ಶಿರಾಳಕೊಪ್ಪ: ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಪಟ್ಟಣದ ಬಸ್ ನಿಲ್ದಾಣದ ವೃತ್ತದಲ್ಲಿದ್ದ ಜೋಡಿ ಅರಳಿ ಮರಗಳನ್ನು ಗುರುವಾರ ಮುಂಜಾನೆ ಪೋಲಿಸ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿಸಿದರು.
ಈ ಅರಳಿ ಮರಗಳು ನೂರಾರು ವರ್ಷಗಳ ಹಳೆಯದಾಗಿದ್ದು, ಇಲ್ಲಿ ಊರಿನ ಮಹಿಳೆಯರು ದಿನನಿತ್ಯ ಪೂಜೆ ಸಲ್ಲಿಸುತ್ತಿದ್ದರು. ಮರಗಳನ್ನು ತೆರವುಗೊಳಸದಂತೆ ಒತ್ತಾಯಿಸಿ ಸಾಕಷ್ಟು ಹೋರಾಟಗಳು ನಡೆದಿದ್ದವು. ಶಿವಮೊಗ್ಗ, ತಡಸ ರಾಜ್ಯ ಹೆದ್ದಾರಿ ಕಾಮಗಾರಿಯ ಪ್ರಯುಕ್ತ ಈ ಮರಗಳನ್ನು ತೆಗೆಯಲು ಕೆಶಿಪ್ ಇಲಾಖೆ ಮುಂದಾದಾಗ ಕೆಲವು ನಾಗರಿಕರು, ವರ್ತಕರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದರು.
ನಂತರ ಮಾಜಿ ಶಾಸಕ ಬಿ.ವೈ. ರಾಘವೇಂದ್ರ ಪಟ್ಟಣದ ಪ್ರಮುಖರ ಜೊತೆಗೆ ಚರ್ಚೆ ನಡೆಸಿ ಅಭಿವೃದ್ಧಿಯ ದೃಷ್ಟಿಯಿಂದ ಮರಗಳನ್ನು ತೆಗೆಯುವ ಅನಿವಾರ್ಯತೆಯಿದ್ದು, ಬೇರೆಯ ಸ್ಥಳದಲ್ಲಿ ಇದೇ ಮಾದರಿಯ ಅರಳಿ ಮರಗಳನ್ನು ಹಾಗೂ ಪೂಜಾ ಕಟ್ಟೆಯನ್ನು ನಿರ್ಮಿಸಿ ಕೊಡುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದೂ ಮನವರಿಕೆ ಮಾಡಿದ್ದರು. ನಂತರ ನಾಗರಿಕರು ಮರಗಳನ್ನು ತೆರವುಗೊಳಿಸಲು ಸಮ್ಮತಿ ನೀಡಿದ್ದರು.
ಅಧಿಕಾರಿಗಳು ಗುರುವಾರ ಮುಂಜಾನೆ 4.30ಕ್ಕೆ ಮರಗಳ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದರು, ಕೆಶಿಪ್ ಇಂಜಿನಿಯರ್ ಕಾಂತೇಶ್, ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಮುಖ್ಯಾಧಿಕಾರಿ ಶಿವಣ್ಣ, ಅರಣ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮುಂಜಾಗ್ರತ ಕ್ರಮವಾಗಿ ಡಿವೈಎಸ್ಪಿ ಸುಧಾಕರ್ ನೇತೃತ್ವದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಬಸವರಾಜ್, ಸಬ್ ಇನ್ಸ್ಪೆಕ್ಟರ್ ವಸಂತಕುಮಾರ ಸೇರಿ 120 ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿಯನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು.