ಮೈಸೂರು: ಪಾರಂಪರಿಕ ಕಟ್ಟಡಗಳ ಮೇಲೇರಿ ಜಂಬೂಸವಾರಿ ವೀಕ್ಷಣೆಯನ್ನು ಅನೇಕ ವರ್ಷಗಳಿಂದ ನಿಷೇಧಿಸಲಾಗಿದೆ. ಜಂಬೂ ಸವಾರಿ ಸಾಗಿದ ಮಾರ್ಗದಲ್ಲಿ ಒಂದೆರಡು ಕಟ್ಟಡಗಳನ್ನು ಬಿಟ್ಟು ಬಹುತೇಕ ಎಲ್ಲ ಪಾರಂಪರಿಕ ಕಟ್ಟಡಗಳ ಮೇಲೆ ಜನರು ಕಿಕ್ಕಿರಿದು ತುಂಬಿದ್ದರು.
ಶಿಥಲಗೊಂಡಿರುವ ದೇವರಾಜ ಮಾರುಕಟ್ಟೆ ಕಟ್ಟಡದ ಮೇಲೆ ಉದ್ದಕ್ಕೂ ಜನ ನಿಂತಿದ್ದರು. ಕಟ್ಟಡ ಎಲ್ಲ ಭಾಗದಲ್ಲೂ ತುಂಬಿ ತುಳುಕಿದ್ದರು.
ವಿಶ್ವೇಶ್ವರಯ್ಯ ಭವನ ಬಿಟ್ಟು ಎಲ್ಲ ಕಡೆ ಜನ ಇದ್ದರು. ಶಿಥಿಲಾವಸ್ಥೆಯಲ್ಲಿರುವ ಚಾಮುಂಡೇಶ್ವರಿ ಚಿತ್ರಮಂದಿರ ಕಟ್ಟಡ ಸೇರಿದಂತೆ ಹಳೆಯ ಕಟ್ಟಡಗಳ ಮೇಲೆ ಕುಳಿತು, ನಿಂತು ಜಂಬೂ ಸವಾರಿ ನೋಡಿದರು.
ಕಟ್ಟಡಗಳ ಮೇಲೆ ಹತ್ತಿದ್ದ ಜನರನ್ನು ಇಳಿಸಲು ಪೊಲೀಸರು ಹರಸಾಹಸಪಟ್ಟರು. ಪೊಲೀಸರ ಯಾವುದೇ ಬೆದರಿಕೆಗೂ ಜನರು ಬಗ್ಗಲಿಲ್ಲ.
ನೂಕುನುಗ್ಗಲು ನಿಯಂತ್ರಿಸಲು ಪೊಲೀಸರಹರಸಾಹಸ
ಜಂಬೂ ಸವಾರಿ ಸಾಗುವ ಮಾರ್ಗವಾದ ಸಯ್ಯಾಜಿ ರಾವ್ ರಸ್ತೆಯಲ್ಲಿ ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಚಾಮುಂಡೇಶ್ವರಿ ಚಿತ್ರಮಂದಿರ ಪಕ್ಕ ರಸ್ತೆಗೆ ಹೋಗದಂತೆ ತಡೆಯಲು ನಿರ್ಮಿಸಿದ್ದ ಬ್ಯಾರಿಕೇಡ್ ಹತ್ತಿದ ಜನರು ಜಿಗಿಯಲು ಪ್ರಯತ್ನಿಸಿದರು. ಪೊಲೀಸರು ಜನರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು.
ಮಹಿಳೆಯರನ್ನು ಪುರುಷರ ಗ್ಯಾಲರಿಯಿಂದ ಬೇರ್ಪಡಿಸಿ ಅನುಕೂಲಕರವಾಗಿ ಜಂಬೂ ಸವಾರಿ ವೀಕ್ಷಿಸಲು ಪೊಲೀಸರು ಅನುವು ಮಾಡಿಕೊಟ್ಟರು.
ದಸರಾ ವೀಕ್ಷಣೆಗೆ ಬಂದ ಅಪರಿಚಿತ ಹೃದಯಾಗಾತದಿಂದ ಸಾವು ದಸರಾ ವೀಕ್ಷಿಸಲು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕೆ.ಆರ್.ವೃತ್ತದ ಬಳಿ ಇರುವ ಚಿಕ್ಕ ಗಡಿಯಾರದ ಹತ್ತಿರ ದಸರಾ ವೀಕ್ಷಿಸುತ್ತಿದ್ದ ವ್ಯಕ್ತಿ ಕುಸಿದು ಬಿದ್ದಿದ್ದಾರೆ. ನಗರಪಾಲಿಕೆಯ ವಾಹನದಲ್ಲಿ ಕೂಡಲೇ ಅವರನ್ನು ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯೇ ಮೃತಪಟ್ಟಿದ್ದರು.
ವೈದ್ಯಕೀಯ ತುರ್ತು ಪರಿಸ್ಥಿತಿ ನಿಭಾಯಿಸಲು ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಆರೋಗ್ಯ ಇಲಾಖೆಯು 10 ಅಂಬ್ಯುಲೆನ್ಸ್ ನಿಯೋಜಿಸಿದೆ.