ಶಿವಮೊಗ್ಗ: ಇಂದು ದೇಶದಲ್ಲಿ ವಿತರಣೆ ಮಾಡುತ್ತಿರುವ ಆಧಾರ್ ಕಾರ್ಡ್ ತಮ್ಮ ಕಲ್ಪನೆ. ಗ್ರಾಮ ಪಂಚಾಯ್ತಿಗಳಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆ ಸೃಷ್ಟಿಸಲು ಯೋಜನೆ ರೂಪಿಸಿದ್ದು ಕಾಂಗ್ರೆಸ್. ಇದರಿಂದಾಗಿ ಇಂದು ದೇಶದಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಯುವ ಜನರಿಗೆ ಉದ್ಯೋಗ ಸಿಕ್ಕಿದೆ ಎಂದು ಎಐಸಿಸಿ ಸದಸ್ಯ ಹಾಗೂ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಮಂಜುನಾಥ ಭಂಡಾರಿ ಹೇಳಿದರು.
ಭದ್ರಾವತಿ ತಾಲ್ಲೂಕಿನ ಕಲ್ಲಿಹಾಳ್ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯ್ತಿ .ವ್ಯಾಪ್ತಿಯ ಕಾಂಗ್ರೆಸ್ ಸಭೆಯಲ್ಲಿ ಅವರು
ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣ, ಮಹಿಳಾ ಮೀಸಲಾತಿ, ಆಹಾರ ಭದ್ರತೆ, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಮುಂತಾದ ಕಾಯ್ದೆಗಳ ಮೂಲಕ ಸರ್ವಜನರಿಗೂ ಒಳ್ಳೆಯದನ್ನು ಮಾಡಿದೆ. ಉದ್ಯೋಗಖಾತ್ರಿ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ನಂತಹ ಯೋಜನೆಗಳಿಂದ ಗ್ರಾಮೀಣರಿಗೆ ಉದ್ಯೋಗ- ಆರೋಗ್ಯ ಸಿಕ್ಕಿದೆ. ಇಂದಿರಾ ಆವಾಸ್, ರಾಜೀವ್ಗಾಂಧಿ ವಸತಿ ಯೋಜನೆಗಳಿಂದ ಗುಡಿಸಲು ಮುಕ್ತ ರಾಷ್ಟ್ರ ಮಾಡಲು ಪಕ್ಷ ಬದ್ಧತೆ ಪ್ರದರ್ಶಿಸಿದೆ ಎಂದರು.
ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಬಡವರಿಗೆ ಅನ್ನಭಾಗ್ಯ, ರೈತರ ಸಾಲ ಮನ್ನಾ ಮತ್ತಿತರ ಯೋಜನೆಗಳಿಂದ ಎಲ್ಲಾ ವರ್ಗದವರಿಗೂ ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ಎಲ್.ಷಡಾಕ್ಷರಿ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ಸದಸ್ಯ ಟಿ. ಕರಿಯಣ್ಣ, ಉದ್ಯಮಿ ನಾಗರಾಜ್ ಶೆಟ್ಟಿ, ಪ್ರಮುಖರಾದ ಎಸ್.ಪಿ. ದಿನೇಶ್, ರವಿಕುಮಾರ್, ಎಸ್.ಟಿ. ಹಾಲಪ್ಪ, ಎಚ್.ಸಿ. ಯೋಗೀಶ್, ಆರ್.ವಿಜಯಕುಮಾರ್, ಮಲ್ಲಣ್ಣ ಉಪಸ್ಥಿತರಿದ್ದರು.