ಪಂಡಿತ್ ರವಿ ಶಂಕರ್ ನಿಧನರಾದಾಗ ಎಂ ಟಿವಿ ಮತ್ತು ಫಾಕ್ಸ್ ನ್ಯೂಸ್ ನಂಥ ಎಷ್ಟೋ ಮಾಧ್ಯಮ ಸಂಸ್ಥೆಗಳು ಶ್ರೀ ಶ್ರೀ ರವಿ ಶಂಕರ್ ಚಿತ್ರವನ್ನು ಪ್ರಕಟಿಸಿದ್ದು ನೀವು ಗಮನಿಸಿರಬಹುದು. ಇದೇನಿದು?
ಪ್ರಪಂಚದ ಅತಿ ದೊಡ್ಡ ಸಂಗೀತಗಾರರಲ್ಲಿ ಒಬ್ಬರಾದ ಪಂಡಿತ್ ರವಿ ಶಂಕರ್ ಅವರ ಮುಖವೇ ಮಾಧ್ಯಮದ ಎಷ್ಟೋ ಮಂದಿಗೆ ಗೊತ್ತಿಲ್ಲವೇ ಎಂದು ಬೇಸರ ಪಟ್ಟುಕೊಂಡವರಲ್ಲಿ ನಾನೂ ಒಬ್ಬ.
ಆದರೆ ಆಶಾವಾದದ ಪಾಠವೊಂದನ್ನು ನೀವು ಕೇಳಿರಬಹುದು. ಗ್ಲಾಸ್ ಅರ್ಧ ಖಾಲಿ ಇದೆ ಎಂದು ನೋಡುವುದಕ್ಕಿಂತ ಅರ್ಧ ತುಂಬಿದೆ ಎಂದು ನೋಡಬೇಕಂತೆ. ಭಾರತೀಯ ಸಂಗೀತವನ್ನು ಪ್ರಪಂಚಕ್ಕೆ ಪರಿಚಯಿಸಿದ ಮೇರು ಕಲಾವಿದ ರವಿ ಶಂಕರ್ ಬಗ್ಗೆ ಜನರಿಗೆ ಗೊತ್ತಿಲ್ಲ ಎಂದು ತಲೆ ಕೆಡಿಸಿಕೊಳ್ಳುವುದರ ಬದಲು, ದೊಡ್ಡ ಭಿತ್ತಿಗಳಲ್ಲಿ ಆಗಾಗ ಕಾಣಿಸಿಕೊಳ್ಳುವ, ಪಿ.ಆರ್. ಪ್ರೇಮಿ ಬಾಬಾಗಳನ್ನೂ ಎಷ್ಟೋ ಮಂದಿ ಗುರುತಿಸುತ್ತಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳಿ. ಸಂಸ್ಕೃತಿಯ ಬಗ್ಗೆ ಅಸಡ್ಡೆ ಹೆಚ್ಚಾಗಿದೆ ಎಂದು ಭಾಷಣ ಬಿಗಿಯುವ ಮೊದಲು ಕಲೆಯ ಬಗೆಗಿನ ಅಸಡ್ಡೆ ಸುದ್ದಿ ಮಾಧ್ಯಮಗಳಲ್ಲಿ ಎಷ್ಟು ಸಾಮಾನ್ಯ ಮತ್ತು ಫ್ಯಾಷನಬಲ್ ಎಂದು ಮೊದಲು ಅರಿಯೋಣ. ಎಷ್ಟೋ ದೊಡ್ಡ ಪತ್ರಿಕೆಗಳಲ್ಲಿ ಇಂದು ಸಂಗೀತ ವಿಮರ್ಶೆಗೆ ಸ್ಥಳಾವಕಾಶವಿಲ್ಲ. ನಾನು ಕೆಲಸ ಮಾಡುತ್ತಿದ್ದ ಪತ್ರಿಕೆಯೊಂದರಲ್ಲಿ ಒಮ್ಮೆ ಸಂತೂರ್ ವಾದಕ ಶಿವಕುಮಾರ್ ಶರ್ಮ ಅವರ ಭಾವಚಿತ್ರ ಬೇಕು ಎಂದು ಅಲ್ಲಿನ ಗ್ರಂಥಾಲಯ ವಿಭಾಗದ ಅನುಭವಸ್ಥರೊಬ್ಬರನ್ನು ಕೇಳಿದೆ. ಅವರು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರ ಚಿತ್ರವನ್ನು ತಂದು ಟೇಬಲ್ ಮೇಲೆ ಇಟ್ಟು ಮನೆಗೆ ಹೊರಟುಹೋದರು. ಮುದ್ರಣಕ್ಕೆ ಕಳಿಸುವ ಸಮಯ ಆಗಿಹೋಗಿತ್ತು. ಇದೇನು ಸಂತೂರ್ ವಾದಕರ ಚಿತ್ರ ಕೇಳಿದರೆ ರಾಜಕೀಯದವರ ಚಿತ್ರ ಕೊಟ್ಟಿದ್ದಾರೆ ಎಂದು ನಾನು ಗಾಬರಿಯಾಗಿ ಕೇಳಿದಾಗ ಸಹ ಪತ್ರಕರ್ತರು ಸಮಾಧಾನ ಹೇಳಿದರು: `ನೀವು ಸಂತೂರ್ ಕೇಳಿದಿರಿ, ಅವರು ಸಾತನೂರ್ ಕೊಟ್ಟರು ಅಷ್ಟೇ.' ಎಂದಾದರೂ, ಯಾವುದಾದರೂ ಪತ್ರಿಕೆಯಲ್ಲಿ `ಹೆಸರಾಂತ ಸಂತೂರ್ ವಾದಕ' ಎಂಬ ಬರಹದಡಿ ರಿಯಲ್ ಎಸ್ಟೇಟ್ ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರ ಫೋಟೋ ಪ್ರಕಟವಾದರೆ ಅಂಥ ಪ್ರಮಾದ ಹೇಗಾಗುತ್ತದೆ ಎಂದು ನಿಮಗೆ ಗೊತ್ತಿರಲಿ!