ಸರ್ಕಾರ, ಕಾನೂನು, ನ್ಯಾಯಾಲಯಗಳು, ಆರಕ್ಷಕ ಠಾಣೆಗಳು ಇವುಗಳೆಲ್ಲಾ ನಮಗೆ ಸುರಕ್ಷಿತ ಬದುಕನ್ನು ಕಟ್ಟಿಕೊಳ್ಳಲು ಪೂರಕವಾದಂಥ ಪರಿಸರವನ್ನು ಸೃಷ್ಟಿಸುವಲ್ಲಿ ಪ್ರಧಾನ ಪಾತ್ರ ವಹಿಸಬೇಕು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಎಲ್ಲ ಜವಾಬ್ದಾರಿಗಳನ್ನೂ ಇವರ ಮೇಲೆ ಹೊರೆಸಿ ನಾವು ಕೈ ಕಟ್ಟಿ ಕೂರಲಾಗುವುದಿಲ್ಲ. ಈಗಿನ ಸಂದರ್ಭದಲ್ಲಂತೂ ಕೇವಲ ಹೆಣ್ಣು ಮಕ್ಕಳಲ್ಲ, ಯಾರು ಬೇಕಾದರೂ ಯಾವ ಹೊತ್ತಿನಲ್ಲಾದರೂ ಅಪಾಯ ವಲಯಕ್ಕೆ ಜಾರಬಹುದು. ರಾಜಧಾನಿಗಳಲ್ಲಿ, ಸುರಕ್ಷಿತ ಸ್ಥಳಗಳಲ್ಲಿ, ರಕ್ಷಣಾ ಸಿಬ್ಬಂದಿಯ ನೆರಳಿನಲ್ಲಿ ಬದುಕುತ್ತಿರುವ ಅಧಿಕಾರ ವಲಯದಿಂದಲೇ ದೇಶದ ಎಲ್ಲ ನಾಗರಿಕರ ರಕ್ಷಣೆಯಾಗಬೇಕು ಎಂಬ ಭ್ರಮೆಯಿಂದ ಹೊರಬಂದು ನಮ್ಮ ನಮ್ಮ ನೆರೆಹೊರೆಗಳಲ್ಲಿ ನಾವು ಸ್ಥಳೀಯ ಸ್ವರೂಪದ ರಕ್ಷಣಾ ವ್ಯವಸ್ಥೆಯೊಂದನ್ನು ನಿರ್ಮಿಸಿಕೊಳ್ಳಬೇಕು. ರಸ್ತೆಗಳ, ವಾರ್ಡುಗಳ, ಪಂಚಾಯಿತಿಗಳ ಮಟ್ಟದಲ್ಲಿಯೇ ರಕ್ಷಣಾ ವಲಯಗಳನ್ನು ಕಟ್ಟಿಕೊಂಡಾಗ ನಾವು ಸುರಕ್ಷಿತ ಬದುಕನ್ನು ನಡೆಸಲು ಸಾಧ್ಯವಾಗಬಹುದೇನೋ?