ಮುಂಬೈ ಷೇರುಪೇಟೆಯು ಕಳೆದವಾರ ಎಲ್ಲಾ ಲೆಕ್ಕಚಾರಗಳನ್ನು ಬುಡಮೇಲು ಮಾಡಿ ತನ್ನದೇ ಆದ ದಿಕ್ಕಿನಲ್ಲಿ ಚಲಿಸಿತು. ಷೇರುಪೇಟೆ ಮತ್ತಷ್ಟು ಕುಸಿಯುತ್ತದೆ, ಯೂರೋಪಿನ ಸಮಸ್ಯೆ ತೀವ್ರವಾಗಿದೆ, ರೂಪಾಯಿಯ ಮೌಲ್ಯ ಕುಸಿಯುತ್ತಿದೆ ಎನ್ನುವ ವಿಶ್ಲೇಷಣೆಗಳಿಗೆ ವಿರುದ್ಧವಾಗಿ ವಹಿವಾಟು ದಾಖಲಾಯಿತು.
ಈ ಬೆಳವಣಿಗೆಗೆ ಮೂಲ ಕಾರಣ ವಿದೇಶೀ ವಿತ್ತೀಯ ಸಂಸ್ಥೆಗಳ ಖರೀದಿ ಭರಾಟೆ. ಇನ್ನೊಂದೆಡೆ ದೇಶದ ಕೈಗಾರಿಕೆ ಉತ್ಪಾದನೆ ವೃದ್ಧಿ ದರವು (ಐಐಪಿ) ಏರಿಕೆ ಕಂಡಿರುವುದು ಪೇಟೆಗೆ ಬಲ ತುಂಬಿದೆ. ಅಕ್ಟೋಬರ್ ತಿಂಗಳಲ್ಲಿ ಕೈಗಾರಿಕೆ ಸೂಚ್ಯಂಕವು ಶೇ 4.7ರ ಕ್ಷೀಣಿತ ವೃದ್ಧಿ ದಾಖಲಿಸಿದ್ದರೆ, ನವೆಂಬರ್ ತಿಂಗಳಲ್ಲಿ ಶೇ 5.9ರ ತ್ವರಿತ ಬೆಳವಣಿಗೆ ಕಂಡು ಷೇರಿನ ದರಗಳ ಕ್ಷಿಪ್ರ ಏರಿಕೆಗೆ ಕಾರಣವಾಯಿತು.
ಇನ್ಫೋಸಿಸ್ ಕಂಪೆನಿಯ ಫಲಿತಾಂಶವು ನಿರೀಕ್ಷಿತ ಮಟ್ಟದಲ್ಲಿತ್ತು. ಆದರೆ, ಕಂಪೆನಿಯು ಮುಂದಿನ ದಿನಗಳಲ್ಲಿ ದಾಖಲಿಸಲಿರುವ ಅಂಕಿ ಅಂಶಗಳು ಉತ್ತೇಜಕ ಅಲ್ಲ ಎಂಬ ಕಾರಣಕ್ಕೆ ಹೆಚ್ಚಿನ ಮಾರಾಟದ ಒತ್ತಡವನ್ನು ಎದುರಿಸಬೇಕಾಯಿತು. ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಸಹ ಮಾರಾಟದ ಒತ್ತಡಕ್ಕೆ ಒಳಗಾಗಬೇಕಾಯಿತು. ಇದುವರೆಗೂ ಕಡೆಗಣಿಸಲ್ಪಟ್ಟಿದ್ದ ಸಕ್ಕರೆ ವಲಯ, ರಿಯಲ್ ಎಸ್ಟೇಟ್ ವಲಯದ ಷೇರುಗಳಲ್ಲದೆ, ಭಾರಿ ಮಾರಾಟದ ಒತ್ತಡದಿಂದ ಬ್ಯಾಂಕಿಂಗ್, ಸಾರ್ವಜನಿಕ ವಲಯದ ಕಂಪೆನಿಗಳು ಬಿರುಸಿನ ಏರಿಕೆ ಪಡೆದವು.
ಸಕ್ಕರೆ ವಲಯದ ಶಕ್ತಿ ಶುಗರ್ಸ್ ಮತ್ತು ತ್ರಿವೇಣಿ ಎಂಜಿನಿಯರಿಂಗ್ ಸುಮಾರು ಶೇ 35 ರಿಂದ 38 ರಷ್ಟು ಏರಿಕೆ ಪ್ರದರ್ಶಿಸಿದರೆ, ರೇಣುಕಾ ಶುಗರ್ಸ್ ಶೇ 28ಕ್ಕೂ ಹೆಚ್ಚಿನ ಮುನ್ನಡೆ ಪಡೆಯಿತು. ಸಾರ್ವಜನಿಕ ವಲಯದ ಕಂಪೆನಿಗಳು ಆಕರ್ಷಕ ಲಾಭಾಂಶ ಪ್ರಕಟಿಸುವ ನಿರೀಕ್ಷೆಯ ಕಾರಣ ವಾರಾಂತ್ಯದಲ್ಲಿ ಚುರುಕಾದ ವಹಿವಾಟು ನಡೆಯಿತು.
ಇಂಡಸ್ ಇಂಡ್ ಬ್ಯಾಂಕ್ ಮತ್ತು ಡಿಸಿಬಿಗಳ ಫಲಿತಾಂಶ ಆಕರ್ಷಕವಾಗಿದ್ದು, ಹಣದುಬ್ಬರ ನಿಯಂತ್ರಣದ ಕಾರಣ ಬ್ಯಾಂಕ್ ಬಡ್ಡಿ ದರ ಇಳಿಕೆಯಿಂದ ವಾತಾವರಣ ಸುಧಾರಿಸಬಹುದೆಂಬ ಕಾರಣದಿಂದ ಬ್ಯಾಂಕಿಂಗ್ ಷೇರುಗಳು ತ್ವರಿತ ಏರಿಕೆ ಪಡೆದವು. ಇಂತಹ ಏರಿಕೆಗೆ ಮತ್ತೊಂದು ಕಾರಣ ಕಂಪೆನಿಗಳ ಯೋಗ್ಯತೆಯನ್ನು ಮೀರಿ ಷೇರಿನ ದರಗಳು ಕುಸಿತ ಕಂಡಿದ್ದು.
ಶುಕ್ರವಾರದಿಂದ ಟಾಟಾ ಸ್ಟೀಲ್ ಕಂಪೆನಿಯ ಕೊಳ್ಳುವಿಕೆಯ ರಭಸದ ವೇಗ ಹೇಗಿತ್ತೆಂದರೆ ಸುಮಾರು 40 -45 ನಿಮಿಷಗಳಲ್ಲಿ ್ಙ400 ರಿಂದ ್ಙ424 ರವರೆಗೂ ಉತ್ತಮ ಸಂಖ್ಯಾ ಗಾತ್ರದೊಂದಿಗೆ ಜಿಗಿಯಿತು. ಒಟ್ಟಾರೆ ವಾರದಲ್ಲಿ 305 ಅಂಶಗಳಷ್ಟು ಸಂವೇದಿ ಸೂಚ್ಯಂಕ ಮುನ್ನಡೆ ಪಡೆಯಿತು.
ಮಧ್ಯಮ ಶ್ರೇಣಿ ಸೂಚ್ಯಂಕವು 284 ಅಂಶಗಳಷ್ಟು ಹಾಗೂ ಕೆಳಮಧ್ಯಮ ಶ್ರೇಣಿಯ ಸೂಚ್ಯಂಕ 490 ಅಂಶಗಳಷ್ಟು ಜಿಗಿತ ಕಂಡಿತು. ವಿದೇಶೀ ವಿತ್ತೀಯ ಸಂಸ್ಥೆಗಳು ಒಟ್ಟು ್ಙ1519 ಕೋಟಿ ಮೌಲ್ಯದ ಷೇರು ಖರೀದಿಸಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ್ಙ1442 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಷೇರುಪೇಟೆಯ ಬಂಡವಾಳ ಮೌಲ್ಯವು ್ಙ 55.01 ಲಕ್ಷ ಕೋಟಿಯಿಂದ ್ಙ 57.40 ಲಕ್ಷ ಕೋಟಿಗೆ ಏರಿಕೆಯಾಗಿದೆ.
ಲಾಭಾಂಶ ವಿಚಾರ: ಮೂರನೇ ತ್ರೈಮಾಸಿಕವು ಅಂತ್ಯಗೊಂಡಿರುವ ಕಾರಣ ಹಲವಾರು ಕಂಪೆನಿಗಳು ಲಾಭಾಂಶದ ಪ್ರಕಟಣೆ ಮಾಡಲಿವೆ. 23 ರಂದು ಡಿಬಿ ಕಾರ್ಪ್ ಲಿ., 25 ರಂದು ಸುಪ್ರೀಂ ಇಂಡಸ್ಟ್ರೀಸ್, 20 ರಿಂದ ಆಪ್ಟೆಕ್ ಕಂಪೆನಿಗಳು ಲಾಭಾಂಶ ಪ್ರಕಟಿಸುವ ಸೂಚನೆ ನೀಡಿವೆ.
ಹಕ್ಕಿನ ಷೇರಿನ ವಿಚಾರ
*ಆರೆ ಡ್ರಗ್ಸ್ ಅಂಡ್ ಫಾರ್ಮಸ್ಯುಟಿಕಲ್ಸ್ ಲಿ. ಕಂಪೆನಿಯು 2:1ರ ಅನುಪಾತದಲ್ಲಿ ಪ್ರತಿ ಷೇರಿಗೆ ್ಙ 25 ರಂತೆ, ವಿತರಿಸಲಿರುವ ಹಕ್ಕಿನ ಷೇರಿನ ನಿಗದಿತ ದಿನ ಜನವರಿ 20. ಷೇರಿನ ಪೇಟೆ ದರವು ್ಙ 16.85 ರಲ್ಲಿದೆ.
*ಫೇಮ್(ಇಂಡಿಯಾ)ಲಿ. ಕಂಪೆನಿಯು 58:100 ಅನುಪಾತದಲ್ಲಿ ಪ್ರತಿ ಷೇರಿಗೆ ್ಙ44 ರಂತೆ ವಿತರಿಸಲಿರುವ ಹಕ್ಕಿನ ಷೇರಿಗೆ ಜನವರಿ 25 ನಿಗದಿತ ದಿನವಾಗಿದೆ. ಪೇಟೆ ದರವು ್ಙ49.15 ರಲ್ಲಿದೆ.
*ಮಿಡ್ ಈಸ್ಟ್ ಪೋರ್ಟ್ ಪೋಲಿಯೋ ಮ್ಯಾನೇಜ್ಮೆಂಟ್ ಲಿ. ಕಂಪೆನಿಯು 19 ರಂದು ಹಕ್ಕಿನ ಷೇರು ವಿತರಣೆ ಪರಿಶೀಲಿಸಲಿದೆ.
ವಹಿವಾಟಿಗೆ ಬಿಡುಗಡೆ
*ಪರೇಖ್ ಹರ್ಬಲ್ಸ್ ಲಿ. ಕಂಪೆನಿ ಫೆಬ್ರುವರಿ 2001ರಿಂದ ಅಮಾನತಿನಲ್ಲಿದ್ದು ಈಗ ತೆರವುಗೊಳಿಸಿಕೊಂಡ ಕಾರಣ 13 ರಿಂದ ವಹಿವಾಟಿಗೆ ಬಿಡುಗಡೆಯಾಗಿದೆ.
*ಸ್ವಗೃಹ ಇನ್ಫ್ರಾಸ್ಟ್ರಕ್ಚರ್ ಲಿ. ಕಂಪೆನಿಯು ಜನವರಿ 2002ರಿಂದ ಅಮಾನತ್ತಿನಲ್ಲಿದ್ದು ಈಗ ತೆರವುಗೊಳಿಸಿಕೊಂಡು 13 ರಿಂದ `ಟಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.
*ಅಕ್ಟೋಬರ್ 1998ರಿಂದ ಅಮಾನತ್ತಿನಲ್ಲಿದ್ದು ಈಗ ತೆರವುಗೊಳಿಸಿಕೊಂಡ ಮಿಲೋಲ್ಟಾ ಫೈನಾನ್ಸ್ ಲಿ. 16 ರಿಂದ `ಟಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.
*ಏಷ್ಯಾ ಪ್ಯಾಕ್ ಲಿ. ಜನವರಿ 2004 ರಿಂದ ಅಮಾನತಿನಲ್ಲಿದ್ದು 16 ರಿಂದ `ಟಿ~ ಗುಂಪಿನಲ್ಲಿ ವಹಿವಾಟಿಗೆ ಮರು ಬಿಡುಗಡೆಯಾಗಲಿದೆ.
*ಲಾ. ಮಾನ್ಷನ್ ಗ್ರಾನೈಟ್ ಲಿ. ಕಂಪೆನಿಯ ಮೇಲೆ ಸೆಪ್ಟೆಂಬರ್ 1998 ರಿಂದ ವಿಧಿಸಿದ್ದ ಅಮಾನತು ತೆರವುಗೊಳಿಸಿದ ಕಾರಣ 17 ರಿಂದ `ಟಿ~ ಗುಂಪಿನಲ್ಲಿ ವಹಿವಾಟಾಗಲಿದೆ.
*ಕೈನೆಟಿಕ್ ಟ್ರಸ್ಟ್ ಲಿ. ಕಂಪೆನಿಯ ಮೇಲೆ ಮಾರ್ಚ್ 2009 ರಿಂದ ವಿಧಿಸಿದ್ದ ಅಮಾನತು ತೆರವುಗೊಳಿಸಿಕೊಂಡು 17 ರಿಂದ `ಟಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.
ಬಂಡವಾಳ ಕಡಿತ
ರಬ್ಷಿಲಾ ಇಂಟರ್ ನ್ಯಾಶನಲ್ ಲಿ. ಕಂಪೆನಿಯು `ಬಿಐಎಫ್ಆರ್~ ಆದೇಶದ ಮೇರೆಗೆ ಶೇ 60 ರಷ್ಟು ಬಂಡವಾಳ ಕಡಿತಗೊಳಿಸಿ ನಂತರ ಕ್ರೋಢೀಕರಿಸಲಿದೆ. ಅಂದರೆ ಈಗಿನ ್ಙ10ರ ಮುಖ ಬೆಲೆ ಷೇರು ಬಂಡವಾಳ ಕಡಿತದ ನಂತರ ್ಙ4ರ ಮುಖಬೆಲೆಯಾಗುವುದು.
ವಾರದ ಪ್ರಶ್ನೆ
ಜಯಪ್ರಕಾಶ್ ಅಸೋಸಿಯೇಟ್ಸ್ ಲಿ. ಕಂಪೆನಿಗೆ ಸೆಬಿ ್ಙ 70 ಲಕ್ಷ ದಂಡ ವಿಧಿಸಿದೆ ಎಂಬ ಸುದ್ದಿಯಿಂದ ಆ ಕಂಪೆನಿಯ ಷೇರಿನ ಬೆಲೆಯು ್ಙ50ರ ಒಳಗೆ ಕುಸಿದು ನಂತರ ತ್ವರಿತವಾದ ಏರಿಕೆ ಕಂಡಿದೆ. ಕಂಪೆನಿಯ ಆಡಳಿತ ಮಂಡಳಿ ಮಾಡಿದ ತಪ್ಪು ಸರಿ ಪಡಿಸಿಕೊಂಡಿತೇ ಹೇಗೆ? ಷೇರಿನ ಬೆಲೆ ಈಗ ್ಙ60ನ್ನು ದಾಟಿದೆ. ದಯವಿಟ್ಟು ವಿವರಿಸಿರಿ.
ಉತ್ತರ: ಷೇರು ಪೇಟೆಯ ವಿಸ್ಮಯಕಾರಿ ಗುಣ ಇದು. ಯಾವುದಾದರೂ ಪ್ರಕಟಣೆ ಹೊರಬೀಳುವ ಮುನ್ನ ಅದರ ಪ್ರಭಾವ ಷೇರಿನ ಬೆಲೆಯ ಮೇಲೆ ಬೀರಿರುತ್ತದೆ. ಅಂದರೆ ಭವಿಷ್ಯದ ಘಟನೆಗಳನ್ನು ವರ್ತಮಾನಕ್ಕೆ ಭಟ್ಟಿ ಇಳಿಸಿ ಅದಕ್ಕೆ ಮೌಲ್ಯಕಟ್ಟುವುದು ಪೇಟೆಯ ವಿಶೇಷತೆ.
ಜಯಪ್ರಕಾಶ್ ಅಸೋಸಿಯೇಟ್ಸ್ ಕಂಪೆನಿಯ ಪ್ರವರ್ತಕರು ನಡೆಸಿದ ಹಿತಾಸಕ್ತ ಚಟುವಟಿಕೆಯ ಕಾರಣ ಷೇರಿನ ಬೆಲೆ ಜನವರಿ 9 ರಂದು ವರ್ಷದ ಕನಿಷ್ಠ ಮಟ್ಟವಾದ ್ಙ50-45ಕ್ಕೆ ಕುಸಿದಿತ್ತು. ಇದರ ಹಿಂದಿನ ದಿನಗಳೂ ಸಹ ಷೇರಿನ ಬೆಲೆ ಕುಸಿದಿತ್ತು. ಸುದ್ದಿ ಹೊರಬಿದ್ದ ನಂತರ ಸಣ್ಣ ಹೂಡಿಕೆದಾರರು ಮಾರಾಟ ಮಾಡಲು ಮುಂದಾಗುತ್ತಾರೆ.
ಆದರೆ ಆ ವೇಳೆಗೆ ಆಗಲೇ ಷೇರಿನ ಬೆಲೆ ಕುಸಿದಿರುವುದನ್ನು ಗಮನಿಸಿದೆ ಇನ್ನೂ ಬೀಳಬಹುದೆಂಬ ಭಯ ಹೊಂದಿರುವ ಕಾರಣ ಮಾರಾಟಕ್ಕೆ ಮುಂದಾಗುವರು. ಅದನ್ನು ಬಂಡವಾಳವಾಗಿಸಿಕೊಂಡು ವಹಿವಾಟುದಾರರು ಲಾಭ ಪಡೆಯುವರು. ಹಾಗಾಗಿ ಷೇರಿನ ಬೆಲೆ ತ್ವರಿತವಾಗಿ ್ಙ60ನ್ನು ದಾಟಿದೆ. ಇದರಿಂದ ಇನ್ನು ಮುಂದೆ ಷೇರಿನ ಬೆಲೆ ಸತತ ಏರಿಕೆ ಕಾಣಬಹುದೆಂಬ ಹುಸಿ ಭಾವನೆ ಬೇಡ. ಮತ್ತೊಮ್ಮೆ ಮಾರಾಟದ ಒತ್ತಡಕ್ಕೆ ಈ ಷೇರು ಒಳಗಾಗಬಹುದು.
ಅದೇ ರೀತಿ ಇನ್ಫೋಸಿಸ್ ಫಲಿತಾಂಶವು ನಿರೀಕ್ಷಿತ ಮಟ್ಟದಲ್ಲಿರುವ ವಾಸ್ತವಾಂಶವನ್ನು ಮರೆತು ಮುಂದಿನ ದಿನಗಳಲ್ಲಿ ಸಾಧನೆ ಸರಿ ಇರಲಾರದೆಂಬ ಮುನ್ಸೂಚನೆ ಅಂದು ಶೇ 8ಕ್ಕೂ ಹೆಚ್ಚಿನ ಕುಸಿತಕ್ಕೊಳಗಾಯಿತು. ಈ ರೀತಿಯ ವಿಶ್ಲೇಷಣೆಗಳು ಪೇಟೆಗಳು ಇಳಿಮುಖದಲ್ಲಿ ಜಾಗ ಕೊಳ್ಳಲು ಅವಕಾಶ ನೀಡುವುದಿಲ್ಲ. ಏರಿಕೆಯಲ್ಲಿದ್ದಾಗ ಮಾರಾಟ ಮಾಡಿ ಲಾಭಗಳಿಸಲು ಬಿಡುವುದಿಲ್ಲ.
ಪೇಟೆಗಳು ಇಳಿಕೆಯಲ್ಲಿದ್ದಾಗ ಹೂಡಿಕೆ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಪೇಟೆಗಳಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯೂ ವ್ಯವಹಾರಿಕವೇ ಹೊರತು, ಸೇವೆಯಲ್ಲ. ಹಾಗಾಗಿ ಬದಲಾವಣೆಯ ವೇಗ ತ್ವರಿತ ಹಾಗೂ ಅದು ತಾತ್ಕಾಲಿಕ. ಹೂಡಿಕೆ ಮತ್ತು ವ್ಯವಹಾರಗಳನ್ನು ಬೇರೆ ಬೇರೆಯಾಗಿ ಅಳವಡಿಸಿಕೊಂಡು
ಅವಕಾಶವಾದಿಯಾಗುವುದಾದರೆ ಮಾತ್ರ ಷೇರುಪೇಟೆ ಲಾಭಕರವಾಗಬಲ್ಲದು.
- 98863-13380
(ಮಧ್ಯಾಹ್ನ 4.30ರ ನಂತರ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.