ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎನ್ನುವಂತೆ ಮನುಷ್ಯನು ತನ್ನ ಜೀವನದಲ್ಲಿ ಒಳ್ಳೆಯವರ ಸಂಗದಲ್ಲಿಯೆ ಇರಬೇಕು. ಬಾಲ್ಯದಿಂದ ಹಿಡಿದು ಮುಪ್ಪಿನವರೆಗೂ ಆತ ಒಳ್ಳೆಯವರ ಸಂಪರ್ಕದಲ್ಲಿದ್ದರೆ ಆತನ ಜೀವನ ಸುಖಮಯವಾಗಿರುತ್ತದೆ. ದುಷ್ಟರ ಸಂಗದಲ್ಲಿ ಬೆಳೆದರೆ ಸುಖಕ್ಕಿಂತ ಹೆಚ್ಚಾಗಿ ದುಖವನ್ನೇ ಅನುಭವಿಸುತ್ತಾನೆ. ಅದಕ್ಕೆ ಬಸವಣ್ಣನವರು ಒಳ್ಳೆಯವರ ಸಂಗ ಮಾಡಬೇಕು, ಅದು ಸತ್ಯಶುದ್ಧ ಚಾರಿತ್ರ್ಯ, ಪರೋಪಕಾರ ಗುಣವನ್ನು ಒಳಗೊಂಡಿರುವವರ ಸಂಗ ಮಾಡಬೇಕು ಎಂದು ವಚನದ ಮೂಲಕ ತಿಳಿಸಿದ್ದಾರೆ. ದುರ್ಜನರ ಸಂಗವನ್ನು ಮಾಡಬೇಡ, ಸದಾ ಕಾಲ ದೂರಾಲೋಚನೆ ಒಳಗೊಂಡು, ಮೋಸ ಮಾಡುವವರ ಸಂಗ ಬೇಡ. ಹಾವು ಯಾವುದೇ ಜಾತಿಯದಾದರೂ ವಿಷವು ಮಾತ್ರ ಒಂದೇ ಆಗಿರುತ್ತದೆ. ದುಷ್ಟರು ವಿಧ ವಿಧವಾಗಿದ್ದರೂ ಅವರ ಆಲೋಚನೆಗಳು ಮಾತ್ರ ದುಃಖವನ್ನು ಕೊಡುವಂಥವುಗಳೆ ಆಗಿರುತ್ತವೆ. ಅಂತರಂಗ–ಬಹಿರಂಗ ಶುದ್ಧವಿಲ್ಲದವರ ಸಂಗ ಮಾಡಿದರೆ, ಕಾಳಿಂಗ ಸರ್ಪದ ವಿಷವನ್ನು ಕುಡಿದಂತೆ ಎಂಬುದು ಈ ವಚನದ ತಾತ್ಪರ್ಯವಾಗಿದೆ. ಇದನ್ನು ಅರಿತು ನಾವು ಜೀವನದಲ್ಲಿ ಪಾಲಿಸೋಣ.