ಆಸೆ ಎಂಬುದು ಮನುಷ್ಯನ ಜೀವನದ ಆನಂದವನ್ನು ಹಾಳು ಮಾಡುತ್ತದೆ. ಆಸೆಯ ಬಂಧನದಲ್ಲಿ ಸಿಲುಕಿರುವ ಮಾನವನು ತನ್ನ ಆಧ್ಯಾತ್ಮಿಕ ಜೀವನದ ಆನಂದವನ್ನೆ ಮರೆತಿದ್ದಾನೆ. ಆಸೆ ಇರಬೇಕು. ಆದರೆ, ದುರಾಸೆ ಇರಬಾರದು. ಆಸೆಯೇ ದುಃಖಕ್ಕೆ ಮೂಲ ಎಂದು ಗೌತಮ ಬುದ್ಧನು ಹೇಳಿದ್ದು ಇದೇ ಕಾರಣಕ್ಕೆ ಇರಬಹುದು. ಮಾನವನು ತನ್ನ ಆಸೆಯ ಪ್ರವೃತ್ತಿಯಿಂದ ಭಗವಂತನ ಸ್ಮರಣೆಯನ್ನೆ ಮರೆತಿದ್ದಾನೆ. ಎಲ್ಲವನ್ನೂ ಬಲ್ಲ ಭಗವಂತನೆ ಈ ಸಂಸಾರ ಸಾಗರವೆಂಬ ದುಃಖದಿಂದ ನನ್ನನ್ನು ಪಾರು ಮಾಡಿ ನಿನ್ನ ಚರಣ ಕಮಲದಲ್ಲಿ ದುಂಬಿಯಾಗಿ ಸೇವೆ ಸಲ್ಲಿಸುವಂತೆ ಕೃಪೆ ಮಾಡು. ಆಸೆಯಿಂದೊಡಗೂಡಿದ ಸಂಸಾರದ ವ್ಯಾಮೋಹದಲ್ಲಿರುವ ಮಾನವನಿಗೆ ಸದಾ ಕಾಲ ಶ್ರದ್ಧೆ, ಭಕ್ತಿಯನ್ನು ಒಳಗೊಳ್ಳುವಂತೆ ಮಾಡು ಎಂದು ಬಸವಣ್ಣನವರು ದೇವರನ್ನು ಪ್ರಾರ್ಥಿಸಿದ್ದಾರೆ.