ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವನ್ನು ಪರೀಕ್ಷಿಸದಿರಿ

Last Updated 25 ಮೇ 2022, 8:32 IST
ಅಕ್ಷರ ಗಾತ್ರ

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

–––––––

ಸುಪಥಮಂತ್ರದುಪದೇಶವ ಕಲಿತು ಯುಕ್ತಿಗೆಟ್ಟು ನಡೆವಿರಯ್ಯಾ;

ತತ್ವಮಸಿ ಎಂಬುದನರಿದು ಕತ್ತಲೆದೊಡುವಿರಯ್ಯಾ.

ವೇದವಿಪ್ರರ ವಿಚಾರಿಸಿ ನೋಡಲು

ಉಪದೇಶಪರೀಕ್ಷೆ ನಾಯಕನರಕ, ಎಂದುದು

ಕೂಡಲಸಂಗನ ವಚನ ಸೂಚನೆ!

ಮಾನವನಿಗೆ ಅರಿವು, ಆಚಾರ, ದೊರೆಯಬೇಕಾದರೆ ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇದೆ. ಗುರುಗಳು ತಿಳಿಸಿದ ರೀತಿಯಲ್ಲಿ ನಮ್ಮ ಜೀವನವನ್ನು ಸಾಗಿಸದೆ ಇದ್ದಾಗ ನಾವು ಏನಾಗುತ್ತೇವೆ ಎನ್ನುವುದನ್ನು ಬಸವಣ್ಣನವರು ಈ ವಚನದಲ್ಲಿ ತಿಳಿಸಿದ್ದಾರೆ.

ಸನ್ಮಾರ್ಗದಲ್ಲಿ ನಡೆಯುವ ರೀತಿಯನ್ನು ಗುರುಗಳು ಬೋಧಿಸಿದಾಗ ನಾವು ಅದನ್ನು ಲಕ್ಷಿಸದೆ, ಹಾದಿ ತಪ್ಪಿ ನಡೆಯುತ್ತೇವೆ. ಭಗವಂತ ನಮ್ಮೊಳಗೆ ಇದ್ದಾನೆ ಎಂಬುದನ್ನು ತಿಳಿದರೂ, ಮೂಢನಂಬಿಕೆಗಳಿಗೆ ಬಲಿಯಾಗುತ್ತೇವೆ. ಒಮ್ಮೊಮ್ಮೆ ನಮಗೆ ಮಾರ್ಗದರ್ಶನ ಮಾಡಿದ ಗುರುಗಳನ್ನು ಪರೀಕ್ಷೆ ಮಾಡಲು ಹೋಗಿ ಕೈ ಸುಟ್ಟುಕೊಳ್ಳುತ್ತೇವೆ. ಸದ್ಗುಣ, ಸದಾಚಾರ ಹೊಂದಿರುವ ಭಗವಂತನ ಪ್ರತಿರೂಪವಾಗಿರುವ ಗುರುಗಳನ್ನು ನಿಂದಿಸುವುದು, ಅವರನ್ನು ಪರೀಕ್ಷಿಸುವುದು ನರಕಕ್ಕೆ ಸಮಾನವಾದುದು. ಬಸವಣ್ಣನವರು ಗುರುವಿನ ಮಹತ್ವವನ್ನು ಬಲ್ಲವರಾಗಿದ್ದರು. ಹರಪೂಜೆ, ಗುರುಸೇವೆ ವರಪುಣ್ಯವಿಲ್ಲದೆ ಬರಿದೆ ಸುಖಭೋಗ ದೊರಕುವದುಂಟೆ ಆತ್ಮಾ ಎಂಬ ಬಾಲಲೀಲಾ ಮಹಾಂತ ಶಿವಯೋಗಿಗಳ ಮಾತಿನಂತೆ, ಗುರುಸೇವೆ ಪವಿತ್ರವಾದುದು; ಪೂಜನೀಯವಾದುದು. ಪ್ರಸ್ತುತ ದಿನಮಾನದಲ್ಲಿ ವೈಜ್ಞಾನಿಕತೆಯ ಭರಾಟೆಯಲ್ಲಿರುವ ನಾವು ಎಲ್ಲವನ್ನೂ ಮರೆತು, ಆಚಾರಹೀನ ಮತ್ತು ವಿಚಾರಹೀನರಾಗಿದ್ದೇವೆ. ಆಚಾರ–ವಿಚಾರ ನಮ್ಮಲ್ಲಿ ಇರಬೇಕಾದರೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT