ನವದೆಹಲಿ: ದೇಶವು ವಿಶ್ವದ ನಿರಾಶ್ರಿತರ ರಾಜಧಾನಿಯಾಗುವುದು ಬೇಡ ಎಂದು ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರ ಸರ್ಕಾರ ಕಳಕಳಿ ವ್ಯಕ್ತಪಡಿಸಿದೆ.
ಗಡಿಯಲ್ಲಿ ಭದ್ರತಾ ಪಡೆಯು ತನ್ನ ಸಹ ದೇಶವಾಸಿಗಳನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಮ್ಯಾನ್ಮಾರ್ನಲ್ಲಿ ಕಿರುಕುಳದಿಂದ ತಪ್ಪಿಸಿಕೊಂಡವರು ಗಡಿಯಲ್ಲಿ ಮೆಣಸಿನ ಸ್ಪ್ರೇ ಹಾಗೂ ಸ್ಟನ್ ಗ್ರೆನೇಡ್ಗಳ ದಾಳಿಯಿಂದ ತೊಂದರೆಗೆ ಒಳಗಾಗಿರುವುದಾಗಿ ರೊಹಿಂಗ್ಯಾ ನಿರಾಶ್ರಿತರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಬುಧವಾರ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ.
‘ಬೇರೆ ಬೇರೆ ರಾಷ್ಟ್ರಗಳ ಜನರು ನಮ್ಮ ದೇಶಕ್ಕೆ ನುಗ್ಗುತ್ತಾರೆ. ಭಾರತವು ವಿಶ್ವದ ನಿರಾಶ್ರಿತರ ರಾಜಧಾನಿಯಾಗುವುದು ಬೇಡ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿದರು.
ಗಡಿ ಭಾಗದಿಂದ ಮರಳಿ ಕಳುಹಿಸುತ್ತಿರುವ ಕುರಿತು ನಿರಾಶ್ರಿತರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಲು ಸಮಯ ನೀಡುವಂತೆ ತುಷಾರ್ ಮೆಹ್ತಾ ಕೋರಿದರು.
'ರೊಹಿಂಗ್ಯಾ ನಿರಾಶ್ರಿತರು ಭಾರತದ ನಿರಾಶ್ರಿತರ ಶಿಬಿರಗಳಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ಶಾಲೆ ಅಥವಾ ಆಸ್ಪತ್ರೆಯಿಂದ ಈ ಜನರು ದೂರ ಉಳಿದಿದ್ದು, ಪರಿಸ್ಥಿತಿ ಅಮಾನವೀಯವಾಗಿದೆ’ ಎಂದು ಅಡ್ವೊಕೇಟ್ ಪ್ರಶಾಂತ್ ಭೂಷಣ್ ನಿರಾಶ್ರಿತರ ಪರ ವಾದ ಮಂಡಿಸಿದರು.
ರೊಹಿಂಗ್ಯಾ ನಿರಾಶ್ರಿತರ ವಿಚಾರವಾಗಿ ಸರ್ಕಾರ ಶ್ರೀಘ್ರವೇ ನಿರ್ಧಾರ ಕೈಗೊಳ್ಳಲಿದೆ ಎಂದು ತುಷಾರ್ ಮೆಹ್ತಾ ಹೇಳಿದರು.
ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 7ಕ್ಕೆ ನಿಗದಿಯಾಗಿದೆ. ಆವರೆಗೂ ಕೋರ್ಟ್ ತುಷಾರ್ ಮೆಹ್ತಾ ಅವರಿಗೆ ಪ್ರತಿಕ್ರಿಯೆ ನೀಡಲು ಸಮಯ ನೀಡಿದೆ.