ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಜ್ಞಾನದ ಲಾಭ

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅವನೊಬ್ಬ ದುರಹಂಕಾರಿ ರಾಜ. ಅವನಿಗೆ ಯಾವುದಾದರೂ ವಿಷಯ ಒಂದು ಚೂರು ತಿಳಿದರೂ ಸಾಕು, ರಾಜ್ಯದಲ್ಲೆಲ್ಲ ಸಾರಿಕೊಂಡು ಬರು­ತ್ತಿದ್ದ. ಅಷ್ಟೇ ಆದರೆ ಒಳ್ಳೆಯದಿತ್ತು. ಆತ ತನ್ನ ರಾಜ್ಯದಲ್ಲಿ ಇರುವವರೆಲ್ಲ ಮೂರ್ಖರು, ತಾನೊಬ್ಬನೇ ಬುದ್ಧಿವಂತ ಎನ್ನುವಂತೆ ನಡೆದುಕೊಳ್ಳುತ್ತಿದ್ದ.

ಯಾರ ಹತ್ತಿರವೋ ಒಂದಿಷ್ಟು ವಿಷಯ ಕೇಳಿಕೊಂಡು ಅವು­ಗಳನ್ನೇ ವಿಚಿತ್ರ ಪ್ರಶ್ನೆಗ­ಳನ್ನಾಗಿ ಮಾಡಿ­ಕೊಂಡು ಜನರಿಗೆ ಕೇಳಿ ಕಾಡುತ್ತಿದ್ದ. ಉತ್ತರ ಹೇಳಲಾಗದಿದ್ದರೆ ಶಿಕ್ಷಿಸುತ್ತಿದ್ದ. ಒಂದು ಬಾರಿ ಆತ ನಗರದಲ್ಲಿ ಡಂಗುರ ಸಾರಿಸಿದ. ‘ಮಹಾರಾಜರ ಹತ್ತಿರ ಎರಡು ಅತ್ಯಮೂಲ್ಯವಾದ ಪ್ರಶ್ನೆಗಳಿವೆ. ಅವುಗಳಿಗೆ ಯಾರಾದರೂ ಸರಿ­ಯಾಗಿ ಉತ್ತರಿಸಿದರೆ ಭಾರಿ ಬಹುಮಾನ ಕೊಡುತ್ತಾರೆ, ಅಷ್ಟೇ ಅಲ್ಲ ತಮ್ಮ ಒಬ್ಬಳೇ ಮಗಳನ್ನು ಮದುವೆ ಮಾಡಿಕೊಡು­ತ್ತಾರೆ.

ಅವನೇ ಮುಂದಿನ ರಾಜ­ನಾಗು­ತ್ತಾನೆ. ಆದರೆ, ಯಾರಾದರೂ ಉತ್ತರಿ­ಸಲು ಮುಂದೆ ಬಂದು ಯಾವುದೇ ಒಂದು ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದಿದ್ದರೆ ತಲೆ ಕಳೆದುಕೊಳ್ಳಬೇ­ಕಾ­ಗುತ್ತದೆ. ಎಚ್ಚರ’. ಜನ ಗಾಬರಿ­ಯಾದರು. ಮೊದಲೇ ಹುಚ್ಚ ರಾಜ ಮತ್ತು ಅವನ ಹುಚ್ಚ ಪ್ರಶ್ನೆಗಳು! ಅವ­ನಿಂದ ತಪ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ರಾಜನ ಅಪ್ಪಣೆಯಂತೆ ಜನರೆಲ್ಲ ತಿಳಿಸಿದ ದಿನ ಅವನ ಮನೆಯ ಮುಂದಿದ್ದ ಎತ್ತರ ಪ್ರದೇಶದಲ್ಲಿ ಸೇರಿ­ದರು. ರಾಜ ಸಿಂಹಾ­ಸನದ ಮೇಲೆ ಕುಳಿತುಕೊಂಡ. ತನ್ನ ಎರಡು ಪ್ರಶ್ನೆಗಳನ್ನು ಅವರ ಮುಂದಿಟ್ಟ.

ಅವುಗಳನ್ನು ಉತ್ತರಿಸಲಾಗದೇ ಅಥವಾ ಉತ್ತರ ನೀಡಲಿ­ಚ್ಛಿಸದೇ ಜನ ಸುಮ್ಮನೆ ಕುಳಿತರು. ಆತ ಎಲ್ಲರನ್ನೂ ಹೀಯಾಳಿಸಿ ಬಯ್ಯ­ತೊಡ­ಗಿದ. ಇದನ್ನೆಲ್ಲ ದೂರ ನಿಂತು ನೋಡುತ್ತಿದ್ದ ದನಕಾಯುವ ಗುಂಡಣ್ಣ ತಡೆಯ­ಲಾರದೆ ಮುಂದೆ ಬಂದು ತಾನು ಉತ್ತರಿಸುವುದಾಗಿ ಘೋಷಿಸಿದ. ರಾಜ ವ್ಯಂಗ್ಯವಾಗಿ ನಕ್ಕ.

ಮೊದಲನೇ ಪ್ರಶ್ನೆ ಕೇಳಿದ, ‘ಈಗ ಭಗವಂತ ಏನು ಮಾಡ­ಬಯಸಿ­ದ್ದಾನೆ?’ ಗುಂಡಣ್ಣ ಕ್ಷಣಕಾಲ ಯೋಚಿಸಿ ಹೇಳಿದ, ‘ಪ್ರಭು, ಈ ಪ್ರಶ್ನೆಗೆ ಉತ್ತರಿಸಲು ನೀವು ನಾನು ನಿಂತಲ್ಲಿಗೆ ಬರಬೇಕು ಮತ್ತು ನಾನು ಸಿಂಹಾಸನದ ಬಳಿ ಬರುತ್ತೇನೆ’. ರಾಜನಿಗೆ ಏನೂ ತಿಳಿಯದೆ ‘ಸರಿ’ ಎಂದು ಕೆಳಗೆ ಬಂದ. ಗುಂಡಣ್ಣ ಮೇಲೆ ಹೋಗಿ ಸಿಂಹಾಸನದ ಮೇಲೆ ಕುಳಿತ. ಜನ ಬೆರಗಾಗಿ ನೋಡು­ತ್ತಿದ್ದರು. ಗುಂಡಣ್ಣ ಹೇಳಿದ, ‘ಇದೇ ಪ್ರಭು ದೇವರು ಮಾಡ­ಬಯಸಿದ್ದು.

ದುರಹಂ­ಕಾರಿ ಮೂರ್ಖ ರಾಜನನ್ನು ಸಿಂಹಾಸನದ ಮೇಲಿಂದ ಕೆಳಗಿಳಿಸಿ, ನನ್ನಂತಹ ಅನಕ್ಷರಸ್ಥ, ಬಡ ಆದರೆ, ಪ್ರಾಮಾಣಿಕ ವ್ಯಕ್ತಿಯನ್ನು ಎರಡೇ ನಿಮಿಷ­ಗಳಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸಿ ಬಿಟ್ಟ. ಅದೇ ಅವನ ಶಕ್ತಿ’. ಜನ ಹುಚ್ಚೆದ್ದು ಜೈಕಾರ ಹಾಕಿ­ದರು. ತಡಬಡಿಸಿದ ರಾಜ ಎರಡನೇ ಪ್ರಶ್ನೆ ಕೇಳಿದ, ‘ನಿನ್ನ ದೇವರು ಈ ಕ್ಷಣದಲ್ಲಿ ಯಾವ ಕಡೆಗೆ ನೋಡುತ್ತಿ­ದ್ದಾನೆ?’ ಗುಂಡಣ್ಣ ಕೇಳಿ ಒಂದು ಮೇಣದಬತ್ತಿ ತರಿಸಿದ.

ಅದಕ್ಕೆ ಕಿಡಿ ಹಚ್ಚಿ ಬೆಳಗಿಸಿದ. ನಂತರ ರಾಜನಿಗೆ ಕೇಳಿದ, ‘ಈಗ ಮೇಣಬತ್ತಿಯ ಬೆಳಕು ಯಾವ ದಿಕ್ಕಿನಲ್ಲಿ ಹೋಗುತ್ತಿದೆ?’  ರಾಜ, ‘ಎಲ್ಲ ದಿಕ್ಕಿಗೂ ಬೆಳಕು ಹರಡುತ್ತಿದೆ’ ಎಂದಾಗ ಗುಂಡಣ್ಣ, ‘ಹಾಗೆಯೇ ಪ್ರಭು ಭಗ­ವಂತನ ದೃಷ್ಟಿ ಎಲ್ಲೆಡೆಗೂ ಇದೆ. ಅದರಲ್ಲೂ ದುರಹಂಕಾರಿಗಳ ಕಡೆಗೆ ಹೆಚ್ಚಿದೆ’ ಎಂದ. ರಾಜನ ಕಣ್ಣುಗಳು ನಿಚ್ಚಳ­ವಾದವು.  ಗುಂಡಣ್ಣ ರಾಜನ ಅಳಿಯ­ನಾದ, ಮುಂದೆ ತಿಳುವಳಿಕೆಯ ರಾಜನಾದ.  ಸಾಮಾನ್ಯ ಜ್ಞಾನ ಬೇರೆ, ಪದವಿ ಪತ್ರಗಳು ಬೇರೆ. ಅತ್ಯಂತ ಪ್ರಾಮಾಣಿಕವಾಗಿ, ನೈಸರ್ಗಿಕವಾಗಿ ಯೋಚಿ­ಸಿದರೆ ತುಂಬ ಕಠಿಣವಾಗಿ ಕಾಣುವ ಸಮಸ್ಯೆಯೂ ಸಲೀಸಾಗಿ ಪರಿಹಾರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT