ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತುಗಳೂ ಯಾವುದೇ ರೀತಿಯ ಭೇದ ಭಾವ ಮಾಡದೆ ಎಲ್ಲವಕ್ಕೂ ಅವಕಾಶ ಮಾಡಿಕೊಡುತ್ತವೆ. ಗುಡ್ಡ ಅಥವಾ ಪರ್ವತದ ಮೇಲೆ ಕಾಗೆ ಕುಳಿತರೆ ಆ ಗುಡ್ಡವು ಯಾವುದೆ ಭೇದ ಭಾವ ಮಾಡದೆ ಕಾಗೆಗೆ ಕುಳಿತುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಪರುಷಮಣಿಯು ಕಬ್ಬಿಣದಲ್ಲಿ ಯಾವುದೆ ಗುಣವನ್ನು ನೋಡದೆ ಅದನ್ನು ಬಂಗಾರವನ್ನಾಗಿ ಮಾಡುತ್ತದೆ. ದುಷ್ಟ ವ್ಯಕ್ತಿಯು ಸಾಧುವಿನ ಹತ್ತಿರ ಬಂದರೆ ಸಾಧುವು ಅದನ್ನೆಲ್ಲ
ಗಮನಿಸದೆ ಆ ವ್ಯಕ್ತಿಗೆ ಒಳ್ಳೆಯದನ್ನೆ ಬಯಸುತ್ತಾನೆ. ಗಂಧದ ಮರವು ತನ್ನ ಸುತ್ತಮುತ್ತಲಿರುವ ಮರಗಳು ಯಾವುವು ಎಂಬುದನ್ನು ಗಮನಿಸದೆ ಸುವಾಸನೆಯನ್ನು ಎಲ್ಲೆಡೆಯೂ ಬೀರುತ್ತಲೇ ಇರುತ್ತದೆ. ಹಾಗೆಯೇ ಸರ್ವಗುಣ ಸಂಪನ್ನನಾದ ಭಗವಂತನೇ, ಮನುಷ್ಯನ ಗುಣಾವಗುಣಗಳನ್ನು ನೋಡದೆ, ಸದಾ ಕಾಲ ಆತನಿಗೆ ಒಳ್ಳೆಯದನ್ನೆ ಮಾಡಬೇಕು ಎಂಬುದು ಈ ವಚನದ ತಾತ್ಪರ್ಯವಾಗಿದೆ. ಅಂತೆಯೇ ನಾವೆಲ್ಲರೂ ಪರಸ್ಪರ ಒಳಿತನ್ನೇ ಬಯಸಬೇಕು.