ಚಿತ್ರದುರ್ಗ: ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಇಬ್ಬರು ವಿದ್ಯಾರ್ಥಿನಿಯರು ತಂಗಿದ್ದ ಹಾಸ್ಟೆಲ್ನ ಎಲ್ಲ ವಿದ್ಯಾರ್ಥಿಗಳ ಹೇಳಿಕೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಅಧಿಕಾರಿಗಳು ಶನಿವಾರ ದಾಖಲು ಮಾಡಿಕೊಂಡರು.
ಇಲಾಖೆ ನಿರ್ದೇಶಕರ ಸೂಚನೆ ಮೇರೆಗೆ ಹಾಸ್ಟೆಲ್ಗೆ ಭೇಟಿ ನೀಡಿದ ತಂಡ ಹಾಜರಾತಿ ಪುಸ್ತಕ, ಊಟ ಹಾಗೂ ವಸತಿ ಸೌಲಭ್ಯ ಪರಿಶೀಲಿಸಿತು. ತರಗತಿ ಮುಗಿಸಿ ಬಂದ ಮಕ್ಕಳ ವಿಚಾರಣೆ ನಡೆಸಿತು.
ಚಿತ್ರದುರ್ಗ, ದಾವಣಗೆರೆ ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ ಬಂದಿರುವ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವ್ಯಾಸಂಗ ಮಾಡುತ್ತಿರುವ 100 ವಿದ್ಯಾರ್ಥಿನಿಯರು ವಸತಿನಿಲಯದಲ್ಲಿದ್ದಾರೆ. ಪ್ರತಿಯೊಬ್ಬರ ಹೇಳಿಕೆಯನ್ನು ಪ್ರತ್ಯೇಕವಾಗಿ ದಾಖಲಿಸಲಾಯಿತು.
ಆರೋಪ ಕೇಳಿಬರುತ್ತಿದ್ದಂತೆ ಆತಂಕಗೊಂಡ ಕೆಲ ಮಕ್ಕಳ ಪಾಲಕರು ಹಾಸ್ಟೆಲ್ನತ್ತ ಧಾವಿಸಿ ಮಕ್ಕಳನ್ನು ಮನೆಗೆ ಕರೆದೊಯ್ಯಲು ಮುಂದಾದರು. ಹೇಳಿಕೆ ಪಡೆದ ಬಳಿಕ ಸುಪರ್ದಿಗೆ ನೀಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಪಾಲಕರಿಗೆ ಮನವರಿಕೆ ಮಾಡಿಕೊಟ್ಟರು.
ಶಾಲೆ ಬಿಟ್ಟಿದ್ದ ಮಕ್ಕಳು
ಲೈಂಗಿಕ ಕಿರುಕುಳದಿಂದ ಸಂತ್ರಸ್ತರಾಗಿರುವ ವಿದ್ಯಾರ್ಥಿನಿಯರು ಒಂದೂವರೆ ತಿಂಗಳಿಂದ ಶಾಲೆಗೆ ಹಾಜರಾಗಿರಲಿಲ್ಲ. ಶಾಲೆ ಬಿಟ್ಟ ಮಕ್ಕಳ ಪಟ್ಟಿಯಲ್ಲಿ ಈ ವಿದ್ಯಾರ್ಥಿನಿಯರ ಹೆಸರುಗಳಿವೆ.
ಶಾಲೆಯಿಂದ ಹೊರಗುಳಿದವರ ಪಟ್ಟಿ ಹಿಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ಮಕ್ಕಳ ಪಾಲಕರ ವಿಳಾಸ ಸಂಪರ್ಕಿಸಿದ್ದರು. ಮಕ್ಕಳ ಬಗ್ಗೆ ವಿವರ ನೀಡಲು ಪಾಲಕರು ಹಿಂದೇಟು ಹಾಕಿದ್ದರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ.