ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರವಹಿಸಿಕೊಂಡ ಮೊದಲ ವಾರದಲ್ಲಿ ಅನೇಕ ಆಸಕ್ತಿದಾಯಕ ಬೆಳವಣಿಗೆಗಳು ನಡೆದಿವೆ. ನನಗಂತೂ ಈ ವಿದ್ಯಮಾನಗಳು ಮೋದಿ ಅವರ ವ್ಯಕ್ತಿತ್ವದ ಇನ್ನೊಂದು ಮುಖದ ಸ್ಪಷ್ಟ ಚಿತ್ರಣ ನೀಡಿವೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ, ವೈರಿಗಳ ಮೇಲೆ ಆಕ್ರಮಣ ನಡೆಸುವ ಸಮರ ಸೇನಾನಿ ರೂಪದಲ್ಲಿ ಮೋದಿ ಎಲ್ಲರ ಗಮನ ಸೆಳೆದಿದ್ದರು. ಅವರ ಹಾವಭಾವ ಮತ್ತು ಧ್ವನಿಯ ಏರಿಳಿತಗಳು, ಯಾವುದೇ ಬೆಲೆ ತೆತ್ತಾದರೂ ಎದುರಾಳಿಗಳನ್ನು ಬಗ್ಗುಬಡಿಯುವ ಸಮರ್ಥ ಸೇನಾಪತಿಯಂತೆ ಕಂಡು ಬಂದಿದ್ದವು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ತಮ್ಮ ಬಗ್ಗೆ ಬಂದ ಪ್ರತಿಕೂಲಕರ ಟೀಕೆಗಳಿಂದ ಅವರೇನೂ ಧೃತಿಗೆಟ್ಟಿದ್ದಿಲ್ಲ. ತಾವು ನಿರ್ವಹಿಸಬಹುದಾದ ಪಾತ್ರದ ಬಗ್ಗೆ ಅವರಿಗೆ ಸ್ಪಷ್ಟ ಪರಿಕಲ್ಪನೆ ಇತ್ತು.
ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅವರ ಮಾತು ಮತ್ತು ಚರ್ಯೆ ಸಂಪೂರ್ಣ ಬದಲಾಯಿತು. ತಮ್ಮ ಪಾತ್ರ ಬದಲಾಗಿದೆ ಮತ್ತು ತಾವು ನಿರ್ವಹಿಸಲಿರುವ ಹೊಸ ಹುದ್ದೆಗೆ ವಿಭಿನ್ನ ಮೋದಿಯ ಅಗತ್ಯ ಇದೆ ಎನ್ನುವುದು ಅವರಿಗೆ ಮನದಟ್ಟಾಗಿತ್ತು. ಸಂಸತ್ತಿನ ಮೆಟ್ಟಿಲುಗಳಿಗೆ ಪೂಜ್ಯಭಾವದಿಂದ ನಮಸ್ಕರಿಸಿರುವುದು ಮತ್ತು ನಂತರ ಮಾಡಿದ ಭಾಷಣವು ಅವರ ವ್ಯಕ್ತಿತ್ವ ಬದಲಾಗಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿತ್ತು.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಯ ಎಂಟು ಸದಸ್ಯ ದೇಶಗಳ (ಸಾರ್ಕ್) ಮುಖ್ಯಸ್ಥರಿಗೆ ನೀಡಿದ ಆಹ್ವಾನವು, ಮೋದಿ ಅವರು ಪ್ರಧಾನಿಯಾಗುವ ಸಂದರ್ಭದಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿತ್ತು. ಮಾಧ್ಯಮಗಳಂತೂ ಈ ಆಹ್ವಾನವನ್ನು ಹಲವಾರು ದೃಷ್ಟಿಕೋನಗಳಿಂದ ವಿಶ್ಲೇಷಿಸಿದವು. ವಿದೇಶ ವ್ಯವಹಾರಗಳ ಪರಿಣತರಂತೂ ಇದೊಂದು ಐತಿಹಾಸಿಕ ವಿದ್ಯಮಾನ ಎಂದೇ ಬಣ್ಣಿಸಿದರು. ಪ್ರಾದೇಶಿಕ ಸಹಕಾರಕ್ಕೆ ಸಂಬಂಧಿಸಿದಂತೆ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಹೊಸ ಸರ್ಕಾರದ ನಿಲುವು ಸಂಪೂರ್ಣವಾಗಿ ಬದಲಾಗಿರುವುದನ್ನು ಅವರು ಸ್ಪಷ್ಟವಾಗಿ ಗುರುತಿಸಿದರು.
ಉದ್ಯಮ ಪ್ರಮುಖರು ಕೂಡ `ಸಾರ್ಕ್ ಕಾರ್ಯಸೂಚಿ'ಯಲ್ಲಿನ ಬದಲಾವಣೆಯು ಉದ್ಯಮ ವಹಿವಾಟು ವಿಸ್ತರಣೆಗೆ ಅಪಾರ ಅವಕಾಶಗಳನ್ನು ಒದಗಿಸಿ ಕೊಡಲಿದೆ ಎಂದೇ ನಿರೀಕ್ಷಿಸಿದ್ದಾರೆ. ಇನ್ನುಮುಂದೆ ನೆರೆಹೊರೆ ದೇಶಗಳ ಜತೆಗಿನ ರಾಜಕೀಯ, ಭದ್ರತೆ, ವಾಣಿಜ್ಯ ಮತ್ತು ವ್ಯಾಪಾರ ಸಂಬಂಧವು ಸುಧಾರಣೆಯಾಗಲಿದೆ ಎಂದು ಉದ್ಯಮ ವಲಯವು ಬಹುವಾಗಿ ನಿರೀಕ್ಷಿಸಿದೆ.
ಪಾಕಿಸ್ತಾನವು ಭಾರತಕ್ಕೆ ವಾಣಿಜ್ಯ ವಹಿವಾಟಿನ ‘ಪರಮಾಪ್ತ ದೇಶದ ಸ್ಥಾನಮಾನ’ ನೀಡುವ ಸಾಧ್ಯತೆಯು ಮತ್ತು ಅದರಿಂದ ಎರಡೂ ದೇಶಗಳಿಗೆ ಆಗಲಿರುವ ಪ್ರಯೋಜನಗಳು ಚರ್ಚೆಯ ಕೇಂದ್ರ ಬಿಂದುಗಳಾಗಿದ್ದವು. ಭಾರತವು 15 ವರ್ಷಗಳ ಹಿಂದೆಯೇ ಪಾಕಿಸ್ತಾನಕ್ಕೆ ‘ಪರಮಾಪ್ತ ದೇಶದ ಸ್ಥಾನಮಾನ’ ಕಲ್ಪಿಸಿದ್ದು, ಪಾಕಿಸ್ತಾನದಿಂದಲೂ ಇದೇ ಬಗೆಯ ಸ್ಥಾನಮಾನ ಸಿಗುವುದನ್ನು ಎದುರು ನೋಡುತ್ತಿದೆ.
ಒಂದು ವೇಳೆ ಎರಡೂ ದೇಶಗಳ ನಡುವಣ ವಾಣಿಜ್ಯ - ವ್ಯಾಪಾರ ಸುಧಾರಿಸಿದರೆ ಅದರಿಂದ ಇಬ್ಬರಿಗೂ ಒಳಿತಾಗಲಿದೆ. ಇದರಿಂದ ನೆರೆಹೊರೆ ದೇಶಗಳ ಮಧ್ಯೆ ಇನ್ನಷ್ಟು ವಿಶ್ವಾಸ ವೃದ್ಧಿಯಾಗಲಿದೆ. ‘ಸಾರ್ಕ್’ ಸಂಘಟನೆಯ ಇತರ ಸದಸ್ಯ ದೇಶಗಳೂ ಭಾರತ - ಪಾಕ್ ಬಾಂಧವ್ಯ ವೃದ್ಧಿಯನ್ನು ಎದುರು ನೋಡುತ್ತಿವೆ. ಇದರಿಂದ ವಾಣಿಜ್ಯ ರಂಗದಲ್ಲಿ ಅರ್ಥಪೂರ್ಣ ಬೆಳವಣಿಗೆಗಳು ಕಂಡು ಬರಲಿವೆ.
‘ಸಾರ್ಕ್’ ದೇಶಗಳ ಮಧ್ಯೆ ಸರಕು ಮತ್ತು ಸೇವೆಗಳ ಉಚಿತ ಹರಿವು ಉತ್ತೇಜಿಸಲು ಸಾಮಾನ್ಯ ಕರೆನ್ಸಿ ಬಳಕೆ ಸಾಧ್ಯತೆಗಳ ಬಗ್ಗೆಯೂ ಕೆಲ ವಿಶ್ಲೇಷಕರು ಊಹೆ ಮಾಡುತ್ತಿದ್ದಾರೆ. ಸಾಮಾನ್ಯ ಕರೆನ್ಸಿ ಬಳಕೆ ಬಗ್ಗೆ ಐರೋಪ್ಯ ಒಕ್ಕೂಟದ ಪ್ರಯೋಗವು ಸಂಪೂರ್ಣವಾಗಿ ಸಫಲವಾಗಿಲ್ಲ. ಒಂದೂವರೆ ದಶಕದ ನಂತರವೂ ಸಾಮಾನ್ಯ ಕರೆನ್ಸಿಯ ಸಾಧಕ ಬಾಧಕಗಳ ಬಗ್ಗೆ ಇನ್ನೂ ಅಲ್ಲಿ ಹಲವಾರು ಪ್ರಶ್ನೆಗಳು ಕೇಳಿ ಬರುತ್ತಿವೆ.
ವಾಣಿಜ್ಯ ಸಂಬಂಧ ಸುಧಾರಣೆಯಾದರೆ, ಸಾಮಾನ್ಯ ಕರೆನ್ಸಿಯ ಬಳಕೆ ಇಲ್ಲದಿದ್ದರೂ ‘ಸಾರ್ಕ್’ ದೇಶಗಳು ಹಲವು ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ. ವಾಣಿಜ್ಯ ವ್ಯಾಪಾರ ಕಂದಕದ ಸಮಸ್ಯೆಗಳನ್ನು ಸ್ಥಳೀಯ ಕರೆನ್ಸಿಯ ನೆರವಿನೊಂದಿಗೆ ಬಗೆಹರಿಸುವ ವ್ಯವಸ್ಥೆ ಅಭಿವೃದ್ಧಿಪಡಿಸಬಹುದಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಿಂದ ಇನ್ನೂ ಒಂದು ಹೆಜ್ಜೆ ಮುಂದೆ ಇಡಲು ದೂರದೃಷ್ಟಿಯ ನಾಯಕತ್ವದ ಅಗತ್ಯ ಇದೆ. ಪ್ರಧಾನಿ ಮೋದಿ ನೇತೃತ್ವದಲ್ಲಿನ ಭಾರತವು ಈ ಪ್ರಕ್ರಿಯೆಗೆ ಚಾಲನೆ ನೀಡಬಹುದಾಗಿದ್ದು, ‘ಸಾರ್ಕ್’ ದೇಶಗಳ ಹೊಸ ನಾಯಕತ್ವದ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಬಹುದಾಗಿದೆ.
‘ಸಾರ್ಕ್’ ಮುಖ್ಯಸ್ಥರಿಗೆ ನೀಡಿದ್ದ ಆಹ್ವಾನವನ್ನು ಇನ್ನೂ ಕೆಲ ಪರಿಣತರು ಇನ್ನೊಂದು ವಿಭಿನ್ನ ದೃಷ್ಟಿಕೋನದಿಂದಲೂ ವಿಶ್ಲೇಷಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ವಿಶ್ವದಾದ್ಯಂತ ಹರಿದು ಬಂದ ಟೀಕಾ ಪ್ರವಾಹದಿಂದಾಗಿ ಮೋದಿ ವರ್ಚಸ್ಸಿಗೆ ತಗುಲಿದ್ದ ಕಳಂಕ ತೊಡೆದು ಹಾಕಲು ಪ್ರಮಾಣ ವಚನ ಸಮಾರಂಭಕ್ಕೆ ‘ಸಾರ್ಕ್’ ಮುಖ್ಯಸ್ಥರ ಉಪಸ್ಥಿತಿಯು ಗಮನಾರ್ಹ ಕೊಡುಗೆ ನೀಡಿತು ಎಂಬುದು ಅವರ ವಿಶ್ಲೇಷಣೆಯಾಗಿದೆ.
ಮೋದಿ ಅವರ ಬಲಪಂಥೀಯ ವಿಚಾರಧಾರೆಯ ಒಲವಿನ ಹಿನ್ನೆಲೆಯಲ್ಲಿ ಅವರ ಉದ್ದೇಶಗಳ ಬಗ್ಗೆ ಕೆಲ ಪ್ರಮುಖ ಚಿಂತಕರು ಕಳವಳ ವ್ಯಕ್ತಪಡಿಸಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಅತ್ಯುನ್ನತ ಹುದ್ದೆ ಅಲಂಕರಿಸುವಾಗ ತಾವು ಪೂರ್ವಗ್ರಹಗಳಿಂದ ಮುಕ್ತವಾಗಿರುವುದನ್ನು ಮೋದಿ ಅವರು ತಮ್ಮ ಈ ನಡೆಯ ಮೂಲಕ ವಿಶ್ವ ಸಮುದಾಯಕ್ಕೆ ಸಂದೇಶ ರವಾನಿಸಿದ್ದಾರೆ. ಫಲಿತಾಂಶದ ಸಂಭ್ರಮಾಚರಣೆ ನಂತರ ಮೋದಿ ಅವರ ವ್ಯಕ್ತಿತ್ವ ಬದಲಾಗಿದ್ದು, ಈಗ ಅವರೊಬ್ಬ ಸದಾ ಕಾರ್ಯನಿರತ ಪ್ರಧಾನಿಯಾಗಿದ್ದು, ಜನರಿಗೆ ಒಳಿತನ್ನು ಮಾಡುವ ಸದಾಶಯ ಹೊಂದಿದವರಂತೆ ಕಂಡು ಬರುತ್ತಿದ್ದಾರೆ.
ಮೋದಿ ಸಂಪುಟದ ಗಾತ್ರ ಮತ್ತು ಸಚಿವರ ಆಯ್ಕೆ ಕೂಡ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಹಣಕಾಸು ಖಾತೆ ವಹಿಸಿಕೊಂಡಿರುವ ಅರುಣ್ ಜೇಟ್ಲಿ ಅವರ ಆರಂಭಿಕ ಹೇಳಿಕೆ ಮತ್ತು ಉದ್ಯಮ ಪರ ನಿಲುವು ನಿರೀಕ್ಷಿತ ರೀತಿಯಲ್ಲಿಯೇ ಇವೆ. ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ರಘುರಾಂ ರಾಜನ್ ಜತೆಗೆ ಕೆಲಸ ಮಾಡುವ ಅವರ ನಿರ್ಧಾರವು ಅರ್ಥ ವ್ಯವಸ್ಥೆಯ ಪಾಲಿಗೆ ಶುಭಶಕುನವಾಗಿದೆ. ಮೋದಿ ಸರ್ಕಾರವು ವೃತ್ತಿಪರತೆಗೆ ಆದ್ಯತೆ ನೀಡಲಿದೆ ಎನ್ನುವ ಸರಿಯಾದ ಸಂಕೇತ ರವಾನಿಸಿದೆ. ಸಮಯ ವ್ಯರ್ಥ ಮಾಡದ ಜೇಟ್ಲಿ ಅವರು, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಆದ್ಯತೆ ನೀಡಿದ್ದಾರೆ.
ಅಂತರರಾಷ್ಟ್ರೀಯ ಲೆಕ್ಕಪತ್ರ ಕ್ಷೇತ್ರದಲ್ಲಿನ ಅನುಭವ ಮತ್ತು ವಾಣಿಜ್ಯ ಸಲಹಾ ಸಂಸ್ಥೆ ಪಿಡಬ್ಲ್ಯುಸಿ ಜತೆಗೆ ಕೆಲಸ ಮಾಡಿರುವ ಹಿನ್ನೆಲೆಯ ಕೈಗಾರಿಕಾ ಮತ್ತು ವಾಣಿಜ್ಯ ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಉದ್ಯಮ ಮತ್ತು ಕೈಗಾರಿಕಾ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಸಚಿವರಿಗೆ ಮೋದಿ ಅವರ ಹತ್ತು ಅಂಶಗಳ ಮಾರ್ಗದರ್ಶಿ ಸೂತ್ರಗಳು ಕೂಡ ಉತ್ತಮ ಆಡಳಿತ ನೀಡಲು ನೆರವಾಗಲಿವೆ. ಈ ಮಾರ್ಗದರ್ಶಿ ಸೂತ್ರಗಳು ಒಂದಕ್ಕೊಂದು ತಳಕು ಹಾಕಿಕೊಂಡಿರದಿದ್ದರೂ, ಪ್ರತಿಯೊಂದು ಸೂತ್ರವು ತುಂಬ ಮಹತ್ವದ್ದಾಗಿದ್ದು, ಜನಸಾಮಾನ್ಯರಲ್ಲಿ ಮತ್ತು ಉದ್ಯಮಿಗಳಲ್ಲಿ ಭರವಸೆ ಮೂಡಿಸಿವೆ. ತಮ್ಮ ಸಂಪುಟದ ಸದಸ್ಯರೂ ತಮ್ಮಂತೆಯೇ ‘ಕೆಲಸದ ಸಂಸ್ಕೃತಿ’ಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಲು ಮೋದಿ ಬಯಸುತ್ತಾರೆ ಎನ್ನುವ ಭಾವನೆ ಮೂಡಿಸುವಲ್ಲಿ ಈ ಸೂತ್ರಗಳು ಸಫಲವಾಗಿವೆ.
ಪ್ರಮುಖ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬಕ್ಕೆ ಆಸ್ಪದ ನೀಡುತ್ತಿದ್ದ ಹಲವು ಸಚಿವರ ಸಮಿತಿಗಳನ್ನು ರದ್ದುಪಡಿಸಿರುವುದು ಕೂಡ ಸ್ವಾಗತಾರ್ಹ ಬದಲಾವಣೆಯಾಗಿದೆ. ಯೋಜನೆಗಳನ್ನು ಕಾಲಮಿತಿಗೆ ಒಳಪಟ್ಟು ಪೂರ್ಣಗೊಳಿಸಲು ಅಧಿಕಾರಶಾಹಿಗೆ ನೀಡಿರುವ ನಿರ್ದೇಶನವು, ಮೋದಿ ಅವರು ಸುಧಾರಣಾ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವುದಕ್ಕೆ ಹೆಚ್ಚು ಆಸಕ್ತರಾಗಿದ್ದಾರೆಯೇ ಹೊರತು, ಅಬ್ಬರದ ಪ್ರಚಾರದಲ್ಲಿ ನಂಬಿಕೆ ಇಟ್ಟಿಲ್ಲ ಎನ್ನುವುದನ್ನು ತೋರಿಸುತ್ತದೆ.
ಆಪ್ತ ಸಿಬ್ಬಂದಿ ವರ್ಗದಲ್ಲಿ ಸಂಬಂಧಿಕರನ್ನು ನೇಮಿಸಿಕೊಳ್ಳಬಾರದು ಮತ್ತು ಸ್ನೇಹಿತರಿಗಷ್ಟೇ ಗುತ್ತಿಗೆಗಳನ್ನು ನೀಡಬಾರದು ಎಂದು ಎಲ್ಲ ಸಚಿವರಿಗೆ ನೀಡಿರುವ ನಿರ್ದೇಶನವೂ ಸ್ವಜನಪಕ್ಷಪಾತ-ವನ್ನು ಅಧಿಕಾರದಿಂದ ಗಾವುದ ದೂರ ಇಡಲು ನೆರವಾಗಲಿದೆ.
ದಕ್ಷ ಆಡಳಿತ ಮತ್ತಿತರ ಸುಧಾರಣಾ ಕ್ರಮಗಳ ಬಗ್ಗೆ ಮೋದಿ ವ್ಯತ್ಯಸ್ತರಾಗಿರುವಾಗಲೇ, ಇತರ ಸಚಿವಾಲಯಗಳಿಂದಲೂ ಸಕಾರಾತ್ಮಕ ಸಂದೇಶಗಳು ಬರುತ್ತಿರುವುದು ಉತ್ತೇಜನಕಾರಿಯಾಗಿದೆ. ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವಮಾತು ಕರ್ಣಾಂದಕರವಾಗಿದೆ.
ನನೆಗುದಿಗೆ ಬಿದ್ದಿರುವ ಬೃಹತ್ ಯೋಜನೆಗಳನ್ನು ನಿಸರ್ಗದ ಸಂರಕ್ಷಣೆ ವಿಷಯದಲ್ಲಿ ರಾಜಿ ಮಾಡಿಕೊಳ್ಳದೇ ಕೈಗೆತ್ತಿಕೊಳ್ಳಲು ಪರಿಸರ ಇಲಾಖೆಯು ಮುಂದಾಗಿದೆ. ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡುವ ವಿಷಯದಲ್ಲಿ, ಅಭಿವೃದ್ಧಿ, ಪ್ರಗತಿ ಮತ್ತು ಪರಿಸರ ಸಂರಕ್ಷಣೆಯ ಸಮತೋಲನ ಕಾಪಾಡಿಕೊಳ್ಳುವುದು ನಿಜಕ್ಕೂ ಅರ್ಥಪೂರ್ಣ ನಿಲುವಾಗಿರುತ್ತದೆ. ಇದರಿಂದ ಅಂದಾಜು ₨ 5 ಲಕ್ಷ ಕೋಟಿಗಳಷ್ಟು ಬೃಹತ್ ಮೊತ್ತ ಮೂಲ ಸೌಕರ್ಯ ರಂಗಕ್ಕೆ ಹರಿದು ಬರಲಿದೆ. ಹಿಂದಿನ ‘ಯುಪಿಎ-2’ ಸರ್ಕಾರದಲ್ಲಿ ವೀರಪ್ಪ ಮೊಯಿಲಿ ಅವರು ಈ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿರುವುದು ನಿಜವಾಗಿದ್ದರೂ, ಅದು ನಿರೀಕ್ಷಿಸಿದ ಬಗೆಯಲ್ಲಿ ಉತ್ತೇಜನಕಾರಿಯಾಗಿರಲಿಲ್ಲ.
ರಕ್ಷಣಾ ರಂಗದಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ಅವಕಾಶ ಮಾಡಿಕೊಡುವುದು, 100 ನಗರಗಳ ಬೆಳವಣಿಗೆಗೆ ಉತ್ತೇಜನ ನೀಡುವುದು ಮುಂತಾದವು ಇತರ ಸಚಿವಾಲಯಗಳ ಗಂಭೀರ ಪ್ರಸ್ತಾವಗಳಾಗಿವೆ.
ಹೊಸ ಸಚಿವರು ಅಧಿಕಾರವಹಿಸಿಕೊಂಡು ಒಂದು ವಾರವಷ್ಟೇ ಕಳೆದಿದೆ. ಅನೇಕ ಆಸಕ್ತಿದಾಯಕ ಮತ್ತು ಉತ್ತೇಜನಕಾರಿಯಾದ ಪ್ರಸ್ತಾವಗಳು ಕೇಳಿ ಬರುತ್ತಿರುವುದು ನಿಜಕ್ಕೂ ಉತ್ಸಾಹ ಮೂಡಿಸಿದೆ. ಮೊದಲ ಬಾರಿಗೆ ಸಚಿವರಾದ ಕೆಲವರು ಮಾತ್ರ ಉದಾಸೀನರಾಗಿರುವುದನ್ನು ನೋಡಿದರೆ, ಅವರು ಕಾರ್ಯಾರಂಭ ಮಾಡಲು ಇನ್ನಷ್ಟು ಕಾಲಾವಕಾಶ ನೀಡಬೇಕಾಗುತ್ತದೆ. ಇಂತಹ ಸಣ್ಣ ಪುಟ್ಟ ಸಮಸ್ಯೆಗಳನ್ನು ಬದಿಗಿಟ್ಟು ನೋಡಿದರೆ, ನರೇಂದ್ರ ಮೋದಿ ಅವರು ಪ್ರಧಾನಿ ಪಾತ್ರವನ್ನು ಮೊದಲ ದಿನದಿಂದಲೇ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎನ್ನುವುದು ಸ್ಪಷ್ಟಗೊಳ್ಳುತ್ತದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.