ಹಬ್ಬದಲ್ಲಿ ಕುರಿಯನ್ನು ಬಲಿ ಕೊಡುವ ಸಂದರ್ಭದಲ್ಲಿ, ಯಾವುದರ ಪ್ರಜ್ಞೆಯೂ ಇರದ ಕುರಿಯು ತನ್ನ ಹಸಿವನ್ನು ಹಿಂಗಿಸಿಕೊಳ್ಳುವುದಕ್ಕಾಗಿ ಅಲ್ಲಿ ಸಿಂಗರಿಸಿರುವ ತಳಿರು–ತೋರಣಗಳನ್ನು ತಿನ್ನುತ್ತದೆ. ಮರು ಕ್ಷಣವೆ ಅದು ಬಲಿಯಾಗುತ್ತದೆ. ಹುಟ್ಟು ಸಾವುಗಳು ಜೀವನದಲ್ಲಿ ಇರುವಂಥವುಗಳೆ. ಅದನ್ನು ಬಲಿಕೊಟ್ಟ ಮಾನವನು ಚಿರಂಜೀವಿಯೇ? ಆತನಿಗೂ ಸಾವು ನಿಶ್ಚಿತವಾದುದು. ದಯೆಯು ಮಾನವನ ಮೂಲ ಗುಣವಾಗಬೇಕು. ತನಗೆ ಹೇಗೆ ಈ ಭೂಮಿಯಲ್ಲಿ ಬದುಕುವ ಹಕ್ಕಿದೆಯೋ, ಹಾಗೆಯೇ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅದನ್ನು ತಿಳಿಯದ ಮೂಢ ಮಾನವ ಸ್ವೇಚ್ಛಾಚಾರಿಯಾಗಿ ತನ್ನದೆ ನಿಯಮಾವಳಿಗಳನ್ನು ಹಾಕಿಕೊಂಡು, ನಿರ್ದಯೆಯಿಂದ ಪ್ರಾಣಿ ಬಲಿಯನ್ನು ಮಾಡುತ್ತಿರುವುದು ಅಕ್ಷಮ್ಯವಾದುದು ಎನ್ನುವುದು ಈ ವಚನದ ಸಾರವಾಗಿದೆ. ಬಸವಣ್ಣನ ಈ ಆಶಯ ಈಡೇರಿಸಲು ಎಲ್ಲರೂ ಮುಂದಾಗಬೇಕು. ಸಕಲ ಜೀವಾತ್ಮಗಳಿಗೂ ಲೇಸನ್ನು ಬಯಸಬೇಕು.