ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 10-01-2021ರಿಂದ 16-01-2021ರವರೆಗೆ

ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ, ಸಂಪರ್ಕಕ್ಕೆ 81973 04680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಪರಸ್ಪರ ಸಹಕಾರದಿಂದಾಗಿ ನೆರೆಹೊರೆಯವರ ಸಂಬಂಧಗಳು ಉತ್ತಮಗೊಳ್ಳುವುದು. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ವಯಸ್ಕರು ಪ್ರೀತಿ ಪ್ರೇಮಗಳ ಹುಚ್ಚು ಹೊಳೆಗೆ ಕಡಿವಾಣ ಹಾಕಿ. ಸ್ನೇಹದ ವಿಷಯದಲ್ಲಿ ಸ್ವಲ್ಪ ಎಡವುವ ಸಾಧ್ಯತೆಗಳಿವೆ, ಆ ಬಗ್ಗೆ ಎಚ್ಚರ ವಹಿಸಿ. ಜಾಹೀರಾತು ಕಂಪನಿಗಳನ್ನು ನಡೆಸುತ್ತಿರುವವರ ವಹಿವಾಟುಗಳು ಹೆಚ್ಚಾಗುತ್ತವೆ. ತನ್ಮೂಲಕ ಆದಾಯ ಸಹ ಹೆಚ್ಚಾಗುತ್ತದೆ, ಜತೆಗೆ ಅಂತಹ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರ ಆದಾಯ ವೃದ್ಧಿಸಲಿದೆ. ವಿದೇಶಿ ಉತ್ಪನ್ನಗಳನ್ನು ಮಾರಾಟ ಮಾಡುವವರ ಆದಾಯವೂ ವೃದ್ಧಿಸುತ್ತದೆ.

**
ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಕುಟುಂಬದ ಹಿರಿಯರ ಮನಸ್ಸಿನ ಅಭಿಲಾಷೆಗಳು ಈಡೇರುತ್ತವೆ. ಆಮದು-ರಫ್ತು ಮಾಡುವವರ ವ್ಯವಹಾರಗಳು ವೃದ್ಧಿಸಲಿವೆ. ಅವಿವಾಹಿತರಿಗೆ ಸಂಬಂಧಗಳು ಕೂಡಿ ಬರುವ ಸಾಧ್ಯತೆ ಇದೆ. ಆರ್ಥಿಕ ಸಂಪನ್ಮೂಲಗಳು ವೃದ್ಧಿಸಲಿವೆ. ಹೊಸ ಕೆಲಸ ಹುಡುಕುತ್ತಿರುವವರಿಗೆ ಸ್ನೇಹಿತರಿಂದ ಸಹಾಯ ಒದಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಇರುವವರು ಕೆಲವೊಂದು ರಾಜಕೀಯ ಪ್ರೇರಿತ ಕೇಸುಗಳಲ್ಲಿ ಸತ್ ಹುಡುಕುವಾಗ ಸಾಕಷ್ಟು ಎಚ್ಚರ ವಹಿಸುವುದು ಒಳ್ಳೆಯದು. ಔಷಧಿ ತಯಾರಿಕಾ ಕಂಪನಿಗಳಿಗೆ ವಹಿವಾಟು ಹೆಚ್ಚುವುದು.

**
ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕೆಲಸಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆಯಾದಂತೆ ಭಾಸವಾದರೂ ಕೆಲಸಗಳು ಆಗುತ್ತವೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರಲಿದೆ. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಸ್ವಲ್ಪ ಹಿನ್ನಡೆ ಆಗಬಹುದು. ಕೃಷಿ ಉತ್ಪನ್ನಗಳ ಬೇಡಿಕೆ ಹೆಚ್ಚಲಿದೆ. ನೀವು ನಡೆಸುತ್ತಿರುವ ಉದ್ಯಮ ವಿಸ್ತರಿಸಲು ಯೋಚಿಸುವಿರಿ, ಆದರೆ ಅದಕ್ಕೆ ತಕ್ಕ ಪೂರ್ವ ತಯಾರಿ ಮಾಡಿಕೊಳ್ಳಲೇಬೇಕು, ಇಲ್ಲವಾದಲ್ಲಿ ಅರ್ಧದಲ್ಲಿ ಕೆಲಸ ನಿಲ್ಲುವುದು. ವಿದೇಶಿ ವ್ಯವಹಾರಗಳ ಮೇಲೆ ಬಂಡವಾಳ ಹೂಡುವುದು ಅಷ್ಟು ಒಳಿತಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಥವಾ ಇಲಾಖಾ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಉತ್ತಮ ಅವಕಾಶಗಳಿವೆ.

**
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ಬೆಳೆದ ಫಸಲಿಗೆ ಉತ್ತಮ ಬೆಲೆ ದೊರಕುವುದರಿಂದ ಕೃಷಿ ಕೆಲಸಗಳನ್ನು ಮಾಡಲು ಉತ್ಸಾಹ ಮೂಡುತ್ತದೆ. ಅನಿವಾರ್ಯವಲ್ಲದ ಕೆಲಸ ಮುಂದೂಡುವುದು ಉತ್ತಮ. ಹಣಕಾಸಿನ ವಿಚಾರದಲ್ಲಿ ಶಿಸ್ತುಬದ್ಧತೆಯ ಕೊರತೆಯಿಂದಾಗಿ ನಷ್ಟ ಆಗಬಹುದು, ಎಚ್ಚರ ವಹಿಸಿ. ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಕಾಣಬಹುದು. ನಿಮ್ಮ ಸಹಾಯಕರ ಕಾರ್ಯವೈಖರಿಯ ಬಗ್ಗೆ ಸರಿಯಾಗಿ ತಿಳಿಯುವುದು ಅಗತ್ಯ. ಮಾತಿನಿಂದ ಗೌರವ ಗಳಿಸುವಿರಿ. ಸರ್ಕಾರದಿಂದ ಆಗುವ ಕೆಲಸಗಳು ಸರಾಗವಾಗಿ ಆಗುತ್ತವೆ. ನಿಮ್ಮೆಲ್ಲಾ ಕಾರ್ಯಗಳಿಗೆ ಸಂಗಾತಿಯ ಸಹಕಾರ ಹೆಚ್ಚು ಸಿಗುತ್ತದೆ.

**
ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಅನವಶ್ಯ ಖರ್ಚಿನಿಂದ ಹಣ ನಷ್ಟವಾಗುವುದು. ನಿಮ್ಮ ವಿರುದ್ಧ ಉದ್ಯೋಗಿಗಳಿಂದ ಒಂದು ರೀತಿಯ ಪಿತೂರಿ ರೂಪುಗೊಳ್ಳುವ ಸಾಧ್ಯತೆ ಇದೆ. ಮಕ್ಕಳ ಪ್ರಗತಿಯ ಬಗ್ಗೆ ಶುಭ ಸಮಾಚಾರಗಳು ಕೇಳಿ ಬರುತ್ತವೆ. ದೊಡ್ಡ ಯೋಜನೆಯೊಂದರ ಕಾರ್ಯ ರೂಪಕ್ಕೆ ಚಾಲನೆ ದೊರೆಯುತ್ತದೆ. ಇದನ್ನು ನಿಧಾನವಾಗಿ ಶ್ರದ್ಧೆವಹಿಸಿ ಮಾಡಿದಲ್ಲಿ ಯಶಸ್ಸು ಸಿಗಲಿದೆ. ರಾಸಾಯನಿಕ ವಸ್ತುಗಳ ವ್ಯಾಪಾರ ಮಾಡುವವರಿಗೆ ವ್ಯವಹಾರದಲ್ಲಿ ಅಭಿವೃದ್ಧಿ ಇದೆ. ವಿದೇಶದಲ್ಲಿ ಉದ್ಯೋಗ ಅರಸುತ್ತಿರುವವರಿಗೆ ಉದ್ಯೋಗ ದೊರೆಯುವ ಲಕ್ಷಣಗಳಿವೆ. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಅಭಿವೃದ್ಧಿ ಇರಲಿದೆ.

**
ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ನಿಮ್ಮ ಸ್ಥಾನಮಾನ ಹೆಚ್ಚಿಸಿಕೊಳ್ಳಲು ಪ್ರಭಾವಿ ವ್ಯಕ್ತಿಗಳ ಒಡನಾಟ ಬಯಸುವಿರಿ. ಸರ್ಕಾರದಲ್ಲಿನ ಉನ್ನತ ಹುದ್ದೆಯಲ್ಲಿರುವವರು ಸಹೋದ್ಯೋಗಿಗಳೊಡನೆ ಎಚ್ಚರದಿಂದ ವರ್ತಿಸಿರಿ. ಅನವಶ್ಯ ಮಾತುಗಳಿಂದ ಗೌರವ ಕಡಿಮೆಯಾಗಬಹುದು. ಉದ್ಯೋಗ ಅರಸುತ್ತಿರುವವರಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಬೇರೆಯವರ ಥಳುಕಿನ ಮಾತಿಗೆ ಬೆರಗಾಗಿ ಗೊತ್ತಿಲ್ಲದ ಕಂಪನಿಗಳಲ್ಲಿ ಹಣ ಹೂಡಬೇಡಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಸೌಲಭ್ಯಗಳು ದೊರೆಯುತ್ತವೆ. ಅಗತ್ಯಕ್ಕೆ ತಕ್ಕಷ್ಟು ಹಣ ಒದಗುತ್ತದೆ. ದುಬಾರಿ ವಸ್ತುಗಳ ಖರೀದಿ ಮುಂದೂಡಿ.

**
ತುಲಾರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಕೈಗೊಂಡ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿ, ಇಲ್ಲವಾದಲ್ಲಿ ಜನಗಳಲ್ಲಿ ನಂಬಿಕೆ ಕಳೆದುಕೊಳ್ಳುವಿರಿ. ಧನ ಮತ್ತು ಮಾನಹಾನಿಯಿಂದ ಪಾರಾಗಲು ಗುಂಪುಗಾರಿಕೆಯಿಂದ ದೂರ ಇರಿ. ಹಣದ ಒಳಹರಿವು ಸಾಮಾನ್ಯ. ಸೋದರಿಯ ಸಂಬಂಧ ಉತ್ತಮಪಡಿಸಿಕೊಳ್ಳುವಿರಿ. ಕೃಷಿಗಾಗಿ ಭೂಮಿ ಕೊಳ್ಳುವ ನಿಮ್ಮ ಆಸೆ ಈಡೇರುವುದು. ದೂರದೂರಿಗೆ ಪ್ರಯಾಣಿಸುವ ಸಂದರ್ಭ ಒದಗಿ ಬರಬಹುದು. ತಾಯಿಯಿಂದ ನಿಮಗೆ ಧನಸಹಾಯ ದೊರೆಯುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಸಲಿದೆ. ಮೂಳೆ ತೊಂದರೆ ಇರುವವರಿಗೆ ನೋವು ಉಲ್ಬಣವಾಗುವುದು.

**
ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ ಇದೆ. ಕೃಷಿ ಕ್ಷೇತ್ರದಲ್ಲಿ ಧನಾದಾಯವಿದೆ. ಗೃಹ ನಿರ್ಮಾಣಕ್ಕಾಗಿಮನೆಯಲ್ಲಿ ಒತ್ತಡ ಹೆಚ್ಚಾಗಬಹುದು. ಸಂಬಂಧವಿಲ್ಲದ ವಿಷಯಗಳು ನಿಮ್ಮನ್ನು ಗೊಂದಲಕ್ಕೆ ಸಿಲುಕಿಸಬಹುದು. ಹಿರಿಯರ ಆರೋಗ್ಯದಲ್ಲಿ ಅಭಿವೃದ್ಧಿ ಕಾಣಬಹುದು. ಹಣದ ಒಳಹರಿವು ಸುಧಾರಣೆಯತ್ತ ಸಾಗುತ್ತದೆ. ಒಡಹುಟ್ಟಿದವರೊಡನೆ ಭಿನ್ನಾಭಿಪ್ರಾಯ ಇದ್ದರೂ ಸೂಕ್ತ ಸಮಯದಲ್ಲಿ ನಿಮ್ಮ ಸಹಾಯಕ್ಕೆಬರುವರು. ಆಯುಧಗಳನ್ನು ಉಪಯೋಗಿಸುವಾಗ ಎಚ್ಚರ ವಹಿಸಿ. ಸಂಗಾತಿಯೊಡನೆ ಅತಿಯಾದ ವಾಗ್ವಾದ ಒಳಿತಲ್ಲ.

**
ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ನೆರೆಹೊರೆಯವರೊಡನೆ ಸಣ್ಣ ಪುಟ್ಟ ವಿಚಾರಗಳಿಗಾಗಿ ವೈಮನಸ್ಯ ಮಾಡಿಕೊಳ್ಳದಿರುವುದು ಉತ್ತಮ. ವ್ಯವಹಾರಗಳಲ್ಲಿ ವೈಯಕ್ತಿಕ ಸಂಬಂಧಗಳು ಹಳಸದಂತೆ ಎಚ್ಚರ ವಹಿಸಿ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವಿದ್ಯಾರ್ಥಿಗಳಿಗೆ ಅವರ ಗುರುಗಳಿಂದ ಸೂಕ್ತ ಮಾರ್ಗದರ್ಶನ ದೊರೆಯುತ್ತದೆ. ಗುತ್ತಿಗೆದಾರರಿಗೆ ಸರ್ಕಾರದ ಗುತ್ತಿಗೆಗಳು ದೊರೆಯುವ ಸಾಧ್ಯತೆ ಇದೆ. ನಿಮ್ಮ ಬುದ್ಧಿವಂತಿಕೆ ಬಳಕೆ ಮಾಡಿ ವ್ಯಾಪಾರದಲ್ಲಿ ಲಾಭ ಪಡೆಯುವಿರಿ. ಮಂಗಳ ಕಾರ್ಯಗಳಿಗಾಗಿ ಮನೆಯವರೊಡನೆ ಕುಳಿತು ಚರ್ಚಿಸುವಿರಿ. ವೃತ್ತಿಯಲ್ಲಿ ಯಾವುದೇ ಏರಿಳಿತ ಇರುವುದಿಲ್ಲ.

**
ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ನಿಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಲಾಭ ಪಡೆಯುವವರ ಬಗ್ಗೆ ಎಚ್ಚರ ವಹಿಸಿ. ನಿಮ್ಮ ಮಹತ್ವಾಕಾಂಕ್ಷೆಯ ಕಾರ್ಯವು ನಿಧಾನವಾಗುತ್ತಿರುವ ಬಗ್ಗೆ ತಿಳಿದು ಕಾರ್ಯದಿಂದ ವಿಮುಖರಾಗಬೇಡಿ, ಹಠ ಹಿಡಿದು ಮಾಡಿದಲ್ಲಿ ಫಲಿತಾಂಶ ನಿಮ್ಮದೇ. ವಿವಿಧ ಮೂಲಗಳಿಂದ ಆದಾಯ ಬರುವ ಸಾಧ್ಯತೆ ಇದೆ. ವಾಹನ ಮಾರಾಟಗಾರರಿಗೆ ಹೆಚ್ಚಿನ ವ್ಯವಹಾರ ಇರುತ್ತದೆ. ಅನವಶ್ಯ ವ್ಯವಹಾರಗಳಲ್ಲಿ ತಲೆ ಹಾಕದಿರುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸರಿಯಾಗಿ ಗಮನ ಕೊಡಿ. ಕಣ್ಣಿನ ಸೋಂಕಿನ ಬಗ್ಗೆ ಎಚ್ಚರ ವಹಿಸಿ. ಹೈನುಗಾರಿಕೆಯನ್ನು ವೃತ್ತಿಯಾಗಿ ಮಾಡುತ್ತಿರುವವರಿಗೆ ಲಾಭವಿದೆ.

**
ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಯುವಕರು ತಮ್ಮ ದುಡುಕು ಸ್ವಭಾವದಿಂದಲೇ ಹಾನಿ ಅನುಭವಿಸಬೇಕಾಗಬಹುದು, ಆದ್ದರಿಂದ ಶಾಂತಚಿತ್ತರಾಗಿ ವ್ಯವಹರಿಸುವುದು ಒಳ್ಳೆಯದು. ಶೃಂಗಾರ ಸಾಮಗ್ರಿಗಳನ್ನು ತಯಾರಿಸಿ ಮಾರುವವರಿಗೆ ಉತ್ತಮ ಲಾಭವಿರಲಿದೆ. ಸ್ವಂತ ಉದ್ದಿಮೆ ನಡೆಸುತ್ತಿರುವವರಿಗೆ ಹೊಸ ವ್ಯವಹಾರಗಳು ಒದಗಿಬರುತ್ತವೆ. ವೃತ್ತಿ ಕ್ಷೇತ್ರದಲ್ಲಿ ಇದ್ದ ಹಿತಶತ್ರುಗಳ ಬವಣೆ ಕಡಿಮೆಯಾಗಿ ಮನಸ್ಸಿಗೆ ನಿರಾಳವೆನಿಸುತ್ತದೆ. ಸಂದರ್ಶನಕಾರರರಿಗೆ ಬಿಡುವಿಲ್ಲದ ಕೆಲಸ ಇರುತ್ತದೆ. ಸ್ತ್ರೀಶಕ್ತಿಸ್ವಸಹಾಯ ಗುಂಪುಗಳನ್ನು ನಡೆಸುವವರ ಗೌರವ ಹೆಚ್ಚಾಗುತ್ತದೆ. ಸರ್ಕಾರಿ ಸಂಸ್ಥೆಯಲ್ಲಿನ ಕೆಲಸಗಳನ್ನು ಸರಾಗವಾಗಿ ಮಾಡಿಕೊಳ್ಳಬಹುದು.

**
ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಕೃಷಿ ಸಂಶೋಧಕರ ಸಂಶೋಧನೆಗಳಿಗೆ ಗೌರವ ದೊರಕುತ್ತದೆ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭವಿರುತ್ತದೆ. ಅನ್ಯರ ಸಹಾಯ ಪಡೆದು ಆರ್ಥಿಕ ಸ್ಥಿತಿಯನ್ನು ಸರಿದೂಗಿಸುವಿರಿ. ಸಂಗಾತಿಯ ಆದಾಯದಲ್ಲಿ ಏರಿಕೆ ಕಾಣಬಹುದು. ಸರ್ಕಾರಿ ನೌಕರರ ಕಾರ್ಯದಲ್ಲಿ ಪ್ರಗತಿ ಕಾಣಬಹುದು. ಸೋದರರಿಂದ ಸೂಕ್ತ ಸಮಯದಲ್ಲಿ ಧನಸಹಾಯ ದೊರೆಯುತ್ತದೆ. ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರಕುವ ಸಾಧ್ಯತೆಗಳಿವೆ. ಲೋಹದ ವ್ಯಾಪಾರಿಗಳಿಗೆ ವ್ಯವಹಾರ ವಿಸ್ತರಿಸುತ್ತದೆ. ಹೊಸ ವಾಹನಗಳನ್ನು ಮಾರಾಟ ಮಾಡುವವರ ವ್ಯವಹಾರ ನಿಧಾನವಾಗಿ ಹೆಚ್ಚಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT