ಬೆಂಗಳೂರು: ಸಮಾಜದಲ್ಲಿ ಯುವಕರು ಸರಿದಾರಿಯಲ್ಲಿ ನಡೆಯಬೇಕು ಎಂದರೆ ಅವರಿಗೆ ಒಳ್ಳೆಯ ಉದ್ಯೋಗ ಮತ್ತು ಅದರ ಜವಾಬ್ದಾರಿ ಇರಬೇಕು. ಹೀಗಾಗಿ ಅಂಬೇಡ್ಕರ್ ಆದರ್ಶ ಸೇನೆಯಿಂದ ಯುವಕರಿಗೆ ಐಟಿಯಲ್ಲಿ ಉದ್ಯೋಗ ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಸಂಘಟನೆಯ ಗೌರವಾಧ್ಯಕ್ಷ ಗೌರಿಶಂಕರ ಬೆಡಸೂರೆ ಹೇಳಿದರು.
ಅಂಬೇಡ್ಕರ್ ಆದರ್ಶ ಸೇನೆ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಕರಿಗೆ ಕೌಶಲ್ಯ ತರಬೇತಿ ನೀಡುವುದು, ವ್ಯಕ್ತಿ ವಿಕಸನ ಮಾಡುವುದು, ಆತ್ಮ ವಿಶ್ವಾಸ ತುಂಬುವಂತಹ ಕೆಲಸ ಮಾಡುವ ಐಟಿ ಕಂಪೆನಿಗಳು ಸೇರಿದಂತೆ ಎಲ್ಲೆಲ್ಲಿ ಉದ್ಯೋಗ ಲಭ್ಯವಿದೆಯೋ ಅಲ್ಲಿ ಅವರಿಗೆ ಉದ್ಯೋಗ ಒದಗಿಸುವಂತ ಗುರಿ ಹಾಕಿಕೊಳ್ಳಲಾಗಿದೆ ಎಂದುಗೌರಿಶಂಕರ ಬೆಡಸೂರೆ ತಿಳಿಸಿದರು.
ಇದಲ್ಲದೆ ಸಂಘಟನೆಯಿಂದ ಐಟಿ ಕನ್ನಡ ಸಪೋರ್ಟ್ ಎಂಬ ಆ್ಯಪ್ ಸಹ ರೂಪಿಸಲಾಗುತ್ತಿದೆ. ಐಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವಂತಹ ಜನರು ತಮಗೆ ಯಾವುದೇ ರೀತಿಯ ಸಾಮಾಜಿಕ ದೂರುಗಳು ಅಥವಾ ಕೆಲಸಗಳು ಆಗಬೇಕಿದ್ದರೆ ಅದನ್ನು ಅವರು ಅಲ್ಲಿ ದಾಖಲಿಸಬಹದು. ಸಂಘಟನೆಯಿಂದ ಅವರಿಗೆ ಸೂಕ್ತ ಸ್ಪಂದನೆ ಒದಗಿಸುತ್ತೇವೆ. ಈ ಆ್ಯಪ್ ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದರು.
ಯುವಕರಿಗೆ ಉದ್ಯಮ ಸ್ಥಾಪಿಸಲು ನೆರವು, ಸಹಕಾರ ನೀಡಲಾಗುವುದು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉದ್ಯಮಿ ಮಲ್ಲಿಕಾರ್ಜುನ್ ಪಾಟೀಲ್ ಹೇಳಿದರು.ಸಂಘಟನೆಯ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷ ಎನ್ ಚಂದ್ರಶೇಖರ್ ಮಾತನಾಡಿ, ಅಂಬೇಡ್ಕರ್ ಆದರ್ಶ ಸೇನೆಯಿಂದ ಕಾರ್ಮಿಕರಿಗೆ ಗುರುತಿನ ಚೀಟಿ- ಲೇಬರ್ ಕಾರ್ಡ್ ಮಾಡಿಸಿ ಕೊಡಲಾಗುವುದು ಎಂದರು.
ರಾಜ್ಯ ಉಪಾಧ್ಯಕ್ಷರಾದ ಬಸವರಾಜ್, ಜಗದೀಶ್ ಕಾಚುರ್, ಐಟಿ ಬಿಟಿ ವಿಭಾಗದ ಅಧ್ಯಕ್ಷ ಶ್ರೀನಾಥ್ ದೇಶಪಾಂಡೆ, ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರಾಜು, ರಾಜ್ಯ ಸಂಘಟನಾ ಕಾರ್ಯದರ್ಶಿ ನರಸಿಂಹ ಮೂರ್ತಿ, ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷ ಹೊನ್ನೂರಪ್ಪ ಇತರರು ಹಾಜರಿದ್ದರು.