ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊನ್ನೆಗಳು ಮತ್ತು ಗಾಂಧೀಜಿ

Last Updated 7 ಜನವರಿ 2017, 19:30 IST
ಅಕ್ಷರ ಗಾತ್ರ

ಆ ಚಳಿಗಾಲದಲ್ಲೂ ಬಳ್ಳಾರಿ ಕೆಂಪಾಗಿತ್ತು. ರಸ್ತೆ ಬದಿಯ ಮನೆಗಳು, ಗುಡಿಸಲುಗಳು, ಅಲ್ಲಿದ್ದ ಜನ, ಅವರು ತೊಟ್ಟಿದ್ದ ಅಂಗಿ, ಚಾವಡಿಯಲ್ಲಿ ಕಟ್ಟಿದ್ದ ದನಕರುಗಳು, ಅಡ್ಡಾಡುತ್ತಿದ್ದ ಕುರಿ ಮೇಕೆಗಳು, ಗಿಡಮರಗಳು, ಹೊಲದಲ್ಲಿ ಮಲಗಿದ್ದ ಪಚ್ಚೆಪೈರುಗಳು, ವಾಹನಗಳು, ರೈಲ್ವೆ ಹಳಿಗಳು ಕೂಡ ಕೆಂಪಾಗಿದ್ದವು.

ನಾವು ಬಳ್ಳಾರಿಯ ಅಂದಚಂದಗಳನ್ನು ನೋಡಲೆಂದೇನು ಅಲ್ಲಿಗೆ ಹೋಗಿರಲಿಲ್ಲ. ಒಂದೆರಡು ದಿನಗಳ ಹಿಂದೆ ಅಪರಿಚಿತರೊಬ್ಬರು ಕರೆ ಮಾಡಿದ್ದರು. ತೋಳಗಳನ್ನು ಹುಡುಕಿ ನಾವು ಪಕ್ಕದ ಜಿಲ್ಲೆಗಳಲ್ಲಿ ಅಲೆದಾಡುತ್ತಿದ್ದ ಸುದ್ದಿ ತಿಳಿದಿದ್ದ ಅವರು, ತಮ್ಮ ತೋಟದಲ್ಲಿ ಬಿದ್ದಿರುವ ಸಪೋಟ ಹಣ್ಣುಗಳನ್ನು ತಿನ್ನಲು ತೋಳಗಳು ಬರುತ್ತಿರುವುದಾಗಿ, ಒಮ್ಮೆ ಬರಬೇಕೆಂದು ಆಹ್ವಾನಿಸಿದ್ದರು.

ನಾಯಿ ಪ್ರಭೇದದ ಜೀವಿಗಳಲ್ಲಿ, ಹಣ್ಣುಹಂಪಲುಗಳು ಅವುಗಳ ಆಹಾರ ಕ್ರಮದ ಭಾಗವಾಗಿರುವ ವಿಷಯ ನಮಗೆ ತಿಳಿದಿತ್ತು. ಅವಕಾಶ ಒದಗಿಬಂದಾಗ ಹಾಗೂ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಅವು ಎಲಚಿ, ಹುಣಸೆ, ಬಾಳೆ ಮತ್ತಿತರ ಹಣ್ಣುಗಳನ್ನು ತಿನ್ನುತ್ತವೆ. ಆದರೆ ತೋಳಗಳ ಜಾಡನ್ನು ಪರೀಕ್ಷಿಸುವುದು ನಮಗೆ ಮುಖ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ನಾವು ಹೊಸಪೇಟೆಯ ಒಳದಾರಿಯಲ್ಲಿ ಸಂಡೂರಿನತ್ತ ಸಾಗಿದ್ದೆವು.

ರಸ್ತೆಯೇ ಇಲ್ಲದ ಆ ರಸ್ತೆಯಲ್ಲಿ ಪ್ರಯಾಣಿಸುವುದು ಸವಾಲೆನಿಸಿತು. ಮೋರಿಗಳಂತೆ ದೊಡ್ಡದೊಡ್ಡ ಹೊಂಡಗಳಿದ್ದ ಆ ರಸ್ತೆಯಲ್ಲಿ ಚಲಿಸಲು ನಮ್ಮ ಜೀಪಿಗೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಕಬ್ಬಿಣದ ಅದಿರನ್ನು ತುಂಬಿದ್ದ ಟಿಪ್ಪರ್‌ಗಳು ಅದಾವುದನ್ನೂ ಲೆಕ್ಕಿಸದೆ ನಮ್ಮನ್ನು ಹಿಂದೆ ಸರಿಸಿ ದೂಳೆಬ್ಬಿಸುತ್ತಾ ಹೋಗುತ್ತಿದ್ದವು. ದೂಳು ಕರಗಿ ರಸ್ತೆಗಳು ಸ್ಪಷ್ಟವಾದಾಗ ಮತ್ತೆ ನಾವು ಮುಂದುವರೆಯುತ್ತಿದ್ದೆವು. ಅಷ್ಟರಲ್ಲಿ ಮತ್ತೊಂದು ಟಿಪ್ಪರ್ ಹಿಂಬದಿಯಿಂದ ಪ್ರತ್ಯಕ್ಷಗೊಳ್ಳುತ್ತಿತ್ತು. ಅವುಗಳ ಆರ್ಭಟಕ್ಕೆ ಸರ್ಕಾರ ಹೊದಿಸಿದ್ದ ಡಾಂಬರ್ ರಸ್ತೆಗಳಿಂದ ಕರಗಿ ಬದಿಗೆ ಸರಿದಿತ್ತು.

ಪ್ರಯಾಣ ಸಾಗದೆ ತಾಳ್ಮೆ ಮುಗಿದಾಗ ಜೊತೆಯಲ್ಲಿದ್ದ ಮಿತ್ರ ವಲ್ಲಭಚಂದ್ರರೊಂದಿಗೆ ನಮ್ಮ ಅಸಹನೆಯನ್ನು ತೋಡಿಕೊಳ್ಳುತ್ತಿದ್ದೆವು. ಈತ ವಿಶಿಷ್ಟ ಜನ. ಪರಿಸರದ ವಿಷಯ ಬಂದಾಗಲೆಲ್ಲ ಉಗ್ರಗಾಮಿಯಂತೆ ವರ್ತಿಸುವ ಮನುಷ್ಯ. ತಾನು ಬಲ್ಲ ಪ್ರಭಾವಿ ಜನರ ಸಂಪರ್ಕವನ್ನು ಉಪಯೋಗಿಸಿಕೊಂಡು ಮತ್ತು ತನ್ನ ಆದಾಯದ ಬಹುಭಾಗವನ್ನು ಬಳಸಿ ಕಾಡಿನ ಸಂರಕ್ಷಣೆಗೆ ತೊಡಗಿಸಿಕೊಂಡಿರುವ ಪ್ರಕೃತಿ ಪ್ರೇಮಿ.

‘ಹದಗೆಟ್ಟ ಈ ರಸ್ತೆಯನ್ನು ಗಣಿಮಾಲೀಕರೆ ಅಲ್ಪಸ್ವಲ್ಪ ದುರಸ್ಥಿ ಮಾಡಿಸಿಕೊಳ್ಳಬಹುದಲ್ಲ?’ ಎಂದಾಗ ಅವರು ಹುಸಿನಗೆ ನಕ್ಕು ಸುಮ್ಮನಾದರು. ‘ಅಕ್ಕಪಕ್ಕದ ಹಳ್ಳಿಯವರು ಈ ಅವ್ಯವಸ್ಥೆಗೆ ಪ್ರತಿಭಟಿಸುವುದಿಲ್ಲವೆ? ಚುನಾಯಿತ ಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ?’ ಎಂಬ ನಮ್ಮ ಹತ್ತಾರು ಪ್ರಶ್ನೆಗಳಿಗೆ ಅವರು ಸ್ವಲ್ಪ ಹೊತ್ತಿನಲ್ಲಿ ನಿಮಗೆ ಉತ್ತರಗಳು ದೊರೆಯುತ್ತವೆಂದು ನಗುತ್ತಿದ್ದರೆ ವಿನಾ ಬಿಡಿಸಿ ಹೇಳುತ್ತಿರಲಿಲ್ಲ.

ಮುಂದುವರಿದಾಗ ರಸ್ತೆಯೇ ಇಲ್ಲದ ರಸ್ತೆಯಲ್ಲಿ ಚೆಕ್ ಪೋಸ್ಟ್‌ಗಳಿದ್ದವು! ಅವು ಸರ್ಕಾರದ ಚೆಕ್‌ಪೋಸ್ಟ್‌ಗಳಾಗಿರಲಿಲ್ಲ. ಹಳ್ಳಿಯವರೆ ತಡೆಯೊಡ್ಡಿದ್ದ ಚೆಕ್ ಪೋಸ್ಟ್‌ಗಳು, ಅವುಗಳನ್ನು ಅವರೇ ನಿಯಂತ್ರಿಸುತ್ತಿದ್ದರು. ಪ್ರತಿ ಟಿಪ್ಪರ್‌ಗೆ ಐವತ್ತು ರೂಪಾಯಿ ತೆರಿಗೆ. ಪ್ರಶ್ನೆ ಪ್ರತಿಪ್ರಶ್ನೆಗಳಿಲ್ಲದೆ ವಹಿವಾಟು ತಣ್ಣಗೆ ನಡೆದಿತ್ತು.

ಪ್ರತಿ ನೂರೈವತ್ತು ಮೀಟರ್‌ಗಳಿಗೊಂದರಂತೆ ಒಂದೆರಡು ಪುಟ್ಟಿಗಳನ್ನು ಹಿಡಿದಿದ್ದ ಕುಟುಂಬಗಳು ರಸ್ತೆಯ ಮಗ್ಗುಲಲ್ಲಿ ನಿಂತಿದ್ದವು. ಪಕ್ಕದಲ್ಲಿ ಸಾಗಿದ ಟಿಪ್ಪರ್ ದೂಳಿಗೂ ವಿಚಲಿತರಾಗದೆ ಅವರವರ ಕೆಲಸದಲ್ಲಿ ನಿರತರಾಗಿದ್ದರು. ಅವರೆಲ್ಲ ರಸ್ತೆಯಲ್ಲಿ ಏನನ್ನೋ ಬಗೆದು ಪುಟ್ಟಿಗಳಿಗೆ ತುಂಬಿಕೊಳ್ಳುತ್ತಿದ್ದರು. ಬಳಿಕ ಅದನ್ನು ಹೊತ್ತೊಯ್ದು ಪಕ್ಕದ ಕಲ್ಲುಗುಡ್ಡೆಗೆ ಸುರಿಯುತ್ತಿದ್ದರು. ಟಿಪ್ಪರ್‌ಗಳು ಒಂದೆಡೆ ಗುಂಡಿ, ಮತ್ತೊಂದೆಡೆ ದಿಬ್ಬವಿದ್ದ ತಿರುವಿನ ರಸ್ತೆಯಲ್ಲಿ ಜಿಗಿದು ತೂರಾಡಿ ಹೋಗುವಾಗ ನೆಲಕ್ಕೆ ಜಾರಿ ಬೀಳುತ್ತಿದ್ದ ಕಬ್ಬಿಣದ ಅದಿರನ್ನು ಅವರು ಸಂಗ್ರಹಿಸುತ್ತಿದ್ದರು.

ನಮ್ಮ ಮಿತ್ರರು ಇದನ್ನು ವಿವರಿಸಿ ಹೇಳಿದಾಗಲಷ್ಟೆ ವಿಷಯ ಮನದಟ್ಟಾಯಿತು. ಮುಂಜಾನೆಯಿಂದ ಸಂಗ್ರಹಿಸುತ್ತಿದ್ದ ಪುಟ್ಟ ಅದಿರಿನ ಗುಡ್ಡ ಅವರ ಬದಿಯಲ್ಲಿತ್ತು. ಅವರೇ ಶ್ರಮವಹಿಸಿ ತೋಡಿದ್ದ ಗುಂಡಿಗಳು ಒಳ್ಳೆಯ ಇಳುವರಿ ನೀಡುತ್ತಿದ್ದವು. ಹಗಲು ರಾತ್ರಿ ಅಲ್ಲಿಯೇ ಕುಳಿತು ಸಂಗ್ರಹಿಸಿದ್ದ ಮಾಲನ್ನು ಅತ್ತ ಬರುವ ದಳ್ಳಾಳಿಗಳಿಗೆ ಮಾರುವುದು ಅವರ ಕೆಲಸವಾಗಿತ್ತು.

ಮುಂದೊಂದು ಪುಟ್ಟ ಹಳ್ಳಿ. ಬಡತನವನ್ನೆ ಹೊದ್ದು ಮಲಗಿದ್ದಂತಹ ಹಳ್ಳಿ. ಪ್ಲಾಸ್ಟಿಕ್ ಚೀಲದಲ್ಲಿ ಹಳದಿ ಬಣ್ಣದ ಬೋಟಿಗಳನ್ನು ಇಳಿಬಿಟ್ಟಿದ್ದ ಸಣ್ಣ ಟೀ ಅಂಗಡಿಯ ಹೊರತಾಗಿ ಅಲ್ಲೇನೂ ಇರಲಿಲ್ಲ. ನಾಲ್ಕಾರು ಮೇಕೆಗಳು ಎಲೆಯುದುರಿಸಿದ ಗಿಡಗಳಲ್ಲಿ ಇಲ್ಲದ ಚಿಗುರುಗಳಿಗಾಗಿ ಹುಡುಕಾಟ ನಡೆಸಿದ್ದವು. ಹಳ್ಳಿಯ ಮಗ್ಗುಲಲ್ಲಿ ಕೃಷಿ ಕಾಣದ ಹತ್ತಾರು ಎಕರೆ ಭೂಮಿಯಿತ್ತು. ಬಹುಶಃ ಕಡುಬಡವರಿಗೆ ಸರ್ಕಾರ ನೀಡಿರಬಹುದಾದ ಭೂಮಿ.

ಎಂದೂ ಉಳುಮೆ ಕಾಣದ ಭೂಮಿ. ಉಳುಮೆ ಮಾಡಲಾಗದ ಭೂಮಿ. ಬೆಳೆ ಬಂದಂತೆ ಹೊಲದ ತುಂಬ ಕಲ್ಲುಗಳು ಹರಡಿ ಬಿದ್ದಿದ್ದವು. ಒಂದೆರಡು ಕುಟುಂಬಗಳು ಮಕ್ಕಳೊಂದಿಗೆ ನೆಲದಲ್ಲಿ ಏನನ್ನೋ ಹೆಕ್ಕುತ್ತ ಪುಟ್ಟಿಗೆ ತುಂಬುತ್ತಿದ್ದರು. ನಿರ್ದಿಷ್ಟ ಕಲ್ಲುಗಳನ್ನು ಹೆಕ್ಕಿ ಗುಡ್ಡೆ ಮಾಡುತ್ತಿದ್ದರು. ಯಾವ ಕಲ್ಲುಗಳಲ್ಲಿ ಎಷ್ಟು ಅದಿರಿನ ಅಂಶವಿದೆ ಎಂಬ ಜ್ಞಾನ ಅವರಲ್ಲಿ ಅರಳಿತ್ತು. ಇಪ್ಪತ್ತು ವರ್ಷಗಳ ಕಾಲ ಉಳುಮೆ ಮಾಡದ ಭೂಮಿಗೆ ಸುಗ್ಗಿ ಬಂದಿತ್ತು!

ಅಲ್ಲಿಂದ ಅರ್ಧ ಕಿ.ಮೀ. ದೂರದಲ್ಲಿ ಹರಿದ ಅಂಗಿ ತೊಟ್ಟಿದ್ದ ರೈತನೊಬ್ಬ ಬಡಕಲು ಎತ್ತುಗಳನ್ನು ಗದರಿಸುತ್ತಾ ಉಳುಮೆಯಲ್ಲಿ ತೊಡಗಿದ್ದ. ಆಶ್ಚರ್ಯವಾಯಿತು! ಅದು ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯಾಗಿತ್ತು. ಯಾವುದೋ ಕಾಲದಲ್ಲಿ ಯಾರದೋ ಶಿಫಾರಸ್ಸಿನಿಂದಲೊ ಅಥವಾ ತನ್ನ ಪೂರ್ವಜರ ಶ್ರೀಮಂತಿಕೆಯ ಸಂಕೇತವಾಗಿಯೋ ಉಳಿದುಬಂದಿದ್ದ ಭೂಮಿಯಿರಬಹುದು.

ಹದಗೊಳಿಸಿದ ಭೂಮಿಯನ್ನು ಮತ್ತೆ ಹದಗೊಳಿಸುತ್ತಿದ್ದ. ಬಾರದ ಮಳೆಗೆ ಗಾಳ ಬಿಸಾಡಿ ಉಸಿರಾಡುತ್ತಿದ್ದ. ಎಲ್ಲರೂ ಕಲ್ಲುಗಳನ್ನು ತೆಗೆಯುತ್ತಿದ್ದಾಗ ಅವನ ಚಿನ್ನದಂತಹ ಭೂಮಿ ಬರಡು ಭೂಮಿಯಂತೆ ಕಂಡಿತ್ತು. ಕಾಲಚಕ್ರ ಎಲ್ಲವನ್ನೂ ಸಮೀಕರಿಸಿತ್ತು.

ಈ ಜನರಿಗೆ ಏನಾಗಿದೆ ಎಂದು ಯೋಚಿಸುತ್ತಾ ಒಂದು ಹಳ್ಳಿಯಲ್ಲಿ ಟೀ ಕುಡಿಯೋಣವೆಂದು ಇಳಿದೆವು. ನಮ್ಮ ಸ್ನೇಹಿತರು ಪಕ್ಕದಲ್ಲಿದ್ದ ಜನತಾಮನೆಯತ್ತ ಕೈತೋರಿದರು. ನಮ್ಮ ಮಾತು ಅವರಿಗೆ ಕೇಳಿಸಿರಬಹುದು. ಭೂಮಿಯ ಅಂತರಾಳದಿಂದ ಉದಯಿಸಿದಂತೆ ಮನೆಯ ಅಡಿಪಾಯದ ತಳದಿಂದ ಗಂಡಹೆಂಡತಿ ಹೊರಬಂದರು. ವಾಸವಿದ್ದ ತಮ್ಮದೇ ಮನೆಯಲ್ಲಿ ಹೊಂಡ ತೋಡಿ, ಅವರು ಸಹ ಅದಿರಿನ ಕಲ್ಲುಗಳನ್ನು ಹುಡುಕಿ ತೆಗೆಯುತ್ತಿದ್ದರು.

ದಿಗ್ಭ್ರಮೆಯಿಂದ ಚೇತರಿಸಿಕೊಂಡು ಮತ್ತೊಂದು ಹಳ್ಳಿಗೆ ತಲುಪಿದಾಗ ಹತ್ತಾರು ಜನ ನಮ್ಮ ಜೀಪನ್ನು ಮುತ್ತಿಕೊಂಡರು. ತೋಳಗಳ ಬಗ್ಗೆ ವಿಚಾರಿಸುತ್ತಿದ್ದಂತೆ ಅವರ ಉತ್ಸಾಹ ಉಡುಗಿತ್ತು. ನಾವು ಅದಿರಿನ ವ್ಯಾಪಾರಕ್ಕೆ ಬಂದಿಲ್ಲವೆಂದು ಮನವರಿಕೆಯಾದಾಗ ನಿರಾಶೆಯಿಂದ ಗುಂಪು ಚದುರಿತ್ತು. ಸಂಭಾಷಣೆ ಮುಂದುವರೆಯಲಿಲ್ಲ.

ಆಗ ಹದಿನೈದು ಹದಿನಾರನೇ ಶತಮಾನದಲ್ಲಿ ದಕ್ಷಿಣ ಅಮೇರಿಕಾದ ‘ಎಲ್ಡರೋಡೊ’ ಅನ್ವೇಷಣೆಗಳು ನೆನಪಿಗೆ ಬಂದವು. ಕೊಲಂಬಿಯಾ ದೇಶದಲ್ಲಿ ‘ಜ಼ಿಂಪಾ’ ಎಂಬ ಸ್ಥಳೀಯ ಮುಖಂಡನಿದ್ದನಂತೆ. ಚಿನ್ನದ ಅರಮನೆಯಲ್ಲಿ ಆತ ವಾಸವಾಗಿದ್ದಾನೆಂದು, ದೇಹಕ್ಕೆ ಚಿನ್ನದ ಕವಚವನ್ನು ತೊಟ್ಟಿದ್ದಾನೆಂದು ಕತೆಯಾಗಿ, ದಂತಕತೆಯಾಗಿ ಯುರೋಪಿನ ಎಲ್ಲೆಡೆ ಹರಡಿತ್ತು.  ದಿಢೀರ್ ಶ್ರೀಮಂತರಾಗುವ ಆಕಾಂಕ್ಷೆ ಜನರನ್ನು ಕಾಡಿ ಕೆರಳಿಸಿತ್ತು.

ಪುಟ್ಟ ಪುಟ್ಟ ಮಕ್ಕಳನ್ನು ಎಳೆದುಕೊಂಡು ಕುಟುಂಬ ಕುಟುಂಬಗಳು ನಡಿಗೆಯಲ್ಲೇ ಸಾವಿರಾರು ಕಿಲೋಮೀಟರ್‌ ಸಾಗಿ ಕೊಲಂಬಿಯಾ ತಲುಪಿದರು. ಮುದುಕ ಮುದುಕಿಯರೂ ಆ ಗುಂಪನ್ನು ಹಿಂಬಾಲಿಸಿದರು. ನಿತ್ರಾಣಗೊಂಡ ಎಷ್ಟೋ ಜನ ದಾರಿಯಲ್ಲೆ ಅಸು ನೀಗಿದರು.

ಅನಂತರ ಚಿನ್ನಕ್ಕಾಗಿ ಹುಡುಕಾಟ. ನೆಲವನ್ನು ಅಗೆದರು. ಗುಡ್ಡಗಳನ್ನು ಬಗೆದರು. ಚಿನ್ನ ಸಿಗಲಿಲ್ಲ. ದೊರೆತ ಅಲ್ಪಸ್ವಲ್ಪ ಚಿನ್ನದ ಅದಿರಿಗೆ ಅಣ್ಣತಮ್ಮಂದಿರ ನಡುವೆ, ಅಪ್ಪ ಮಕ್ಕಳ ನಡುವೆ ಕಲಹವಾಯಿತು. ಜನ ಶ್ರೀಮಂತಿಕೆಯನ್ನು ಕನಸಿಸುತ್ತಾ ಅಡ್ಡದಾರಿ ಹಿಡಿದ ಚರಿತ್ರೆ ಇಲ್ಲೂ ಮರುಕಳಿಸುತ್ತಿರಬಹುದೇ ಎನಿಸಿತು.

ಕೆಲಸ ಮುಗಿದು ಬಳ್ಳಾರಿಯಿಂದ ಹೊಸಪೇಟೆಗೆ ಬರುವಾಗ ಎಡಭಾಗದಲ್ಲಿ ಸಾಲಾಗಿ ಹರಡಿದ್ದ ಗುಡ್ಡಗಳ ಮೇಲೆಲ್ಲ ಮಣ್ಣೆತ್ತುವ ಯಂತ್ರಗಳು ಕೆಲಸಮಾಡುತ್ತಿದ್ದವು. ಲೆಕ್ಕವಿಲ್ಲದಷ್ಟು ಟಿಪ್ಪರ್‌ಗಳು ಅತ್ತಿತ್ತ ಓಡಾಡುತ್ತಿದ್ದವು. ಹಲವು ಗುಡ್ಡಗಳು ಶಿರಚ್ಛೇದನಕ್ಕೆ ಒಳಗಾದಂತೆ, ಇನ್ನೂ ಹಲವು ಅಂಗಾಂಗಳನ್ನು ಕಳೆದುಕೊಂಡಂತೆ ಕಂಡಿತು. ಗುಡ್ಡಗಳ ನೆತ್ತಿಯಿಂದ ಮುಗಿಲಿಗೆ ಚಿಮ್ಮಿದ್ದ ದೂಳು ಊರುಕೇರಿಗಳತ್ತ, ಹೊಲಗದ್ದೆಗಳತ್ತ ಸಾಗುತ್ತಿತ್ತು.

ರಸ್ತೆಯ ಇಕ್ಕೆಲಗಳಲ್ಲಿ ಹೆಸರಾಂತ ವಾಸ್ತುಶಿಲ್ಪಿಗಳಿಂದ ವಿನ್ಯಾಸಗೊಂಡಿದ್ದ, ಕೋಟಿ ಕೋಟಿ ರೂಪಾಯಿಗಳ ಮನೆಗಳತ್ತ ಜೊತೆಯಲ್ಲಿದ್ದ ಮಿತ್ರ ವಲ್ಲಭಚಂದ್ರ ಗಮನ ಸೆಳೆದರು. ಅವುಗಳೆಲ್ಲ ಗಣಿಮಾಲೀಕರದೆಂದು ತಿಳಿಸಿ, ಮುಂಜಾನೆಯ ಉಪಾಹಾರಕ್ಕೆ ಅವರುಗಳು ಹೆಲಿಕಾಪ್ಟರ್‌ಗಳಲ್ಲಿ ಬೆಂಗಳೂರಿಗೆ ತೆರಳಿ ಮರಳುವುದನ್ನೆಲ್ಲ ತಮಾಷೆಯಾಗಿ ವಿವರಿಸುತ್ತಿದ್ದರು. ಆಳುವವರ ಬದ್ಧತೆ ಮತ್ತು ದಿವಾಳಿತನವನ್ನು ಯೋಚಿಸುತ್ತಾ ನಾಡಿನ ಭವಿಷ್ಯದ ಬಗ್ಗೆ ಯೋಚಿಸಿದೆವು. ನಿಜಕ್ಕೂ ಆತಂಕವಾಯಿತು.

ನೈಸರ್ಗಿಕವಾಗಿ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳು ಈ ದೇಶದ ಸಮಸ್ತ ಜನತೆಗೆ ಸೇರಬೇಕು. ಅದನ್ನು ಸಮಾಜದ ಅವಶ್ಯಕತೆಗೆ ಅನುಗುಣವಾಗಿ ನಿಯಮಿತವಾಗಿ ಬಳಸಿಕೊಂಡಲ್ಲಿ ತಪ್ಪಾಗುವುದಿಲ್ಲ. ಅದಿರನ್ನು ಸ್ಥಳೀಯವಾಗಿ ಕಬ್ಬಿಣವಾಗಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸುವುದು ಅಭಿವೃದ್ಧಿಯ ಸಂಕೇತವಾಗಬಹುದು.

ಇಂಗ್ಲೆಂಡ್‌ನಿಂದ ಜೆ.ಸಿ.ಬಿ.ಗಳನ್ನು ಆಮದು ಮಾಡಿಕೊಂಡು, ಗುಡ್ಡಗಳನ್ನು ಕಡಿದು ನೇರವಾಗಿ ಮಣ್ಣನ್ನೇ ಹಡಗುಗಳಿಗೆ ತುಂಬಿ ರಫ್ತು ಮಾಡುವುದರಿಂದ ನೂರಮೂವತ್ತು ಕೋಟಿ ಜನರಿಗೆ ಸಂದಾಯವಾಗಬೇಕಿರುವ ಆದಾಯ ಯಾರೋ ನಾಲ್ಕೈದು ಮಂದಿಗೆ ಸೀಮಿತಗೊಂಡಾಗ ಅದು ದರೋಡೆ ಅಲ್ಲವೆ? ಎನಿಸಿತು.

ಭೂಮಿಯಲ್ಲಿರುವ ಮಣ್ಣನ್ನು ರಫ್ತು ಮಾಡಲೇಬೇಕಾದ ಅನಿವಾರ್ಯತೆಗಳು ಉದ್ಭವಿಸಿದಾಗ, ಆ ಕೆಲಸವನ್ನು ಸರ್ಕಾರಗಳೇ ನಿರ್ವಹಿಸಬೇಕು. ಮೂರು ಪೈಸೆ ರಾಯಧನ ಬರುತ್ತದೆ ಎಂದು ಸಬೂಬು ಹೇಳಿ ಖಾಸಗಿ ಸಂಸ್ಥೆಗಳಿಗೆ ಪರವಾನಗಿ ನೀಡುವುದು ಘೋರ ಅಪರಾಧ. ಆ ತೀರ್ಮಾನಗಳು ಎಂದಿಗೂ ಸಂಶಯಾಸ್ಪದವಾಗಿ ಉಳಿದುಬಿಡುತ್ತವೆ.

ನಿಜ, ಭೂಮಿಯಲ್ಲಿ ಮಣ್ಣು ಹೇರಳವಾಗಿರುವ ವಸ್ತು. ಮಣ್ಣಿನ ಸಂಕೀರ್ಣತೆಯನ್ನು ಅರಿಯದಿದ್ದಾಗ ಯಾವ ಪ್ರಶ್ನೆಗಳೂ ಉದ್ಭವವಾಗುವುದಿಲ್ಲ. ಲಕ್ಷ ಲಕ್ಷ ವರ್ಷಗಳ ನೈಸರ್ಗಿಕ ಪ್ರಕ್ರಿಯೆಗಳಿಂದ ಕಲ್ಲಾಗಿ, ಲವಣಗಳಾಗಿ, ಬಳಿಕ ಮಣ್ಣಾಗಿ ರೂಪುಗೊಂಡಿರುವ ಮಣ್ಣಿನ ಬೆಲೆಯನ್ನು ಗುಣಾಕಾರ, ಭಾಗಾಕಾರಗಳಿಂದ ಮೌಲ್ಯ ಮಾಡಿ ಟನ್ ಮಣ್ಣಿಗೆ ಎಷ್ಟಾಗುತ್ತದೆಂದು ಬೆಲೆ ನಿಗದಿ ಮಾಡಲು ಸಾಧ್ಯವಾಗುವುದಿಲ್ಲ.

ಭೂಮಿಯ ಮೇಲ್ಪದರದಲ್ಲಿ ಆವರಿಸಿರುವ ಮಣ್ಣು ಸಕಲ ಜೀವರಾಶಿಗಳನ್ನು ಪೋಷಿಸುವ ಮೂಲ ಸಾಮಗ್ರಿ. ‘ದೂಳು ಮಾತ್ರವಾಗಿರುವ ಮಣ್ಣಿನಲ್ಲಿ ಏನಿದೆ?’ ಎನಿಸಿದರೂ ಅದರಲ್ಲಿ ಅಸಂಖ್ಯಾತ ಜೀವಾಣುಗಳು ಹುದುಗಿರುತ್ತವೆ. ಬಗೆಬಗೆಯ ಪೌಷ್ಟಿಕತೆಯನ್ನು ಮಣ್ಣಿಗೆ ಒದಗಿಸುವುದೇ ಈ ಜೀವಾಣುಗಳು. ಸೂಕ್ಷ್ಮ ಜೀವಾಣುಗಳ ಪ್ರಪಂಚ ಬಹಳ ಸಂಕೀರ್ಣ. ಅರ್ಥ ಮಾಡಿಕೊಳ್ಳಲು ಕ್ಲಿಷ್ಟಕರ. ನಮ್ಮ ಕಣ್ಣಿಗೆ ಕಾಣುವ ಜೀವಿಗಳನ್ನೇ ನೋಡೋಣ.

ಈ ಸಮುದಾಯದೊಂದಿಗೆ ಜೀವಿಸುತ್ತಿರುವ, ನಮಗೆಲ್ಲ ಪರಿಚಯವಿರುವ ಗೆದ್ದಲುಹುಳುಗಳ ಪಾತ್ರವನ್ನೇ ನೋಡಿ. ‘ಗೆದ್ದಲು ತಿಂದಂತೆ ಒಳಗಿನಿಂದ ಎಲ್ಲವನ್ನು ತಿಂದು ಹಾಕುತ್ತಾರೆ’ ಎನ್ನುವ ಬೈಗುಳದ ಮಾತಿಗೆ ಅವುಗಳನ್ನು ಸೀಮಿತಗೊಳಿಸುವುದು ಅವುಗಳಿಗೆ ಅನ್ಯಾಯ ಮಾಡಿದಂತೆ. ನೈಸರ್ಗಿಕ ಜಗತ್ತಿನಲ್ಲಿ ಅವುಗಳ ಪಾತ್ರವನ್ನಾಗಲಿ, ಮಹತ್ವವನ್ನಾಗಲಿ ಗಂಭೀರವಾಗಿ ಅರ್ಥಮಾಡಿಕೊಂಡಾಗ ದಿಗಿಲಾಗುತ್ತದೆ.

ಭೂಮಿಯಲ್ಲಿ ಶೇಖರಗೊಂಡ ಒಣಗಿದ ಎಲೆ, ಮರ, ಕಸ ಕಡ್ಡಿಗಳನ್ನೆಲ್ಲ ಅವು ತಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಗಳ ನೆರವಿನಿಂದ ಕರಗಿಸಿ ಮತ್ತೆ ಗಿಡಮರಗಳು ಚಿಗುರಲು ಅವಶ್ಯವಿರುವ ಪೋಷಕಾಂಶಗಳನ್ನು ಭೂಮಿಗಿಳಿಸುತ್ತವೆ. ಇಡೀ ಭೂಮಿ ಒಂದು ಯಂತ್ರವಾದರೆ, ಅದು ಕಾರ್ಯನಿರ್ವಹಿಸಲು ಗೆದ್ದಲುಗಳು ಇಂಧನ ಒದಗಿಸುವ ಅನಿವಾರ್ಯ ಕಾರ್ಯಾಗಾರ.

ಇವುಗಳು ಇಲ್ಲವಾದಾಗ ಭೂಮಿ ಬಂಜೆಯಾಗುತ್ತದೆ. ಆಗ ಬೇಸಾಯ ಸಾಗುವುದಿಲ್ಲ. ಬಿದ್ದ ಮಳೆಯ ಹನಿಗಳು ಭೂಮಿಗೆ ಇಳಿಯುವುದಿಲ್ಲ, ಅಂರ್ತಜಲ ಪುನಃಶ್ಚೇತನಗೊಳ್ಳುವುದಿಲ್ಲ. ಇಡೀ ಭೂಮಿಯ ಉಸಿರಾಟವನ್ನು ತೀರ್ಮಾನಿಸುವುದು ಈ ಗೆದ್ದಲು ಹುಳುಗಳು ಮತ್ತು ಅವುಗಳಲ್ಲಿರುವ ಸೂಕ್ಷ್ಮಾಣು ಜೀವಿಗಳು.

ಇದಾದ ಹಲವು ವರ್ಷಗಳ ಬಳಿಕ ನಾವು ಬಳ್ಳಾರಿಗೆ ಮತ್ತೆ ಹೋಗಬೇಕಾದ ಸನ್ನಿವೇಶ ಸೃಷ್ಟಿಯಾಯಿತು. ನಮ್ಮ ಆತ್ಮೀಯ ವಿಜ್ಞಾನಿ ಜೋಶ್ವ ದೆಹಲಿಯಿಂದ ಕರೆಮಾಡಿ ಬಳ್ಳಾರಿಗೆ ಬರುತ್ತಿರುವುದಾಗಿ, ಬಳ್ಳಾರಿ ಗಣಿಗಳಲ್ಲಿ ನಡೆದಿರುವ ಅಕ್ರಮಗಳನ್ನು, ಅದರಿಂದ ಪರಿಸರಕ್ಕೆ ಆಗಿರುವ ಧಕ್ಕೆಯನ್ನು ಪರಿಶೀಲಿಸಿ ವರದಿ ನೀಡುವಂತೆ ಉಚ್ಛನ್ಯಾಯಾಲಯ ತಮ್ಮನ್ನು ನೇಮಿಸಿರುವುದಾಗಿ ತಿಳಿಸಿದರು.

ಆ ಸುದ್ದಿ ನಮ್ಮನ್ನೇನು ಚಕಿತಗೊಳಿಸಲಿಲ್ಲ. ಸರ್ಕಾರಗಳೇ ಹಾಗೆ, ಕಳ್ಳತನ ದರೋಡೆಗಳು ಆರಂಭಗೊಂಡು ಮುಗಿಯುವವರೆಗೆ ತಾಳ್ಮೆಯಿಂದ ಕಾದುಕುಳಿತು ಬಳಿಕ ಆಯೋಗಗಳ ಮೂಲಕ ವಿಚಾರಣೆ ನಡೆಸಿ ವರದಿಯನ್ನು ಅಧಿವೇಶನದಲ್ಲಿ ಮಂಡಿಸುವುದು ಅವುಗಳ ವಿಧಿವತ್ತಾದ ಸಾಂಪ್ರದಾಯಕ ನಡವಳಿಕೆ. ಇದರ ಜೊತೆಗೆ ನಡುನಡುವೆ ಎಚ್ಚರಗೊಳ್ಳುವ ಸಿ.ಬಿ.ಐ. ಸಹ ತನಿಖೆಗೆ ಮುಂದಾಗಿತ್ತು.

ಆಗ ಬಳ್ಳಾರಿಯ ಚಿತ್ರಣವೇ ಬದಲಾಗಿತ್ತು. ಟಿಪ್ಪರ್‌ಗಳು ಮಾತ್ರ ಎಂದಿನಂತೆ ಅವಸರದಿಂದ ಓಡಾಡುತ್ತಿದ್ದವು. ಆದರೆ ಅವುಗಳಲ್ಲಿ ಕಬ್ಬಿಣದ ಅದಿರಿನ ಮಣ್ಣುಗಳಿರಲಿಲ್ಲ, ಬದಲಾಗಿ ತುಂಗಭದ್ರಾ ಅಣೆಕಟ್ಟಿನ ಹಿನ್ನೀರಿನ ಅನಂತ ಬಯಲಿನಲ್ಲಿ ಚಿಗುರೊಡೆದಿದ್ದ ಹುಲ್ಲು ಹಾಸುಗಳು ತುಂಬಿದ್ದವು. ತಮ್ಮ ಚಟುವಟಿಕೆಗಳಿಂದ ಯಾವ ಅನಾಹುತಗಳೂ ಜರುಗಿಲ್ಲವೆಂಬುದನ್ನು ಪ್ರತಿಪಾದಿಸಲು ಧ್ವಂಸಗೊಂಡಿದ್ದ ಸರ್ಕಾರಿ ಗುಡ್ಡಗಳ ಹೊರಭಾಗಗಳಿಗೆ ಈ ಹುಲ್ಲುಹಾಸುಗಳನ್ನು ಹೊದಿಸುತ್ತಿದ್ದರು.

ರಾತ್ರೋ ರಾತ್ರಿ ಜರುಗುತ್ತಿದ್ದ ಈ ಕಾರ್ಯಾಚರಣೆಯಲ್ಲಿ ತುಂಗಭದ್ರಾ ಅಣೆಕಟ್ಟಿನ ಹಿನ್ನೀರಿನ ಬಯಲು ಪ್ರದೇಶದಲ್ಲಿ ಹರಡಿದ್ದ ಹುಲ್ಲಿನ ಬಯಲೇ ಇಲ್ಲವಾಯಿತು. ಚಳಿಗಾಲದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ನೆರೆಯುವ ರಿಂಗ್ಡ್ ಫ್ಲವರ್, ಲಾರ್ಕ್ ನಂತಹ ಹಲವಾರು ಹಕ್ಕಿಗಳೆಲ್ಲ ಕಂಗಾಲಾದವು. ಹಿನ್ನೀರ ಅಂಗಳದಲ್ಲಿ ಮರಿಮಾಡಲು ಇರಿಸಿದ್ದ ಅವುಗಳ ಗೂಡು, ಮೊಟ್ಟೆ ಮರಿಗಳನ್ನೆಲ್ಲ ಗುಡಿಸಿ ಜೆ.ಸಿ.ಬಿಗಳು ಟಿಪ್ಪರ್‌ಗೆ ತುಂಬಿದ್ದವು. ಅತಿಥಿಗಳಾಗಿ ಆಗಮಿಸಿದ್ದ ಸಾವಿರಾರು ಫ್ಲೆಮಿಂಗೋಗಳು, ಬಾತುಹಕ್ಕಿಗಳು ಆತಂಕಗೊಂಡು ದೂರದೂರಿಗೆ ಹಾರಿಹೋದವು. ಚಿಗುರಿದ ಹುಲ್ಲುಗಾವಲನ್ನು ನಿರೀಕ್ಷಿಸಿ ಎಲ್ಲಿಂದಲೋ ಬಂದ ಅಲೆಮಾರಿ ಕುರಿಗಾಹಿಗಳಿಗೆ ಏನೂ ಅರ್ಥವಾಗದೆ ನಿರಾಶೆಯಿಂದ ಹಿಂದಿರುಗಿದರು.

ಹರಿದಿದ್ದ ಗುಡ್ಡಗಳನ್ನು ಮುಚ್ಚಲು ಈ ಹುಲ್ಲಿನ ಪದರಗಳು ಸಾಕಾಗಲಿಲ್ಲ. ಬೆಂಗಳೂರಿನಿಂದ ಹುಲ್ಲಿನಂತೆ ಕಾಣುವ ಹಸಿರುಬಣ್ಣದ ಪ್ಲಾಸ್ಟಿಕ್ ಪರದೆಗಳನ್ನು, ಬಗೆ ಬಗೆಯ ತೆರೆಗಳನ್ನು ತಂದು ಗುಡ್ಡಗಳ ಮೇಲೆ ಹರಡುವ ಪ್ರಯತ್ನ ಮುಂದುವರೆದಿತ್ತು.

ಬಳಿಕ ಬಳ್ಳಾರಿ ತಣ್ಣಗಾದಂತೆ ಕಂಡಿತು. ಒಮ್ಮೆ ಹೊಸಪೇಟೆಯ ಬಳಿ ಸಾಗುವಾಗ ಮಿತ್ರ ವಲ್ಲಭಚಂದ್ರ ಮನೆಯೊಂದನ್ನು ತೋರಿ ಕತೆಯೊಂದನ್ನು ಹೇಳತೊಡಗಿದರು...

ಗಣಿಗದ್ದಲದೊಳಗೆ ಸೇರಿಕೊಂಡ ಆ ಮನೆಯ ಮಾಲಿಕ ಹೇಗೋ ಹಣ ಸಂಪಾದಿಸಿದ್ದ. ಬದಲಾದ ಪರಿಸ್ಥಿತಿಯಲ್ಲಿ ಎದುರಾಗಬಹುದಾದ ತನಿಖೆಗೆ ಬೆಚ್ಚಿಬಿದ್ದಿದ್ದ. ಹಣವನ್ನು ಜೋಪಾನಪಡಿಸಲು ಮಾರ್ಗೋಪಾಯಗಳನ್ನು ಆಲೋಚಿಸುತ್ತಿದ್ದ. ಹತ್ತಿರದಲ್ಲಿ ಹೊಸದಾಗಿ ನಿರ್ಮಿಸುತ್ತಿದ್ದ ಮನೆಯೊಂದಕ್ಕೆ ತೆರಳಿ ಅಲ್ಲಿ ನೆಲಕ್ಕೆ ಹಾಕುತ್ತಿದ್ದ ಗ್ರಾನೈಟ್ ಚಪ್ಪಡಿಗಳನ್ನು ನೋಡುತ್ತಾ ನಿಂತಾಗ ಥಟ್ಟನೆ ಏನೋ ಹೊಳೆದಂತಾಯಿತು. ಪರಿಹಾರ ಸಿಕ್ಕಿದ ಖುಷಿಯಲ್ಲಿ ಮನೆಗೆ ಹಿಂದಿರುಗಿದ.

ತಮ್ಮ ಮಲಗುವ ಕೋಣೆಯಲ್ಲಿ ಸೇರಿದ ಗಂಡಹೆಂಡತಿ ಗುಟ್ಟಾಗಿ ಚರ್ಚಿಸಿದರು. ನಂತರ ಯಾರಿಗೂ ತಿಳಿಯದಂತೆ ತಮ್ಮ ಅದ್ದೂರಿ ಮನೆಯ ಅಮೃತಶಿಲೆಯ ನೆಲವನ್ನು ಅಗೆಯತೊಡಗಿದರು. ಕೆಲವು ದಿನಗಳಲ್ಲಿ ಒಂದು ಕಂದಕವೇ ನಿರ್ಮಾಣವಾಯಿತು. ತಮ್ಮಲ್ಲಿದ್ದ ನೋಟಿನ ಕಂತೆಗಳಿಗೆ ನೂರೆಂಟು ಪ್ಲಾಸ್ಟಿಕ್ ಚೀಲಗಳ ಕವಚತೊಡಿಸಿ ಟಾರ್ಪಾಲ್‌ಗಳ ಹೊದಿಕೆ ಹೊದಿಸಿ, ತೋಡಿದ್ದ ಹೊಂಡದಲ್ಲಿ ಹುದುಗಿಸಿ ಚಪ್ಪಡಿಗಳನ್ನು ಹಿಂದಿನಂತೆಯೇ ಜೋಡಿಸಿ ನೆಮ್ಮದಿ ಕಂಡುಕೊಂಡರು. ಸೂಟು ಬೂಟುಗಳನ್ನು ಬಿಚ್ಚಿಟ್ಟು ಬಡವರಂತೆ ಓಡಾಡತೊಡಗಿದರು.

ಇದ್ದೊಂದು ಸೂರು ಕೆಡವಿ ನಿಧಿಹುಡುಕುತ್ತಿದ್ದ ಆ ಕುಟುಂಬ; ಕಳ್ಳನಿಧಿಯನ್ನು ಮುಚ್ಚಿಡಲು ಅಮೃತ ಶಿಲೆಯನ್ನು ಸರಿಸುತ್ತಿರುವ ಈ ಕುಟುಂಬ; ತಾವೇ ಕಟ್ಟಿದ್ದ ಇಂದುಗಳನ್ನು ಕೆಡವುತ್ತಾ ಗರೀಬರಾಗುತ್ತಿರುವ ಮನುಷ್ಯರನ್ನು ಕಂಡ ನಮಗೆ ಬದುಕಿನ ವ್ಯಾಖ್ಯಾನವೇ ಅರ್ಥ ಕಳೆದುಕೊಂಡಂತೆನಿಸಿತು.

ಸಿ.ಬಿ.ಐ., ತೆರಿಗೆ ಇಲಾಖೆ, ಲೋಕಾಯುಕ್ತರೆಲ್ಲರ ತನಿಖೆ ಮುಗಿದು ಎಲ್ಲವೂ ತಣ್ಣಗಾಯಿತು. ಸರ್ಕಾರಗಳು ಬದಲಾದವು. ಜೈಲು ಸೇರಿದ್ದ ಮಂದಿ ಹೊರಬರಲಾರಂಭಿಸಿದರು. ಆ ದಂಪತಿ ಕೂಡ ನಾಗರೀಕ ಸಮಾಜದ ಸಾಂವಿಧಾನಿಕ ಕಾನೂನು ಕಟ್ಟಳೆಗಳಿಂದ ನುಣುಚಿಕೊಂಡು ದಂಡನೆಯಿಲ್ಲದೆ ಪಾರಾಗಿದ್ದರು.

ಆಗೊಂದು ದಿನ ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿ, ಅಡಗಿಸಿಟ್ಟಿದ್ದ ಹಣವನ್ನು ಹೊರತೆಗೆಯಲು ದಂಪತಿ, ಮತ್ತೆ ಅಮೃತಶಿಲೆಯ ಚಪ್ಪಡಿಯನ್ನು ಸಡಲಿಸಿದರು. ಆತ ಹೃದಯಾಘಾತಕ್ಕೊಳಗಾದಂತೆ ಕುಸಿದುಬಿದ್ದ. ಆಘಾತಕೊಳಗಾಗಿದ್ದ ಮಡದಿ ಕೂಡ ಆತನನ್ನು ಸಂತೈಸುವ ಸ್ಥಿತಿಯಲ್ಲಿರಲಿಲ್ಲ.

ಕಾಂಕ್ರೀಟ್ ಅಡಿಪಾಯದ ಅಂತರಾಳದೊಳಗೂ ಕನ್ನ ಕೊರೆದಿದ್ದ ಗೆದ್ದಲುಗಳು ಮೂರು ಕೋಟಿ ರೂಪಾಯಿಗಳನ್ನು ಸಂಪೂರ್ಣವಾಗಿ ಸತ್ವಯುತವಾದ ಮಣ್ಣಾಗಿ ಪರಿವರ್ತಿಸಿದ್ದವು. ಕಂದಕದಲ್ಲಿದ್ದ ಪ್ಲಾಸ್ಟಿಕ್ ಹೊದಿಕೆ ಸಣ್ಣ, ಅತಿ ಸಣ್ಣ ಚೂರುಗಳಾಗಿ ಹರಡಿದ್ದವು. ಅವುಗಳ ನಡುವೆ ನೋಟುಗಳ ಮೇಲೆ ಅಚ್ಚಾಗಿದ್ದ ಕೆಲವು ಸೊನ್ನೆಗಳು, ಗಾಂಧೀಜಿಯವರ ಕನ್ನಡಕಗಳು ಮಾತ್ರ ಕಂಡುಬಂದಿದ್ದವು.

ಆ ಗೆದ್ದಲುಗಳು ಅಗತ್ಯವಿಲ್ಲದ ವಸ್ತುಗಳನ್ನು ಸಂಸ್ಕರಿಸಿ ಭೂಮಿಯ ಉಸಿರಾಟಕ್ಕೆ ಅಗತ್ಯವಾದ ಇಂಧನ ಸರಬರಾಜು ಮಾಡುವ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT