪೀಠ ನೀಡಿದ್ದ ತೀರ್ಪನ್ನು ದ್ವಿಸದಸ್ಯ ಪೀಠವು ರದ್ದು ಮಾಡಲು ಸಾಧ್ಯವಿಲ್ಲ. ಆದರೆ, ಈ ತೀರ್ಪಿನ  ಪುನರ್‌ವಿಮರ್ಶೆಗೆ ಇದು ಸಕಾಲವಂತೂ ನಿಜ. ತತ್ವಾದರ್ಶಗಳಿಗೆ ಬದ್ಧವಾಗಿರುವಂತೆ ಕಾಣುವ ಕಾನೂನು ಸಚಿವ ವೀರಪ್ಪ ಮೊಯಿಲಿ ಅವರು 1976ರ ತೀರ್ಪು ರದ್ದುಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಅದರಿಂದ ದೇಶಕ್ಕೆ ಖಂಡಿತವಾಗಿಯೂ ಮಹದುಪಕಾರವಾಗಲಿದೆ.

ಉನ್ನತ ಹುದ್ದೆಯಲ್ಲಿ ಇರುವ ಬಲಿಷ್ಠರು ನಮ್ಮ ಪ್ರಜಾಸತ್ತಾತ್ಮಕ ಸಂಪ್ರದಾಯಗಳ ಜತೆ ಭವಿಷ್ಯದಲ್ಲಿ ಚೆಲ್ಲಾಟ ಆಡುವುದನ್ನು ತಪ್ಪಿಸಲು ಇದರಿಂದ ಸಾಧ್ಯವಾಗಲಿದೆ.

ದುರುದ್ದೇಶಪೂರ್ವಕವಾದ ಬಂಧನ ಆದೇಶವನ್ನು ತುರ್ತು ಪರಿಸ್ಥಿತಿ ದಿನಗಳಲ್ಲಿ ಪ್ರಶ್ನಿಸಲು ಸಾಧ್ಯವೆ ಇಲ್ಲ ಎಂದು ನಂಬಲು ಸಾಧ್ಯವಿಲ್ಲ.  ನ್ಯಾಯಮೂರ್ತಿ  ಎಚ್. ಆರ್. ಖನ್ನಾ ಅವರು ಬಹುಮತದ ತೀರ್ಪಿನ ಭಿನ್ನಮತ ದಾಖಲಿಸುವ ಧೈರ್ಯ ಪ್ರದರ್ಶಿಸಿದ್ದರು. ‘ತುರ್ತು ಪರಿಸ್ಥಿತಿಯ ದಿನಗಳಲ್ಲೂ ವ್ಯಕ್ತಿಯ ಬದುಕನ್ನು ಕಸಿದುಕೊಳ್ಳುವ ಅಥವಾ ವೈಯಕ್ತಿಕ ಸ್ವಾತಂತ್ರ್ಯ ಹರಣ ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಇದೊಂದು ಯಾವುದೇ ಒಂದು ನಾಗರಿಕ ಸಮಾಜದ ಕಾನೂನು’ ಎಂದು ಅವರು ಪ್ರತಿಪಾದಿಸಿದ್ದರು.

 ಖನ್ನಾ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗುವ ಸರದಿ ಬಂದಾಗ, ಇದೇ ಇಂದಿರಾ ಗಾಂಧಿ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ.  ಕಾಂಗ್ರೆಸ್‌ನ ಇತಿಹಾಸದಲ್ಲಿ ಇದೆಲ್ಲವನ್ನು ದಾಖಲಿಸಲಾಗಿಲ್ಲ.

ಹಲವಾರು ಹಗರಣಗಳು, ಭ್ರಷ್ಟಾಚಾರ ಪ್ರಕರಣಗಳು ಒಂದರ ಹಿಂದೆ ಒಂದರಂತೆ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷವು ತೀವ್ರ ಒತ್ತಡದಲ್ಲಿ ಇರುವುದು ಸುಳ್ಳಲ್ಲ. ತುರ್ತು ಪರಿಸ್ಥಿತಿ ಬಗ್ಗೆ ಚರ್ಚೆಗೆ ಚಾಲನೆ ನೀಡಿದ್ದರೂ, ದೇಶದ ಗಮನವನ್ನು ಬೇರೆಡೆ ಸೆಳೆಯಲಂತೂ ಸಾಧ್ಯವಿಲ್ಲ. ಮೊಬೈಲ್ ‘2ಜಿ’ ತರಂಗಾಂತರ ಹಂಚಿಕೆ ಹಗರಣದಲ್ಲಿ ಸಿಲುಕಿಕೊಂಡಿರುವವರ ಮುಖವಾಡ ಕಳಚಲು ಜಂಟಿ ಸಂಸತ್ ಸಮಿತಿಯ (ಜೆಪಿಸಿ) ತನಿಖೆಗೆ ಪ್ರತಿಯಾಗಿ ಅನ್ಯ ಮಾರ್ಗವೇ ಇಲ್ಲ ಎನ್ನುವ ಸತ್ಯವನ್ನು ಸರ್ಕಾರ ಒಪ್ಪಿಕೊಳ್ಳಲೇಬೇಕು.

ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಇದೇ ಮೊದಲ ಬಾರಿಗೆ ಒಗ್ಗಟ್ಟಾಗಿರುವ ಎಡ ಮತ್ತು ಬಲಪಂಥೀಯ ಪಕ್ಷಗಳು ‘ಜೆಪಿಸಿ’ ತನಿಖೆಗೆ ಪಟ್ಟು ಹಿಡಿದಿವೆ. ಇದಕ್ಕೆ ಕೇಂದ್ರ ಸರ್ಕಾರವು ಪ್ರತಿರೋಧ ತೋರಿದಷ್ಟೂ, ಅದರ ವಿಶ್ವಾಸಾರ್ಹತೆ ಬಗ್ಗೆ ಅನುಮಾನಗಳೂ ಹೆಚ್ಚುತ್ತದೆ.

‘ಬರೀ ತಪ್ಪು ಹುಡುಕುವ ಪ್ರವೃತ್ತಿ ಮತ್ತು ವಿಷಣ್ಣ ಮನೋಭಾವ ರೂಢಿಸಿಕೊಳ್ಳಬೇಡಿ’ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಹೊಸ ವರ್ಷದ ಸಂದರ್ಭದಲ್ಲಿ ದೇಶ ಬಾಂಧವರಿಗೆ ಮನವಿ ಮಾಡಿಕೊಂಡಿರುವುದು ಅಷ್ಟೇನೂ ಪ್ರಭಾವ ಬೀರಿದಂತೆ ಕಾಣುವುದಿಲ್ಲ. ಕೇಂದ್ರ ಸರ್ಕಾರವು ದೊಡ್ಡ ರಹಸ್ಯ ಬಚ್ಚಿಡಲು ಹೆಣಗುತ್ತಿದೆ ಎನ್ನುವ ಸಂದೇಹ ಎಲ್ಲರಿಗೂ ಬಂದಿರುವುದೇ ಇದಕ್ಕೆ ಕಾರಣ.

ಸಾರ್ವಜನಿಕ ಬದುಕಿನಲ್ಲಿ ಕಾಣುತ್ತಿರುವ ಅಧಃಪತನ, ಕಾಂಗ್ರೆಸ್ ಮತ್ತಿತರ ರಾಜಕೀಯ ಪಕ್ಷಗಳಲ್ಲಿನ ಭ್ರಷ್ಟಾಚಾರವು, ದೇಶದ ವಿಭಿನ್ನ ಪ್ರಾಂತ್ಯ, ಧರ್ಮ, ಜಾತಿ ಮತ್ತು ಭಾಷೆಗಳ ಜನರಲ್ಲಿ ಒಡಕಿನ ಪ್ರವೃತ್ತಿ ಹೆಚ್ಚುತ್ತಿರುವುದಕ್ಕೆ ತಾಳೆಯಾಗುತ್ತಿದೆ.

ದೇಶ ಬಾಂಧವರು ಪ್ರಮುಖ ವಿದ್ಯಮಾನಗಳನ್ನು ಮರೆಯುತ್ತ, ಸಣ್ಣ ಪುಟ್ಟ ಸಂಗತಿಗಳನ್ನೇ ದೊಡ್ಡದು ಮಾಡುತ್ತ ದೇಶದ ಸಮಗ್ರತೆ, ಶಕ್ತಿ- ಸಾಮರ್ಥ್ಯ ಮತ್ತು ಪ್ರಗತಿಗೆ ಧಕ್ಕೆ ತರುತ್ತಿದ್ದಾರೆ. ಸದ್ಯಕ್ಕೆ ದೇಶದ ಜನರಲ್ಲಿ ಹೊಸ ಘೋಷಣೆಗಳ ಬದಲಿಗೆ ಹೊಸ ಚಿಂತನೆಯ ಅಗತ್ಯ ಇದೆ. ಮಾನವೀಯ ಮೌಲ್ಯಗಳು ಮತ್ತು ಆಧುನಿಕ ಪರಿಸ್ಥಿತಿಗೆ ಹೊಂದಾಣಿಕೆಯಾಗುವ ಆದರ್ಶವಾದವು ಜನರಲ್ಲಿ ರೂಢಿಯಾಗಬೇಕಾಗಿದೆ.

ಕಾಂಗ್ರೆಸ್ ಪಕ್ಷವು ಹೊರ ತಂದಿರುವ ಇತಿಹಾಸದಲ್ಲಿ ಇಂತಹ ಹೊಸ ವಿಚಾರಧಾರೆಯ ಹೊಳಹುಗಳು ಏನಾದರೂ ಇವೆಯೇ ಎಂದು ತಿಳಿದುಕೊಳ್ಳಲು ನಾನೂ ವ್ಯರ್ಥ ಪ್ರಯತ್ನ ಮಾಡಿದೆ.

125 ವರ್ಷಗಳಷ್ಟು ಸುದೀರ್ಘ ಇತಿಹಾಸ ಇರುವ ಕಾಂಗ್ರೆಸ್ ಪಕ್ಷವು ಕ್ಷುಲ್ಲಕ ರಾಜಕೀಯದಿಂದ ಮೇಲೆದ್ದು ಬಂದಿಲ್ಲದಿರುವುದು ಮತ್ತು ಭೂತಕಾಲವನ್ನು ವಸ್ತುನಿಷ್ಠವಾಗಿ ಬಣ್ಣಿಸದಿರುವುದು ವಿಷಾದಕರ ಸಂಗತಿ. ಈ ಹಿಂದಿನ ತನ್ನೆಲ್ಲ ಕೃತ್ಯಗಳು ಮತ್ತು ನಿರ್ಧಾರಗಳು ಬರೀ ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದಷ್ಟೇ ತೆಗೆದುಕೊಂಡಿರದೆ ಒಟ್ಟಾರೆ ದೇಶದ ಹಿತಾಸಕ್ತಿ ರಕ್ಷಣೆಯ ಕಾರಣಕ್ಕೆ ತೆಗೆದುಕೊಳ್ಳಲಾಗಿತ್ತು ಎಂದು ಜನರಿಗೆ ಭರವಸೆ ನೀಡುವ ಸುವರ್ಣಾವಕಾಶವನ್ನು ಕಳೆದುಕೊಂಡಿದೆ ಎಂದೇ ಭಾವಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT