ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ | 2023ರ ಮಾರ್ಚ್‌ 05 ರಿಂದ ಮಾರ್ಚ್ 11 ರವರೆಗೆ

ಅಕ್ಷರ ಗಾತ್ರ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ನಿಂತುಹೋಗಿದ್ದ ಕೆಲವು ಅಭಿವೃದ್ಧಿಯ ಕೆಲಸದ ಕಡೆ ಗಮನಹರಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ತಿಕ್ಕಾಟ ಬಂದರೂ ಮಾತಿನಲ್ಲೇ ಬಗೆಹರಿಸಿಕೊಳ್ಳುವುದು ಬಹಳ ಉತ್ತಮ. ಪ್ರವಾಸೋದ್ಯಮ ಸಂಸ್ಥೆಯನ್ನು ನಡೆಸುವವರಿಗೆ ಉತ್ತಮವಾದ ವ್ಯವಹಾರವಿರುತ್ತದೆ. ತಾಂತ್ರಿಕ ತಜ್ಞರಿಗೆ ಉತ್ತಮ ಕೆಲಸ ಸಿಗುವ ಯೋಗವಿದೆ. ನಿಮ್ಮ ಸಂಗಾತಿಗೆ ಹೊಸ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಇತರರ ಭಾವನೆಗಳಿಗೆ ಹೆಚ್ಚಿನ ಆದ್ಯತೆಯನ್ನು ಕೊಡಿರಿ. ಇದು ನಿಮ್ಮ ಏಳಿಗೆಗೆ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿಯ ಯೋಗವಿದೆ. ಕೃಷಿಗೆ ಸಂಬಂಧಪಟ್ಟ ಕೆಲಸಗಳನ್ನು ಬಿಡುವಿಲ್ಲದೆ ಮಾಡುವಿರಿ. ಕಬ್ಬಿಣದ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಉತ್ತಮ ಲಾಭವಿರುತ್ತದೆ. ಕೆಲಸಗಾರರನ್ನು ಪೂರೈಸುವ ಸಂಸ್ಥೆಗಳಿಗೆ ಬೇಡಿಕೆ ಹೆಚ್ಚುತ್ತದೆ.

ವೃಷಭ ರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ1 2)

ಮನೆಯ ಆಗುಹೋಗುಗಳ ಬಗ್ಗೆ ಹಿರಿಯರೊಡನೆ ಚರ್ಚೆ ಮಾಡುವಿರಿ. ಅಭಿಪ್ರಾಯಗಳ ವಿನಿಮಯದಿಂದ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬಹುದು. ಹಣದ ಹರಿವು ಸಾಕಷ್ಟಿರುತ್ತದೆ. ವಿದೇಶಿ ವಸ್ತುಗಳ ವ್ಯವಹಾರ ಮಾಡುವವರು ಸ್ವಲ್ಪ ಹಿನ್ನಡೆ ಅನುಭವಿಸಬಹುದು. ಒಡಹುಟ್ಟಿದವರ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಕೃಷಿಯಿಂದ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯಗಳ ಜೊತೆಗೆ ಸೂಕ್ತ ಮಾರ್ಗದರ್ಶನವೂ ಸಿಗುತ್ತದೆ. ಸಂಗಾತಿಯೇ ನಿಮ್ಮ ಕೆಲಸಗಳಿಗೆ ಮುನ್ನುಗ್ಗಿ ಸಹಾಯ ಮಾಡುವರು. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಚುರುಕುತನ ಕಾಣಬಹುದು. ಧಾರ್ಮಿಕ ಕೆಲಸವನ್ನು ಮಾಡುವವರಿಗೆ ಸಮಾಜದಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ವಾಯು ಪ್ರಕೋಪ ನಿಮ್ಮನ್ನು ಕಾಡಬಹುದು.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ನಿರೀಕ್ಷಿಸಿದ ಕಾರ್ಯಗಳು ನಿಧಾನವಾಗಿಯಾದರೂ ಆಗಿ ಮನಸ್ಸಿಗೆ ಹಗುರವೆನಿಸುವುದು. ಯಂತ್ರೋಪಕರಣಗಳನ್ನು ಮಾರಾಟ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಇದುವರೆಗೆ ನಡೆಸುತ್ತಿದ್ದ ಐಶಾರಾಮಿ ಜೀವನದ ಬಗ್ಗೆ ಜಿಗುಪ್ಸೆ ಹುಟ್ಟಬಹುದು. ಹೋಟೆಲ್ ಉದ್ಯಮದವರಿಗೆ ಸ್ವಲ್ಪಮಟ್ಟಿಗೆ ಲಾಭ ಹೆಚ್ಚಾಗುವುದು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರು ಹೆಚ್ಚು ಶ್ರಮವಹಿಸಬೇಕು. ಆಸ್ತಿ ಪತ್ರ ಬರಹಗಾರರಿಗೆ ಹೆಚ್ಚು ಕೆಲಸ ದೊರೆತು ಹೆಚ್ಚು ಸಂಪಾದನೆಯಾಗುತ್ತದೆ. ಮಾತುಕತೆಯ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಬಹಳ ಉತ್ತಮ. ಪೆಟ್ರೋಲಿಯಂ ವಸ್ತುಗಳ ಮಾರಾಟಗಾರರಿಗೆ ಸಾಕಷ್ಟು ಲಾಭ ಬರುತ್ತದೆ. ನಿಮ್ಮ ಕಂಪನಿಯ ವಿದೇಶದಲ್ಲಿನ ಹುದ್ದೆಗಾಗಿ ಅರ್ಜಿಯನ್ನು ಈಗ ಸಲ್ಲಿಸಬಹುದು. ಆಸ್ತಿ, ನಿವೇಶನ ಕೊಳ್ಳಲು ಪ್ರಯತ್ನವನ್ನು ಮುಂದುವರೆಸಿರಿ.

ಕಟಕ ರಾಶಿ ( ಪುನರ್ವಸು 4 ಪುಷ್ಯ ಆಶ್ಲೇಷ)
ಕೆಲವೊಮ್ಮೆ ಕೆಲವು ವಿಷಯಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು, ಆಗ ಹಿಂಜರಿಕೆ ಬೇಡ. ನೀವು ಅಪೇಕ್ಷಿಸಿದ್ದ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುವಿರಿ. ವೃತ್ತಿರಂಗದಲ್ಲಿ ನಿಮ್ಮ ಸ್ಥಾನವು ಹೆಚ್ಚಾಗುವುದಿಲ್ಲ. ಯಾವುದೇ ಕೆಲಸಕ್ಕೂ ಇನ್ನೊಬ್ಬರ ಮೇಲೆ ಅವಲಂಬಿಸಬೇಡಿ. ರಾಜಕೀಯದಲ್ಲಿ ಆಸಕ್ತಿ ಇರುವವರು ಹೆಚ್ಚು ಚುರುಕಾಗಿ ಜನಗಳ ಮಧ್ಯೆ ಓಡಾಡುವುದು ಅತಿ ಅಗತ್ಯ. ಲೇವಾದೇವಿ ಮಾಡುವವರಿಗೆ ನಂಬಿಕೆ ದ್ರೋಹದ ಅನುಭವ ಆಗಬಹುದು. ಸರ್ಕಾರಿ ಗುತ್ತಿಗೆಗಳನ್ನು ಪಡೆಯುವಾಗ ನಿಯಮಗಳ ಬಗ್ಗೆ ಸರಿಯಾಗಿ ತಿಳಿಯಿರಿ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಸ್ಥಿರಾಸ್ತಿ ವಿಚಾರಗಳನ್ನು ತೀರ್ಮಾನ ಮಾಡಲು ಹೋದ ನಿಮಗೆ ಅದರ ಗೋಜಲುಗಳನ್ನು ಕಂಡು ಗಾಬರಿಯಾಗುವುದು.

ಸಿಂಹ ರಾಶಿ ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಅತಿಯಾದ ಆತ್ಮಾಭಿಮಾನ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಂತೆ ಇರುವುದಿಲ್ಲ. ವಿದೇಶದಲ್ಲಿರುವ ಮಕ್ಕಳಿಂದ ಅಚ್ಚರಿಯ ಸುದ್ದಿಯೊಂದನ್ನು ಕೇಳುವಿರಿ. ವಿದ್ಯಾರ್ಥಿಗಳ ಅಭ್ಯಾಸದಲ್ಲಿ ಹಿನ್ನಡೆ ಕಾಣಬಹುದು. ಕೈಕಾಲು ಸೆಳೆತ ಇರುವವರು ಸ್ವಲ್ಪ ಎಚ್ಚರವಹಿಸಿರಿ. ಸಂಗಾತಿಯ ಆದಾಯದಲ್ಲಿ ಸಾಕಷ್ಟು ಹೆಚ್ಚಳ ಕಾಣಬಹುದು. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆಯಾಗಬಹುದು. ನಿಮ್ಮ ತಂದೆಯಿಂದ ಕೃಷಿ ಭೂಮಿ ದೊರೆಯಬಹುದು. ವೃತ್ತಿಯಲ್ಲಿ ಇದ್ದ ಗೋಜಲುಗಳು ಕಡಿಮೆಯಾಗಿ ನೆಮ್ಮದಿ ಬರುತ್ತದೆ. ಹೈನುಗಾರಿಕೆ ಮಾಡುವವರಿಗೆ ಆದಾಯ ಕಡಿಮೆಯಾಗಬಹುದು. ಸ್ವಂತ ಉದ್ದಿಮೆ ನಡೆಸುವವರು ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳಬಹುದು.

ಕನ್ಯಾ ರಾಶಿ ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ತಿಳಿವಳಿಕೆ ಹೊಂದಿದ ನೀವು ಯಾರದೋ ವಶೀಲಿಗೆ ಮಣಿದು ಹಣಕ್ಕಾಗಿ ಅಪರಾಧ ಕೆಲಸವನ್ನು ಮಾಡಲು ಮುಂದಾಗುವಿರಿ. ಧನ ಸಂಪಾದನೆಗಾಗಿ ಬದಲಿ ಮಾರ್ಗಗಳನ್ನು ಹುಡುಕುವಿರಿ. ದೇಹಾರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕಾದ ಅಗತ್ಯವಿದೆ. ಕೃಷಿಕರಿಗೆ ಬೇಕಾದ ಕೃಷಿ ಸಲಕರಣೆಗಳು ಸಕಾಲಕ್ಕೆ ದೊರೆಯುತ್ತದೆ. ಪಾರಂಪರಿಕ ಬೀಜೋತ್ಪಾದನೆಗೆ ಹೆಚ್ಚು ಬೆಂಬಲ ದೊರೆತು, ಈ ರೀತಿ ಬೀಜೋತ್ಪಾದನೆ ಮಾಡುವವರಿಗೆ ಲಾಭವಿರುತ್ತದೆ. ಮಕ್ಕಳ ಸುಖಕ್ಕಾಗಿ ಅತಿಯಾಗಿ ಖರ್ಚು ಮಾಡುವುದು ಬೇಡ. ಹಣದ ಒಳಹರಿವು ಅಗತ್ಯಕ್ಕಿಂತ ಕಡಿಮೆ ಇರುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವ ಕೆಲವರಿಗೆ ಅನಿರೀಕ್ಷಿತ ಲಾಭ ಬರಬಹುದು. ಕೋರ್ಟ್‌ ಕಚೇರಿಯಲ್ಲಿನ ಕೆಲಸ ಕಾರ್ಯಗಳು ನಿಧಾನವಾಗುತ್ತದೆ. ವೃತ್ತಿಪರ ವ್ಯಾಪಾರಿಗಳಿಗೆ ಲಾಭ ಕಡಿಮೆಯಾದರೂ ನಷ್ಟವಿರುವುದಿಲ್ಲ .

ತುಲಾ ರಾಶಿ ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ನಿಮ್ಮ ನಿಲುವುಗಳಿಂದ ಜನರಲ್ಲಿ ಸಾಕಷ್ಟು ಗೊಂದಲ ಉಂಟಾಗುವುದು. ಹಿರಿಯ ಅಧಿಕಾರಿಗಳಿಗೆ ಅವರ ಸಹೋದ್ಯೋಗಿಗಳಿಂದ ಸರಿಯಾದ ಸಹಕಾರ ಸಿಗುವುದಿಲ್ಲ. ವ್ಯವಹಾರದಲ್ಲಿ ಮಂದಗತಿಯ ನಡೆ ಕಂಡರೂ ನಷ್ಟವಿರುವುದಿಲ್ಲ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ತಮ್ಮ ಪಕ್ಷವನ್ನು ಬಲಗೊಳಿಸಬೇಕಾದ ಅನಿವಾರ್ಯವಿರುತ್ತದೆ. ನೀವು ನಿಮಗೆ ಲಾಭದಾಯಕವಾಗುವ ವ್ಯಕ್ತಿಗಳ ಜೊತೆ ಮಾತ್ರ ವ್ಯವಹಾರ ಮಾಡಲು ಇಚ್ಛಿಸುವಿರಿ. ಮಕ್ಕಳ ನಡುವೆ ಹೊಂದಾಣಿಕೆ ಕಡಿಮೆಯಾಗಬಹುದು. ಹೊಟ್ಟೆಗೆ ಸಂಬಂಧಿಸಿದಂತೆ ಅನಾರೋಗ್ಯ ಬರಬಹುದು. ಸಂಗಾತಿಯೊಡನೆ ವಾಗ್ವಾದಗಳಾಗುವ ಸಂದರ್ಭವಿದೆ. ಧನದಾಯವು ಮಂದಗತಿಯಲ್ಲಿರುತ್ತದೆ. ಕೃಷಿಕರಿಗೆ ಹೆಚ್ಚಿನ ಆದಾಯವಿರುತ್ತದೆ. ಸಾಂಪ್ರದಾಯಿಕ ಕೃಷಿ ಬೆಳೆಗೆ ಹೆಚ್ಚಿನ ಬೆಲೆ ಸಿಗುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸಾರಾಗತೆಯನ್ನು ಕಾಣಬಹುದು.

ವೃಶ್ಚಿಕ ರಾಶಿ ( ವಿಶಾಖಾ 4 ಅನುರಾಧ ಜೇಷ್ಠ)

ಸಂಶೋಧಕರಿಗೆ ಹೆಚ್ಚಿನ ವ್ಯಾಸಂಗಕ್ಕಾಗಿ ಅವಕಾಶ ದೊರೆಯುತ್ತದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಸೌಲಭ್ಯಗಳ ಜೊತೆ ಆದಾಯವು ಬರುತ್ತದೆ. ಕೃಷಿಕರಿಗೆ ಆದಾಯ ಹೆಚ್ಚುತ್ತದೆ. ಅವರು ಬೆಳೆದ ಕೃಷಿ ವಸ್ತುಗಳಿಗೆ ಹೆಚ್ಚು ಬೆಲೆ ಸಿಗುತ್ತದೆ. ವೈಯಕ್ತಿಕ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ದೊರೆತು ಹೆಚ್ಚು ಯಶಸ್ಸು ಪಡೆಯಬಹುದು. ಧನ ಆದಾಯವು ನಿರೀಕ್ಷೆಯ ಮಟ್ಟದಲ್ಲಿ ಇರುತ್ತದೆ. ಕೈಸಾಲಗಳನ್ನು ತೀರಿಸಿ ನೆಮ್ಮದಿ ಕಾಣುವಿರಿ. ಮನೆಯಲ್ಲಿ ಮಂಗಳ ಕಾರ್ಯಗಳು ಆಗುವ ಸಾಧ್ಯತೆ ಇದೆ. ಆಸ್ತಿ ವಿಚಾರದಲ್ಲಿ ಸಾಕಷ್ಟು ಕಿರಿಕಿರಿ ಮಾಡುತ್ತಿದ್ದವರಿಗೆ ಸರಿಯಾದ ಏಟು ಕೊಡುವಿರಿ. ಸಂಬಂಧಿಕರು ಹಣ ಪಡೆಯಲು ನಿಮ್ಮನ್ನು ಓಲೈಸುವರು. ತಾಯಿಯಿಂದ ಸೂಕ್ತ ಧನಸಹಾಯ ದೊರೆಯುತ್ತದೆ. ಸರ್ಕಾರಿ ಕೆಲಸದಲ್ಲಿರುವವರಿಗೆ ಆಸಕ್ತ ಜಾಗಕ್ಕೆ ವರ್ಗಾವಣೆ ದೊರೆಯಬಹುದು.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)

ನಿಮ್ಮ ಪ್ರಾಮಾಣಿಕತೆಗೆ ತಕ್ಕ ಫಲವನ್ನು ನೀವು ಪಡೆದೇ ಪಡೆಯುವಿರಿ. ನಿಮ್ಮ ಗುರಿ ತಲುಪಲು ಶ್ರಮಪಡಲೇಬೇಕು. ಉತ್ತಮ ಉದ್ಯೋಗ ಅವಕಾಶಗಳು ನಿಮ್ಮನ್ನು ಅರಸಿ ಬರುತ್ತದೆ. ಅವುಗಳನ್ನು ಸದುಪಯೋಗ ಮಾಡಿಕೊಳ್ಳಿರಿ. ಮಕ್ಕಳ ವಿಷಯದಲ್ಲಿ ಸಂಯಮದಿಂದ ಇರುವುದು ಬಹಳ ಒಳ್ಳೆಯದು. ನಿಮ್ಮದೇ ವಿಧಾನದಿಂದ ಶತ್ರುಗಳನ್ನು ಮಟ್ಟಹಾಕುವಿರಿ. ಹೊಸ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಸರಿಯಾಗಿ ವಿಚಾರಣೆ ಮಾಡಿರಿ. ಆಸ್ತಿ ವಿಚಾರದಲ್ಲಿ ಸ್ವಲ್ಪಮಟ್ಟಿನ ಮುನ್ನಡೆ ಕಾಣುವಿರಿ. ವಿದೇಶದಲ್ಲಿ ಓದಬೇಕೆನ್ನುತ್ತಿರುವವರಿಗೆ ಸೂಕ್ತ ಅವಕಾಶಗಳು ದೊರೆಯುತ್ತವೆ. ಧನ ಆದಾಯವು ಸಾಮಾನ್ಯವಾಗಿರುತ್ತದೆ. ಹರಿತವಾದ ಆಯುಧಗಳ ಜೊತೆ ಕೆಲಸ ಮಾಡುವವರು ಮತ್ತು ಬೆಂಕಿಯೊಡನೆ ಕೆಲಸ ಮಾಡುವವರು ಎಚ್ಚರವಹಿಸಿರಿ.

ಮಕರ ರಾಶಿ ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ವ್ಯವಹಾರಗಳ ಬಗ್ಗೆ ಪಾಲುದಾರರ ಜೊತೆ ತಕ್ಷಣದಲ್ಲಿ ಮಾತನಾಡಬೇಕಾದ ಪರಿಸ್ಥಿತಿ ಹಾಗೂ ತೀರ್ಮಾನ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಮಾತಿನಿಂದ ಕಾರ್ಯ ಸಾಧನೆ ಮಾಡಿ ಮೆಚ್ಚುಗೆ ಪಡೆಯುವಿರಿ. ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿರಿ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮತ್ತು ರಿಪೇರಿ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಗೃಹ ನಿರ್ಮಾಣದ ಕೆಲಸದಲ್ಲಿ ಅತಿ ಆತುರ ಬೇಡ. ಕೃಷಿ ವರ್ಗದವರಿಗೆ ಹೆಚ್ಚಿನ ಸಹಾಯ ಧನಗಳು ಸರ್ಕಾರದಿಂದ ಬರುತ್ತದೆ.ಕೃಷಿ ವಿಜ್ಞಾನವನ್ನು ಓದುತ್ತಿರುವವರಿಗೆ ಹೆಚ್ಚಿನಪ್ರೋತ್ಸಾಹ ದೊರೆಯುತ್ತದೆ ತಾಯಿಯಿಂದ ಹೆಚ್ಚಿನಸಹಕಾರಗಳು ನಿಮಗೆ ದೊರೆತು ಸಂತಸವಾಗುತ್ತದೆ.ಕೆಲವೊಮ್ಮೆ ನಿಮ್ಮ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭಗಳು ಬರಬಹುದು.

ಕುಂಭ ರಾಶಿ ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಏರುಪೇರಾಗಿದ್ದ ವ್ಯಾಪಾರ ವ್ಯವಹಾರಗಳನ್ನು ಸುಸ್ಥಿತಿಗೆ ತಂದುಕೊಳ್ಳಬಹುದು. ಸಂಘ ಸಂಸ್ಥೆಗಳ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಿ ಕಾರ್ಯರೂಪಕ್ಕೆ ತರುವುದು ಒಳ್ಳೆಯದು. ಯುವಕರು ತಮ್ಮ ಏಕಮುಖ ನಿರ್ಧಾರಗಳಿಂದ ವೃತ್ತಿಯಲ್ಲಿ ಇಕ್ಕಟ್ಟಿಗೆ ಸಿಲುಕುವರು. ರಂಗಕರ್ಮಿಗಳಿಗೆ ಉತ್ತಮ ಹೆಸರು ಮಾಡುವ ಹೊಸ ಅವಕಾಶಗಳು ದೊರೆಯುತ್ತವೆ. ಹಿರಿಯರಿಗೆ ಅವರ ಮನೋ ಆಸೆಗಳನ್ನು ಪೂರೈಸಿಕೊಳ್ಳುವಂತಹ ಸೂಕ್ತ ಅವಕಾಶಗಳು ದೊರೆಯುತ್ತವೆ. ರಾಸಾಯನಿಕ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆ ಬರುತ್ತದೆ. ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಬಂಧುಬಾಂಧವರು ಮುನಿಸಿಕೊಳ್ಳುವ ಸಾಧ್ಯತೆಗಳಿವೆ. ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸುವ ನಿಮ್ಮ ಯೋಜನೆ ಸಾಕಾರವಾಗುತ್ತದೆ. ಶೀತ ಬಾಧೆ ಇರುವವರು ಹೆಚ್ಚು ಎಚ್ಚರವಹಿಸುವುದು ಒಳ್ಳೆಯದು.

ಮೀನ ರಾಶಿ ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಅತ್ಯುತ್ತಮವಾದ ಜೀವನಶೈಲಿಯನ್ನು ಬಯಸುವವರು ಜೀವನೋಪಾಯಕ್ಕಾಗಿ ಬದಲಿ ಮಾರ್ಗವನ್ನು ಕಂಡುಕೊಳ್ಳಬೇಕಾಗುತ್ತದೆ. ಸಂಗಾತಿಯೊಂದಿಗೆ ಸ್ನೇಹದಿಂದ ವರ್ತಿಸಿದಲ್ಲಿ ಭಿನ್ನಾಭಿಪ್ರಾಯಗಳು ಮೂಡುವ ಅವಕಾಶ ತಪ್ಪುತ್ತದೆ. ರೇಷ್ಮೆ ನೂಲು ತೆಗೆಯುವವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ಬಹುಜನರ ಅಭಿಪ್ರಾಯವನ್ನು ಹೆಚ್ಚಿಗೆ ಗೌರವಿಸುವುದು ಒಳ್ಳೆಯದು. ಮಾತಿನಲ್ಲಿ ಹೆಚ್ಚಿನ ಎಚ್ಚರವಿರಲಿ, ಕುಹುಕವಾಡುವುದು ಬೇಡ. ಕಚೇರಿಯಲ್ಲಿ ಮಹತ್ವದ ಕೆಲಸದ ಜವಾಬ್ದಾರಿಯು ನಿಮಗೆ ದೊರೆಯುವುದು. ಹಣದ ಒಳಹರಿವು ಕಡಿಮೆ ಇರುವುದರಿಂದ ಖರ್ಚನ್ನು ಸರಿಯಾಗಿ ನಿಭಾಯಿಸುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT