ಪತಿಯೇ ಪರದೈವ ಎಂದು ಸಾರುವ ಮೂಲಕ ಸತಿಯಾದವಳು ತನ್ನ ಪತಿಯ ಸೇವೆಯ ಮೂಲಕವೇ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳಬೇಕಾಗುತ್ತಿತ್ತು. ಸ್ತ್ರೀಯು ಋತುಮತಿಯಾಗುವಳೆಂಬ ಒಂದೇ ಕಾರಣಕ್ಕೆ ಆಕೆಗೆ ಧಾರ್ಮಿಕ ಕಾರ್ಯಗಳಲ್ಲಿ ಅವಕಾಶವಿರುತ್ತಿರಲಿಲ್ಲ. ಹಾಗೆಯೇ, ಶೂದ್ರರಿಗೂ ಕೂಡ ಗರ್ಭಗುಡಿಯಲ್ಲಿ ಪ್ರವೇಶ ನಿಷಿದ್ಧವಾಗಿತ್ತು. ಆದರೆ, ಬಸವಾದಿ ಶಿವಶರಣರು ಮಹಿಳೆಯನ್ನು ಶಾರೀರಿಕ ರಚನೆಯಿಂದ ಮೇಲು ಕೀಳು ಎಂಬ ಭಾವದಿಂದ ಪುರುಷ ಶ್ರೇಷ್ಠತೆಯನ್ನು ಪರಿಗಣಿಸುವುದನ್ನು ಬದಿಗಿರಿಸಿ ಸ್ತ್ರೀಯನ್ನು ಆತ್ಮಿಕ ನೆಲೆಯಲ್ಲಿ ಪರಿಗಣಿಸಿ ಹೆಣ್ಣು ಗಂಡು ಎಂಬ ಭೇದವನ್ನು ತೊಡೆದು ಎಲ್ಲ ರೀತಿಯ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಕಾರಣ ಬಸವಣ್ಣನವರನ್ನೂ ಸಮಾನತೆಯ ಹರಿಕಾರ ಎಂದೇ ಕರೆಯುತ್ತಾರೆ.