ಪ್ರಸಕ್ತ ಕಾಲಘಟ್ಟದಲ್ಲಿ ರಾಜಕಾರಣಕ್ಕೊಂದು ನೈತಿಕತೆಯ ಸಿಂಚನ ನೀಡುವಂತೆ ಕಂಡು ಬರುತ್ತಿರುವ ದೆಹಲಿಯ ಆಮ್ ಆದ್ಮಿ ಪಕ್ಷದ (ಎಎಪಿ) ಆಂದೋಲನ ಒಂದು ಕಡೆ ಸುದ್ದಿಯಾಗುತ್ತಿದ್ದರೆ, ಇನ್ನೊಂದು ಕಡೆ ಕರ್ನಾಟಕದ ಹದಿನಾರು ಶಾಸಕರು ಸರ್ಕಾರದ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿದ್ದ ದಕ್ಷಿಣ ಅಮೆರಿಕ ದೇಶಗಳ ಪ್ರವಾಸ ಕಾರ್ಯಕ್ರಮವು ವಿವಾದದ ಸ್ವರೂಪ ಪಡೆದುಕೊಂಡು, ದೇಶದ ಗಮನ ಸೆಳೆದಿದೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಆ ಶಾಸಕರೆಲ್ಲಾ ಜನಸಾಮಾನ್ಯರ ತೆರಿಗೆಯ ಹಣವನ್ನು ಇಂತಹದ್ದೊಂದು ಕಾರ್ಯಕ್ರಮಕ್ಕೆ ಖರ್ಚು ಮಾಡಲು ತುದಿಗಾಲಲ್ಲಿ ನಿಂತಿದ್ದರು. ಆಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಧ್ಯಪ್ರವೇಶಿಸಿ ಆ ಪ್ರವಾಸ ಕಾರ್ಯಕ್ರಮ ಸದ್ಯಕ್ಕೆ ರದ್ದಾಗುವಂತೆ ನೋಡಿಕೊಂಡರು. ಈಗಾಗಲೇ ದೆಹಲಿ, ರಾಜಸ್ತಾನಗಳಲ್ಲಿ ಮುಖಭಂಗಕ್ಕೆ ಒಳಗಾಗಿರುವ ಕಾಂಗ್ರೆಸ್ಗೆ ಪುನಶ್ಚೇತನ ನೀಡುವ ಉತ್ಸಾಹದಲ್ಲಿರುವ ರಾಹುಲ್ ಈ ನಿಲುವು ತೆಗೆದುಕೊಂಡಿರುವುದು ಗಮನಾರ್ಹ.
ಪ್ರವಾಸ ಹೊರಟು ನಿಂತಿದ್ದ ತಂಡದಲ್ಲಿ ಕಾಂಗ್ರೆಸ್ ಪಕ್ಷದವರಷ್ಟೇ ಇರಲಿಲ್ಲ, ಬಿಜೆಪಿಯವರೂ ಇದ್ದರು. ಆದರೆ ಮಾಧ್ಯಮಗಳಲ್ಲಿ ಈ ಉದ್ದೇಶಿತ ಪ್ರವಾಸ ಸುದ್ದಿಯಾಗುತ್ತಿದ್ದಂತೆ ಬಿಜೆಪಿಯವರು ಹಿಂದಡಿ ಇಟ್ಟರು. ಕರ್ನಾಟಕದ ಹಲವು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇರು ವಾಗ ಮತ್ತು ಸುಮಾರು ಇನ್ನೂರಕ್ಕೂ ಹೆಚ್ಚು ರೈತರು ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಈಗಾಗಲೇ ಸುದ್ದಿಯಲ್ಲಿರುವಾಗ ಇಂತಹದ್ದೊಂದು ಪ್ರವಾಸದ ಅಗತ್ಯವಿದೆಯೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರೆನ್ನಲಾಗಿದೆ.
ಆದರೆ ಶಾಸಕರ ಐದು ವರ್ಷಗಳ ಅವಧಿ ಯಲ್ಲಿ ಎರಡು ಸಲ ವಿದೇಶ ಪ್ರವಾಸ ನಡೆಸಲು ಅವಕಾಶವಿದೆ ಎಂಬ ‘ಸಂಪ್ರದಾಯ’ದ ಮಾತನ್ನೇ ಪ್ರವಾಸಕ್ಕೆ ಹೊರಟಿದ್ದ ಶಾಸಕರು ಹೇಳುತ್ತಾ ತಮ್ಮನ್ನು ಸಮರ್ಥಿಸಿಕೊಂಡಿದ್ದನ್ನೂ ನಾನು ಗಮನಿಸಿದ್ದೇನೆ. ಹೌದು, ಇಂತಹ ಸಮರ್ಥನೆಯ ‘ಮಾತು’ ಕರ್ನಾಟಕದಲ್ಲಿ ಮಾತ್ರ ಕೇಳಿ ಬರುತ್ತಿರುವುದಲ್ಲ. ಇತರ ರಾಜ್ಯಗಳಲ್ಲೂ ಇದೇ ತೆರನಾದ ‘ಅವಕಾಶ’ಗಳ ಬಗ್ಗೆ ಸುದ್ದಿಗಳಾಗಿವೆ. ಆಂಧ್ರಪ್ರದೇಶದ ಶಾಸಕರೂ ಇಂತಹದೇ ಪ್ರವಾಸ ಕಾರ್ಯಕ್ರಮವೊಂದಕ್ಕೆ ಸಿದ್ಧತೆ ನಡೆಸಿದ್ದರೆನ್ನಲಾಗಿದೆ. ಪಂಜಾಬ್ನ ಅಕಾಲಿದಳ ಸರ್ಕಾರ ತನ್ನ ಶಾಸಕರನ್ನು ಸ್ಕಾಟ್ಲೆಂಡ್ಗೆ ಕಳುಹಿಸಿ ಅಲ್ಲಿ ಸ್ಕಾಚ್ ವಿಸ್ಕಿ ತಯಾರಿಸುವುದನ್ನು ನೋಡುವ ಅವಕಾಶ ಕಲ್ಪಿಸಿತ್ತಂತೆ!
ಇಂತಹ ಎಲ್ಲಾ ಪ್ರವಾಸಗಳಿಗೂ ಅಧ್ಯಯನದ ಲೇಪನ ನೀಡಲಾಗುತ್ತದೆ. ಆದರೆ ಇಂತಹ ಪ್ರವಾಸ ನಡೆಸಿ ಬಂದವರು ನೀಡುವ ವರದಿ ಯನ್ನು ಮಾತ್ರ ಯಾರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ, ಪ್ರಕಟಗೊಳ್ಳುವುದೂ ಇಲ್ಲ. ಇದೊಂದು ತೆರನಾಗಿ ‘ಜಾಲಿ ಟ್ರಿಪ್’ಗಳಷ್ಟೇ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಹೌದು. ಇದರಲ್ಲಿ ಆಡಳಿತಗಾರರ ಸ್ವಾರ್ಥವೂ ಇರುತ್ತದೆ. ಆಡಳಿತ ಪಕ್ಷದ ಕೆಲವು ಶಾಸಕರನ್ನು ಸಂಪ್ರೀತ ರನ್ನಾಗಿರಿಸಿಕೊಳ್ಳಲು ಮತ್ತು ವಿರೋಧ ಪಕ್ಷದ ಕೆಲವು ಶಾಸಕರು ಕಿರಿಕಿರಿ ಮಾಡದಂತೆ ತಡೆಯಲು ಅವರ ಜತೆಗಿನ ಸಂಬಂಧವನ್ನು ಸೌಹಾರ್ದವಾಗಿರಿಸಿಕೊಳ್ಳಲು ಸರ್ಕಾರವೇ ಇಂತಹ ಪ್ರವಾಸಗಳ ಅವಕಾಶ ಕಲ್ಪಿಸುತ್ತದೆ ಎಂದರೆ ಅತಿಶಯೋಕ್ತಿಯಂತೂ ಅಲ್ಲ. ಇಂತಹ ಪ್ರವಾಸಗಳು ಶಾಸಕರಿಗಷ್ಟೇ ಸೀಮಿತಗೊಂಡಿದ್ದು ಎಂದುಕೊಳ್ಳಬೇಕಿಲ್ಲ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತರ ಕೆಲವು ಉನ್ನತ ಸಮಿತಿಗಳ ಸದಸ್ಯರನ್ನೂ ಇಂತಹ ಪ್ರವಾಸಗಳಿಗೆ ಕಳುಹಿಸಿದ ನಿದರ್ಶನಗಳಿವೆ.
ನಮ್ಮ ಲೋಕಸಭಾ ಸದಸ್ಯರೂ ಇಂತಹ ಪ್ರವಾಸಗಳಿಂದ ದೂರವೇನೂ ಉಳಿದಿಲ್ಲ. ಹಿಂದೆ ನಾನು ರಾಜ್ಯಸಭಾ ಸದಸ್ಯನಾಗಿದ್ದಾಗ ನನ್ನನ್ನು ಇಂತಹ ಯಾವುದೇ ಪ್ರವಾಸ ಕಾರ್ಯಕ್ರಮದಲ್ಲಿ ಸೇರಿಸಿರಲಿಲ್ಲ ಬಿಡಿ. ಏಕೆಂದರೆ ಈ ತೆರನಾದ ದುಂದುವೆಚ್ಚಗಳ ಬಗ್ಗೆ ಆಗಲೂ ಮಾಧ್ಯಮ ಎಚ್ಚರಗಣ್ಣಾಗಿತ್ತು. ರಾಜಕೀಯ ಪಕ್ಷಗಳು ಇಂತಹ ‘ಅಧ್ಯಯನ ಪ್ರವಾಸ’ಗಳನ್ನು ತಮ್ಮ ತಮ್ಮಲ್ಲೇ ಹಂಚಿಕೊಳ್ಳುತ್ತವೆ. ಇಂಗ್ಲೆಂಡ್, ಅಮೆರಿಕದಲ್ಲಿ ಹಿಂದಿ ಭಾಷೆಯ ಪ್ರಸಾರ ಎಷ್ಟರಮಟ್ಟಿಗೆ ನಡೆದಿದೆ ಎಂಬುದನ್ನು ಪರಿಶೀಲಿಸುವುದ ಕ್ಕಾಗಿ ಭಾಷಾ ಸಮಿತಿ ಸದಸ್ಯರ ತಂಡವೊಂದು ಆ ದೇಶಗಳ ಪ್ರವಾಸ ನಡೆಸುತ್ತದೆ!
ಈ ತೆರನಾದ ‘ಫಾರಿನ್ ಟ್ರಿಪ್’ ಎನ್ನುವುದು ಭಾರತದಲ್ಲಿ ಪಡೆದಿರುವಷ್ಟೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿಯೂ ‘ಪ್ರಖ್ಯಾತಿ’ ಹೊಂದಿದೆ. ಇಂತಹ ಒಂದಿಲ್ಲಾ ಒಂದು ನೆಪ ಗಳೊಂದಿಗೆ ಅಲ್ಲಿನ ಜನಪ್ರತಿನಿಧಿಗಳೂ ವಿದೇಶ ಪ್ರವಾಸ ನಡೆಸುವುದು ಸಾಮಾನ್ಯ. ಇದು ಯಾವುದೇ ಯೋಚನೆ ಇಲ್ಲದೆ ಸರ್ಕಾರದ ಹಣ ಖರ್ಚು ಮಾಡುವುದಕ್ಕೆ ಒಂದು ನಿದರ್ಶನ ಅಷ್ಟೇ. ಅದೇನೇ ಇರಲಿ, ಈ ರೀತಿಯ ವಿದೇಶ ಪ್ರವಾಸ ಎನ್ನುವುದು ಸರ್ಕಾರವೊಂದು ನೀಡುವ ದೊಡ್ಡ ಮಟ್ಟದ ‘ಲಂಚ’ವಲ್ಲದೆ ಇನ್ನೇನು?
ಪಾಶ್ಚಿಮಾತ್ಯ ದೇಶಗಳಿಗೆ ಈ ಬಗ್ಗೆ ಗೊತ್ತಿಲ್ಲದೇನೂ ಇಲ್ಲ. ಇಂಗ್ಲೆಂಡ್ ಮತ್ತು ಅಮೆರಿಕ ದಂತಹ ದೇಶಗಳು ಇಂತಹ ಪ್ರವಾಸಿಗರಿಗೆ ರಿಯಾಯಿತಿಗಳ ಪಟ್ಟಿ ಹಿಡಿದು ಕುಳಿತುಬಿಡುತ್ತವೆ. ಸರ್ಕಾರದ ಉನ್ನತ ಸ್ಥಾನಗಳಲ್ಲಿ ರುವವರು ವಿದೇಶಗಳ ಇಂತಹ ‘ಆಕರ್ಷಕ ಆಹ್ವಾನ’ಗಳಿಗೆ ಮರುಳಾಗಿಬಿಡುತ್ತಾರೆ.
ಸರ್ಕಾರದಲ್ಲಿ ಕಾರ್ಯದರ್ಶಿ ಮಟ್ಟದ ಹುದ್ದೆಗಳಲ್ಲಿರುವವರಲ್ಲಿ ಅದೆಷ್ಟು ಮಂದಿಯ ಮಕ್ಕಳು ವಿದೇಶದಲ್ಲಿ ವಿದ್ಯಾರ್ಥಿ ವೇತನ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆಂಬ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದರೆ ಅದೆಷ್ಟೋ ಆಶ್ಚರ್ಯಕರ ಮಾಹಿತಿ ಹೊರಬೀಳಬಹುದು. ಸರ್ಕಾರದ ಉನ್ನತ ಸ್ಥಾನ ಗಳಲ್ಲಿ ಇರುವವರ ಮಕ್ಕಳಿಗೆ ವಿದೇಶಗಳಲ್ಲಿ ಉಚಿತ ವಸತಿ ಮತ್ತು ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಬಗ್ಗೆ, ಪ್ರಯಾಣ ವೆಚ್ಚದಲ್ಲಿ ಸಂಪೂರ್ಣ ರಿಯಾ ಯಿತಿ ನೀಡುವುದಕ್ಕೆ ಸಂಬಂಧಿಸಿದಂತೆ ‘ವಿದೇ ಶಾಂಗ ವ್ಯವಹಾರ’ದಲ್ಲಿರುವವರು ತಮ್ಮ ಶಕ್ತಿ ಮೀರಿ ಪ್ರಯತ್ನಿಸುವುದು ಗುಟ್ಟೇನೂ ಅಲ್ಲ. ಉನ್ನತ ಸ್ಥಾನದಲ್ಲಿರುವವರು ವಿದೇಶಗಳಿಗೆ ಹೋದಾಗ ಅವರಿಗೆ ಅಲ್ಲಿ ಉಚಿತ ಮದ್ಯದ ಹೊಳೆಯನ್ನೇ ಹರಿಸುವ ವ್ಯವಸ್ಥೆ ಇರುತ್ತದೆ. ಹೀಗಾಗಿ ಇಲ್ಲಿನ ಕೆಲವು ಹಿರಿಯ ಅಧಿಕಾರಿಗಳು ಅಲ್ಲಿ ಹೋದಾಗ ಕಿರಿಯ ಅಧಿಕಾರಿಗಳು ನೀಡುವ ಇಂತಹ ಭೋಜನ ಕೂಟಗಳಲ್ಲಿ ಪಾಲ್ಗೊಳ್ಳುವುದನ್ನು ಕಾಣಬಹುದು. ಇದು ಭಾರತಕ್ಕೆ ಹೊಸದೇನೂ ಅಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಕೆಲವು ವರ್ಷಗಳ ನಂತರ ಈ ಚಾಳಿ ಶುರುವಾಗಿದೆ.
ಇಲ್ಲಿನ ಹಿರಿಯ ಅಧಿಕಾರಿಗಳು ವಿದೇಶಕ್ಕೆ ಹೋದಾಗ ಅಲ್ಲಿನ ಕಿರಿಯ ಅಧಿಕಾರಿಗಳ ಭೋಜನ ಕೂಟಗಳಲ್ಲಿ ಪಾಲ್ಗೊಳ್ಳುವ ಸಂಗತಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಗೊತ್ತಾದಾಗ ಅವರು ನಿಜಕ್ಕೂ ಗಾಬರಿಗೊಂಡಿದ್ದರು. ಇನ್ನು ಮುಂದೆ ಈ ರೀತಿ ನಡೆಯಬಾರದು ಎಂಬ ಲಿಖಿತ ಆದೇಶವನ್ನೂ ನೀಡಲಾಯಿತು. ಇಲ್ಲಿಂದ ವಿದೇಶಕ್ಕೆ ಹೋಗುವ ಹಿರಿಯ ಅಧಿಕಾರಿಗಳು ತಮ್ಮ ಮಟ್ಟದ ಅಧಿ ಕಾರಿಗಳ ಜತೆ ಮಾತ್ರ ಭೋಜನ ಕೂಟದಲ್ಲಿ ಪಾಲ್ಗೊಳ್ಳಬಹುದೆಂದು ತಿಳಿಸಲಾಗಿತ್ತು. ಆ ನಂತರ, ಆ ಆದೇಶದ ಉಲ್ಲಂಘನೆ ನಿರಂತರವಾಗಿ ನಡೆದಿದೆ ಎನ್ನುವುದೂ ನಿಜ. ಇವತ್ತು ಜನ ಪ್ರತಿನಿಧಿಗಳಿಗೇ ನೇರವಾಗಿ ಆಹ್ವಾನ ಪತ್ರ ಬರು ವುದು ಸಾಮಾನ್ಯವಾಗಿ ಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೇ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಿವಿಮಾತು ಹೇಳಿ ಕಳಿಸಬೇಕಾದಂತಹ ಪರಿಸ್ಥಿತಿ ಇದೆ.
ಈ ನಡುವೆ ಅಮೆರಿಕದ ವಿದೇಶಾಂಗ ಇಲಾಖೆಯ ಕೈಯಲ್ಲಿ ಭಾರತ ಅನುಭವಿಸಿದ ಅವಮಾನವನ್ನು ನೆನಪಿಸಿಕೊಂಡಾಗ ನಿಜಕ್ಕೂ ಕಿರಿಕಿರಿ ಎನಿಸುತ್ತಿದೆ. ಭಾರತದ ವಿದೇಶಾಂಗ ಇಲಾಖೆಯ ಅಧಿಕಾರಿ ದೇವಯಾನಿ ಖೋಬ್ರಗಡೆ ಅವರ ಕೈಗೆ ಕೋಳ ತೊಡಿಸಿ ಜೈಲಿಗೆ ಕರೆದೊಯ್ಯಲಾಯಿತಲ್ಲದೆ, ಸಾಮಾನ್ಯ ಕೈದಿಗಳ ಜತೆಯಲ್ಲಿಯೇ ಇರಿಸಲಾಯಿತು. ಈ ಘಟನೆಯ ಬಗ್ಗೆ ಕ್ಷಮಾಪಣೆ ಕೇಳಲೂ ಅಲ್ಲಿನ ವಿದೇಶಾಂಗ ಖಾತೆಯ ಕಾರ್ಯದರ್ಶಿ ಜಾನ್ ಕೆರಿ ಮುಂದಾ ಗಲಿಲ್ಲ. ಅಮೆರಿಕ ಸರ್ಕಾರದ ಅಹಂಕಾರವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ.
ಅಧ್ಯಕ್ಷ ಬರಾಕ್ ಒಬಾಮ ಅಧಿಕಾರಕ್ಕೆ ಏರಿದ ಆರಂಭದ ದಿನಗಳಲ್ಲಿ ಒಂದಿನಿತು ಭಿನ್ನವಾಗಿ ಕಂಡು ಬಂದರಾದರೂ, ನಂತರ ಅಲ್ಲಿನ ವ್ಯವ ಸ್ಥೆಯ ಭಾಗವಾಗಿಬಿಟ್ಟರು. ದೇವಯಾನಿ ಘಟ ನೆಗೆ ಸಂಬಂಧಿಸಿದಂತೆ ಒಬಾಮ ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಒಬಾಮ ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪಶ್ಚಾತ್ತಾಪ ವ್ಯಕ್ತ ಪಡಿಸಬೇಕಿತ್ತು. ಆದರೆ ಅವರು ಆ ರೀತಿ ನಡೆದುಕೊಳ್ಳಲಿಲ್ಲ. ಇದರಿಂದ ಅಮೆರಿಕವೇ ಕಳೆದುಕೊಂಡಿದ್ದು ಹೆಚ್ಚು ಎನ್ನುವುದಂತೂ ನಿಜ. ಪಶ್ಚಿಮದ ಇತರ ದೇಶಗಳಿಗಿಂತ ಅಮೆರಿಕ ಭಿನ್ನ ವೇನೂ ಅಲ್ಲ ಎಂಬುದಾಗಿ ಭಾರತೀಯರ ಮನಸ್ಸು ನಂಬುವಂತಾಯಿತು.
ವಾಷಿಂಗ್ಟನ್ನ ಅಧಿಕಾರಸ್ಥರು ಭಾರತದ ಜತೆಗೆ ಇನ್ನು ಮುಂದೆಯೂ ಉಭಯ ದೇಶಗಳ ನಡುವಣ ರಾಜಕೀಯ ತಂತ್ರಗಳ ಕುರಿತು ಚರ್ಚಿ ಸಬಹುದು, ನಿಜ. ಭಾರತ ಕೂಡಾ ಅಷ್ಟೇ ಉತ್ಸಾಹದಿಂದ ಆ ಮಾತುಕತೆಯಲ್ಲಿ ಪಾಲ್ಗೊಳ್ಳ ಲೂಬಹುದು. ಆದರೆ ಎಲ್ಲವೂ ಯಾಂತ್ರಿಕವಾಗಿರುತ್ತದೆ ಅಷ್ಟೇ. ಭಾರತೀಯರು ಮುಂದಿನ ದಿನಗಳಲ್ಲಿ ಅಮೆರಿಕದ ಜತೆಗೆ ಮಾನಸಿಕವಾಗಿ ಅಂತರವನ್ನು ಇರಿಸಿಕೊಳ್ಳುವುದಂತೂ ನಿಜ. ದೇವಯಾನಿ ಪ್ರಕರಣ ಎಲ್ಲರ ನೆನಪಲ್ಲಿದ್ದೇ ಇರುತ್ತದೆ.
ದೇವಯಾನಿ ಅವರು ತಮ್ಮ ಮನೆಕೆಲಸ ದಾಕೆಗೆ ಅಮೆರಿಕದ ಕಾನೂನಿನ ಅನ್ವಯ ವೇತನ ಕೊಡುತ್ತಿರಲಿಲ್ಲ ಎಂಬ ಕಾರಣಕ್ಕೆ ಇಡೀ ವಿವಾದ ಹುಟ್ಟಿಕೊಂಡಿದೆ. ಹಿಂದೆ ನಾನು ದೆಹಲಿ ಯಲ್ಲಿಯೇ ಅಮೆರಿಕದ ಯುಎಸ್ಐಎಸ್ಗೆ ಕೆಲಸ ಮಾಡುತ್ತಿದ್ದಾಗ ಅಲ್ಲಿ ಅಮೆರಿಕದವರು ಪಡೆಯುತ್ತಿದ್ದಷ್ಟು ವೇತನ ನನಗೆ ಸಿಗುತ್ತಿರಲಿಲ್ಲ ಎಂಬುದು ನನಗಿನ್ನೂ ನೆನಪಿದೆ. ಅದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಭಾರತದೊಳಗೆ ಅದೇ ಕಚೇರಿಯ ಮಂದಿ ಪ್ರವಾಸ ಮಾಡುವಾಗ ಜತೆಗಿರುತ್ತಿದ್ದ ಭಾರತೀಯ ಸಹೊದ್ಯೋಗಿಗಳಿಗಿಂತ ಅಮೆರಿಕದವರಿಗೇ ಹೆಚ್ಚುವರಿ ಭತ್ಯೆ ಸಿಗುತ್ತಿತ್ತು. ಇದಕ್ಕೇನನ್ನುವುದು?
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.