ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 9.37 ಲಕ್ಷ ಮತದಾರರು

ಮತದಾನ ವಿಧಾನದ ಮಾಹಿತಿ ಪತ್ರ ಮನೆಮನೆಗೆ ವಿತರಣೆ– ಶ್ರೀರಂಗಯ್ಯ ಹೇಳಿಕೆ
Last Updated 9 ಮೇ 2018, 9:26 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಿದ್ಯುನ್ಮಾನ ಮತಯಂತ್ರ, ಮತದಾನ ದೃಢೀಕರಣ ರಸೀತಿ ಯಂತ್ರ( ವಿವಿ ಪ್ಯಾಟ) ಬಳಸಿ ಮತದಾನ ಮಾಡುವ ವಿಧಾನ ಕುರಿತು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ‘ಮತದಾರರಿಗೆ ಮತದಾನ ಮಾಹಿತಿ’ ಪತ್ರವನ್ನು ಮನೆಮನೆಗೆ ಹಂಚಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಇಲ್ಲಿ ಮಂಗಳವಾರ ತಿಳಿಸಿದರು.

ಮಾಹಿತಿ ಪತ್ರದಲ್ಲಿ ಮತಚಲಾ ಯಿಸುವ ವಿಧಾನವನ್ನು ಚಿತ್ರಸಮೇತ ವಿವರಿಸಲಾಗಿದೆ. ಮತದಾನ ಖಾತರಿ ವಿಧಾನವನ್ನು ತಿಳಿಸಲಾಗಿದೆ. ಜಿಲ್ಲೆಯ ಐದೂ ಕ್ಷೇತ್ರಗಳಿಂದ 2.99 ಲಕ್ಷ ಕುಟುಂಬಗಳಿದ್ದು, ಎಲ್ಲ ಕುಟುಂಬಗಳಿಗೂ ತಲಾ ಒಂದು ಪತ್ರ ಹಂಚಲಾಗುತ್ತಿದೆ. ಇನ್ನು ಒಂದೆರಡು ದಿನದಲ್ಲಿ ಹಂಚುವ ಕೆಲಸ ಮುಗಿಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಐದೂ ಕ್ಷೇತ್ರಗಳಿಂದ 40 ಆಕ್ಸಿಲರಿ ಹಾಗೂ 1,170 ಮೂಲ ಮತಗಟ್ಟೆ ಒಳಗೊಂಡಂತೆ 1,210 ಮತಗಟ್ಟೆಗಳು ಇವೆ. ಏಪ್ರಿಲ್‌ 29ರಂದು ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 9,37,199 ಮತದಾರರು ಇದ್ದಾರೆ. ಈ ಪೈಕಿ 4,67,852 ಪುರುಷ ಹಾಗೂ 4,69,290 ಮಹಿಳಾ ಹಾಗೂ 58 ಇತರ ಮತದಾರರು ಇದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ 1,66,026, ಮೂಡಿಗೆರೆ– 1,70,250, ಚಿಕ್ಕಮಗಳೂರು– 2,16,230, ತರೀಕೆರೆ–1,82,853 ಹಾಗೂ ಕಡೂರಿನಲ್ಲಿ 2,01,840 ಮತದಾರರು ಇದ್ದಾರೆ. ಎಲ್ಲರಿಗೂ ಮತದಾರರ ಗುರುತಿನ ಚೀಟಿ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮತದಾರರಿಗೆ ಗುರುತಿನ ಕಿರು ಚೀಟಿ ವಿತರಣೆ ಮಾಡಲಾಗುತ್ತಿದೆ. ಈ ಚೀಟಿಯಲ್ಲಿ ಕ್ಷೇತ್ರ, ಭಾಗ, ಮತಗಟ್ಟೆ, ಮತದಾರನ ಹೆಸರು, ಕ್ರಮ ಸಂಖ್ಯೆ ಎಲ್ಲವೂ ನಮೂದಾಗಿರುತ್ತದೆ. ಈ ಚೀಟಿ ತೋರಿಸಿಯೂ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈವರೆಗೆ ಒಟ್ಟು 5,82,417 ಈ ಚೀಟಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

1,210 ಮತಗಟ್ಟೆಗಳಿಂದ ಒಟ್ಟು 6,685 ಸಿಬ್ಬಂದಿ ನಿಯೋಜಿಸಲಾಗಿದೆ. ಅಂಚೆ ಮತದಾನಕ್ಕೆ ಕೋರಿ 8,492 ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ 1,889 ಮಂದಿ ಈವರೆಗೆ ಅಂಚೆ ಮತದಾನ ಮಾಡಿದ್ದಾರೆ. ಅಂಚೆ ಮತ ಹಾಕುವುದಕ್ಕೆ ಇನ್ನೂ ಕಾಲಾವಕಾಶ ಇದೆ ಎಂದು ಪ್ರತಿಕ್ರಿಯಿಸಿದರು.

ಐದು ಮಾದರಿ ಮತಗಟ್ಟೆ ಸ್ಥಾಪಿಸಲಾಗಿದೆ. ನಗರಸಭ ವ್ಯಾಪ್ತಿಯಲ್ಲಿ 10 ಮತಗಟ್ಟೆ, ಗ್ರಾಮಾಂತರದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಎರಡು ಒಟ್ಟು 20 ಪಿಂಕ್‌ ಮತಗಟ್ಟೆ (ಮಹಿಳಾ ಮತಗಟ್ಟೆ) ಸ್ಥಾಪಿಸಲಾಗಿದೆ ಎಂದರು.

ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಕಂಟೋಲ್‌ ಯುನಿಟ್‌–1545, ಬ್ಯಾಲೆಟ್‌ ಯುನಿಟ್‌– 1,959 ಹಾಗೂ ವಿವಿಪಾಟ್‌–1,676 ಬಳಸಲಾಗುತ್ತಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಒಟ್ಟು 18 ಅಭ್ಯರ್ಥಿಗಳು ಇದ್ದು, ಪ್ರತಿ ಮತಗಟ್ಟೆಯಲ್ಲಿ ತಲಾ ಎರಡು ಬ್ಯಾಲಟ್‌ ಯುನಿಟ್‌ಗಳನ್ನು ವ್ಯವಸ್ಥೆ ಮಾಡಲಾಗುವುದು. ಒಂದು ಬ್ಯಾಲಟ್‌ ಯೂನಿಟ್‌ನಲ್ಲಿ ಮೇಲಿನ ಯಾರೂ ಅಲ್ಲ (ನೋಟಾ) ಒಳಗೊಂಡಂತೆ 16 ಅಭ್ಯರ್ಥಿಗಳ ದಾಖಲಿಸಲು ಅವಕಾಶ ಇದೆ. ಹೀಗಾಗಿ, ಈ ಕ್ಷೇತ್ರದಲ್ಲಿ ಎರಡು ಬ್ಯಾಲಟ್‌ ಯುನಿಟ್‌ಗಳನ್ನು ಬಳಸಲಾಗುತ್ತಿದೆ’ ಎಂದು ತಿಳಿಸಿದರು.

ಆನ್‌ಲೈನ್‌ನಲ್ಲಿ ಸುವಿಧಾದಡಿ 422 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 400 ವಿಲೇವಾರಿ ಮಾಡಲಾಗಿದೆ. 50 ದೂರುಗಳು, ಸಮಾಧಾನದಡಿ ಸಲ್ಲಿಕೆ ಯಾಗಿದ್ದ 14 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.

ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಆರೋಗ್ಯ ಗಮನದಲ್ಲಿಟ್ಟುಕೊಂಡು ಪ್ರತಿ ಮತಗಟ್ಟೆಗೆ ಒಂದು ಮೆಡಿಕಲ್‌ ಕಿಟ್‌ ವಿತರಿಸಲಾಗುತ್ತಿದೆ. ಕಿಟ್‌ನಲ್ಲಿ ಜ್ವರ, ನೋವು ನಿವಾರಕ ಔಷಧಗಳು ಇರುತ್ತವೆ ಎಂದರು.

