ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ| ಚಿತ್ರೋದ್ಯಮ: ಕೋವಿಡ್ ನೆರಳಲ್ಲಿ ನಿರೀಕ್ಷೆಯ ಚುಂಗು

Last Updated 30 ಸೆಪ್ಟೆಂಬರ್ 2021, 7:21 IST
ಅಕ್ಷರ ಗಾತ್ರ

‘ಸಲಗ’, ‘ಕೋಟಿಗೊಬ್ಬ3’ ತರಹದ ದೊಡ್ಡ ಕನ್ನಡ ಚಿತ್ರಗಳು ಆಯುಧಪೂಜೆಯ ಬೂದುಕುಂಬಳದ ಮೇಲಿನ ಕರ್ಪೂರ ಉರಿಯುವ ಹೊತ್ತಿಗೆ ಕೋವಿಡ್‌ನ ಸಂಕಷ್ಟಗಳ ಸುಟ್ಟುಹಾಕಬಹುದೇನೋ ಎಂಬ ನಿರೀಕ್ಷೆಯ ಮಿಂಚು ಒಂದು ಕಡೆ. ಎಪ್ಪತ್ತೆರಡು ವರ್ಷ ಮೈಸೂರಿನ ಚಿತ್ರರಸಿಕರಿಗೆ ಸಿನಿಮಾಗಳ ದರ್ಶನ ಮಾಡಿಸಿಯೂ ಒಂದೂವರೆ ವರ್ಷದ ಸಾಂಕ್ರಾಮಿಕ ರೋಗದ ಹೊಡೆತಕ್ಕೆ ನಲುಗಿ ‘ಸ್ಕ್ರೀನ್ ಡೌನ್’ ಮಾಡಿದ ಲಕ್ಷ್ಮಿ ಚಿತ್ರಮಂದಿರದ ಮಾಲೀಕರು ಇನ್ನೊಂದು ಕಡೆ. ಕನ್ನಡ ಚಿತ್ರರಂಗ ಒಂದು ಕೈಯಲ್ಲಿ ನಿರೀಕ್ಷೆಯ ಚುಂಗು ಹಿಡಿದು, ಇನ್ನೊಂದು ಕೈಯನ್ನು ಆತಂಕ ಮತ್ತೆ ಅಪ್ಪಳಿಸೀತೇ ಎಂಬ ಆತಂಕದಲ್ಲಿ ನಡುಗಿಸುತ್ತಾ ಇರುವಂತಿದೆ ಎನ್ನುವುದರ ಪ್ರತೀಕವಿದು.

ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ‘ಸಲಗ’ದಸರಾ ಹಬ್ಬದ ಹೊತ್ತಿಗೆ ತೆರೆಕಾಣುವುದು ನಿಕ್ಕಿಯಾಗಿದೆ. ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಕೂಡ ದರ್ಶನ ನೀಡಲು ಸಿದ್ಧ. ಆಮೇಲೆ ಶಿವರಾಜ್‌ಕುಮಾರ್ ನಾಯಕರಾಗಿರುವ ‘ಬಜರಂಗಿ 2’, ಉಪೇಂದ್ರ ಅಭಿನಯದ ‘ಕಬ್ಜ’, ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಚಿತ್ರ ‘ವಿಕ್ರಾಂತ್ ರೋಣ’ ತೆರೆಕಾಣುವ ನಿರೀಕ್ಷೆ ಇದೆ. ಕೋವಿಡ್‌ ಕಾರಣದಿಂದಾಗಿ ಮನೆಯೊಳಗೆ ಕುಳಿತಿದ್ದ ಪ್ರೇಕ್ಷಕರನ್ನು ಎಳೆದು ಚಿತ್ರಮಂದಿರಕ್ಕೆ ತರುವ ಸಾಧ್ಯತೆ ಇರುವುದು ಈ ಚಿತ್ರಗಳಿಗೆ ಎನ್ನಲಾಗುತ್ತಿದೆ. ಈ ನಿರೀಕ್ಷೆಯ ಎಳೆಬಿಸಿಲಲ್ಲಿಯೂ ಕೋವಿಡ್ ಕರಿನೆರಳೇ ಕಾಡುತ್ತಿರುವುದು ಸ್ಪಷ್ಟ.

-ಜೈರಾಜ್
-ಜೈರಾಜ್

ವಿತರಕರು ಹಾಗೂ ಪ್ರದರ್ಶಕರ ಸಂಕಷ್ಟಗಳ ಸೂಕ್ಷ್ಮವನ್ನು ಬಲ್ಲವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ದೇಶಕ ಜೈರಾಜ್. ಖುದ್ದು ಆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಆ ವಲಯಗಳ ವಸ್ತುಸ್ಥಿತಿಯ ಅರಿವು ಅವರಿಗೆ ಇದೆ.

‘ಕೋವಿಡ್ ಎರಡನೇ ಸಲ ಕಾಡಿತು. ಮುಂದೆಯೂ ಮರುಕಳಿಸಬಹುದು. ಆರೋಗ್ಯವೇ ಮುಖ್ಯ, ನಂತರ ಸಿನಿಮಾ. ಹೀಗಾಗಿಯೇ ಚಿತ್ರೋದ್ಯಮದ ಎಲ್ಲರೂ ಸಾಮಾಜಿಕ ಹೊಣೆಗಾರಿಕೆಯಿಂದಲೇ ವರ್ತಿಸಬೇಕು. ಆದರೂ ಈಗ ಇರುವ ಷರತ್ತುಗಳನ್ನು ಕುರಿತು ಕೆಲವು ಪ್ರಶ್ನೆಗಳಿವೆ. ಗರ್ಭಿಣಿಯರಿಗೆ ಚಿತ್ರಮಂದಿರಕ್ಕೆ ಪ್ರವೇಶವಿಲ್ಲ ಎಂಬ ನಿಬಂಧನೆ ಈಗ ಇದೆ. ತುಂಬುಗರ್ಭಿಣಿಯಾದರೆ ಗೊತ್ತಾಗುತ್ತದೆ. ಆದರೆ, ಮೂರರಿಂದ ಆರು ತಿಂಗಳ ಗರ್ಭಿಣಿಯರನ್ನು ಸುಲಭವಾಗಿ ಗುರುತು ಮಾಡಲಾಗದು. ಇಂತಹ ನಿಯಮಗಳನ್ನು ಪರಾಮರ್ಶಿಸಬೇಕಾಗುತ್ತದೆ’ ಎನ್ನುತ್ತಾ ಜೈರಾಜ್ ಮಾತಿಗೆ ತೆರೆದುಕೊಂಡರು.

ಮೈಸೂರಿನ ಲಕ್ಷ್ಮಿ ಚಿತ್ರಮಂದಿರ ಮುಚ್ಚಿಹೋದ ಪ್ರಸಂಗವನ್ನು ಅವರು ಕೋವಿಡ್‌ ಒಡ್ಡಿರುವ ಸಂಕಷ್ಟಕ್ಕೆ ಉದಾಹರಣೆಯಾಗಿ ನೀಡಿದರು. ಏಳೂವರೆ–ಎಂಟು ಲಕ್ಷ ರೂಪಾಯಿಯಷ್ಟು ಆಸ್ತಿ ತೆರಿಗೆಯ ಭಾರ ಆ ಚಿತ್ರಮಂದಿರದವರಿಗೆ ಇತ್ತು ಎನ್ನುವುದು ಇವರ ಗಮನಕ್ಕೆ ಬಂದಿದೆ. ‘ಏಕಪರದೆ ಚಿತ್ರಮಂದಿರಗಳ ಮಾಲೀಕರು ಬಹುತೇಕ ಎರಡು ವರ್ಷಗಳಲ್ಲಿ ಯಾವ ಸಿನಿಮಾ ಪ್ರದರ್ಶನವೂ ಇಲ್ಲದೆ ನಲುಗಿದ್ದಾರೆ. ಪರವಾನಗಿಗಳು, ಜಿಎಸ್‌ಟಿ, ಆಸ್ತಿ ತೆರಿಗೆ ಹೀಗೆ ವರ್ಷಕ್ಕೆ ಲಕ್ಷಗಟ್ಟಲೆ ಹಣವನ್ನು ತೆರುತ್ತಾ ಬಂದಿರುವ ಅವರೆಲ್ಲ ಈಗ ಹೈರಾಣಾಗಿರುವುದು ನಿಜ. ಕೋವಿಡ್ ಬಂದಮೇಲೆ ಆದಾಯವೇ ಇಲ್ಲದೇ ಇರುವಾಗ ತೆರಿಗೆಗಳು ಭಾರ ಎನಿಸುವುದು ಸಹಜ’ ಎಂದು ವಸ್ತುಸ್ಥಿತಿಗೆ ಕನ್ನಡಿ ಹಿಡಿದರು.

-ಡಿ.ಕೆ. ರಾಮಕೃಷ್ಣ
-ಡಿ.ಕೆ. ರಾಮಕೃಷ್ಣ

ಗುಜರಾತ್‌ನಲ್ಲಿ ಚಿತ್ರಮಂದಿರಗಳವರಿಗೆ ಕೆಲವು ಅನುಕೂಲಗಳನ್ನು ಅಲ್ಲಿನ ಸರ್ಕಾರ ಮಾಡಿಕೊಟ್ಟಿರುವುದನ್ನು ಉದಾಹರಣೆಯಾಗಿ ನೀಡುವ ಜೈರಾಜ್, ಇಲ್ಲಿಯೂ ಸರ್ಕಾರ ಅಂತಹ ರಿಯಾಯಿತಿ ಕೊಟ್ಟರೆ ಚಿತ್ರೋದ್ಯಮ ಕೂಡ ಚೇತರಿಸಿಕೊಳ್ಳಬಲ್ಲದೆನ್ನುತ್ತಾರೆ. ಮಲ್ಟಿಪ್ಲೆಕ್ಸ್‌ಗಳ ಕಾರ್ಪೊರೇಟ್‌ ಸಾಂಸ್ಥಿಕ ಸ್ವರೂಪಕ್ಕೆ ಇಂತಹ ಹೊಡೆತಗಳನ್ನು ತಡೆದುಕೊಳ್ಳುವ ಚೈತನ್ಯ ಇರಬಹುದು, ಏಕಪರದೆ ಚಿತ್ರಗಳ ಮಾಲೀಕರಿಗೆ ಇಲ್ಲ ಎನ್ನುವುದು ಅವರ ವಾದ.

ಕೋವಿಡ್ ಪತ್ತೆ ಪ್ರಮಾಣ ಶೇ 1ಕ್ಕಿಂತ ಕಡಿಮೆ ಇರುವೆಡೆ ಚಿತ್ರಮಂದಿರಗಳಲ್ಲಿ ಶೇ 100 ಸೀಟುಗಳನ್ನು ಭರ್ತಿ ಮಾಡಬಹುದು ಎಂದು ಸರ್ಕಾರ ಆದೇಶಿಸಿರುವುದಕ್ಕೆ ನಿರ್ಮಾಪಕ ಸಂಘದ ಅಧ್ಯಕ್ಷ ಡಿ.ಕೆ. ರಾಮಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ಅವರೂ ‘ಸಲಗ’, ‘ಕೋಟಿಗೊಬ್ಬ3’ ಚಿತ್ರಗಳ ಟಾನಿಕ್‌ನ ನಿರೀಕ್ಷೆಯಲ್ಲೇ ಇದ್ದಾರೆ.

‘ಟಿ.ವಿ. ಚಾನೆಲ್‌ಗಳು, ಒಟಿಟಿಗಳಿಗೆ ಪ್ರೇಕ್ಷಕರ ಕಣ್ಣುಗಳು ಹೊಂದಿಕೊಂಡಿರುವ ಹೊತ್ತಿದು. ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವುದು ಕಷ್ಟ. ಆದರೂ ದಸರಾ ಸಂದರ್ಭ ಹಬ್ಬದ ವಾತಾವರಣ ಮೂಡಿಸಿದೆ. ಇಂತಹ ಸಂದರ್ಭಗಳು ಸೃಷ್ಟಿಯಾದರೆ ಮಾತ್ರ ಮನರಂಜನಾ ಉದ್ಯಮ ಚೇತರಿಸಿಕೊಳ್ಳಲು ಸಾಧ್ಯ’ ಎನ್ನುತ್ತಾರೆ ರಾಮಕೃಷ್ಣ.

ಕೋವಿಡ್‌ ನಂತರ ಚಿತ್ರ ನಿರ್ಮಾಣದಲ್ಲಿ ಏನೆಲ್ಲ ಬದಲಾವಣೆಗಳ್ನು ನಿರ್ಮಾಪಕರು ತರಬಹುದು ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ: ‘ಚಿತ್ರ ನಿರ್ಮಾಣದ ಬಜೆಟ್‌ ಅನ್ನು ಶೇ 10–20ರಷ್ಟು ಕಡಿಮೆ ಮಾಡಲೇಬೇಕಿದೆ. ಕಲಾವಿದರು ಸಂಕಷ್ಟದ ಈ ಹೊತ್ತಿನಲ್ಲಿ ಸಂಭಾವನೆಯನ್ನು ತಗ್ಗಿಸಿಕೊಂಡು ಸಹಕರಿಸಬೇಕು. ದೊಡ್ಡ ನಟ–ನಟಿಯರು, ಪೋಷಕ ನಟ–ನಟಿಯರು ಕ್ಯಾರವಾನ್‌ಗಳು, ಬಾಡಿಗಾರ್ಡ್‌ಗಳನ್ನು ಬಯಸುತ್ತಾರೆ. ಇವೆಲ್ಲವೂ ನಿರ್ಮಾಪಕರಿಗೆ ಹೆಚ್ಚುವರಿ ವೆಚ್ಚದಂತೆ ಇಂತಹ ಸಂದರ್ಭದಲ್ಲಿ ಕಾಣುತ್ತದೆ. ಇವನ್ನೆಲ್ಲ ಕಡಿತಗೊಳಿಸಿ, ಚಿತ್ರೋದ್ಯಮ ಚೇತರಿಸಿಕೊಳ್ಳುವಂತೆ ಮಾಡಬೇಕು. ಪರಿಸ್ಥಿತಿ ಮೊದಲಿನಂತೆ ಆದಮೇಲೆ ನಟ–ನಟಿಯರು ತಮ್ಮ ಇಷ್ಟದಂತೆಯೇ ಈ ಬೇಡಿಕೆಗಳನ್ನು ಮತ್ತೆ ಮುಂದಿಡಬಹುದು. ಚಿತ್ರಮಂದಿರಗಳ ಮಾಲೀಕರು ಬಾಡಿಗೆಯನ್ನು ಪ್ರದರ್ಶನದ ಗಳಿಕೆಯ
ಪ್ರತಿಶತದ ಆಧಾರದ ಮೇಲೆ ನಿಗದಿಗೊಳಿಸಬೇಕು. ಈ ಎಲ್ಲ ವಿಷಯಗಳ ಕುರಿತು ನಿರ್ಮಾಪಕರೆಲ್ಲ ಸೇರಿ ಚರ್ಚಿಸಲಿದ್ದೇವೆ. ದೊಡ್ಡ ನಟರ ಸಿನಿಮಾಗಳು ಪ್ರೇಕ್ಷಕರನ್ನು ಮರಳಿ ಚಿತ್ರಮಂದಿರಕ್ಕೆ ಒಂದಿಷ್ಟು ಕಾಲ ಎಳೆದು ತಂದರಷ್ಟೆ ಮತ್ತೆ ಚಿತ್ರೋದ್ಯಮ ಹಳಿಗೆ ಮರಳಬಲ್ಲದು’ ಎನ್ನುವುದು ರಾಮಕೃಷ್ಣ ಅವರ ನಂಬಿಕೆ.

-ಜಾಕ್ ಮಂಜು
-ಜಾಕ್ ಮಂಜು

‘ವಿಕ್ರಾಂತ್ ರೋಣ’ ನಿರ್ಮಾಪಕ ಜಾಕ್ ಮಂಜು ಈ ಸಿನಿಮಾ ಮೇಲೆ ದೊಡ್ಡ ಮೊತ್ತವನ್ನು ಹೂಡಿದವರು. ಚಿತ್ರೋದ್ಯಮದಲ್ಲಿ ಹಲವು ವರ್ಷಗಳಿಂದ ತೊಡಗಿರುವ ಅವರು ಇಡೀ ವ್ಯವಸ್ಥೆಯನ್ನು ತಮ್ಮದೇ ದೃಷ್ಟಿಕೋನದಲ್ಲಿ ವಿಶ್ಲೇಷಣೆ ಮಾಡುತ್ತಾರೆ.

‘ಮನರಂಜನೆ ಬಹಳ ಮುಖ್ಯ. ಹಾಗೆಂದು ಚಿತ್ರೋದ್ಯಮ ಎಲ್ಲಿ ಚಿಕ್ಕದಾಗಿಬಿಡುವುದೋ ಎಂಬ ಭಯವೂ ಇದೆ. ಮಕ್ಕಳು, ಗರ್ಭಿಣಿಯರನ್ನು ಚಿತ್ರಮಂದಿರಗಳಿಗೆ ಬಿಡೊಲ್ಲ ಅಂತಾರೆ. ಹಾಗಿದ್ದಮೇಲೆ ಮನೆಯಲ್ಲೇ ಮಕ್ಕಳನ್ನು ಬಿಟ್ಟು ಎಷ್ಟೋ ಸಂಸಾರಸ್ಥರು ಸಿನಿಮಾ ನೋಡಲು ಬರೊಲ್ಲ.’

ನಮ್ಮ ರಾಜ್ಯದಲ್ಲಿ ಸರ್ಕಾರ, ಚಿತ್ರೋದ್ಯಮಕ್ಕೆ ಸಂಬಂಧಿಸಿದ ಸಂಘ–ಸಂಸ್ಥೆಗಳೆಲ್ಲ ದೊಡ್ಡ ಹೆಜ್ಜೆಗಳನ್ನು ಇಡಲೇ ಇಲ್ಲ. ಮಲಯಾಳ ಚಿತ್ರರಂಗ ಹದಿನೈದು ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಸಮನಾಗಿ ಇದ್ದಂತೆ ಇತ್ತು. ಈಗ ಅದು ಸಾಕಷ್ಟು ಮುಂದಕ್ಕೆ ಹೋಗಿದೆ. ಅಲ್ಲಿನ ಸರ್ಕಾರದಲ್ಲಿ ಸಿನಿಮಾಗೇ ಪ್ರತ್ಯೇಕ ಖಾತೆ ಇದೆ. ಹಿಂದೆ ಆಂಧ್ರದವರು ಹೊಸ ಸಾಧ್ಯತೆಗಳನ್ನು ಹುಡುಕುವುದರಲ್ಲಿ ಮಾದರಿಗಳನ್ನು ಸೃಷ್ಟಿಸಿದ್ದರು. ಅಲ್ಲಿನ ‘ಮಾ’ ಎಂಬ ಟಿ.ವಿ. ಚಾನೆಲ್‌ಗೆ ಅನೇಕರು ಚಿತ್ರಗಳ ಹಕ್ಕುಗಳನ್ನು ಮಾರಿಕೊಂಡರು. ಆ ಚಾನೆಲ್ ಉದ್ಧಾರವಾಯಿತು. ಆಮೇಲೆ ಅದನ್ನು ಸ್ಟಾರ್ ಸಮೂಹ ಖರೀದಿಸಿತು. ಇದರಿಂದ ಆ ಚಾನೆಲ್‌ನವರಿಗೆ ಲಾಭವಾಯಿತು. ಅದಕ್ಕೆ ಹಕ್ಕುಗಳನ್ನು ಮಾರಿದ ನಮ್ಮ ಚಿತ್ರ ನಿರ್ಮಾಪಕರು ಮೊದಲಿನ ಸ್ಥಿತಿಯಲ್ಲೇ ಉಳಿದರು. ‘ಆಹಾ’ ಎಂಬ ಇನ್ನೊಂದು ಚಾನೆಲ್ ಈಗ ಇದೇ ಕೆಲಸವನ್ನು ಮಾಡುತ್ತಿದೆ. ಕನ್ನಡದಲ್ಲಿ ಈ ರೀತಿಯ ಕನ್ನಡತನವನ್ನು ಪೋಷಿಸುವಂಥ ಚಾನೆಲ್‌ಗಳಾಗಲೀ, ಒಟಿಟಿ ವೇದಿಕೆಗಳಾಗಲೀ ಇಲ್ಲ. ಅದು ದೊಡ್ಡಮಟ್ಟದಲ್ಲಿ ಆಗಬೇಕು. ಸರ್ಕಾರವೇ ಇಂತಹ ವೇದಿಕೆಗಳನ್ನು ಸೃಷ್ಟಿಸಬಹುದು. ಸಬ್ಸಿಡಿ ಕೊಡುವುದನ್ನು ನಿಲ್ಲಿಸಿ, ಇಂತಹ ಕೆಲಸಗಳನ್ನು ಮಾಡಿದರೆ ನಾವು ಸಾಂಸ್ಥಿಕವಾಗಿ ಗಟ್ಟಿಯಾಗುತ್ತೇವೆ. ಆಗ ಕಾರ್ಪೊರೇಟ್‌ ಜನರೂ ನಮ್ಮತ್ತ ನೋಡುತ್ತಾರೆ. ಕೆಜಿಎಫ್, ವಿಕ್ರಾಂತ್ ರೋಣ, ಕಬ್ಜ ಇವಿಷ್ಟೇ ಚಿತ್ರಗಳಲ್ಲ. ಸಣ್ಣ ಬಜೆಟ್‌ನಲ್ಲಿ ಗಟ್ಟಿ ವಸ್ತುಗಳನ್ನು ಇಟ್ಟುಕೊಂಡು ತಯಾರಾಗುವ ಸಿನಿಮಾಗಳನ್ನೂ ನೋಡುವ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವಷ್ಟು ದೊಡ್ಡ ಪ್ರಯತ್ನ ನಮ್ಮಲ್ಲಿ ಆಗಬೇಕು. ಚಿತ್ರರಂಗದವರು ರಾಜಕೀಯ ಮೊಗಸಾಲೆ ಪ್ರವೇಶಿಸಿದರೂ ಇಂತಹ ಕೆಲಸಗಳು ಆಗದಿರುವುದು ವಿಷಾದದ ಸಂಗತಿ.

-ಎಚ್. ರಾಜು
-ಎಚ್. ರಾಜು

‘ಅಮೆಜಾನ್, ನೆಟ್‌ಫ್ಲಿಕ್ಸ್ ರೀತಿಯ ವೇದಿಕೆಗಳು ಕನ್ನಡದವರನ್ನು ಮೂಸಿಯೂ ನೋಡುತ್ತಿಲ್ಲ. ಇದನ್ನು ತಪ್ಪಿಸಬೇಕು. ಮೈಸೂರು ವಿಶ್ವವಿದ್ಯಾಲಯದಲ್ಲಿ ಸಿನಿಮಾ ವ್ಯಾಕರಣ ಕಲಿಸುವ ಕೋರ್ಸ್ ಇದೆ. ಅಲ್ಲಿ ಕಲಿತವರು ಮುಂದೆ ನಮ್ಮ ನೆಲದಲ್ಲೇ ಕೆಲಸ ಮಾಡಬೇಕೆಂದರೆ ಇಂತಹ ಸೃಜನಶೀಲ ವೇದಿಕೆಗಳನ್ನು ಸೃಷ್ಟಿಸಬೇಕಲ್ಲವೇ’ ಎಂದು ಜಾಕ್ ಮಂಜು ಗಂಭೀರ ಪ್ರಶ್ನೆಯನ್ನು ಮುಂದಿಟ್ಟರು.

ಕಾಸ್ಟ್ಯೂಮರ್ ಆಗಿ ಕೆಲಸ ಮಾಡುವ ಬೆಂಗಳೂರಿನ ಎಚ್. ರಾಜು ಕೋವಿಡ್ ಸಂಕಷ್ಟ ಕಾಲದಲ್ಲಿ ಮಾಸ್ಕ್ ಹೊಲಿದುಕೊಟ್ಟು, ಬಟ್ಟೆಗಳನ್ನು ಆಲ್ಟರ್‌ ಮಾಡಿಕೊಟ್ಟು ಬದುಕು ನಡೆಸಿದ್ದರು. ಈಗ ಚಿತ್ರಮಂದಿರಗಳು ಹೌಸ್‌ಫುಲ್ ಆಗಲಿವೆ ಎಂಬ ಸುದ್ದಿ ಅವರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಕೋವಿಡ್ ಎಂಬ ‘ಸ್ಪೆಷಲ್ ಕ್ಲಾಸ್’
ಹಿಂದೆ ಎಷ್ಟೋ ಸಾಂಕ್ರಾಮಿಕ ರೋಗಗಳು ಬಂದುಹೋಗಿವೆ. ಬದುಕೇ ಮನುಷ್ಯನಿಗೆ ಪಾಠ ಕಲಿಸುತ್ತಿರುತ್ತದೆ. ಕೋವಿಡ್ ಎನ್ನುವುದು ‘ಸ್ಪೆಷಲ್ ಕ್ಲಾಸ್’ ಇದ್ದಂತೆ. ಎರಡು ವರ್ಷ ಆರೋಗ್ಯ ಮುಖ್ಯ ಎಂದು ಕುಟುಂಬದವರ ಜತೆಗೇ ಜನರು ಇದ್ದರು. ಈಗ ಮತ್ತೆ ಸುಖಲೋಲುಪರಾಗುತ್ತಿಲ್ಲವೇ? ಚಿತ್ರೋದ್ಯಮವಷ್ಟೇ ಅಲ್ಲ, ಸಣ್ಣ ಸಣ್ಣ ಉದ್ದಿಮೆಗಳೂ ಹೊಡೆತ ತಿಂದಿವೆ. ಎಲ್ಲ ಸರಿಯಾಗಿದ್ದಿದ್ದರೆ ನಾನು ನಿರ್ದೇಶಿಸುತ್ತಿರುವ ‘ಗಾಳಿಪಟ2’ ತೆರೆಕಂಡು ವರ್ಷವಾಗಿರುತ್ತಿತ್ತು. ಈಗ ಅಂತಿಮ ಹಂತದ ಕೆಲಸದಲ್ಲಿದ್ದೇನೆ. ಇಂತಹ ಬದಲಾವಣೆಗಳು ಹಲವು ಉದ್ಯಮಗಳ ಮೇಲೆ ಆಗಿದೆ.

–ಯೋಗರಾಜ್ ಭಟ್, ಚಿತ್ರ ನಿರ್ದೇಶಕ
–ಯೋಗರಾಜ್ ಭಟ್, ಚಿತ್ರ ನಿರ್ದೇಶಕ

***
ಕೋವಿಡ್ ಕಾಲವೇ ‘ವರ’ವಾದದ್ದು...

ಕಳೆದ ವರ್ಷ ನವೆಂಬರ್‌ನಲ್ಲಿ ‘ಆ್ಯಕ್ಟ್–1978’ ಚಿತ್ರವನ್ನು ರಿಸ್ಕ್ ತೆಗೆದುಕೊಂಡು ಬಿಡುಗಡೆ ಮಾಡಿದೆವು. ಆಗ ಚಿತ್ರಮಂದಿರಗಳಲ್ಲಿ ಶೇ 50 ಸೀಟುಗಳ ಭರ್ತಿಗಷ್ಟೆ ಅವಕಾಶವಿತ್ತು. ಜನರು ಸಿನಿಮಾ ಮೆಚ್ಚಿ, ಬಾಯಿಂದ ಬಾಯಿಗೆ ವಿಮರ್ಶೆ ಹರಿದು, ಚಿತ್ರಮಂದಿರಗಳಿಗೆ ಬಂದದ್ದು ನಿಜ. ಏಳೆಂಟು ಪರದೆಗಳಲ್ಲಿ 75 ದಿನಗಳವರೆಗೆ ಸಿನಿಮಾ ಓಡಿತು. ಒಂದುವೇಳೆ ಆ ಸಂದರ್ಭದಲ್ಲಿ ಶೇ 100ರಷ್ಟು ಸೀಟುಗಳು ಭರ್ತಿಯಾಗಿದ್ದಿದ್ದರೆ ನಮಗೆ ಇನ್ನೂ ಒಳ್ಳೆಯದಾಗುತ್ತಿತ್ತು. ದೊಡ್ಡ ಚಿತ್ರಗಳ ಪ್ರಚಾರದ ಭರಾಟೆ ಇಲ್ಲದ ಸಂದರ್ಭ ನಮ್ಮ ಚಿತ್ರಕ್ಕೆ ಅನುಕೂಲಕರವಾಗಿ ಒದಗಿಬಂತು.

-ಮನ್ಸೋರೆ, ಆ್ಯಕ್ಟ್–1978 ಚಿತ್ರದ ನಿರ್ದೇಶಕ
-ಮನ್ಸೋರೆ, ಆ್ಯಕ್ಟ್–1978 ಚಿತ್ರದ ನಿರ್ದೇಶಕ

**
ಬರೆ ಹಾಕಿದ ಸಾಂಕ್ರಾಮಿಕ

ಹದಿನೆಂಟು ವರ್ಷಗಳಿಂದ ಚಿತ್ರರಂಗದಲ್ಲಿ ಲೈಟಿಂಗ್ ಯೂನಿಟ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ನನ್ನಲ್ಲಿ 20 ಮಂದಿ ಕೆಲಸ ಮಾಡುತ್ತಾರೆ. ಕೋವಿಡ್ ಬಂದಮೇಲೆ 8–10 ಲಕ್ಷ ರೂಪಾಯಿ ಬಾಕಿ ಬರಬೇಕಾದ ಹಣ ಹಾಗೆಯೇ ಉಳಿಯಿತು. ಬೆಂಗಳೂರಿನ ಲಗ್ಗೆರೆಯಲ್ಲಿದ್ದ ಬಾಡಿಗೆ ಮನೆಗೆ ಹಣ ಕಟ್ಟಲೂ ಕಷ್ಟವಾಯಿತು. ಹೆಂಡತಿ–ಮಗುವನ್ನು ಸ್ವಂತ ಊರು ಹಾಸನಕ್ಕೆ ಕಳುಹಿಸಿ, ನಾನು ಯೂನಿಟ್ ಕಚೇರಿಯಲ್ಲೇ ಮಲಗತೊಡಗಿದೆ. ಕೋವಿಡ್ ಮೊದಲ ಅಲೆ ಬಂದಾಗ ಕೆಲವರು ರೇಷನ್ ಕೊಡಿಸಿ, ಸಹಾಯ ಮಾಡಿದರು. ಎರಡನೇ ಅಲೆ ಕಂಗಾಲಾಗಿಸಿತು. ನಟ ಯಶ್ ಅವರು ನಮ್ಮ ಬ್ಯಾಂಕ್ ಖಾತೆಗೆ ಐದು ಸಾವಿರ ರೂಪಾಯಿ ಹಾಕಿದ ದಿನ ರೇಷನ್ ತಂದೆವು. ಆವತ್ತು ನಮಗೆಲ್ಲ ಪರಮಾನಂದವಾಗಿತ್ತು. ಈಗ ಪರಿಸ್ಥಿತಿ ಸುಧಾರಿಸುವಂತೆ ಕಾಣುತ್ತಿದೆ. ಎಲ್ಲ ಸರಿಹೋದರೆ ಹೆಂಡತಿ–ಮಗುವನ್ನು ವಾಪಸ್ ಕರೆಯುವೆ.

-ಪ್ರದೀಪ್ ಕುಮಾರ್, ರಾಯಲ್ ಸಿನಿ ಲೈಟ್ಸ್ ಯೂನಿಟ್ ಮಾಲೀಕ
-ಪ್ರದೀಪ್ ಕುಮಾರ್, ರಾಯಲ್ ಸಿನಿ ಲೈಟ್ಸ್ ಯೂನಿಟ್ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT