ಕಾಳಿದಾಸ ಮಹಾಕವಿ ಸಂಸ್ಕಾರ ಸಂಪನ್ನತೆಯನ್ನು ಈ ರೀತಿ ಆರಾಧಿಸಿದ್ದಾನೆ. ರತ್ನ -ಬಂಗಾರ ಸಂಯೋಗ ಸುಂದರವಾದದ್ದೇನೋ ನಿಜ. ಆದರೆ, ಶುದ್ಧ ಬಂಗಾರದ ಸಂಗಡ ಸೇರಬೇಕಿದ್ದರೆ ಅದೇ ಆಗ ಗಣಿಯಿಂದ ತೆಗೆದ ಹದ ಮಾಡದ ರತ್ನದಿಂದ ಸಾಧ್ಯವಿಲ್ಲ. ಆ ರತ್ನಕ್ಕೆ ಸಾಣೆಹಿಡಿದು, ಅದರ ಮಲಿನತೆಯನ್ನೆಲ್ಲ ತೆಗೆದು, ಅಪೇಕ್ಷಿತ ಆಕಾರ ಕೊಟ್ಟಾಗ ಅದು ಬೆಳಗುತ್ತದೆ, ಶುದ್ಧವಾಗುತ್ತದೆ. ಆಗ ಸಂಸ್ಕಾರ ಪಡೆದ ಆ ರತ್ನ ಶುದ್ಧ ಬಂಗಾರದ ಸಂಗಡ ಸೇರಲು ಅರ್ಹವಾಗುತ್ತದೆ.