ನವದೆಹಲಿ: ಜಿಎಸ್ಟಿ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ಇರುವ ಕಂಪನಿಗಳ ವಿರುದ್ಧ ದೂರು ನೀಡಲು ಇರುವ ಅರ್ಜಿ ನಮೂನೆಯನ್ನು ಇನ್ನಷ್ಟು ಸರಳಗೊಳಿಸಲು ಹಣಕಾಸು ಸಚಿವಾಲಯ ಮುಂದಾಗಿದೆ.
ಲೆಕ್ಕಪರಿಶೋಧಕರ ಸಹಾಯವಿಲ್ಲದೆ ಯಾರು ಬೇಕಾದರೂ ಭರ್ತಿ ಮಾಡಬಹುದಾದ ಗ್ರಾಹಕ ಸ್ನೇಹಿ ಮತ್ತು ಸರಳವಾಗಿರುವ ಅರ್ಜಿ ನಮೂನೆ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಜಿಎಸ್ಟಿಯಲ್ಲಿ ತೆರಿಗೆ ದರ ಕಡಿತ ಆಗಿರುವ ಲಾಭವನ್ನು ವರ್ಗಾಯಿಸುತ್ತಿಲ್ಲ ಎಂದು ಸ್ಥಾಯಿ ಸಮಿತಿ ಮತ್ತು ಪರಿಶೀಲನಾ ಸಮಿತಿ ಎದುರು 170 ದೂರುಗಳು ಬಂದಿವೆ.
ಒಂದು ಪುಟದ ಅರ್ಜಿ ನಮೂನೆಯಲ್ಲಿ 44 ಕಾಲಂಗಳಿವೆ. ಅದರಲ್ಲಿ ಅರ್ಧದಷ್ಟು ಕಾಲಂಗಳನ್ನು ಕಡ್ಡಾಯವಾಗಿ ಭರ್ತಿ ಮಾಡಲೇಬೇಕು. ಇದನ್ನು ಸರಳಗೊಳಿಸುವಂತೆ ಕೋರಿ ಸ್ಥಾಯಿ ಸಮಿತಿ ಎದುರು ಮನವಿ ಸಲ್ಲಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅರ್ಜಿ ನಮೂನೆಯಲ್ಲಿ ಜಿಎಸ್ಟಿಗೂ ಮುನ್ನ ಒಂದು ವಸ್ತುವಿಗೆ ಇದ್ದ ನೈಜ ಬೆಲೆ ಮತ್ತು ಜಿಎಸ್ಟಿ ನಂತರ ಅದರ ಬೆಲೆಯನ್ನು ನಮೂದಿಸಬೇಕು. ಅಂತೆಯೇ ಜಿಎಸ್ಟಿಗೂ ಮುನ್ನ ಇದ್ದ ತೆರಿಗೆ ಮತ್ತು ಜಿಎಸ್ಟಿ ನಂತರದ ತೆರಿಗೆ ದರವನ್ನೂ ನಮೂದಿಸಬೇಕು.
ಗ್ರಾಹಕರು ನೀಡುವ ದೂರಿನ ಅರ್ಜಿಯು ವಿವಿಧ ಹಂತಗಳನ್ನು ದಾಟಿ ಸ್ಥಾಯಿ ಸಮಿತಿಗೆ ಬರುತ್ತದೆ. ಅರ್ಜಿ ಸರಿಯಾಗಿದ್ದಲ್ಲಿ ಮಾತ್ರವೇ ಸುರಕ್ಷತಾ ಮಹಾ ನಿರ್ದೇಶಕರು (ಡಿಜಿಎಸ್) ಆ ಬಗ್ಗೆ ತನಿಖೆ ಕೈಗೊಳ್ಳುತ್ತಾರೆ.
ಡಿಜಿಎಸ್ ಸಲ್ಲಿಸುವ ವರದಿಯ ಆಧಾರದ ಮೇಲೆ ಲಾಭಕೋರತನ ತಡೆ ಪ್ರಾಧಿಕಾರ ಕ್ರಮ ಕೈಗೊಳ್ಳುತ್ತದೆ. ಅದು ದಂಡದ ರೂಪದಲ್ಲಿ ಆಗಿರಬಹುದು ಅಥವಾ ಕಂಪನಿಯ ನೋಂದಣಿ ರದ್ದುಪಡಿಸುವ ಸಾಧ್ಯತೆಯೂ ಇರುತ್ತದೆ.