ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವನ ಮೊರೆಹೋದ ದೇವತೆಗಳು

ಭಾಗ 228
Last Updated 19 ಸೆಪ್ಟೆಂಬರ್ 2022, 4:38 IST
ಅಕ್ಷರ ಗಾತ್ರ

ಪಾರ್ವತಿ ತಪೋತಾಪಕ್ಕೆ ಜಗತ್ತು ಅಲ್ಲೋಲ ಕಲ್ಲೋಲವಾಗುತ್ತಿರುವುದನ್ನು ಕಂಡು ತಲ್ಲಣಗೊಂಡ ದೇವತೆಗಳು ಬ್ರಹ್ಮನ ಮೊರೆಹೋದರು. ವಿಶ್ವತಲ್ಲಣಕ್ಕೆ ಪಾರ್ವತಿಯ ತಪಸ್ಸೇ ಕಾರಣ ಎಂಬುದನ್ನು ಅರಿತ ಬ್ರಹ್ಮ. ಸಮಸ್ಯೆಯನ್ನು ನಾರಾಯಣನೊಂದಿಗೆ ಚರ್ಚಿಸಲು ದೇವತೆಗಳೊಡನೆ ಕ್ಷೀರಸಮುದ್ರಕ್ಕೆ ತೆರಳಿದ. ದೇವತೆಗಳೆಲ್ಲರೂ ‘ಮಹಾವಿಷ್ಣು, ನಮ್ಮನ್ನು ಕಾಪಾಡು. ಗಿರಿಜೆಯ ಘೋರತಪಸ್ಸಿನ ಜ್ವಾಲೆಯಿಂದ ನಾವೆಲ್ಲರೂ ಬೆಂದು ಹೋಗುತ್ತಿದ್ದೇವೆ’ ಎಂದು ಮೊರೆ ಇಟ್ಟರು.

ಲಕ್ಷ್ಮೀಪತಿಯು ‘ಎಲೈ ದೇವತೆಗಳಿರಾ, ಇದನ್ನು ಪರಿಹರಿಸಲು ಪರಮೇಶ್ವರನಿಂದ ಮಾತ್ರ ಸಾಧ್ಯ. ಲೋಕಕ್ಷೇಮಕ್ಕಾಗಿ ಗಿರಿಜೆಯನ್ನು ಮದುವೆಯಾಗುವಂತೆ ಪರಮೇಶ್ವರನನ್ನು ಪ್ರಾರ್ಥಿಸೋಣ’ ಎಂದ ಮಹಾವಿಷ್ಣು.

ವಿಷ್ಣುವಿನ ಮಾತನ್ನು ಕೇಳಿ ಇಂದ್ರಾದಿ ದೇವತೆಗಳೆಲ್ಲ ಬೆಚ್ಚಿಬಿದ್ದರು. ‘ಓ ಹರಿಯೇ, ರುದ್ರನು ಪ್ರಳಯಕರ್ತ. ಕ್ರೋಧಾಗ್ನಿಮೂರ್ತಿ. ತಪೋನಿರತನಾಗಿರುವಾಗ ಶಿವನ ಬಳಿ ಹೋಗುವುದು ಬಹಳ ಕಷ್ಟ. ಈಗಾಗಲೇ ತಪಸ್ಸು ಭಂಗಪಡಿಸಿದನೆಂದು ಮನ್ಮಥನನ್ನು ಭಸ್ಮಮಾಡಿದ್ದಾನೆ. ಈಗ ನಾವು ಹೋದರೆ ಮನ್ಮಥನಿಗಾದ ಗತಿಯೇ ನಮಗಾಗುವುದು. ವಿರೂಪಾಕ್ಷನ ಬಳಿಗೆ ನಾವು ಬರಲಾರೆವು. ನಮ್ಮನ್ನು ಸಹ ಕ್ರೋಧದಿಂದ ದಹಿಸಿಬಿಡುವನು’ ಎಂದು ಶಿವನ ಬಳಿಗೆ ಬರಲು ಹಿಂಜರಿದರು.

ಇಂದ್ರ ಮೊದಲಾದ ದೇವತೆಗಳ ಮಾತನ್ನು ಕೇಳಿದ ಹರಿಯು, ಅವರೆಲ್ಲರನ್ನೂ ಸಮಾಧಾನಗೊಳಿಸುತ್ತಾ, ‘ಎಲೈ ದೇವತೆಗಳೇ, ಎಲ್ಲರೂ ನನ್ನ ಮಾತನ್ನು ಆದರದಿಂದ ಕೇಳಿರಿ. ರುದ್ರನು ನಿಮ್ಮನ್ನು ದಹಿಸುವುದಿಲ್ಲ. ಅವನು ದೇವತೆಗಳ ಭಯವನ್ನು ಹೋಗಲಾಡಿಸುವವನು. ಆದುದರಿಂದ ಸಜ್ಜನರಾದ ನೀವೆಲ್ಲರೂ ನನ್ನೊಡನೆ ಶಿವನ ಬಳಿಗೆ ಬರಬೇಕು. ಅವನು ಮಂಗಳಕರನೆಂದು ತಿಳಿದು ಅವನನ್ನು ಶರಣು ಹೊಂದಬೇಕು. ಶಿವನು ಆದಿಪುರುಷ, ಪರಮೇಶ್ವರ. ಸಂಪ್ರದಾಯಗಳ ಕರ್ತನಾದ ಪರಮಾತ್ಮಸ್ವರೂಪ. ಇಂತಹ ಶಿವನು ಈಗ ತಪವನ್ನ ಆಚರಿಸುತ್ತಿದ್ದಾನೆ. ನಾವು ಒಳ್ಳೆ ಮನಸ್ಸಿನಿಂದ ಅವನ ಬಳಿಗೆ ಹೋದರೆ, ಅವನ ತಪೋಭಂಗವಾಗುವುದಿಲ್ಲ. ಅವನು ನಮ್ಮನ್ನು ಆದರಿಸಿ ಆಶೀರ್ವದಿಸುತ್ತಾನೆ’ ಎಂದು ದೇವತೆಗಳ ಮನದಲ್ಲಿ ಧೈರ್ಯ ತುಂಬಿದ.

ಹರಿಯ ಮಾತಿನಿಂದ ಧೈರ್ಯ ತಾಳಿದ ದೇವತೆಗಳು ನಾರದ-ಬ್ರಹ್ಮ-ವಿಷ್ಣುವಿನೊಂದಿಗೆ ಶಿವನ ಬಳಿಗೆ ಹೊರಟರು. ಅವರು ಹೋಗುವ ಮಾರ್ಗದಲ್ಲಿ ಗಿರಿಜೆಯ ತಪೋವನವು ಸಿಕ್ಕಿತು. ಪಾರ್ವತಿ ತಪಸ್ಸನ್ನು ನೋಡುವ ಕುತೂಹಲದಿಂದ ದೇವತೆಗಳೆಲ್ಲರೂ ಅವಳ ಆಶ್ರಮಕ್ಕೆ ಹೋದರು. ತೇಜೋರೂಪಳೂ ತಪಸ್ವಿನಿಯೂ ಆದ ಮಹೇಶ್ವರಿಯನ್ನು ನೋಡಿ ಭಕ್ತಿಯಿಂದ ನಮಸ್ಕಾರ ಮಾಡಿದ ದೇವತೆಗಳೆಲ್ಲ, ಪಾರ್ವತಿಯ ತಪಸ್ಸನ್ನು ಪ್ರಶಂಸಿಸುತ್ತಾ, ಪರಮೇಶ್ವರನು ಇರುವಲ್ಲಿಗೆ ತೆರಳಿದರು.

ಶಿವ ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಬಂದ ದೇವತೆಗಳು ಮತ್ತೆ ಭಯದಿಂದ ದೂರದಲ್ಲೇ ನಿಂತು, ನಾರದನನ್ನು ಅವನ ಬಳಿಗೆ ಕಳುಹಿಸಿದರು. ನಾರದ ಶಿವನ ಬಳಿಗೆ ಹೋಗಿ, ಶಿವ ಶಾಂತವಾಗಿರುವುದನ್ನು ದೇವತೆಗಳಿಗೆ ಮನದಟ್ಟು ಮಾಡಿಸಿ, ಅವರನ್ನೆಲ್ಲ ಶಂಕರನ ಬಳಿಗೆ ಕರೆದುಕೊಂಡು ಹೋದ. ದೇವತೆಗಳೆಲ್ಲರೂ ಶಿವಸ್ಥಾನಕ್ಕೆ ತೆರಳಿ ಅಲ್ಲಿ ಪ್ರಸನ್ನಮುದ್ರೆಯಿಂದ ಸುಖಾಸನದಲ್ಲಿ ಕುಳಿತಿರುವ ಭಕ್ತವತ್ಸಲನಾದ ಶಂಕರನನ್ನು ನೋಡಿದರು. ಯೋಗಾಸನದಲ್ಲಿ ಕುಳಿತ್ತಿದ್ದ ಶಿವನ ಸುತ್ತಾ ಪ್ರಮಥಗಣಗಳು ಕುಳಿತ್ತಿದ್ದರು.

ದೇವತೆಗಳು, ಸಿದ್ಧರು, ಮುನಿಗಳೆಲ್ಲರೂ ಶಿವನಿಗೆ ನಮಸ್ಕರಿಸಿ ವೇದಸೂಕ್ತಗಳಿಂದ ಸ್ತುತಿಸಿದರು ಎಂಬಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಪಾರ್ವತೀಖಂಡದ ಇಪ್ಪತ್ತಮೂರನೆ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT