ಕೆ.ಆರ್.ನಗರ: ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಯದುಗಿರೀಶ್ ಒತ್ತಾಯಿಸಿದರು.
ಮಿನಿ ವಿಧಾನಸೌಧ ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಳೆ ಪಿಂಚಣಿ ಯೋಜನೆ ಅನುಷ್ಠಾನ ಗೊಳಿಸುವಂತೆ ಒತ್ತಾಯಿಸಿ ಗುರುವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ 2004ರಲ್ಲಿ ಅಭದ್ರತೆಯಿಂದ ಕೂಡಿದ ಎನ್.ಪಿ.ಎಸ್ ಜಾರಿಗೊಳಿಸಿತು. ಪಶ್ಚಿಮಬಂಗಾಳ ಹೊರತುಪಡಿಸಿ ಎಲ್ಲ ರಾಜ್ಯಗಳು ಅಳವಡಿಸಿಕೊಂಡವು. ಅದರಂತೆ ಕರ್ನಾಟಕ ಸರ್ಕಾರವೂ 2006ರಲ್ಲಿ ಅಳವಡಿಸಿಕೊಂಡಿದೆ ಎಂದರು.
2006ರ ನಂತರ ನೇಮಕಗೊಂಡ ನೌಕರರಿಗೆ ಈ ಯೋಜನೆಯಲ್ಲಿ ಕೆಲವು ನ್ಯೂನತೆ ಉಂಟಾಗಿವೆ. ಟ್ರಸ್ಟ್ ಮ್ಯಾನೇಜ್ಮೆಂಟ್ ನಿರ್ವಹಿಸುವ ಇದರ ಆರ್ಥಿಕ ನಿರ್ವಹಣೆಯಲ್ಲಿ ಯಾವುದೇ ಬದ್ಧತೆ ಇಲ್ಲದೇ ಅನಿಶ್ಚಿತ ಪಿಂಚಣಿ ಯೋಜನೆಯಾಗಿದೆ.
ಇದರಿಂದ ರಾಜ್ಯದ 1.80 ಲಕ್ಷ ಸರ್ಕಾರಿ ನೌಕರರು ಸೇವಾ ನಿವೃತ್ತಿ ಸಂದರ್ಭದಲ್ಲಿ ಪಿಂಚಣಿ ಮತ್ತು ಇತರೆ ಸವಲತ್ತುಗಳಿಂದ ವಂಚಿತರಾ ಗುತ್ತಾರೆ. ರಾಜ್ಯ ಸರ್ಕಾರ ಕೂಡಲೇ ಹಳೆ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಭಾಸ್ಕರ್, ಅರುಣ್, ಕೆ.ವಿ.ರಮೇಶ್, ಗುರುಪ್ರಸಾದ್, ಹರೀಶ್, ರಶ್ಮಿ, ಉದಯಶಂಕರ್, ಸೀತಮ್ಮ, ವಿಜಯಕುಮಾರ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.