ಅದೊಂದು ಬಹು ದೊಡ್ಡ ಅರಣ್ಯ. ಅಲ್ಲಿ ಅನೇಕ ತರಹದ ಪಶು–ಪಕ್ಷಿಗಳು ವಾಸವಿದ್ದವು. ಆ ಅರಣ್ಯದಲ್ಲಿ ಒಂದು ಮಂಗ ಹಾಗೂ ಜಿಂಕೆ ಇದ್ದವು. ಅವು ಆಪ್ತ ಸ್ನೇಹಿತರಾಗಿದ್ದವು.
ಒಂದು ದಿನ ಕೆಲವು ಬೇಟೆಗಾರರು ಲಾಠಿ, ಬಲೆಗಳನ್ನು ಹಿಡಿದುಕೊಂಡು ಅರಣ್ಯವನ್ನು ಪ್ರವೇಶಿಸಿದರು. ಅವರು ಅನೇಕ ಕಾಡುಪಶುಗಳನ್ನು ಕೊಲ್ಲುತ್ತ, ಇದೇ ಅರಣ್ಯಕ್ಕೆ ಬಂದರು. ಆಗ ಮಂಗ ಮತ್ತು ಜಿಂಕೆಯು ಸುಖ– ದುಃಖ ಮಾತಾಡುತ್ತ ಕೂತಿದ್ದವು. ಆ ಬೇಟೆಗಾರರು ಜಿಂಕೆಯನ್ನು ನೋಡಿ ಅದರ ಸುತ್ತಲೂ ನಿಂತರು. ಮಂಗ ಕೂಡಲೇ ಮರವನ್ನು ಏರಿತು.
ಜಿಂಕೆ ಅಂಜಿಕೆಯಿಂದ ಆರ್ತನಾಗಿ ಓಡಾಡತೊಡಗಿತು. ಗೆಳೆಯನ ದುಃಖ ನೋಡಿ ಮಂಗ ವ್ಯಾಕುಲಗೊಂಡು ಯೋಚನೆ ಮಾಡುತ್ತ ಸುತ್ತಮುತ್ತ ನೋಡಿತು. ಅಲ್ಲೇ ಸನಿಹದಲ್ಲಿ ಜೇನುಹುಳುಗಳಿಂದ ತುಂಬಿಕೊಂಡ ಜೇನುಗೂಡು ಕಾಣಿಸಿತು. ಇತ್ತ ಬೇಟೆಗಾರರು ಜಿಂಕೆಯನ್ನು ಹಿಡಿಯಲು ಸಮೀಪ ಬರುತ್ತಿದ್ದಂತೆ, ಮಂಗವು ಒಂದು ಟೊಂಗೆಯನ್ನು ಮುರಿದು ಜೇನುಗೂಡಿಗೆ ಬಡಿಯಿತು. ಗೂಡು ಮುರಿದು ಬಿದ್ದಿತು. ಕೂಡಲೇ ಜೇನುಹುಳುಗಳು ‘ಈ ಬೇಟೆಗಾರರೇ ಅಪರಾಧಿಗಳು’ ಎಂದು ತಿಳಿದು ಅವರ ಮೇಲೆ ಆಕ್ರಮಣ ಮಾಡತೊಡಗಿದವು. ಆಗ ಬೇಟೆಗಾರರು ಜೇನುಹುಳುಗಳ ಕಡಿತವನ್ನು ತಾಳಲಾರದೇ ಎಲ್ಲರೂ ಓಡತೊಡಗಿದರು. ಆಮೇಲೆ ಜಿಂಕೆಯು ಆ ಜಾಗದಿಂದ ಪಾರಾಗಿ ಸುರಕ್ಷಿತ ಸ್ಥಳಕ್ಕೆ ಹೋಯಿತು.
ನೀತಿ: ಎಲ್ಲೇ ಆಗಲಿ, ತನ್ನ ಮಿತ್ರ ಸಂಕಟದಲ್ಲಿ ಇರುವಾಗ ಒಳ್ಳೆಯ ಮಿತ್ರನು ಸಹಾಯ ಮಾಡುತ್ತಾನೆ.
ಹರ್ಷಿತ ಡಿ.ಕೆ.
9ನೇ ತರಗತಿ, ಎಸ್ಎಸ್ಜೆವಿಪಿ ಸರ್ಕಾರಿ ಪ್ರೌಢಶಾಲೆ, ಸಂತೇಬೆನ್ನೂರು, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