ಕೈದಿಗಳಿಗೆ ಮತದಾನಕ್ಕೆ ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಈವರೆಗೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಉತ್ತರಿಸಿದರು.

ಅಂಗವಿಕಲರಿಗೆ ಗಾಲಿಕುರ್ಚಿ ಸೌಲಭ್ಯ

ಅಂಗವಿಕಲರು ಮತಕೇಂದ್ರಕ್ಕೆ ತೆರಳಲು ಅನುಕೂಲ ಕಲ್ಪಿಸಲು ಗಾಲಿ ಕುರ್ಚಿ ಸೌಲಭ್ಯ ಕಲ್ಪಿಸಲಾಗಿದೆ. ಐದೂ ಕ್ಷೇತ್ರಗಳಿಂದ 475 ಗಾಲಿ ಕುರ್ಚಿಗಳ ಅಗತ್ಯ ಇದೆ. 171 ಲಭ್ಯ ಇವೆ. ಉಳಿಕೆ 304 ಗಾಲಿ ಕುರ್ಚಿಗಳ ಖರೀದಿಗೆ ಸಂಬಂಧಪಟ್ಟ ನಗರ, ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಅಂಧ ಮತದಾರರಿಗೆ ಅನುಕೂಲವಾಗುವಂತೆ ಮತಯಂತ್ರದಲ್ಲಿ ಬ್ರೈಲ್‌ ಲಿಪಿಯನ್ನು ಅಳವಡಿಸಲಾಗಿದೆ ಎಂದು ಶ್ರೀರಂಗಯ್ಯ ಮಾಹಿತಿ ನೀಡಿದರು.

ಏನೇನು ನಿರ್ಬಂಧಗಳು

ಇದೇ 10ರಂದು ಸಂಜೆ 6 ಗಂಟೆಯಿಂದ 12ರಂದು ಮಧ್ಯರಾತ್ರಿವರೆಗೆ ನಿಷೇಧಾಜ್ಞೆ (144ನೇ ಸೆಕ್ಷನ್‌) ಜಾರಿಯಲ್ಲಿ ಇರುತ್ತದೆ.
10 ಜನರು ಗುಂಪು ಸೇರುವಂತಿಲ್ಲ
 ಮತದಾನಕ್ಕೆ 48 ಗಂಟೆ ಮುಂಚೆ ಬಹಿರಂಗ ಸಭೆ, ಸಮಾರಂಭ, ಭಾಷಣ ನಡೆಸುವಂತಿಲ್ಲ
ಮತದಾನ ಕೇಂದ್ರದ 100 ಮೀ ವ್ಯಾಪ್ತಿಯೊಳಗೆ ಮತಗಟ್ಟೆ ಸಿಬ್ಬಂದಿ, ಅಧಿಕಾರಿಗಳ ಹೊರತಾಗಿ ಇತರರು ಮೊಬೈಲ್‌ ಫೋನ್‌, ವೈರ್‌ಲೆಸ್‌ ಫೋನ್‌ ತರುವಂತಿಲ್ಲ.
 ಮತಗಟ್ಟೆ ಕೇಂದ್ರದಲ್ಲಿಯೂ ಪ್ರಿಸೈಡಿಂಗ್ ಆಫೀಸರ್‌ ಬಿಟ್ಟು ಬೇರಾವ ಸಿಬ್ಬಂದಿ ಮೊಬೈಲ್‌ ಒಯ್ಯುವಂತಿಲ್ಲ
ಇದೇ 10 ರಂದು ಸಂಜೆ 6 ರಿಂದ 12ರಂದು ಮಧ್ಯರಾತ್ರಿವರೆಗೆ ಹಾಗೂ 14ರಂದು ಮಧ್ಯರಾತ್ರಿಯಿಂದ 15ರಂದು ಮಧ್ಯರಾತ್ರಿವರೆಗೆ ಮದ್ಯ ಮಾರಾಟ, ಶೇಖರಣೆ, ಸಾಗಣೆಗೆ ನಿರ್ಬಂಧ ವಿಧಿಸಲಾಗಿದೆ.
 ಮತದಾನದ ದಿನವಾದ 12ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT