ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 5-9-2021ರಿಂದ 11-9-2021ರವರೆಗೆ

Last Updated 4 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಸ್ವಯಂ ಉದ್ಯೋಗದ ಬಗ್ಗೆ ಸಾಕಷ್ಟು ಚಿಂತನೆ ನಡೆಸಿ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಹತ್ತಿರದ ಬಂಧುಗಳಿಂದ ಸೂಕ್ತ ಸಲಹೆಗಳು ದೊರೆಯುತ್ತವೆ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಇರಲಿ. ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಪ್ರಗತಿಯ ಹಾದಿ ತೆರೆಯುತ್ತದೆ. ಬಹಳ ಚಿಂತಿಸುತ್ತಿದ್ದ ನಿಮಗೆ ಮನಸ್ಸಿಗೆ ಮುದ ನೀಡುವ ಒಂದು ಮಾರ್ಗ ಗೋಚರಿಸುತ್ತದೆ. ವ್ಯಾಪಾರಸ್ಥರಿಗೆ ಲಾಭ ಹೆಚ್ಚುತ್ತದೆ. ಮಿತ್ರರೊಡನೆ ವ್ಯವಹಾರ ಮಾಡುವಾಗ ಹೆಚ್ಚು ಜಾಗರೂಕರಾಗಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ಕೊಡಬೇಕಾದ ಅನಿವಾರ್ಯತೆ ಇರುತ್ತದೆ. ಹಣದ ಒಳಹರಿವು ಸಾಮಾನ್ಯ ಸ್ಥಿತಿಯಲ್ಲಿ ಇರುತ್ತದೆ. ಆರೋಗ್ಯದ ಬಗ್ಗೆ ನಿಗಾ ವಹಿಸಿರಿ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಕುಟುಂಬದಲ್ಲಿನ ಕ್ಲಿಷ್ಟ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿಕೊಂಡು ಹಿರಿಯರಿಂದ ಮೆಚ್ಚುಗೆ ಗಳಿಸುವಿರಿ. ಸಂಬಂಧವಿಲ್ಲದ ವಿಷಯಗಳಲ್ಲಿ ತಲೆಹಾಕಿ ಗೊಂದಲಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ, ಎಚ್ಚರವಾಗಿರಿ. ಉದ್ಯಮವನ್ನು ವಿಸ್ತರಿಸಲು ಅನುಮತಿಗಾಗಿ ಕಾಯುತ್ತಿದ್ದವರಿಗೆ ಈಗ ಅನುಮತಿ ದೊರೆಯುತ್ತದೆ. ಇದಕ್ಕಾಗಿ ಸೂಕ್ತ ತಯಾರಿಯನ್ನು ಮಾಡಿಕೊಳ್ಳುವುದು ಉತ್ತಮ. ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳುವವರಿಗೆ ಮಿಶ್ರಫಲಿತಾಂಶ ಇರುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುತ್ತಿರುವವರ ವ್ಯವಹಾರ ವಿಸ್ತರಿಸುವ ಸಾಧ್ಯತೆಗಳಿವೆ. ಸ್ಥಿರಾಸ್ತಿಯ ಗಳಿಕೆಯಲ್ಲಿ ಯಶಸ್ಸನ್ನು ಕಾಣುವಿರಿ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಸಿಗುವ ಎಲ್ಲಾ ಸಾಧ್ಯತೆ ಇದೆ. ಉನ್ನತ ಹುದ್ದೆಯಲ್ಲಿರುವವರ ವಿರುದ್ಧ ಸಹೋದ್ಯೋಗಿಗಳು ಪಿತೂರಿ ಮಾಡಬಹುದು. ಈ ಬಗ್ಗೆ ಎಚ್ಚರವಹಿಸಿರಿ. ಕುಟುಂಬದಲ್ಲಿ ಕಾವೇರಿದ ಮಾತುಗಳಾದರೂ ನಂತರ ಎಲ್ಲಾ ತಿಳಿಯಾಗುವುದು. ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಪ್ರಮುಖ ಸುದ್ದಿ ದೊರೆತು ಸಂತಸವಾಗುವುದು. ರೇಷ್ಮೆ ನೂಲು ತೆಗೆಯುವವರ ವ್ಯವಹಾರ ವಿಸ್ತರಿಸುತ್ತದೆ. ಔಷಧ ತಯಾರಕರಿದೆ ವಿದೇಶಿ ಒಪ್ಪಂದಗಳು ಸದ್ಯದಲ್ಲೇ ಸಿಗಬಹುದು. ಆರ್ಥಿಕ ಸ್ಥಿತಿಯು ಅಗತ್ಯಕ್ಕೆ ತಕ್ಕಷ್ಟು ಇರುವುದಲ್ಲದೆ ಚೇತರಿಕೆಯನ್ನು ಕಾಣುತ್ತದೆ. ಸ್ಥಿರಾಸ್ತಿಯನ್ನು ಗಳಿಸುವಲ್ಲಿ ಮೇಲುಗೈ ಸಾಧಿಸುವಿರಿ. ದ್ರವರೂಪದ ವಸ್ತುಗಳನ್ನು ಮಾರಾಟ ಮಾಡುವವರಿಗೆ ಯಶಸ್ಸು ಇರುತ್ತದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಉದ್ಯೋಗದಲ್ಲಿ ಮಹತ್ತರ ಬದಲಾವಣೆಯ ವಿಚಾರವಾಗಿ ಹಿರಿಯ ಅಧಿಕಾರಿಗಳೊಡನೆ ಚರ್ಚೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯ ಒದಗಿಬರುತ್ತದೆ. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಬೆಳೆ ಪಡೆಯುವ ಯೋಗವಿದೆ. ಮಕ್ಕಳ ದುಂದುವೆಚ್ಚಗಳಿಗಾಗಿ ಹಣ ಕೊಡಬೇಕಾಗಬಹುದು. ಪಾಲುದಾರಿಕೆ ವ್ಯವಹಾರಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡಿದರೂ ನಿಮ್ಮ ವಿಷಯ ಮಂಡನೆಯ ನಂತರ ಸರಿಯಾಗುವುದು. ವ್ಯವಹಾರಗಳಲ್ಲಿ ಇದ್ದ ಹಣ ಸೋರಿಕೆ ನಿಲ್ಲುವುದು. ಹಂಗಾಮಿ ಕೆಲಸವನ್ನು ಮಾಡುತ್ತಿರುವವ ಕೆಲವರಿಗೆ ಉದ್ಯೋಗ ಕಾಯಂ ಆಗುವ ಲಕ್ಷಣಗಳಿವೆ. ವಿದೇಶದಲ್ಲಿ ಓದಬೇಕೆನ್ನುವವರಿಗೆ ಅವಕಾಶಗಳು ಸಿಗುವ ಸಾಧ್ಯತೆಗಳಿವೆ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ.

ಸಿಂಹ ರಾಶಿ (ಮಖಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕಲಾವಿದರುಗಳಿಗೆ ಹೆಚ್ಚಿನ ಸ್ಥಾನಮಾನದ ಜೊತೆಗೆ ಆದಾಯವೂ ಬರುತ್ತದೆ. ನಿಮ್ಮ ಕೈ ಕೆಳಗಿನ ಕೆಲಸಗಾರರ ಕೆಲಸದಲ್ಲಿ ನಂಬಿಕೆಯ ಕೊರತೆಯನ್ನು ಕಾಣಬಹುದು. ವೈಯಕ್ತಿಕ ಜೀವನದಲ್ಲಿ ಸ್ವಲ್ಪ ಅಭಿವೃದ್ಧಿಯನ್ನು ಕಾಣಬಹುದು. ಕೃಷಿ ಬೀಜ ಉತ್ಪಾದಕರಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತದೆ. ಧನಾದಾಯವು ಪ್ರಗತಿಯಲ್ಲಿರುತ್ತದೆ. ಮಕ್ಕಳ ಬಗ್ಗೆ ಹಿತನುಡಿಗಳನ್ನು ಕೇಳಬಹುದು. ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿರಿ. ವಿದೇಶಿ ವ್ಯವಹಾರ ಮಾಡುವವರು ತಮ್ಮ ವ್ಯವಹಾರದ ದಾಖಲೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯುವುದು ಉತ್ತಮ. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಇರುತ್ತದೆ. ಶ್ವಾಸಕೋಶದ ಅಥವಾ ಉಸಿರಾಟದ ತೊಂದರೆ ಇರುವವರು ಚಿಕಿತ್ಸೆ ಪಡೆಯಿರಿ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಆತ್ಮಾಭಿಮಾನ ಹೆಚ್ಚಾಗಿ ಇರುತ್ತದೆ. ಅನವಶ್ಯಕ ಆಲಸ್ಯ ನಿಮ್ಮನ್ನು ಕಾಡಬಹುದು. ಹಣದ ಒಳಹರಿವು ಸಾಮಾನ್ಯವಾಗಿದ್ದರೂ ಖರ್ಚು ಹೆಚ್ಚಾಗಿರುತ್ತದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹಿನ್ನಡೆ ಆಗಬಹುದು. ಸಂಗಾತಿಯ ದುಂದು ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನ ಪಡುವಿರಿ. ವಿದೇಶಿ ಆಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ವಿಸ್ತರಿಸುತ್ತದೆ. ರಾಜಕೀಯದಲ್ಲಿ ಗುಂಪುಗಾರಿಕೆ ಮಾಡುವುದರಿಂದ ಧನಹಾನಿ ಆಗುವುದು. ಅನ್ಯರ ಮಕ್ಕಳ ಮೇಲೆ ಸಂಶಯಪಡುವುದು ಅಷ್ಟು ಒಳಿತಲ್ಲ. ಗುತ್ತಿಗೆ ವ್ಯವಹಾರವನ್ನು ಮಾಡುತ್ತಿರುವವರಿಗೆ ಬರಬೇಕಾಗಿದ್ದ ಬಾಕಿ ಹಣ ಹಂತಹಂತವಾಗಿ ಬರುತ್ತದೆ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರದ ವಿಸ್ತರಣೆ ಆಗುತ್ತದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಹಿತೈಷಿಗಳನ್ನು ಭೇಟಿಮಾಡುವ ಸಾಧ್ಯತೆಗಳಿವೆ. ಕೆಲವು ಸ್ಥಾನಮಾನಗಳಿಗಾಗಿ ಒಳಸಂಚನ್ನು ಮಾಡುವಿರಿ ಹಾಗೂ ಅದರಲ್ಲಿ ಅರ್ಧ ಯಶಸ್ಸನ್ನು ಕಾಣುವಿರಿ. ಯೋಜನಾ ಜಾರಿ ವಿಭಾಗದಲ್ಲಿ ಇರುವವರಿಗೆ ಹೊಸ ಯೋಜನೆಯೊಂದನ್ನು ಕಾರ್ಯಗತ ಮಾಡುವ ಜವಾಬ್ದಾರಿ ಹೆಗಲೇರುತ್ತದೆ. ಹಣ್ಣುಗಳನ್ನು ರಫ್ತು ಮಾಡುವವರಿಗೆ ಹೊಸ ರೂಪದ ಅವಕಾಶವೊಂದು ತೆರೆದುಕೊಳ್ಳುತ್ತದೆ. ಸಾಹಸ ಕಲಾವಿದರುಗಳಿಗೆ ಹೆಚ್ಚಿನ ಅವಕಾಶಗಳು ಸಿಗುವ ಸಾಧ್ಯತೆಗಳಿವೆ. ನಿರೀಕ್ಷಿತ ಮೂಲದಿಂದ ಹಣ ಬಾರದೆ ಹೋದರೂ ಬೇರೊಂದು ಮೂಲದಿಂದ ಒದಗಿಬರುತ್ತದೆ. ವೈಯಕ್ತಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಇರಲಿ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಸಾಮಾಜಿಕ ಚಟುವಟಿಕೆಗಳು ನಿರೀಕ್ಷೆಯಂತೆ ನಡೆಯುತ್ತವೆ. ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವವರಿಗೆ ಕೆಲವೊಂದು ಅವಕಾಶಗಳು ತೆರೆದುಕೊಳ್ಳುತ್ತವೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಸಾಕಷ್ಟು ಪ್ರಗತಿ ಇರುತ್ತದೆ. ಸರ್ಕಾರದಿಂದ ನಿಮಗೆ ಆಗಬೇಕಾದ ಕೆಲಸಗಳು ಸರಾಗವಾಗಿ ಆಗುತ್ತದೆ. ಬೇರೆಯವರ ಥಳುಕಿನ ಮಾತಿಗೆ ಮರುಳಾಗಿ ಮೋಸಹೋಗುವ ಸಾಧ್ಯತೆಗಳಿವೆ, ಎಚ್ಚರವಾಗಿರಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಆಧ್ಯಾತ್ಮಿಕ ಜೀವನದಲ್ಲಿ ಇರುವವರೆಗೆ ಒಂದು ರೀತಿಯ ಸಂತೃಪ್ತಿ ಸಿಗುತ್ತದೆ. ವೃತ್ತಿಯಲ್ಲಿ ಸಂತಸವಿದ್ದರೂ ಹಿತಶತ್ರುಗಳ ಕಾಟ ಇರುತ್ತದೆ. ಕೃಷಿಕರಿಗೆ ಸರ್ಕಾರದಿಂದ ಸಹಾಯಧನಗಳು ಒದಗಿಬರುತ್ತವೆ. ನವೀನ ರೀತಿಯ ಕೇಶಾಲಂಕಾರವನ್ನು ಮಾಡುವವರಿಗೆ ಬೇಡಿಕೆ ಬರತೊಡಗುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ನಿಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸ್ಪಷ್ಟ ನಿಲುವುಗಳನ್ನು ತಳೆಯುವುದರಿಂದ ಸರಾಗವಾಗಿ ಕಾರ್ಯಗಳು ನೆರವೇರುತ್ತದೆ. ಭಾಷಾ ಸಂಶೋಧಕರಿಗೆ ಉತ್ತಮ ಸೌಕರ್ಯ ಮತ್ತು ಭಾಷಾ ಸರಕುಗಳು ದೊರೆತು ಸಂಶೋಧನಾ ಕೆಲಸಕ್ಕೆ ಅನುಕೂಲವಾಗುತ್ತದೆ. ಕೆಲವರೊಂದಿಗೆ ವ್ಯವಹಾರದಲ್ಲಿ ಅತಿಯಾದ ಸ್ನೇಹ ಸಂಬಂಧ ವೃದ್ಧಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಸರಿಯಾಗಿ ವಿಚಾರ ಮಾಡಿ ವ್ಯವಹಾರ ಸಂಬಂಧಗಳು ಹಳಸದಂತೆ ಎಚ್ಚರ ವಹಿಸಿರಿ. ಮನೆಯಲ್ಲಿ ವಸ್ತ್ರಾಭರಣಗಳನ್ನು ಕೊಳ್ಳಲು ಒತ್ತಡ ಹೇರುವ ಸಾಧ್ಯತೆಗಳಿವೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಮೂಳೆಯ ತೊಂದರೆ ಇರುವವರು ಚಿಕಿತ್ಸೆ ಪಡೆಯಿರಿ ಹಾಗೂ ಎಚ್ಚರ ವಹಿಸಿರಿ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕಾರ್ಯದೊತ್ತಡದಿಂದಾಗಿ ದೇಹಕ್ಕೆ ಆಯಾಸ ಎನಿಸಬಹುದು. ಸ್ವಲ್ಪ ವಿಶ್ರಾಂತಿ ಅಗತ್ಯ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ. ಮನರಂಜನಾ ಕಾರ್ಯಗಳನ್ನು ಆಯೋಜಿಸುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ವಿದೇಶದಲ್ಲಿರುವ ಮಕ್ಕಳಿಂದ ಸಂತಸದ ವಾರ್ತೆ ಕೇಳಬಹುದು. ಭೂ ವ್ಯವಹಾರವನ್ನು ಮಾಡುವವರಿಗೆ ಲಾಭ ಹೆಚ್ಚುತ್ತದೆ. ಕಬ್ಬಿಣದ ವಸ್ತುಗಳನ್ನು ಮಾರಾಟ ಮಾಡುವವರ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ದಂಪತಿ ನಡುವಿನ ಕಿರಿಕಿರಿ ಕಡಿಮೆಯಾಗಿ ಸಂತಸದ ಗಾಳಿ ಬೀಸುವುದು. ಪ್ರಭಾವಿ ವ್ಯಕ್ತಿಗಳ ಒಡನಾಟದಿಂದ ನಿಮ್ಮ ಸ್ಥಾನವನ್ನು ಹೆಚ್ಚಿಸಿಕೊಳ್ಳುವಿರಿ. ಹಣದ ಒಳ ಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ನಿಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಲಾಭ ಪಡೆಯುವವರು ಇದ್ದಾರೆ. ಅವರ ಬಗ್ಗೆ ಎಚ್ಚರ ವಹಿಸಿರಿ. ಸಂಗಾತಿಯ ಸೂಕ್ತ ಸಹಕಾರದಿಂದ ಸಂಸಾರದಲ್ಲಿ ನೆಮ್ಮದಿ ಇರುತ್ತದೆ. ನಿರೀಕ್ಷಿತ ಮೂಲದಿಂದ ಧನಸಹಾಯ ಒದಗುವ ಸಾಧ್ಯತೆಗಳಿವೆ. ಮಹಿಳಾ ಕಲಾವಿದರುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ರಾಸಾಯನಿಕ ವಸ್ತುಗಳನ್ನು ರಫ್ತು ಮಾಡುವವರಿಗೆ ವ್ಯವಹಾರ ವಿಸ್ತರಿಸುತ್ತದೆ ಮತ್ತು ಹೆಚ್ಚಿನ ರಫ್ತಿಗಾಗಿ ಆದೇಶ ದೊರೆಯುತ್ತದೆ. ವಿದೇಶದಲ್ಲಿ ವಿದ್ಯೆಗಾಗಿ ನೆಲೆನಿಂತಿರುವವರಿಗೆ ಉತ್ತಮ ವಿದ್ಯೆ ದೊರಕುತ್ತದೆ. ಅವಿವಾಹಿತರಿಗೆ ವಿವಾಹ ಸಂಬಂಧ ಒದಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಅನಿರೀಕ್ಷಿತ ತಿರುವು ಬಂದು ಆದಾಯ ಕಡಿಮೆಯಾದರೂ ನಂತರ ಸುಧಾರಿಸುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ವಾಹನ ವಹಿವಾಟು ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣಬಹುದು. ಯಾವುದೋ ಸತ್ಯವನ್ನು ಬಯಲುಗೊಳಿಸಲು ಹೋಗಿ ನೀವೇ ಸಿಕ್ಕಿಹಾಕಿಕೊಳ್ಳುವ ಸಂದರ್ಭವಿದೆ ಎಚ್ಚರ. ಇತರರ ಬಗ್ಗೆ ಅನವಶ್ಯಕವಾಗಿ ಮಾತನಾಡಿ ಸಿಕ್ಕಿಹಾಕಿಕೊಳ್ಳುವ ಸಂದರ್ಭವಿದೆ. ನ್ಯಾಯಾಲಯದ ಕಟ್ಟಲೆಗಳಲ್ಲಿ ನಿಮಗೆ ಜಯವಿರುತ್ತದೆ. ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರ ಆಗಿ ಲಾಭ ಹೆಚ್ಚುತ್ತದೆ. ಶೀತ ಬಾಧೆ ಇರುವವರು ಚಿಕಿತ್ಸೆಯನ್ನು ಪಡೆಯುವುದು ಉತ್ತಮ. ಸಂಗಾತಿಯ ಆದಾಯದಲ್ಲಿ ಸಾಕಷ್ಟು ಏರಿಕೆಯನ್ನು ಕಾಣಬಹುದು. ವೈಯಕ್ತಿಕ ಧನಾದಾಯ ಕಡಿಮೆ ಇರುತ್ತದೆ. ಅದಿರನ್ನು ಉತ್ಪಾದಿಸುವವರಿಗೆ ಉತ್ತಮ ಮಾರುಕಟ್ಟೆ ದೊರೆಯುವುದರ ಜೊತೆಗೆ ವ್ಯವಹಾರ ವಿಸ್ತರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT