ಕನಕಪುರ: ರಾಮನಗರ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ಹೆದ್ದಾರಿ ರಸ್ತೆಯ ಹನುಮಂತನಗರದಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆ ಕಾರ್ಯ ನಡೆಸಲಾಗುತ್ತಿದೆ.
ಚುನಾವಣೆಗೆ ಯಾವುದೆ ಪಕ್ಷದ ಅಭ್ಯರ್ಥಿಗಳು ಇನ್ನು ನಾಮಪತ್ರ ಸಲ್ಲಿಸದ ಕಾರಣ ಕ್ಷೇತ್ರದಲ್ಲಿ ಚುನಾವಣಾ ಕಾರ್ಯ ಇನ್ನು ಚುರುಕುಗೊಂಡಿಲ್ಲ. ಆದರೂ ಚೆಕ್ಪೋಸ್ಟ್ನಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು ಅನುಮಾನಗೊಂಡ ವಾಹನಗಳ ತಪಾಸಣಾ ಕಾರ್ಯವನ್ನು ಆರಂಭಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯ ಎ.ಇ.ಇ. ಜಗದೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ದಯಾನಂದಸಾಗರ, ಪುಟ್ಟರಾಮಯ್ಯ, ಪೊಲೀಸ್ ವಸಂತ್ ಚೆಕ್ಪೋಸ್ಟ್ನಲ್ಲಿ ಶನಿವಾರ ಕರ್ತವ್ಯ ನಿರ್ವಹಿಸಿದರು.
ಚೆಕ್ಪೋಸ್ಟ್ನಲ್ಲಿ ಎರಡು ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಒಂದು ತಂಡದ ನಂತರ ಮತ್ತೊಂದು ತಂಡವು ಕಾರ್ಯ ನಿರ್ವಹಿಸಿ ರಸ್ತೆಯಲ್ಲಿ ಓಡಾಡುವ ವಾಹನಗಳ ಮೇಲೆ ಕಣ್ಗಾವಲು ಇರಿಸಿವೆ. ಇಲ್ಲಿಯವರೆಗೂ ಯಾವುದೆ ಅಕ್ರಮ ಪ್ರಕರಣಗಳು ಪತ್ತೆಯಾಗಿಲ್ಲವೆಂದು ಜಗದೀಶ್ ತಿಳಿಸಿದ್ದಾರೆ.