ಭೌತಿಕವಾಗಿರುವ ಈ ಜಗತ್ತಿನಲ್ಲಿ ಮನುಷ್ಯನಿಗೆ ವಿಷಯವಾಸನೆಗಳು ಮಾಯೆಯಾಗಿ ಕಾಡುತ್ತವೆ. ಪಶುಗಳಿಗೆ ಹಸಿರಾದ ಹುಲ್ಲು ತುಂಬಾ ಇಷ್ಟ. ಹಾಗೆಯೇ ಮಾನವನೆಂಬ ಈ ಪಶುವಿಗೆ ವಿಷಯವಾಸನೆಗಳು ತುಂಬಾ ಇಷ್ಟ. ಸಂಸಾರವೆಂಬ ವಿಷಯವಾಸನೆಗೆ ಅಂಟಿಕೊಂಡ ಮಾನವನು ತನ್ನ ಆತ್ಯಂತಿಕ ಸುಖದ ಕುರಿತು ಆಲೋಚಿಸುವುದೆ ಇಲ್ಲ. ಭಕ್ತಿ ಮತ್ತು ಸುಬುದ್ಧಿಗಳು ಮಾನವನನ್ನು ವಿಷಯವಾಸನೆಗಳಿಂದ ಮುಕ್ತವಾಗಿಸುತ್ತವೆ. ನೀರು ಮತ್ತು ಆಹಾರ ಮಾನವನ ಜೀವನಾವಶ್ಯ ವಸ್ತುಗಳು. ಅದಕ್ಕೆ ಬಸವಣ್ಣನವರು ಸುಬುದ್ಧಿಯೆಂಬ ನೀರಿನೊಂದಿಗೆ ಭಕ್ತಿ ರಸ ಎಂಬ ಆಹಾರವನ್ನು ಸದಾವಕಾಲ ನೀಡಿ ಸಲಹು ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ. ಅದೇ ರೀತಿಯಲ್ಲಿ ನಾವೆಲ್ಲರೂ ಭಕ್ತಿಯ ಹಾದಿಯಲ್ಲಿ ಸುಬುದ್ಧಿ ಅಳವಡಿಸಿಕೊಂಡು ಮುಂದೆ ಸಾಗಬೇಕು.