ವಿಜಯಪುರ: ಇಲ್ಲಿಯ ಸಹಸ್ರಫಣಿ ಪಾರ್ಶ್ವನಾಥ ದಿಗಂಬರ ಜೈನ ಮಂದಿರ ಅತಿಶಯಕ್ಷೇತ್ರದ ವತಿಯಿಂದ ಡಿ.22ರಿಂದ 28ರ ವರೆಗೆ ಭಗವಾನ ಮಹಾವೀರ ಮಂದಿರದ ಆವರಣದಲ್ಲಿ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಭ್ಯರ್ಚನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ದಿಗಂಬರ ಜೈನ ಮಂದಿರ ಟ್ರಸ್ಟ್ನ ಟ್ರಸ್ಟಿ ಡಿ.ಆರ್.ಶಾಹ, ‘ವಿಮಲ ಸಾಗರ ಮಹಾರಾಜರ 25ನೇ ಪುಣ್ಯಸ್ಮೃತಿ, ಇವರ ಶಿಷ್ಯ, ಊರ್ಜಯಂತ ಸಾಗರಜಿ ಮಹಾರಾಜರ ದೀಕ್ಷಾ ರಜತ ಮಹೋತ್ಸವ ಹಾಗೂ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಪೀಠಾರೋಹಣದ ಸುವರ್ಣ ಮಹೋತ್ಸವದ ತ್ರಿವೇಣಿ ಸಂಗಮವಾಗಿ ಈ ಕಾರ್ಯಕ್ರಮಗಳು ಜರುಗಲಿವೆ’ ಎಂದರು.
‘ಡಿ.22ರಂದು ಬೆಳಿಗ್ಗೆ 8.30 ಗಂಟೆಗೆ ಧ್ವಜಾರೋಹಣ ನೆರವೇರಿಸಲಾಗುವುದು. ಡಿ.23ರಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ನಗರಕ್ಕೆ ಆಗಮಿಸಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.
‘ಡಿ.22ರಿಂದ 28ರ ವರೆಗೆ ಪ್ರತಿನಿತ್ಯ ಬೆಳಿಗ್ಗೆ 7 ಗಂಟೆಗೆ ಜಲಾಭಿಷೇಕ, 8.45 ಗಂಟೆಗೆ ಪಲ್ಲಕ್ಕಿ ಉತ್ಸವ, 9 ಗಂಟೆಗೆ ಪ್ರವಚನ, 9.30 ಗಂಟೆಗೆ ಉಪಾಹಾರ, 10 ಗಂಟೆಗೆ ಅಭಿಷೇಕ, 10.30 ಗಂಟೆಗೆ ವಿಧಾನ, ಮಧ್ಯಾಹ್ನ 2 ಗಂಟೆಗೆ ಭೋಜನ, ಸಂಜೆ 4 ಗಂಟೆಗೆ ಪ್ರವಚನ ಹಾಗೂ ಸಂಜೆ 7 ಗಂಟೆಗೆ ಸಂಗೀತ ಆರತಿ ಕಾರ್ಯಕ್ರಮಗಳು ಜರುಗಲಿವೆ’ ಎಂದು ತಿಳಿಸಿದರು.
‘22ರಂದು ಕಲ್ಯಾಣ ಮಂದಿರ ವಿಧಾನ, 23ರಂದು ಚೌಷಷ್ಠಋದ್ಧಿ ವಿಧಾನ, 24ರಂದು ಭಕ್ತಾಮರ ವಿಧಾನ, 25ರಂದು ಶಾಂತಿ ವಿಧಾನ, 26ರಂದು ಗಣಧರವಲಯ ವಿಧಾನ, 27ರಂದು ಋಷಿಮಂಡಲ ವಿಧಾನ ಹಾಗೂ 28ರಂದು ಬೃಹತ್ ಕಲಿಕುಂಡ ವಿಧಾನ ಹಾಗೂ ಹೋಮ ಜರುಗಲಿದೆ’ ಎಂದು ಮಾಹಿತಿ ನೀಡಿದರು.
‘ಚಾರುಕೀರ್ತಿ ಸ್ವಾಮೀಜಿ ಅವರು 2001ರಲ್ಲಿ ಇಲ್ಲಿಗೆ ಬಂದಿದ್ದರು. ಆ ವೇಳೆ ಇಲ್ಲಿಯೇ ಚಾತುರ್ಮಾಸ ನಡೆಸಿದ್ದರು. 18 ವರ್ಷಗಳ ಬಳಿಕ ಈಗ ಮತ್ತೆ ಬರುತ್ತಿದ್ದಾರೆ. ಸಾಂಗ್ಲಿ, ಕೊಲ್ಲಾಪುರ, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಜಮಖಂಡಿ ಸೇರಿದಂತೆ ವಿವಿಧೆಡೆಯಿಂದ ಸಮುದಾಯದ ಜನರು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.ಪ್ರವೀಣ ಕಾಸರ್, ಬಾಬು ಅನಾಜೆ, ಮಹೇಶ ಕಿನಂಗೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.