ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಏರುಪೇರು ಜೀವನದ ತೇರು

Last Updated 3 ನವೆಂಬರ್ 2020, 1:14 IST
ಅಕ್ಷರ ಗಾತ್ರ

ಛಿನ್ನೋsಪಿ ರೋಹತಿ ತರುಃ ಕ್ಷೀಣೋsಪ್ಯುಪಚೀಯತೇ ಚಂದ್ರಃ ।

ಇತಿ ವಿಮೃಶಂತಃ ಸಂತಃ ಸಂತಪ್ಯಂತೇ ನ ಲೋಕೇsಸ್ಮಿನ್ ।।

ಇದರ ತಾತ್ಪರ್ಯ ಹೀಗೆ:

’ಕತ್ತರಿಸಿದರೂ ಮರವು ಮತ್ತೆ ಚಿಗುರುತ್ತದೆ; ಪೂರ್ತಿ ಕಾಣಿಸದೇ ಹೋದಮೇಲೂ ಚಂದ್ರನು ಮತ್ತೆ ಹೆಚ್ಚುತ್ತಾನೆ. ಹೀಗೆ ಏರುಪೇರುಗಳು ಸ್ವಾಭಾವಿಕವಾದವು ಎಂದು ತಿಳಿದು ಸಜ್ಜನರು ಎಂದಿಗೂ ದುಃಖಿಸುವುದಿಲ್ಲ.’

ಜೀವನದಲ್ಲಿ ಸೋಲು ಎದುರಾದಾಗ, ಅಥವಾ ಏನಾದೊಂದು ನಾಶ ಸಂಭವಿಸಿದಾಗ ನಾವು ಕುಗ್ಗಿಹೋಗುತ್ತೇವೆ; ಇದು ನಮಗೆ ಸಹಜ ಕೂಡ. ಆದರೆ ಜೀವನದ ಸತ್ಯವನ್ನು ತಿಳಿದವರು ಇಂಥ ಸಂದರ್ಭಗಳಲ್ಲಿ ದೃಢವಾಗಿರುತ್ತಾರೆ, ದುಃಖಿಸುವುದಿಲ್ಲ ಎಂದು ಸುಭಾಷಿತ ಹೇಳುತ್ತಿದೆ. ನಾವು ಇಂಥ ಸಂದರ್ಭಗಳಲ್ಲಿ ಹೇಗಿರಬೇಕು ಎಂಬುದನ್ನು ಪ್ರಕೃತಿಯೇ ಪಾಠ ಹೇಳುವಂತಿದೆ ಎಂದೂ ಅದು ನಿರೂಪಿಸಿದೆ.

ಮರಗಳೇ ನಮಗೆ ಈ ವಿಷಯದಲ್ಲಿ ಗುರು. ಮರದ ರೆಂಬೆ–ಕೊಂಬೆಗಳನ್ನು ಕತ್ತರಿಸುತ್ತಲೇ ಇರುತ್ತೇವೆ. ಆದರೆ ಅವು ಮತ್ತೆ ಮತ್ತೆ ಚಿಗುರುತ್ತಲೇ ಇರುತ್ತವೆ. ನನ್ನನ್ನು ಕತ್ತರಿಸಿದ್ದಾರೆ, ನನ್ನ ಜೀವನ ಮುಗಿದುಹೋಯಿತು – ಎಂದು ಅವು ಚಿಂತಿಸುತ್ತ ಸೋಲನ್ನು ಒಪ್ಪಿಕೊಳ್ಳುವುದಿಲ್ಲ; ಕೊನೆಯ ಕ್ಷಣದವರೆಗೂ ಬದುಕಲು, ಮತ್ತೆ ಮತ್ತೆ ಹಸಿರಿನಿಂದ ನಳನಳಿಸಲು ಪ್ರಯತ್ನಿಸುತ್ತಲೇ ಇರುತ್ತವೆ.

ಹೀಗೆಯೇ ಚಂದ್ರನನ್ನೂ ಗಮನಿಸಬಹುದು. ಹುಣ್ಣಿಮೆಯ ಚಂದ್ರ ದಿನೇ ದಿನೇ ಕೃಶನಾಗುತ್ತ, ಅಮಾವಾಸ್ಯೆಯಂದು ಪೂರ್ಣ ಮರೆಯಾಗಿಬಿಡುತ್ತಾನೆ. ಆದರೆ ಮರುದಿನದಿಂದಲೇ ಮತ್ತೆ ಬೆಳೆಯಲು ಆರಂಭಿಸುತ್ತಾನೆ. ಅವನು ವೃದ್ಧಿ–ಕ್ಷಯಗಳಿಗೆ ವಶನಾಗಿಲ್ಲ; ನಿರಂತರವಾಗಿ ಮುಂದುವರೆಯುತ್ತಲೇ ಇರುತ್ತಾನೆ.

ನಾವು ಕೂಡ ಮರವನ್ನು, ಚಂದ್ರನನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು; ಕಷ್ಟ ಒದಗಿದಾಗ ಕುಗ್ಗಬಾರದು; ಆ ಸಂದರ್ಭದಿಂದ ಹೇಗೆ ಹೊರಗೆ ಬರುವುದು ಎಂದು ಆಲೋಚಿಸಿ, ಅದರಂತೆ ಕ್ರಿಯಾಶೀಲರಾಗಬೇಕು. ಆಸ್ತಿ, ಅಂತಸ್ತು, ಅಧಿಕಾರ – ಇಂಥವು ಬರುತ್ತಿರುತ್ತವೆ; ಹೋಗುತ್ತಿರುತ್ತವೆ. ಇವಿಷ್ಟೇ ಜೀವನದ ಸರ್ವಸ್ವ ಎಂದು ತಿಳಿದುಕೊಂಡು ನಮ್ಮ ಜೀವನವನ್ನು ನರಕಮಾಡಿಕೊಳ್ಳಬಾರದು. ಜೀವನ ಎಂದಮೇಲೆ ಸುಖವೂ ಇರುತ್ತದೆ, ಕಷ್ಟವೂ ಇರುತ್ತದೆ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ಪ್ರಬುದ್ಧತೆಯನ್ನು ನಾವು ಗಳಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT