ಹಾಫೀಜ್ ಇಬ್ರಾಹಿಂ ನಿಧನ
ನವದೆಹಲಿ, ಜ. 24– ಕೇಂದ್ರ ವಿದ್ಯುತ್ ಮತ್ತು ನೀರಾವರಿ ಖಾತೆಯ ಮಾಜಿ ಸಚಿವರೂ, ಪಂಜಾಬಿನ ಮಾಜಿ ರಾಜ್ಯಪಾಲರೂ ಆದ ಶ್ರೀ ಹಾಫೀಜ್ ಮಹಮದ್ ಇಬ್ರಾಹಿಂ ಅವರು ಇಂದು ಬೆಳಿಗ್ಗೆ ಇಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.
ವಿರೋಧ ಪಕ್ಷದೊಡನೆ ಭಾಷಾ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಚರ್ಚೆ
ಬೆಂಗಳೂರು, ಜ. 24– ಭಾಷಾ ಮಸೂದೆಗೆ ಸಂಬಂಧಿಸಿದಂತೆ ಮಂಡಿಸಲಾದ ನಿರ್ಣಯದ ಬಗ್ಗೆ ತಪ್ಪು ತಿಳುವಳಿಕೆ ಮೂಡಿರುವುದೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆಯೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.
ತಾವು ದೆಹಲಿಗೆ ಹೋದಾಗ ಈ ವಿಚಾರದಲ್ಲಿ ಚರ್ಚೆ ನಡೆಸಿ ಸ್ಪಷ್ಟನೆ ನೀಡುವುದಾಗಿ ಅವರು ವರದಿಗಾರರಿಗೆ ತಿಳಿಸಿದರು.
ರಾಜ್ಯದ ನಾನಾ ಭಾಗಗಳಲ್ಲಿ ಹಿಂದಿ ವಿರುದ್ಧ ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆ
ಬೆಂಗಳೂರು, ಜ.24– ಬೆಂಗಳೂರಿನಲ್ಲಿ ಹಿಂದಿ ವಿರುದ್ಧ ವಿದ್ಯಾರ್ಥಿಗಳ ಚಳವಳಿ ನಿಲ್ಲುತ್ತಿದ್ದಂತೆ ಈ ದಿನ ರಾಜ್ಯದ ನಾನಾ ಕಡೆ ಮುಖ್ಯವಾಗಿ ಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಹಿಂದಿ ವಿರುದ್ಧ ಕಾಲೇಜುಗಳಿಗೆ ಹಾಜರಾಗದೆ ಶಾಂತಿಯುತ ಮೆರವಣಿಗೆ ಮತ್ತು ಸಭೆಗಳನ್ನು ನಡೆಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ ವರದಿಗಳು ಬಂದಿವೆ.
ಮೈಸೂರಿನಲ್ಲಿ
ಮೈಸೂರು, ಜ. 24– ಅಖಿಲ ಭಾರತ ಶಿಕ್ಷಣ ಸಂಸ್ಥೆಯೊಂದರ ಹಿಂದಿ ನಾಮಫಲಕವನ್ನು ಕಿತ್ತೊಗೆದು, ಮಾನಸ ಗಂಗೋತ್ರಿಯಲ್ಲಿ ಕೆಲವು ಹಿಂದಿ ಪತ್ರಿಕೆಗಳನ್ನು ಸುಟ್ಟ ಪ್ರಕರಣಗಳನ್ನು ಬಿಟ್ಟರೆ ಇಂದು ಇಲ್ಲಿ ವಿದ್ಯಾರ್ಥಿಗಳ ಹಿಂದಿ ವಿರೋಧಿ ಮತಪ್ರದರ್ಶನ ಶಾಂತಿಯುತವಾಗಿತ್ತು.
ಎಸ್.ಎಂ. ಕೃಷ್ಣ ಅವರಿಗೆ ಪ್ರಚಂಡ ಜಯ
(ಪ್ರಜಾವಾಣಿ ಪ್ರತಿನಿಧಿಯಿಂದ)
ಮಂಡ್ಯ, ಜ. 24– ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಡೆದ ಉಪಚುನಾವಣೆಯಲ್ಲಿ ಪಿ.ಎಸ್.ಪಿ. ಅಭ್ಯರ್ಥಿ ಶ್ರೀ ಎಸ್.ಎಂ. ಕೃಷ್ಣ ಅವರು ಭಾರಿ ಬಹುಮತದಿಂದ ವಿಜಯ ಗಳಿಸಿದ್ದಾರೆ.