ದಿನೇಶ್ (ಹೆಸರು ಬದಲಿಸಲಾಗಿದೆ) ಎಂಬ 20 ವರ್ಷದ ಯುವಕ ತನ್ನ ಪೋಷಕರು ಮತ್ತು ಅಣ್ಣ ತಂಗಿಯ ಜೊತೆ ಮೈಸೂರಿನಲ್ಲಿ ವಾಸವಾಗಿದ್ದ. ಬಡ ಕುಟುಂಬದ ಆತ ಪಿಯುಸಿಗೇ ಓದು ನಿಲ್ಲಿಸಿ ಹೋಟೆಲ್ನಲ್ಲಿ ಸರ್ವರ್ ಆಗಿ ದುಡಿಯುತ್ತಾ ಕುಟುಂಬಕ್ಕೆ ನೆರವಾಗುತ್ತಿದ್ದ. ಒಂದು ದಿನ ಇಬ್ಬರು ಸ್ನೇಹಿತರೊಟ್ಟಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ದುರದೃಷ್ಟವಶಾತ್ ಅಪಘಾತಕ್ಕೆ ಈಡಾದ.
ಹೆಲ್ಮೆಟ್ ಧರಿಸದಿದ್ದುದರಿಂದ ಅವನ ತಲೆಗೆ ಭಾರಿ ಪೆಟ್ಟು ಬಿತ್ತು. ಮೈಸೂರಿನ ಖಾಸಗಿ ಆಸ್ಪತ್ರೆಗೆ ಅವನನ್ನು ದಾಖಲಿಸಲಾಯಿತು. ಎರಡು ತಿಂಗಳಿಗೂ ಹೆಚ್ಚು ಕಾಲ ಅವನು ಅಲ್ಲೇ ಇದ್ದ. ಅವನ ಕುಟುಂಬದವರು ಅಷ್ಟರಲ್ಲಾಗಲೇ ಚಿಕಿತ್ಸೆಗಾಗಿ 8 ಲಕ್ಷ ರೂಪಾಯಿಖರ್ಚು ಮಾಡಿದ್ದರು. ಆದರೂ, ಅವನ ಚಿಕಿತ್ಸೆ ಇನ್ನೂ ಪೂರ್ಣಗೊಂಡಿಲ್ಲವಾದ್ದರಿಂದ ಮತ್ತೆ 1.50 ಲಕ್ಷ ರೂಪಾಯಿ ಕಟ್ಟಿ ಎಂದು ಆಸ್ಪತ್ರೆಯವರು ಸೂಚಿಸಿದರು. ಇದರಿಂದ ಆ ಕುಟುಂಬಕ್ಕೆ ಆಘಾತ, ವಂಚನೆಗೊಳಗಾದ ಭಾವನೆ, ಅಸಹಾಯಕತೆ ಎಲ್ಲವೂ ಒಟ್ಟಿಗೇ ಆವರಿಸಿಕೊಂಡಂತಾಯಿತು.
ಲಕ್ಷಾಂತರ ರೂಪಾಯಿ ಅವರ ಕೈಬಿಟ್ಟಿತ್ತಷ್ಟೇ ಅಲ್ಲ, ದಿನೇಶನಿಗೆ ಸೂಕ್ತ ಚಿಕಿತ್ಸೆಯೂ ಸಿಕ್ಕಿರಲಿಲ್ಲ. ನಂತರ ಅವನ ಮನೆಯವರು ಸಹಾಯಕ್ಕಾಗಿ ಎಲ್ಲರ ಬಳಿಯೂ ಅಂಗಲಾಚಿದರು. ಕಡೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಅವರಿಗೆ 30 ಸಾವಿರ ರೂಪಾಯಿ ಬಿಡುಗಡೆ ಆಯಿತು. ಆದರೆ ಆಸ್ಪತ್ರೆ ಮಾತ್ರ ಪೂರ್ತಿ ಹಣ ಕಟ್ಟದ ಹೊರತು ಚಿಕಿತ್ಸೆ ಆರಂಭಿಸುವುದಿಲ್ಲ ಎಂದು ಕಡ್ಡಿ ಎರಡು ತುಂಡು ಮಾಡಿದಂತೆ ಹೇಳಿಬಿಟ್ಟಿತು. ಅಸಹಾಯಕರಾದ ಪೋಷಕರು, ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದ ದಿನೇಶನನ್ನು ಮನೆಗೆ ಕರೆತಂದರು.
ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯೊಂದು ಅವನ ಆರೈಕೆ ಮಾಡತೊಡಗಿತು. ಆದರೆ ಅವನ ಸ್ಥಿತಿ ಗಂಭೀರ ಆಗಲಾರಂಭಿಸಿದಾಗ ಸಮೀಪದ ಆಸ್ಪತ್ರೆಗೆ ಅವನನ್ನು ಕರೆದೊಯ್ಯಲಾಯಿತು. ಅವನಿದ್ದ ಸ್ಥಿತಿಯ ತೀವ್ರತೆಯನ್ನು ಮನೆಯವರಿಗೆ ಮನದಟ್ಟು ಮಾಡಿಕೊಟ್ಟ ಆಸ್ಪತ್ರೆಯವರು, ಇನ್ನು ಕೆಲ ದಿನಗಳಷ್ಟೇ ಅವನು ಬದುಕಲಿದ್ದಾನೆ ಎಂದು ತಿಳಿಸಿದರು. ಕಡೆಗೆ, ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ದಿನೇಶ್ ಕೊನೆಯುಸಿರೆಳೆದ. ಬಡತನ, ವೈದ್ಯ ಸಿಬ್ಬಂದಿಯ ನಿರ್ದಯೆ, ಯಾವ ನಿಯಂತ್ರಣಕ್ಕೂ ಒಳಪಡದ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕಾದ ಹೊಣೆಗಾರಿಕೆ ಇಲ್ಲದ ಖಾಸಗಿ ಆರೋಗ್ಯ ವ್ಯವಸ್ಥೆಯ ಹೃದಯಹೀನ ವರ್ತನೆಗೆ ಅವನು ಬಲಿಪಶುವಾಗಿದ್ದ.