ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಮ್ಮೆಪಡುವ ಪೂರ್ವ ಯೋಚಿಸಿ

Last Updated 20 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಭಾರತೀಯರೆಂದು ಹೆಮ್ಮೆ ಪಡುವುದಕ್ಕಿಂತಲೂ ಭಾರತದಲ್ಲಿ ಜನಿಸಿರುವುದೇ ನಮ್ಮ ಅತಿದೊಡ್ಡ ಅದೃಷ್ಟ.    ಶೇ 6ರಿಂದ 7ರಷ್ಟು ಆರ್ಥಿಕ ಪ್ರಗತಿಯ ಕಾಲ ಘಟ್ಟದಲ್ಲಿ ಇರುವ ನಾವು ನಿಜಕ್ಕೂ ಅದೃಷ್ಟಶಾಲಿಗಳು.

1991ರ್ಲ್ಲಲಿ ಆರ್ಥಿಕ ಸ್ವಾತಂತ್ರ್ಯ ಗಳಿಸಿ, ನಮ್ಮ ಅರ್ಥ ವ್ಯವಸ್ಥೆ ಜಗತ್ತಿಗೆ ತೆರೆದುಕೊಳ್ಳುವವರೆಗೆ ದೇಶದ ಆರ್ಥಿಕ ಸ್ಥಿತಿ ಶೇ 2.5ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದ್ದೇ ಇಲ್ಲ. 

ಅಲ್ಲಿಂದೀಚೆಗೆ ಆರ್ಥಿಕ ಪ್ರಗತಿಯ ದಾಪುಗಾಲು ಹೇಗಿದೆ ಎಂದರೆ, ಕಳೆದ ಎರಡು ವರ್ಷಗಳಲ್ಲಿ ದಾಖಲಾದ `ಜಿಡಿಪಿ~ಯು, 1990ರ ದಶಕದ ಒಟ್ಟಾರೆ `ಜಿಡಿಪಿ~ಯನ್ನೂ ಮೀರಿಸಿದೆ. ಅವಕಾಶದಿಂದ ವಂಚಿತರಾಗುವುದು ಎಂದರೆ ಹೇಗೆ ಎಂಬುದರ ಅನುಭವ  ಯುವ ಜನಾಂಗಕ್ಕೆ ಇಲ್ಲ. 

ಚೀನಾ ಇನ್ನು ಮುಂದೆ ಭಾರತದಷ್ಟು ವೇಗವಾಗಿ ಆರ್ಥಿಕ ಪ್ರಗತಿ ಸಾಧಿಸಲಾರದು. ಯೂರೋಪ್‌ನ ಭವಿಷ್ಯವೂ  ಅವನತಿಯೇ ಹೊರತು   ಪ್ರಗತಿಯಲ್ಲ.

ಕಳೆದೆರಡು ವಾರಗಳಲ್ಲಿ ನನಗೆ ಹಲವಾರು ಯುವ ವಾಸ್ತುಶಿಲ್ಪಿಗಳು, ಉದ್ಯಮ ಪದವೀಧರರು, ಎಂಜಿನಿಯರ್‌ಗಳನ್ನು ಸಂಪರ್ಕಿಸುವ ಅವಕಾಶ ಸಿಕ್ಕಿತ್ತು.

ದೆಹಲಿಯಲ್ಲಿ ಒಂದು, ಬೆಂಗಳೂರಿನಲ್ಲಿ ಎರಡು, ಕೋಯಿಕ್ಕೋಡ್, ಕೋಲ್ಕತ್ತಗಳಲ್ಲಿ ಮತ್ತೆರಡು ಸಭೆಗಳು ನಡೆದಿದ್ದವು. ಇಂತಹ ಕೆಲವು ಸಭೆಗಳು ಔಪಚಾರಿಕವಾಗ್ದ್ದಿದವು.

ನಾನು ನೂರಾರು ಯುವ ಮನಸ್ಸುಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದೆ. ಕೆಲವೊಂದು ಬಾರಿ ಅನೌಪಚಾರಿಕವಾಗಿ ಸಣ್ಣ ಸಣ್ಣ ಗುಂಪುಗಳೊಂದಿಗೆ ಚರ್ಚೆಗಳನ್ನೂ ನಡೆಸಿದ್ದೆ. ಈ ಯುವ ಮನಸ್ಸು ಏನನ್ನು ಬಯಸುತ್ತದೆ ಮತ್ತು ಅವರ ಆಶೋತ್ತರಗಳೇನು ಎಂಬುದನ್ನು ತಿಳಿಯಲು ನಾನು ಕುತೂಹಲಿಯಾಗಿದ್ದೆ.

ಮಾತನಾಡುವ ಸಂದರ್ಭದಲ್ಲಿ ನಾನು ಅವರಿಗೊಂದು ವಿಚಾರ ಹೇಳಿದ್ದೆ. ನೀವು ಭಾರತೀಯರೆಂದು ಹೆಮ್ಮೆ ಪಡುವುದಕ್ಕಿಂತಲೂ ಮೊದಲಾಗಿ ಭಾರತದಲ್ಲಿ ಹುಟ್ಟಿದ್ದಕ್ಕೆ ಅದೃಷ್ಟ ಪಡೆದಿದ್ದೇವೆ ಎಂದು ಯೋಚಿಸಬೇಕು ಎಂದು.

ಕಳೆದ ಹಲವು ವರ್ಷಗಳಿಂದ ಶೇ 6ರಿಂದ 7ರಷ್ಟು ಪ್ರಮಾಣದ ಆರ್ಥಿಕ ಪ್ರಗತಿಯನ್ನು ದೇಶ ಸಾಧಿಸುತ್ತ ಬಂದಿದೆ. ಇಂತಹ ಕಾಲ ಘಟ್ಟದಲ್ಲಿ ಇರುವ ನೀವು ನಿಜಕ್ಕೂ ಅದೃಷ್ಟಶಾಲಿಗಳು ಎಂದು ನಾನು ಅವರಿಗೆ ಹೇಳುತ್ತಿದ್ದೆ.

ಹೀಗೆ ಹೇಳಲು ಕಾರಣ ಇದೆ. ಏಕೆಂದರೆ 1991ರಲ್ಲಿ ನಮ್ಮ ಆರ್ಥಿಕ ಕ್ಷೇತ್ರ ಜಗತ್ತಿಗೆ ತೆರೆದುಕೊಳ್ಳುವ ವರೆಗೆ ದೇಶದ ಆರ್ಥಿಕ ಸ್ಥಿತಿ ಶೇ 2.5ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದ್ದೇ ಇಲ್ಲ. ಆ ವರ್ಷ ನಾವು ಆರ್ಥಿಕ ಸ್ವಾತಂತ್ರ್ಯ ಗಳಿಸಿಕೊಂಡೆವು.

ಅಲ್ಲಿಂದೀಚೆಗೆ ನಾವು 20 ವರ್ಷ ಸಾಗಿ ಬಂದಿದ್ದೇವೆ. ವರ್ಷದಿಂದ ವರ್ಷಕ್ಕೆ ಸರಾಸರಿ ಶೇ 7ರಂತೆ ಆರ್ಥಿಕ ಪ್ರಗತಿ ಸಾಧಿಸಲಾಗುತ್ತಿದೆ. ಈ ವರ್ಷವೂ ಪ್ರಗತಿಯ ಪ್ರಮಾಣ ಶೇ 7ಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲೇ ಇದೆ.

ಯುವ ಜನಾಂಗಕ್ಕೆ ಇದು ಏನನ್ನು ಸೂಚಿಸುತ್ತದೆ. ಅವರಿಗೀಗ ಇನ್ನೂ 20 ವರ್ಷ ಎಂದುಕೊಂಡರೆ ಅವರಿಗೆ ದೇಶ ತುಳಿದುಬಂದ ಕಷ್ಟದ ದಿನಗಳ ಅರಿವಿರುವುದು ಸಾಧ್ಯವೇ ಇಲ್ಲ. ಸಮಾಜವಾದದ ಮಾದರಿಯಲ್ಲಿ ದೇಶ ನಾಲ್ಕು ದಶಕಗಳ ಕಾಲ ಕಳೆದ ಸ್ಥಿತಿಗತಿಯನ್ನು ಅವರು ಹಿರಿಯರಿಂದ ಕೇಳಿ ತಿಳಿಯಬೇಕಷ್ಟೇ.

ಅವಕಾಶದಿಂದ ವಂಚಿತರಾಗುವುದು ಎಂದರೆ ಹೇಗೆ ಎಂಬ ಮಾತು ಈ ಯುವ ಜನಾಂಗಕ್ಕೆ ಅಷ್ಟಾಗಿ ಗೊತ್ತಾಗಲು ಸಾಧ್ಯವಿಲ್ಲ. ಇಂದು ಸಾಕಷ್ಟು ಉದ್ಯೋಗ ಮತ್ತು ವ್ಯವಹಾರದ ಅವಕಾಶಗಳಿವೆ. ಆದರೂ ಯುವಜನರ ಸವಾಲುಗಳು ಬದಲಾಗಿವೆ.
 
ಇದೇ ಇಂದಿನ 20 ವರ್ಷದ ಯುವಜನತೆ 40 ವರ್ಷದವರಾದಾಗ ಅವರು ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶದಲ್ಲಿ ಇರುವ ಪ್ರಬುದ್ಧ ಪ್ರಜೆಗಳಾಗಿರುತ್ತಾರೆ. 2030ರ ಹೊತ್ತಿಗೆ ಭಾರತದ ಜನಸಂಖ್ಯೆ 160 ಕೋಟಿ ದಾಟಿ ಹೋಗಲಿದ್ದು, ಚೀನಾವನ್ನೂ ಮೀರಿ ಭಾರತದ ಜನಸಂಖ್ಯೆ ಮುನ್ನಡೆಯಲಿದೆ.

ಜಗತ್ತಿನಾದ್ಯಂತ ಭಾರತೀಯರ ಉಪಸ್ಥಿತಿ ಮತ್ತು ಅವರು ಆರ್ಥಿಕ ಕ್ಷೇತ್ರದ ಮೇಲೆ ತರುವಂತಹ ಪ್ರಭಾವ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ. ಇಂದು ನಮ್ಮ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಪ್ರಮಾಣ 1.3 ಲಕ್ಷ ಕೋಟಿ ಡಾಲರ್  (ಅಂದಾಜು ರೂ67.6 ಲಕ್ಷ ಕೋಟಿ). 

ಇದು ಒಂದರ್ಥದಲ್ಲಿ ದೇಶದ ವಾರ್ಷಿಕ ಆದಾಯ ಎಂದೂ ಹೇಳಬಹುದು. 1991ರಲ್ಲಿ ಜಿಡಿಪಿ ಪ್ರಮಾಣ 250 ಶತಕೋಟಿ ಡಾಲರ್ ಆಗಿತ್ತು (ರೂ13,00,000 ಕೋಟಿ).
 ದೇಶ ಅಂದು ಭಾರಿ ಆರ್ಥಿಕ ಸಂಕಷ್ಟದಲ್ಲಿತ್ತು, ದೇಶದ ಚಿನ್ನವನ್ನು ಮಾರಿ ನಮ್ಮ ಆರ್ಥಿಕ ಸಂಕಷ್ಟ ಪಾರುಮಾಡಬೇಕಾಗಿ ಬಂದಿತ್ತು. ಆರ್ಥಿಕ ಪ್ರಗತಿಯ ದಾಪುಗಾಲು ಹೇಗಿದೆ ಎಂದರೆ, ಕಳೆದ ಎರಡು ವರ್ಷಗಳಲ್ಲಿ ದಾಖಲಾದ `ಜಿಡಿಪಿ~ಯು, 1990ರ ದಶಕದ ಒಟ್ಟಾರೆ `ಜಿಡಿಪಿ~ಯನ್ನೂ ಮೀರಿಸಿದೆ.

2020ರ ವೇಳೆಗೆ ನಮ್ಮ `ಜಿಡಿಪಿ~ ಪ್ರಮಾಣ 2 ಲಕ್ಷ ಕೋಟಿ ಡಾಲರ್ ಮೀರಲಿದೆ (ರೂ104 ಲಕ್ಷ ಕೋಟಿ). ಚೀನಾದ `ಜಿಡಿಪಿ~ ಇದೀಗ 4 ಲಕ್ಷ ಕೋಟಿ ಡಾಲರ್‌ನಷ್ಟಿದೆ.

ಚೀನಾ ಇನ್ನು ಮುಂದೆ ಭಾರತದಷ್ಟು ವೇಗವಾಗಿ ಆರ್ಥಿಕ ಪ್ರಗತಿ ಸಾಧಿಸಲಾರದು. ಯೂರೋಪ್‌ನ ಆರ್ಥಿಕ ಸ್ಥಿತಿ ಇನ್ನು ಮುಂದೆ ಅವನತಿಯೇ ಹೊರತು ಪ್ರಗತಿಯಲ್ಲ.

ಭಾರತದತ್ತ ಹರಿದುಬರುವ ವಿದೇಶಿ ಬಂಡವಾಳದ ಪ್ರಮಾಣ ಇದೀಗ ವರ್ಷಕ್ಕೆ 30 ಶತಕೋಟಿ ಡಾಲರ್‌ನಷ್ಟಿದೆ (್ಙ1,56,000 ಕೋಟಿ) ಚೀನಾ ವರ್ಷಕ್ಕೆ 100 ಶತಕೋಟಿ ಡಾಲರ್‌ನಷ್ಟು ವಿದೇಶಿ ಬಂಡವಾಳವನ್ನು ಆಕರ್ಷಿಸುತ್ತಿದೆ.

ಭಾರತದಲ್ಲಿ ಹೂಡಿಕೆ ಮಾಡುವುದಕ್ಕೆ ಕೆಲವು ವಿದೇಶಿ ಸಂಸ್ಥೆಗಳು ಮೀನಮೇಷ ಎಣಿಸುತ್ತಿರುವುದರಿಂದ ಚೀನಾದಷ್ಟು ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ವಿದೇಶಿ ಹೂಡಿಕೆ ಹರಿದು ಬರುತ್ತಿಲ್ಲ. ಇದು ಒಂದು ರೀತಿಯಲ್ಲಿ ದೇಶದ ಆರ್ಥಿಕತೆಗೆ ಒಳ್ಳೆಯದೇ.

ಇಡೀ ಜಗತ್ತು ಆರ್ಥಿಕ ಹಿನ್ನಡೆಯ ಭಾರಕ್ಕೆ ಕುಸಿದಿದ್ದಾಗಲೂ ಭಾರತ ಅಂತಹ ಸಂಕಷ್ಟಕ್ಕೆ ಸಿಲುಕಲಿಲ್ಲ. ಏಕೆಂದರೆ, ನಮ್ಮ ಆಂತರಿಕ ಅನುಭೋಗ ಅಷ್ಟು ದೊಡ್ಡ ಪ್ರಮಾಣದಲ್ಲಿದೆ. ಭಾರತದ ಅಭಿವೃದ್ಧಿ ಕಂಡು ಅಮೆರಿಕ ಮತ್ತು ಯೂರೋಪ್‌ಗಳು ಹೊಟ್ಟೆಕಿಚ್ಚುಪಡುತ್ತಿವೆ.

ಕಳೆದ ಶತಮಾನದಲ್ಲಿ ತಾವು ಅನುಭವಿಸಿದ ಆರ್ಥಿಕ ಪ್ರಗತಿಯನ್ನು ಈ ಶತಮಾನದಲ್ಲಿ ಭಾರತ ಮತ್ತು ಚೀನಾಗಳು ಅನುಭವಿಸುತ್ತಿವೆ ಎಂಬುದನ್ನು ಪಾಶ್ಚಿಮಾತ್ಯ ಜಗತ್ತು ಕಾಣುತ್ತಿದೆ.

ಇಂತಹ ಸನ್ನಿವೇಶದಲ್ಲಿ ಯುವ ಮನಸ್ಸು ಏನೆಲ್ಲ ಚಿಂತಿಸಬಹುದು? ಉದ್ಯಮ ವ್ಯವಹಾರಗಳನ್ನು ಮುನ್ನಡೆಸುವವರಾಗಿ, ವಾಸ್ತುಶಿಲ್ಪಿಗಳಾಗಿ, ಎಂಜಿನಿಯರ್‌ಗಳಾಗಿ ಅವರ ಭಾವನೆಗಳೇನು? ನಮ್ಮ ಇಂಧನ ಮೂಲಗಳನ್ನು ಸಂರಕ್ಷಿಸುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ನಾನು ಇವರಿಗೆಲ್ಲ ತಿಳಿಸುವ ಪ್ರಯತ್ನ ಮಾಡಿದೆ.

ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಭಾರಿ ಪ್ರಮಾಣದ ತ್ಯಾಜ್ಯವನ್ನು ಸಮರ್ಥವಾಗಿ ನಿಭಾಯಿಸಿದರೆ, ಅಂತಹ ಪ್ರತಿ ಕೆ.ಜಿ. ತ್ಯಾಜ್ಯದಿಂದಲೂ ಹಣ ಗಳಿಸಬಹುದು ಎಂಬುದನ್ನು ಅವರಿಗೆ ಮನವರಿಕೆ ಮಾಡಿದೆ.

ಮನೆಯ ತಾರಸಿ ಮೇಲೆಯೇ ತರಕಾರಿಗಳನ್ನು ಬೆಳೆಯುವ ಮೂಲಕ ಜನರು ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂಬುದನ್ನು ಯುವಜನಾಂಗಕ್ಕೆ ಮನವರಿಕೆ ಮಾಡಿಕೊಟ್ಟರೆ ಅದು ಬಹಳ ದೊಡ್ಡ ಪರಿಣಾಮ ಬೀರುವಂತದ್ದು.

ಇಂಧನ ದಕ್ಷ ಉತ್ಪನ್ನಗಳನ್ನು ಸಜ್ಜಗೊಳಿಸಿದರೆ ಸಹ ಅದರ ಪ್ರಯೋಜನ ಅಪಾರ. ಇಂಧನ ಉತ್ಪಾದಿಸುವ ವ್ಯವಸ್ಥೆಯನ್ನೇ ತೀರಾ ಸ್ಥಳೀಯಗೊಳಿಸಿ ಸೌರಶಕ್ತಿ, ತ್ಯಾಜ್ಯದಂತಹ ಬರಿದಾಗದ ಇಂಧನ ಮೂಲಗಳಿಂದಲೇ 1-2 ಕಿಲೋವಾಟ್ ವಿದ್ಯುತ್ ಉತ್ಪಾದಿಸಿದರೆ ಅದೆಷ್ಟು ಅನುಕೂಲ.
 
1980ರ ದಶಕದಲ್ಲಿ ಬಟ್ಟೆ ತೊಳೆಯುವ ಯಂತ್ರ ಬಂದು ಹೇಗೆ ಕ್ರಾಂತಿ ಉಂಟುಮಾಡಿತೋ ಹಾಗೆಯೇ ನೀರಿನ ಶುದ್ಧೀಕರಣ ಮಾಡುವ ಸ್ಥಳೀಯ ವ್ಯವಸ್ಥೆಯೊಂದು ಬಂದರೆ ಅದೆಷ್ಟು ಪ್ರಯೋಜನವಾದೀತು ಎಂದು ನಾವು ಊಹಿಸಬಹುದು.

`ಇಂತಹ ಚಿಂತನೆಗಳು ಹೇಗೆ ನೆರವಾಗುತ್ತವೆ. ಇದೆಲ್ಲ ಒಂದು ವ್ಯವಹಾರ ಚಿಂತನೆ. ಇದನ್ನು ಪೋಷಿಸಬೇಕು ಎಂದು ಏಕೆ ಹೇಳುತ್ತಿದ್ದೀರಿ~ ಎಂದು ಯುವತಿಯೊಬ್ಬರು ನನ್ನಲ್ಲಿ ಕೇಳಿಯೇಬಿಟ್ಟರು.
 
ನಾನು ಅದಕ್ಕೆ ಸರಳ ಉದಾಹರಣೆಯೊಂದನ್ನು ನೀಡಿದೆ. ಮನೆಯ ಮೇಲೆ ತರಕಾರಿ ಬೆಳೆಯುತ್ತೀರಿ ಎಂದಿಟ್ಟುಕೊಳ್ಳಿ. ದೂರದ ಊರಿನಿಂದ ನೀವು ತರಿಸಿಕೊಳ್ಳುವ ತರಕಾರಿಯ ಪ್ರಮಾಣ ಕಡಿಮೆಯಾಯಿತು ಎಂದಾದರೆ ಇವುಗಳ ಸಾಗಾಟಕ್ಕಾಗಿ ಬಳಸುವ ಇಂಧನ ತೈಲಗಳ ಬಳಕೆಯ ಪ್ರಮಾಣವೂ ಕಡಿಮೆಯಾಯಿತು.

ಇಂತಹ ಮನೆ ಮಾಳಿಗೆಯ ತರಕಾರಿಗೆ ನಾವು ವಿಷಕಾರಕ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಹಾಕುವುದಿಲ್ಲ. ನಮ್ಮ ಅಡುಗೆ ಮನೆಯ ತ್ಯಾಜ್ಯದಿಂದ ಉತ್ಪನ್ನವಾದ ಗೊಬ್ಬರವನ್ನೇ ಅದಕ್ಕೆ ಹಾಕುತ್ತೇವೆ ಎಂಬುದನ್ನು ಆಕೆಗೆ ಮನವರಿಕೆ ಮಾಡಿಕೊಟ್ಟೆ.

ಭವಿಷ್ಯವನ್ನು ಎದುರು ನೋಡುತ್ತಿರುವ ತರುಣ ಉತ್ಸಾಹಿಗಳನ್ನು ಕಂಡಾಗ ನನ್ನ ಮನಸ್ಸಲ್ಲಿ ಕೆಲವೊಂದು ವಿಚಾರಗಳು ಏಳುತ್ತಿವೆ.
 
ಇವರೆಲ್ಲ ಉತ್ತಮ ಉದ್ಯೋಗ ನೀಡುವ ಕಂಪೆನಿಯಲ್ಲಿ ಕೆಲಸ ಪಡೆದು ತಮ್ಮ ನೆಲೆಯನ್ನು ಭದ್ರಪಡಿಸಲು ಹೊರಟಿದ್ದಾರೆಯೇ ಅಥವಾ ಕಂಪೆನಿಗಳ ಹೊರಗಡೆಯೂ ಇರುವ ಸಾಕಷ್ಟು ಅವಕಾಶಗಳನ್ನು ಬಳಸಿಕೊಂಡು ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಿ ಅವುಗಳನ್ನೇ ದೊಡ್ಡ ಅವಕಾಶಗಳನ್ನಾಗಿ ಮಾರ್ಪಡಿಸುತ್ತಾರೆಯೇ ಎಂದು.

ತ್ಯಾಜ್ಯ ನಿರ್ವಹಣೆ ಬಹಳ ದೊಡ್ಡ ಕ್ಷೇತ್ರ. 1.10 ಲಕ್ಷ ಮನೆಗಳಿರುವ ಬೆಂಗಳೂರಿನಲ್ಲಿ ಪ್ರತಿ ತಿಂಗಳು ಸೆಪ್ಟಿಕ್ ಟ್ಯಾಂಕ್‌ಗಳಲ್ಲಿ ಸಂಗ್ರಹವಾದ ತ್ಯಾಜ್ಯಗಳನ್ನು ಸ್ವಚ್ಛಗೊಳಿಸುವುದೇ ದೊಡ್ಡ ವ್ಯವಹಾರವಾಗಿಬಿಟ್ಟಿದೆ.

ಇದರ ಬದಲಿಗೆ ಅಡುಗೆ ಮನೆಯಲ್ಲಿ ತಯಾರಾದ ತ್ಯಾಜ್ಯಗಳನ್ನೇ ಕಾಂಪೋಸ್ಟ್ ಗೊಬ್ಬರವಾಗಿ ಮಾಡಿದರೆ ಮತ್ತು ನಮ್ಮ ಮನೆಯ ಮೇಲೆ ಸುರಿಯುವ ಮಳೆ ನೀರು ನಮ್ಮ ನೆಲದಲ್ಲೇ ಇಳಿದು ನಾಳೆಯ ಬಳಕೆಗೆ ಸಿಗುವಂತಾದರೆ ಅದೆಷ್ಟು ಉತ್ತಮ.

ಸರ್ಕಾರ ಮಾಡದೆ ಬಿಟ್ಟ ಸಂಗತಿಗಳೆಲ್ಲ ನಾವು ಸದ್ಬಳಕೆ ಮಾಡಿಕೊಳ್ಳಲು ನಮಗೆ ದೊರೆತ ಅವಕಾಶ ಎಂದು ಭಾವಿಸಿ ನಾವು ಅದನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಇದೇ ಕ್ಷೇತ್ರ ಎಂದಲ್ಲ, ಇಂತಹ ಅದೆಷ್ಟೋ ಕ್ಷೇತ್ರಗಳಲ್ಲಿ ಯುವಜನತೆ ಚಿಂತನೆ ನಡೆಸಿ ನಮ್ಮ ವ್ಯವಸ್ಥೆಯನ್ನು ಉತ್ತಮಪಡಿಸುವುದು ಸಾಧ್ಯವಿದೆ, ಅದರ ಬಗ್ಗೆ ಅವರು ಸ್ವಲ್ಪ ಚಿಂತನೆ ನಡೆಸಬೇಕಷ್ಟೇ.

ಸಣ್ಣ ಉದಾಹರಣೆಯೊಂದನ್ನು ನೋಡೋಣ. ಉಡುಪಿ, ಬೈಂದೂರು, ಕುಂದಾಪುರ, ಗೋಕರ್ಣಗಳಂತಹ ಪ್ರವಾಸೋದ್ಯಮ ಸೂಕ್ಷ್ಮ ಪಟ್ಟಣಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಸಾಕಷ್ಟು ಅವಕಾಶ ಇದೆ.

ಇಲ್ಲೆಲ್ಲ ಲಭ್ಯ ಇರುವ ನೀರಿನಲ್ಲೇ ನೀರನ್ನು ಚಿಮುಕಿಸಿ ವಾತಾವರಣವನ್ನು ತಂಪಾಗಿ ಇಡಬಹುದು. ಇದರಿಂದ ಸಾಂಪ್ರದಾಯಿಕ ಹವಾನಿಯಂತ್ರಣ ವ್ಯವಸ್ಥೆಗೆ ಬೇಕಾದ ಶುದ್ಧ ನೀರಿಗೆ ಅವಲಂಬಿಸುವ ಪ್ರಮೇಯ ತಪ್ಪುತ್ತದೆ.

ಈ ಉತ್ಸಾಹಿ ತರುಣ ಪದವೀಧರರಲ್ಲಿ ಉದ್ಯಮಿಗಳಾಗುವವರೂ ಇದ್ದಾರೆ ಎಂದಾದರೆ ಭವಿಷ್ಯದಲ್ಲಿ ಇದರಿಂದ ಬಹಳ ಪ್ರಯೋಜನ ಇದೆ. ಅದರಲ್ಲೂ ಮುಖ್ಯವಾಗಿ ನಗರ ಪ್ರದೇಶದ ಲಕ್ಷಾಂತರ ಜನರು ಇವರಿಂದ ಬಹಳ ದೊಡ್ಡ ಲಾಭ ಪಡೆದುಕೊಳ್ಳುವುದು ಸಾಧ್ಯವಿದೆ.
 
ನಗರ ಪ್ರದೇಶಗಳಲ್ಲಿ ಸರ್ಕಾರ ಗಮನಹರಿಸದ ಕಡೆಗಳಲ್ಲಿ ಮಹತ್ವದ ಕೆಲಸ ಮಾಡುತ್ತಲೇ ಉತ್ತಮ ಗಳಿಕೆಯನ್ನೂ ಮಾಡಿಕೊಳ್ಳಬಹುದು. ಆಗ ಸರ್ಕಾರಕ್ಕೆ ನಗರ ಪ್ರದೇಶಗಳ ಮೂಲಸೌಲಭ್ಯಕ್ಕೆ ಹೆಚ್ಚು ಹಣ ಖರ್ಚು ಮಾಡುವ ಚಿಂತೆ ಕಡಿಮೆಯಾಗುತ್ತದೆ,

ಇದೇ ಸಂಪನ್ಮೂಲವನ್ನು ಉತ್ತಮ ಶಿಕ್ಷಣ, ಆರೋಗ್ಯ, ಸಾರಿಗೆ ಮತ್ತು ದೇಶ ಬಯಸುವ ಇತರ ಮೂಲಸೌಲಭ್ಯಗಳ ಸುಧಾರಣೆಗೆ ಬಳಸುವುದು ಸಾಧ್ಯವಿದೆ. ನಮ್ಮ ಯುವಜನಾಂಗದಿಂದ ಇಂತಹ ಕೆಲಸ ನಡೆಯಬೇಕಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT