ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕೀನಾಬಾಯಿ ನಂಬಿಕೆ ಉಳಿಸಿದ ಶಿವ

Last Updated 9 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ನರೋಡಾ ಪಾಟಿಯಾ ಹತ್ಯಾಕಾಂಡದ ಅಪರಾಧಿಗಳಿಗೆ ಗುಜರಾತ್ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದ್ದನ್ನು ಕೇಳಿದಾಗ ನನಗೆ ನೆನಪಾದವರು ಸಕೀನಾ ಬಾಯಿ. ಐದು ವರ್ಷಗಳ ಹಿಂದೆ ಗುಜರಾತ್ ವಿಧಾನಸಭಾ ಚುನಾವಣೆಯ ಸಮೀಕ್ಷೆಗೆಂದು ಹೋದವನಿಗೆ ನರೋಡಾ ಪಾಟಿಯಾದಲ್ಲಿ ಭೇಟಿಯಾಗಿದ್ದ ಸಕೀನಾಬಾಯಿ ಹಳೆಯ ದಿನಗಳನ್ನು ಮೆಲುಕುಹಾಕುತ್ತಾ `ನಾವೆಲ್ಲ ಒಂದು ಕುಟುಂಬದ ರೀತಿ ಇದ್ದವರು, ಆ ಕಾಲ ಹೊರಟೋಯ್ತು, ಈಗ ಎಲ್ಲೋ ಗಲಭೆ ನಡೆದ ಗಾಳಿಸುದ್ದಿ ಬಂದರೂ ಎದೆ ನಡ್‌ಗತೈತಿ. ಯಾರ ಮೇಲೂ ನಂಬಿಕೆ ಬರೋಲ್ಲ, ಆ ಶಿವನೇ ಕಾಯಬೇಕು~ ಎಂದಿದ್ದರು ಅಚ್ಚ ಕನ್ನಡದಲ್ಲಿ. (ಪ್ರಜಾವಾಣಿ ವರದಿ: 15.12.2007). ಮುಸ್ಲಿಂ ಧರ್ಮಕ್ಕೆ ಸೇರಿದವರೆಂಬ ಕಾರಣಕ್ಕಾಗಿ  `ಹಿಂದೂ ಶಿವ~  ಯಾದಗೀರ್ ತಾಲ್ಲೂಕಿನ ಅತ್ತಿಗುಣಿಯ ಸಕೀನಾಬಾಯಿಯ ಕೈಬಿಡಲಿಲ್ಲ. ಅವರು ತನ್ನ ಮೇಲೆ ಇಟ್ಟ ನಂಬಿಕೆಯನ್ನು ಹುಸಿಮಾಡದೆ `ನ್ಯಾಯದೇವತೆಯ ಕಣ್ಣು ತೆರೆಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ.~

ಆದರೆ ನ್ಯಾಯಕ್ಕೆ ಸಿಕ್ಕಿದ ಈ ಜಯಕ್ಕಾಗಿ ಉಳಿದೆಲ್ಲರಿಗಿಂತ ಹೆಚ್ಚು ಸಂತಸ ಪಡಬೇಕಾದವರು ತಾವು ಎಂದು ಕರ್ನಾಟಕದ ಬಹಳಷ್ಟು ಜನರಿಗೆ ತಿಳಿದಿಲ್ಲ. 35 ಮಕ್ಕಳು, 32 ಮಹಿಳೆಯರು ಮತ್ತು 30 ಗಂಡಸರು ಸೇರಿದಂತೆ ನರೋಡಾ ಪಾಟಿಯಾದಲ್ಲಿ ಹತ್ಯೆಗೀಡಾದವರ ಅಧಿಕೃತ ಸಂಖ್ಯೆ 97. ಇವರಲ್ಲಿ ಹೆಚ್ಚಿನವರು ಕರ್ನಾಟಕ ಮತ್ತು ಮಹಾರಾಷ್ಟ್ರ ಮೂಲದವರು. ಹುಬ್ಬಳ್ಳಿ, ಧಾರವಾಡ, ಹಾನಗಲ್, ಸುರಪುರ, ಶಹಪುರ, ಜೇವರ್ಗಿ, ಯಾದಗೀರ್ ಕಡೆಗಳಿಂದ ವರ್ಷಗಳ ಹಿಂದೆ ಅಲ್ಲಿಗೆ ವಲಸೆ ಹೋದವರಿದ್ದಾರೆ. ಸಕೀನಾಬಾಯಿಯಂತೆ ಅಚ್ಚಕನ್ನಡ ಮಾತನಾಡುವವರು ಈಗಲೂ ಅಲ್ಲಿದ್ದಾರೆ. ಇದಕ್ಕಾಗಿಯೇ ಸ್ಥಳೀಯರು ನರೋಡಾ ಪಾಟಿಯಾಕ್ಕೆ `ಛೋಟಾ ಕರ್ನಾಟಕ್~ ಎನ್ನುತ್ತಾರೆ.  ಊರಲ್ಲಿ ನೇಕಾರಿಕೆ ಮಾಡುತ್ತಿದ್ದ ಇವರು  ಕೈಮಗ್ಗ ನಿಂತುಹೋದ ಮೇಲೆ ಅಹಮದಾಬಾದ್‌ಗೆ ಹೋಗಿ ಬಟ್ಟೆಗಿರಣಿಗಳಲ್ಲಿ ಸೇರಿಕೊಂಡಿದ್ದರು. ಗಿರಣಿಗಳು ಯಾಂತ್ರಿಕೃತಗೊಳ್ಳುತ್ತಿದ್ದಂತೆಯೇ ಅದಕ್ಕೆ ಬೇಕಾದ ಕೌಶಲ ಇಲ್ಲದೆ ನಿರುದ್ಯೋಗಿಗಳಾಗಿ ಅನಿವಾರ್ಯವಾಗಿ ಟೈಲರಿಂಗ್, ಲಾರಿ-ಅಟೋರಿಕ್ಷಾ ಓಡಿಸುವುದು, ಮಾಂಸ ಮಾರಾಟ, ಎಲೆಕ್ಟ್ರಿಕಲ್ ರಿಪೇರಿ ಮೊದಲಾದ ಸಣ್ಣಪುಟ್ಟ ವೃತ್ತಿಯಲ್ಲಿ ತೊಡಗಿಸಿಕೊಂಡು ಬಡತನದ ನಡುವೆಯೂ ತಮ್ಮ ಪಾಡಿಗೆ ತಾವಿದ್ದರು. ಹತ್ತು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಒಂದು ದಿನ ಅವರ ಬದುಕಿಗೆ ಬೆಂಕಿ ಬಿತ್ತು. ಕೋಮುಗಲಭೆಯ ನಂತರ ಶಹಾ ಅಲಂ ನಿರಾಶ್ರಿತರ ಶಿಬಿರದಲ್ಲಿ ಭೇಟಿಯಾಗಿದ್ದ ಸುರಪುರ ತಾಲ್ಲೂಕಿನ ಜೈನುಲ್ಲಾ ನನ್ನ ಕೈಹಿಡಿದು  `ಸಾಯಲಿಕ್ಕೆ ಇಲ್ಲಿಗೆ ಬರಬೇಕಿತ್ತಾ?~ ಎಂದು ಕೇಳಿದ್ದು (ಪ್ರಜಾವಾಣಿ ವರದಿ, ಮಾರ್ಚ್ 8, 2002)  ಕಿವಿಯಲ್ಲಿ ಈಗಲೂ ಗುಂಯ್‌ಗುಡುತ್ತಿದೆ.

ಅಹಮದಾಬಾದ್ ನಗರದಿಂದ ಸುಮಾರು 15 ಕಿ.ಮೀ.ದೂರದ ಹೊರವಲಯದಲ್ಲಿರುವ ನರೋಡಾ ಪಾಟಿಯಾಕ್ಕೂ ಗೋಧ್ರಾಹತ್ಯಾಕಾಂಡಕ್ಕೂ ಸಂಬಂಧವೇ ಇಲ್ಲ. ಇದು ಆ ಪ್ರಕರಣದ ವಿಚಾರಣೆಯಲ್ಲಿಯೂ ಸಾಬೀತಾಗಿದೆ. `ಪ್ರತೀಕಾರ~ಕ್ಕಾಗಿ ನರೋಡಾಪಾಟಿಯಾವನ್ನೇ ಆರಿಸಿಕೊಳ್ಳಲು ಮುಖ್ಯವಾಗಿ ಎರಡು ಕಾರಣ. ಮೊದಲನೆಯದು ಒಂದೇ ಕಡೆ ಸುಲಭದಲ್ಲಿ ನೂರಾರು  ಮುಸ್ಲಿಂ ತಲೆಗಳು ಸಿಗುತ್ತವೆ ಎಂಬ ದುಷ್ಟ ಮನಸ್ಸಿನ ಯೋಚನೆ. ಸುಮಾರು 15 ಸಾವಿರ ಜನಸಂಖ್ಯೆಯ ನರೋಡಾಪಾಟಿಯಾ ಬಡಾವಣೆಗೆ ಸೇರಿರುವ ಹುಸೇನ್‌ನಗರ, ಜವಾಹರ ನಗರ, ಪಂಡಿತ್ ಕೀ ಚಾಳ್, ಮಸ್ಜೀದ್‌ಗಲ್ಲಿಗಳಲ್ಲಿ ಸುಮಾರು 250-300  ಮುಸ್ಲಿಂ ಕುಟುಂಬಗಳಿವೆ. ಅಲ್ಲಿರುವ ಹಿಂದೂ ಕುಟುಂಬಗಳ ಸಂಖ್ಯೆ 25 ಕೂಡಾ ದಾಟಲಾರದು. ನರೋಡಾ ಪಾಟಿಯಾದ ಈ ಚಾಳ್‌ಗಳನ್ನು ಗಂಗೋತ್ರಿ ಸೊಸೈಟಿ ಮತ್ತು ಗೋಪಿನಾಥ್ ಸೊಸೈಟಿ ಎಂಬ ಎರಡು ವಸತಿಸಂಕೀರ್ಣಗಳು ಸುತ್ತುವರಿದಿವೆ.

`ರಕ್ಷಣೆ ಕೋರಿ ಓಡಿ ಬಂದ ನಮ್ಮನ್ನು ಪೊಲೀಸರು ಕತ್ತಲಾದ ಮೇಲೆ ಬೇರೆ ಕಡೆ ಸಾಗಿಸುತ್ತೇವೆ ಎಂದು ಹೇಳಿ ಒಂದು ಕಡೆ ಸೇರಿಸಿಬಿಟ್ಟಿದ್ದರು. ಎರಡು ವಸತಿಸಂಕೀರ್ಣಗಳ ನಡುವಿನ ಓಣಿಯಲ್ಲಿ ಸೇರಿದ್ದ ನಮ್ಮ ಮೇಲೆ ಕಟ್ಟಡಗಳ ಮೇಲಿನಿಂದ ಪೆಟ್ರೋಲ್-ಸೀಮೆ ಎಣ್ಣೆ ಸುರಿಯತೊಡಗಿದ್ದರು. ಆಗ ಪ್ರತ್ಯಕ್ಷವಾದ ಬೆಂಕಿ ಕೊಳ್ಳಿ ಹಿಡಿದುಕೊಂಡ ಗುಂಪು ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದವರನ್ನೆಲ್ಲ ಬೆಂಕಿಗೆ ದೂಡಿತ್ತು. ಅವರೆಲ್ಲ ಮೊದಲೇ ಪ್ಲಾನ್ ಮಾಡಿದ್ದರು ಸಾಬ್...~ ಎಂದು ಕುರೇಷಿಲಾಲ್ ಆ ಕರಾಳ ದಿನದ ಘಟನಾವಳಿಗಳನ್ನು ಗಲಭೆಯ ನಂತರ ವಿವರಿಸಿದ್ದರು.

ಎರಡನೆ ಕಾರಣ ಈಗ ಜೈಲು ಸೇರಿರುವ ಮಾಯಾಬೆನ್ ಕೊಡ್ನಾನಿಯ ಬೆಂಬಲ. ಸ್ಥಳೀಯ ಶಾಸಕರ ನಿಯಂತ್ರಣದಲ್ಲಿ ಪೊಲೀಸರು ಇರುವುದರಿಂದ ಅಪರಾಧಿಗಳಿಗೆ ರಕ್ಷಣೆ ನೀಡುವುದು ಮತ್ತು ಜನಬಲ-ಸಂಪನ್ಮೂಲ ಹೊಂದಿಸಿಕೊಳ್ಳುವುದು ಸುಲಭ. ಈ ಲೆಕ್ಕಾಚಾರ ಕೂಡಾ ಹುಸಿಯಾಗಲಿಲ್ಲ. ನರೋಡಾ ಪಾಟಿಯಾದ ಎದುರಿನ ರಸ್ತೆಯಲ್ಲಿಯೇ ರಾಜ್ಯ ಮೀಸಲು ಪಡೆಯ ಕೇಂದ್ರ ಕಚೇರಿ ಇದ್ದರೂ ಯಾವ ಪೊಲೀಸರೂ 2002ರ ಫೆಬ್ರವರಿ 28ರಂದು ಬೆಳಿಗ್ಗೆಯಿಂದ ಸಂಜೆ ವರೆಗೆ ರಕ್ಷಣೆಗೆ ಬಂದಿರಲಿಲ್ಲ. ರಕ್ಷಣೆ ಕೋರಿ ಓಡಿಬಂದ ಮಹಿಳೆಯರು ಮತ್ತು ಮಕ್ಕಳ ಮೇಲೆಯೇ ಪೊಲೀಸರು ಅಶ್ರುವಾಯು ಸಿಡಿಸಿದ್ದರು. ಖಾಕಿಧಾರಿ ಖಳನಾಯಕರಲ್ಲಿ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿರುವ ಸ್ಥಳೀಯ ಇನ್‌ಸ್ಪೆಕ್ಟರ್ ಎಂ.ಕೆ.ಮೈಸೂರ್‌ವಾಲಾ ಒಬ್ಬರು. ಇಷ್ಟೆ ಅಲ್ಲ, ನರೋಡಾಪಾಟಿಯಾದ ಅಗ್ನಿಕಾಂಡಕ್ಕೆ ಬಳಸಿದ್ದು ಎದುರಿನ ರಸ್ತೆಯಲ್ಲಿರುವ ರಾಜ್ಯ ರಸ್ತೆಸಾರಿಗೆಯ ದಾಸ್ತಾನು ಮಳಿಗೆಯಲ್ಲಿದ್ದ ಪೆಟ್ರೋಲ್ ಮತ್ತು ಡೀಸೆಲ್.

ಅಲ್ಲಿ ಬದುಕುಳಿದವರ ಬಾಯಿಯಿಂದಲೇ ಕೇಳದೆ ಇದ್ದರೆ ಎಲ್ಲರಂತೆ ತಾಯಿಯ ಹೊಟ್ಟೆಯಿಂದ ಬಂದ ಮನುಷ್ಯರು ಈ ರೀತಿ ವರ್ತಿಸಲು ಸಾಧ್ಯ ಎನ್ನುವುದನ್ನು ನಂಬುವುದು ಕಷ್ಟ. ಗುಜರಾತ್‌ನಲ್ಲಿ ಕೋಮುಗಲಭೆಯ ನಂತರ ಅಲ್ಲಿನ ನಿರಾಶ್ರಿತರು ಹೇಳಿದ್ದ ಕತೆಗಳನ್ನು ನಾನು ಕೂಡಾ ಆಗ ಸಂಪೂರ್ಣವಾಗಿ ನಂಬಿರಲಿಲ್ಲ. ಇಂತಹ ಘಟನೆಗಳು ನಡೆದಿದ್ದರೂ ಅದು ಕೋಮುದ್ವೇಷದಿಂದ ಕುರುಡರಾಗಿರುವ ಹುಚ್ಚರು ಮತ್ತು ಒಂದಷ್ಟು ಪುಂಡರು ಇದನ್ನು ನಡೆಸಿರಬಹುದೆಂದು ಬಹಳ ಮಂದಿಯಂತೆ ನಾನು ತಿಳಿದಿದ್ದೆ. ಆದರೆ ನಂತರದ ದಿನಗಳಲ್ಲಿ ಹೊರಬರತೊಡಗಿದ  ಸತ್ಯಸಂಗತಿಗಳು  ಬೆಚ್ಚಿಬೀಳಿಸುವಂತಹದ್ದು.

28 ವರ್ಷಗಳ ಜೈಲುಶಿಕ್ಷೆಗೆ ಒಳಗಾಗಿರುವ ಮಾಯಾ ಕೊಡ್ನಾನಿ ಮಹಿಳೆ ಮತ್ತು ಸ್ಥಳೀಯ ಶಾಸಕಿ ಮಾತ್ರವಲ್ಲ, ಸ್ತ್ರೀರೋಗ ತಜ್ಞೆ ಕೂಡಾ. ದೇಶ ವಿಭಜನೆಯ ಕಾಲದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದ ಸಿಂಧಿ ಸಮುದಾಯಕ್ಕೆ  ಸೇರಿರುವ ಮಾಯಾ ಕೊಡ್ನಾನಿ ವಿದ್ಯಾರ್ಥಿದೆಸೆಯಿಂದಲೇ ಆರ್‌ಎಸ್‌ಎಸ್ ಜತೆ ಗುರುತಿಸಿಕೊಂಡವರು ಮತ್ತು ನರೇಂದ್ರ ಮೋದಿಯವರ ಜತೆಗಿದ್ದವರು.  ಈ ಪ್ರಕರಣದ ವಿಚಾರಣೆಯ ಪ್ರಾರಂಭದ ದಿನಗಳಲ್ಲಿ ಮಾಯಾ ಕೊಡ್ನಾನಿ ಹೆಸರು ಹೆಚ್ಚು ಕೇಳಿಬಂದಿರಲಿಲ್ಲ. ಆದರೆ ಈಕೆಯ ಬೆನ್ನುಹತ್ತಿದ ರಾಹುಲ್ ಶರ್ಮಾ ಎಂಬ ದಿಟ್ಟ ಪೊಲೀಸ್ ಅಧಿಕಾರಿ 2002ರ ಫೆಬ್ರವರಿ 28ರಂದು ಮಾಯಾ ಕೊಡ್ನಾನಿ ಮತ್ತು ಬಾಬು ಬಜರಂಗಿ ನರೋಡಾಪಾಟಿಯಾದ ಆಸುಪಾಸಿನಲ್ಲಿಯೇ ಇದ್ದರೆನ್ನುವ ಮಾಹಿತಿಯನ್ನು ಮೊಬೈಲ್ ಸಿಗ್ನಲ್‌ಗಳ ದಾಖಲೆಗಳಿಂದ ಸಂಗ್ರಹಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಮಾಹಿತಿಯನ್ನು ರಾಜ್ಯಸರ್ಕಾರಕ್ಕೆ ನೀಡದೆ ನೇರವಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರೆಂಬ ಕಾರಣಕ್ಕೆ ನರೇಂದ್ರಮೋದಿ ಸರ್ಕಾರ ಶರ್ಮಾ ಅವರನ್ನು ದುರ್ವರ್ತನೆಯ ಆರೋಪದಡಿ ಶಿಕ್ಷಿಸಲು ಪ್ರಯತ್ನಿಸಿತ್ತು. ಶರ್ಮಾ ಅವರ ಪ್ರಯತ್ನ ವಿಫಲವಾಗಲಿಲ್ಲ.

`ಗುಜರಾತ್ ಕೋಮುಗಲಭೆ ಗೋಧ್ರಾ ಹತ್ಯಾಕಾಂಡಕ್ಕೆ ಸಹಜವಾಗಿ ವ್ಯಕ್ತವಾದ ಪ್ರತಿಕ್ರಿಯೆ, ಇದರಲ್ಲಿ ಸರ್ಕಾರ ಇಲ್ಲವೇ ಪಕ್ಷದ ಪಾತ್ರ ಇಲ್ಲ~ ಎಂದು ಕಳೆದ ಹತ್ತುವರ್ಷಗಳಲ್ಲಿ ಹೇಳುತ್ತಾ ಬಂದಿರುವ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಸಮರ್ಥನೆಯನ್ನು ಕೂಡಾ ವಿಶೇಷ ನ್ಯಾಯಾಲಯ ಸುಳ್ಳೆಂದು ಸಾಬೀತುಮಾಡಿದೆ.

ಗೋಧ್ರಾ ಹತ್ಯಾಕಾಂಡ ನಂತರ ಮುಸ್ಲಿಮರನ್ನೇ ಗುರಿಯಾಗಿಟ್ಟುಕೊಂಡು ನಡೆದ ಕೊಲೆ,ಸುಲಿಗೆ, ಅತ್ಯಾಚಾರಗಳೆಲ್ಲವೂ ಪೂರ್ವಯೋಜಿತ ಮತ್ತು ಅದರಲ್ಲಿ ತೊಡಗಿದ್ದ ಅಪರಾಧಿಗಳಿಗೆಲ್ಲ ಸರ್ಕಾರ ರಕ್ಷಣೆ ನೀಡುತ್ತ ಬಂದಿದೆ ಎಂಬ ಆರೋಪವನ್ನು ಮುಖ್ಯಮಂತ್ರಿ ನರೇಂದ್ರಮೋದಿ ನಿರಾಕರಿಸುವ ಸ್ಥಿತಿಯಲ್ಲಿ ಈಗ ಇಲ್ಲ. ಗಲಭೆಯ ಸಂದರ್ಭದಲ್ಲಿ ಕೇವಲ ಶಾಸಕಿಯಾಗಿದ್ದ ಮಾಯಾ ಕೊಡ್ನಾನಿಯನ್ನು  2007ರಲ್ಲಿ ಸಚಿವರನ್ನಾಗಿ ನೇಮಿಸಿದ್ದಾಗ ಗಲಭೆಯಲ್ಲಿ ಆಕೆಯ ಪಾತ್ರದ ಬಗ್ಗೆ ಮೋದಿ ಅವರಿಗೆ ತಿಳಿದಿರಲಿಲ್ಲ ಎಂದು ಹೇಳಿದರೂ ಯಾರೂ ನಂಬಲಾರರು.

ನರೋಡಾ ಪಾಟಿಯಾ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಇನ್ನೂ ಒಂದು ಕಾರಣಕ್ಕಾಗಿ ಮಹತ್ವಪೂರ್ಣವಾದುದು. ಸಾಮಾನ್ಯವಾಗಿ ಕೋಮುಗಲಭೆಗಳ ಪ್ರಕರಣದಲ್ಲಿ ಗೂಂಡಾಗಳು, ನಿರುದ್ಯೋಗಿಗಳು, ಬಡವರು, ನಿರ್ಗತಿಕರು, ಹಿಂದುಳಿದವರು, ದಲಿತರೇ ಅಪರಾಧಿಗಳೆನಿಸಿಕೊಂಡು ಶಿಕ್ಷೆ ಅನುಭವಿಸುತ್ತಾರೆ. ಹಿಂದೂ ಧರ್ಮದ ರಕ್ಷಣೆಗಾಗಿ ನಡೆದ ಉತ್ತರಪ್ರದೇಶದ ಬಾಬ್ರಿಮಸೀದಿ ಧ್ವಂಸದ ಕಾರ್ಯಾಚರಣೆಯಿಂದ ಹಿಡಿದು ಮಂಗಳೂರಿನ ಹೋಂಸ್ಟೇ ಮೇಲಿನ ದಾಳಿವರೆಗಿನ ಎಲ್ಲ ಪ್ರಕರಣಗಳಲ್ಲಿಯೂ ಇದು ಸತ್ಯ. ಇದನ್ನು ಯಾರಿಗಾದರೂ ಪರಾಮರ್ಶಿಸಿಕೊಳ್ಳಬೇಕೆಂದು ಅನಿಸಿದರೆ ಸ್ವಾತಂತ್ರ್ಯಾನಂತರ ದೇಶದಲ್ಲಿ ನಡೆದ ಕೋಮುಗಲಭೆಗಳಿಗೆ ಸಂಬಂಧಿಸಿದ  ಪ್ರಥಮ ಮಾಹಿತಿ ವರದಿ ಮತ್ತು ಆರೋಪಪಟ್ಟಿಗಳಲ್ಲಿ ಇರುವ ಹೆಸರುಗಳನ್ನು ಪರಿಶೀಲಿಸಬಹುದು.

ಆರೋಪಿಗಳಾದವರಲ್ಲಿ ಶೇಕಡಾ 99ರಷ್ಟು ಮಂದಿ ಬರೀ `ಪಾತ್ರಧಾರಿಗಳು~. `ಸೂತ್ರಧಾರಿಗಳು~ ತಮ್ಮ ಸುತ್ತ  ಭದ್ರತೆಗಾಗಿ ಪೊಲೀಸರನ್ನು ಇಟ್ಟುಕೊಂಡು ಸುರಕ್ಷಿತವಾಗಿರುತ್ತಾರೆ. `ಪಾತ್ರಧಾರಿಗಳು~ ಜೈಲು ಸೇರುತ್ತಾರೆ, ಅವರ ಕುಟುಂಬಗಳು ಬೀದಿಗೆ ಬೀಳುತ್ತವೆ. ಇದು ಹಿಂದೂ ಮತ್ತು ಮುಸ್ಲಿಂ ಧರ್ಮಗಳೆರಡಕ್ಕೂ ಸೇರಿರುವ ಸತ್ಯ.ಆದರೆ ಇದೇ ಮೊದಲ ಬಾರಿಗೆ `ಸೂತ್ರದಾರರು~ ಕೂಡಾ ಶಿಕ್ಷೆಗೊಳಗಾಗಿದ್ದಾರೆ. ಹಾಲಿ ಶಾಸಕಿ ಮಾಯಾ ಕೊಡ್ನಾನಿಗೆ ನ್ಯಾಯಾಲಯ ವಿಧಿಸಿರುವ  28 ವರ್ಷಗಳ ಸೆರೆವಾಸದ ಶಿಕ್ಷೆ `ಕಂಡವರ ಮಕ್ಕಳನ್ನು ಬಾಯಿಗೆ ತಳ್ಳುವ~ ದುಷ್ಟ ಮನಸ್ಸುಗಳಿಗೆಲ್ಲ ಎಚ್ಚರಿಕೆಯ ಗಂಟೆಯಂತಿದೆ.

ಬಾಬ್ರಿ ಮಸೀದಿ ಧ್ವಂಸದ ನಂತರ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ಕೋಮುದ್ವೇಷದ ಜ್ವಾಲೆ ನಿಯಂತ್ರಣಕ್ಕೆ ಬರಬಹುದೇನೋ ಎಂಬ ಸಣ್ಣ ಆಸೆಯ ಬೆಳಕು ಕೂಡಾ ಗುಜರಾತ್‌ವಿಶೇಷ ನ್ಯಾಯಾಲಯದ ತೀರ್ಪಿನಲ್ಲಿದೆ. ಹಿಂದೂ ಕೋಮುವಾದಕ್ಕೆ ವಿರುದ್ಧವಾಗಿ ಅಷ್ಟೇ ಅಪಾಯಕಾರಿಯಾಗಿ ಮುಸ್ಲಿಂ ಕೋಮುವಾದ ಇತ್ತೀಚೆಗೆ ಬೆಳೆಯುತ್ತಿದೆ. ಮುಸ್ಲಿಂ ಕೋಮುವಾದವನ್ನು ಬೆಳೆಸುವವರು ಕೂಡಾ ಇಲ್ಲಿಯ ವರೆಗೆ ಬಳಸುತ್ತಾ ಬಂದಿರುವುದು ಗುಜರಾತ್ ಮತ್ತಿತರ ಕಡೆಗಳಲ್ಲಿ ನಡೆದಿರುವ ಕೋಮುಗಲಭೆಗಳ ಅತಿರಂಜಿತ ವರದಿಗಳನ್ನು. ಇವರು ಮುಸ್ಲಿಂ ಯುವಕರ ತಲೆಕೆಡಿಸುವುದೇ `ಗುಜರಾತ್‌ನಲ್ಲಿ ಸರ್ಕಾರವೇ ಮುಂದೆ ನಿಂತು ಸಾವಿರಾರು ಮುಸ್ಲಿಮರ ಮಾರಣ ಹೋಮ ನಡೆಸಿದರೂ ನೊಂದವರಿಗೆ ಇಲ್ಲಿಯ ವರೆಗೆ ನ್ಯಾಯ ಸಿಕ್ಕಿಲ್ಲ. ನ್ಯಾಯಾಲಯಗಳಿಂದಲೂ ರಕ್ಷಣೆ ಸಿಗದೆ ಇದ್ದರೆ ಈ ದೇಶದ ಮೇಲೆ ಹೇಗೆ ಭರವಸೆ ಇಟ್ಟುಕೊಳ್ಳಲು ಸಾಧ್ಯ?~ ಎನ್ನುವ ಪ್ರಶ್ನೆಯೊಂದಿಗೆ. ಇಂತಹದ್ದೇ ಪ್ರಶ್ನೆಯನ್ನು ನರೋಡಾ ಪಾಟಿಯಾದ ಇಸ್ಲಾಮಿಕ್ ಪರಿಹಾರ ಸಮಿತಿಯ ಕಾರ್ಯದರ್ಶಿ ನಜೀರ್‌ಖಾನ್ ಪಠಾಣ್ ಐದು ವರ್ಷಗಳ ಹಿಂದೆ ನನಗೂ ಕೇಳಿದ್ದರು. ಆಗ ನನ್ನಲ್ಲಿಯೂ ಉತ್ತರ ಇರಲಿಲ್ಲ, ಈಗ  ಕೈಯಲ್ಲಿರುವ ಗುಜರಾತ್ ವಿಶೇಷ ನ್ಯಾಯಾಲಯದ ತೀರ್ಪನ್ನು ತೋರಿಸಿ ಉತ್ತರಿಸ ಬಲ್ಲೆ.

 `ಇತ್ತೀಚೆಗೆ ಮದರಸಾಕ್ಕೆ ಬರುತ್ತಿರುವ ಹುಡುಗರೆಲ್ಲ ಮಾತೆತ್ತಿದರೆ ಸದ್ದಾಂಹುಸೇನ್, ಒಸಾಮ ಬಿನ್ ಲಾಡೆನ್ ಎನ್ನುತ್ತಿದ್ದಾರೆ..~ ಎಂದು ವಿಷಾದದಿಂದ ಅದೇ ಪಠಾಣ್ ಹೇಳಿದ್ದರು. ಆ ಹುಡುಗರೆಲ್ಲ ಮಾತನಾಡಿಕೊಳ್ಳಲು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಜ್ಯೊತ್ನಾ ಯಾಗ್ನಿಕ್‌ನಿಂದ ಹಿಡಿದು ನಿವೃತ್ತ ನ್ಯಾಯಮೂರ್ತಿಗಳಾದ ಜೆ.ಎಸ್.ವರ್ಮಾ, ಅರಿಜಿತ್ ಪಸಾಯತ್ ಮತ್ತು ಹೊಸಬೆಟ್ಟು ಸುರೇಶ್, ಪೊಲೀಸ್ ಅಧಿಕಾರಿಗಳಾದ ಆರ್.ಬಿ.ಶ್ರೀಕುಮಾರ್, ರಾಹುಲ್ ಶರ್ಮಾ ಮತ್ತು ಸಂಜೀವ್ ಭಟ್, ವಕೀಲರಾದ ಮುಕುಲ್ ಸಿನ್ಹಾ ಮತ್ತು ಗೋವಿಂದ್ ಪರಮಾರ್, ಸಾಮಾಜಿಕ ಕಾರ್ಯಕರ್ತರಾದ ತೀಸ್ತಾ ಸೆಟಲ್‌ವಾದ್, ಕಲಾವಿದೆ ಮಲ್ಲಿಕಾ ಸಾರಾಭಾಯ್, ಇಳಿವಯಸ್ಸಿನಲ್ಲಿಯೂ ಹಿಂದೂ-ಮುಸ್ಲಿಂ ಸೌಹಾರ್ದತೆಗಾಗಿ ಶ್ರಮಿಸುತ್ತಿರುವ  ಪ್ರೊ.ಬಂದೂಕ್‌ವಾಲಾ ಸೇರಿದಂತೆ ಎಷ್ಟೊಂದು ಹೆಸರುಗಳಿವೆಯಲ್ಲಾ ಎಂದು ಅವರಿಗೆ ಹೇಳಬೇಕೆಂದಿದ್ದೇನೆ.

ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT