ಸನ್ಮಾರ್ಗದಲ್ಲಿ ನಡೆಯುವ ರೀತಿಯನ್ನು ಗುರುಗಳು ಬೋಧಿಸಿದಾಗ ನಾವು ಅದನ್ನು ಲಕ್ಷಿಸದೆ, ಹಾದಿ ತಪ್ಪಿ ನಡೆಯುತ್ತೇವೆ. ಭಗವಂತ ನಮ್ಮೊಳಗೆ ಇದ್ದಾನೆ ಎಂಬುದನ್ನು ತಿಳಿದರೂ, ಮೂಢನಂಬಿಕೆಗಳಿಗೆ ಬಲಿಯಾಗುತ್ತೇವೆ. ಒಮ್ಮೊಮ್ಮೆ ನಮಗೆ ಮಾರ್ಗದರ್ಶನ ಮಾಡಿದ ಗುರುಗಳನ್ನು ಪರೀಕ್ಷೆ ಮಾಡಲು ಹೋಗಿ ಕೈ ಸುಟ್ಟುಕೊಳ್ಳುತ್ತೇವೆ. ಸದ್ಗುಣ, ಸದಾಚಾರ ಹೊಂದಿರುವ ಭಗವಂತನ ಪ್ರತಿರೂಪವಾಗಿರುವ ಗುರುಗಳನ್ನು ನಿಂದಿಸುವುದು, ಅವರನ್ನು ಪರೀಕ್ಷಿಸುವುದು ನರಕಕ್ಕೆ ಸಮಾನವಾದುದು. ಬಸವಣ್ಣನವರು ಗುರುವಿನ ಮಹತ್ವವನ್ನು ಬಲ್ಲವರಾಗಿದ್ದರು. ಹರಪೂಜೆ, ಗುರುಸೇವೆ ವರಪುಣ್ಯವಿಲ್ಲದೆ ಬರಿದೆ ಸುಖಭೋಗ ದೊರಕುವದುಂಟೆ ಆತ್ಮಾ ಎಂಬ ಬಾಲಲೀಲಾ ಮಹಾಂತ ಶಿವಯೋಗಿಗಳ ಮಾತಿನಂತೆ, ಗುರುಸೇವೆ ಪವಿತ್ರವಾದುದು; ಪೂಜನೀಯವಾದುದು. ಪ್ರಸ್ತುತ ದಿನಮಾನದಲ್ಲಿ ವೈಜ್ಞಾನಿಕತೆಯ ಭರಾಟೆಯಲ್ಲಿರುವ ನಾವು ಎಲ್ಲವನ್ನೂ ಮರೆತು, ಆಚಾರಹೀನ ಮತ್ತು ವಿಚಾರಹೀನರಾಗಿದ್ದೇವೆ. ಆಚಾರ–ವಿಚಾರ ನಮ್ಮಲ್ಲಿ ಇರಬೇಕಾದರೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು.