ಶಿವಮೊಗ್ಗ: ಆಧಾರ್ಕಾರ್ಡ್ ನೋಂದಣಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಆಧಾರ್ಕಾರ್ಡ್ ನೋಂದಣಿಗೆ ಹೊರಗುತ್ತಿಗೆ ಪಡೆದಿರುವ ಏಜೆನ್ಸಿಗಳು ನೋಂದಣಿಗೆ ಬರುವ ಸಮಯದಲ್ಲೇ ಸಾರ್ವಜನಿಕರಿಂದ ದಾಖಲೆ ಹಾಗೂ ಶುಲ್ಕ ಪಡೆದಿದ್ದರೂ ಕಾರ್ಡ್ ನೀಡುವಾಗಲೂ ಹೆಚ್ಚುವರಿ ಹಣ ವಸೂಲಿ ಮಾಡುತ್ತಿವೆ. ದುಡ್ಡು ಕೊಡದವರ ಅರ್ಜಿಗಳು ತಿರಸ್ಕೃತಗೊಂಡಿದೆ ಎಂಬ ಮೌಖಿಕವಾಗಿ ಹೇಳಿ ಮತ್ತೊಮ್ಮೆ ನೋಂದಾಯಿಸಲು ಸೂಚಿಸುತ್ತಾರೆ. ಇದು ನಿಯಮ ಬಾಹಿರ ಎಂದು ದೂರಿದರು.
ಪ್ರತಿ ಬಾರಿಯೂ ನೋಂದಣಿಗೆ ಶುಲ್ಕ ವಸೂಲಿ ಮಾಡುತ್ತಿರುವುದು ಹಗಲು ದರೋಡೆ. ಆಧಾರ್ ನೋಂದಣಿಗೆ ಕೇಂದ್ರ ಸರ್ಕಾರ ರೂಪಿಸಿರುವ ನಿಯಮಗಳನ್ನು ಪ್ರದರ್ಶನ ಫಲಕದಲ್ಲಿ ಪ್ರಕಟಿಸಿಲ್ಲ. ಇದು ಅಕ್ರಮಕ್ಕೆ ಮೂಲ ಕಾರಣ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ಆಧಾರ ನೋಂದಣಿ ಕೇಂದ್ರಗಳ ಮೇಲೆ ನಿಗಾವಹಿಸಬೇಕು. ನಾಗರಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಸಮಿತಿ ಗೌರವಾಧ್ಯಕ್ಷ ಡಾ.ಎನ್.ಎಲ್. ನಾಯಕ್, ಅಧ್ಯಕ್ಷ ಡಾ.ಚಿಕ್ಕಸ್ವಾಮಿ, ಪ್ರಧಾನ ಕಾರ್ಯದರ್ಶಿ ಟಿ.ಎಂ. ಅಶೋಕ್ಯಾದವ್, ಡಾ.ಶೇಖರ್ ಗೌಳೇರ್, ಎಸ್.ವಿ. ವೆಂಕಟನಾರಾಯಣ, ಬಾಬುರಾವ್, ತಿಮ್ಮಣ್ಣ, ಪ್ರೊ.ಚಂದ್ರಶೇಖರ್, ಸಹನಾ ರಾವ್, ಸುಬ್ರಮಣ್ಯ, ಶಿವಕುಮಾರ್, ದೇವೇಂದ್ರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.